Thursday, May 1, 2008

ಕತೆಯಾಗದ ಹುಡುಗಿ

ಆಕೆ ಈಗಷ್ಟೆ ಅರಳಿದ ಸುಂದರ ಪುಷ್ಪ. ಮುಗ್ಧತೆಯೇ ಮೈವೆತ್ತಿದ ಹುಡುಗಿ. ಪ್ರೀತಿ ಪ್ರೇಮದ ಹಂಬಲಕ್ಕೆ ಬಿದ್ದವಳಲ್ಲ. ಯಾರ ಹೃದಯದ ಬಾಗಿಲನ್ನೂ ಬಡಿದವಳಲ್ಲ. ತನ್ನ ಎದೆಯ ಕದವ ತಟ್ಟಿದವರಿಗೆ ಕದ ತೆರೆದವಳಲ್ಲ. ಕಾಲೇಜಿಗೆ ಒಂದು ಥರದ ಮಾದರಿಯಾಗಿದ್ದಳು.
ಆಕೆ ಒಮ್ಮೆ ಅವನನ್ನ ನೋಡಿದಳು ಅವನು ಅಂದರೆ ಆ ಸಿನಿಮಾದ ಹೀರೊ. ಟಿವಿಯಲ್ಲಿ ಆ ಹೀರೊನ ಹಾಡು ನೋಡಿ ಅವನ ರೂಪಕ್ಕೆ ಮನ ಸೋತಳು. ಅವನ ಕಣ್ಣ ಭಾವಕ್ಕೆ , ನರ್ತಿಸುವ ಶೈಲಿಗೆ ಮಾರು ಹೋದಳು
ಚಿತ್ರ ನೋಡಿ ಬಂದ ಮೇಲಂತೂ ಅವನದೇ ’ಧ್ಯಾನ’ವಾಯಿತು . ಅವನು ಇನ್ನೂ ಬ್ಯಾಚುಲರ್ ಎಂಬುದನ್ನು ಕೇಳಿದ ಮೇಲೆ ತಾನೆ ಅವನ ’ಮೊನಾಲೀಸ ’ ಎಂದು ತೀರ್ಮಾನಿಸಿದಳು. ಎಲ್ಲಿ ನೋಡಿದರೂ ಅವನ ಹೆಸರನ್ನೇ ಗೀಚುತ್ತಿದ್ದಳು. ಕಷ್ಟ ಪಟ್ಟು ಅವನ ಆಡ್ರೆಸ್ ಹುಡುಕಿ ಅವನಿಗೊಂದು ಪ್ರೀತಿ ತುಂಬಿದ ಪತ್ರ ಹಾಗು ತನ್ನ ಭಾವಚಿತ್ರ ಕಳಿಸಿದಳು.
ಅವನೋ ಯಾರೋ’ಹುಡುಗಾಟಕ್ಕೆ ’ ಕಳಿಸಿದ ಪತ್ರವಿರಬೇಕು ಎಂದು ಮೊದಲು ಕಡೆಗಣಿಸಿದನಾದರೂ , ನಂತರ ಭಾವಚಿತ್ರಕ್ಕೆ ಮನಸೋತನು . ಅವಳ ಪ್ರೀತಿಯ ’ಮುಂಗಾರು ಮಳೆ"ಯಲ್ಲಿ ತೋಯ್ದು ಹೋದನು . ಅವಳಿಗೆ ಮರು ಓಲೆ ಕಳಿಸಿದ . "ಚೆಲುವಿನ ಚಿತ್ತಾರ"ವೆಲ್ಲಾ ತನ್ನ ಹೃದಯ ಚೋರನು ಕಳಿಸಿದ ಪತ್ರದಲ್ಲೆ ಇದೆ ಎಂದೆನಿಸಿತು. ಪ್ರೀತಿ ಆರಂಭವಾಯಿತು. ಅಥವ ಹಾಗೆಂದುಕೊಂಡಳು.
ಒಮ್ಮೆ ಅವನನ್ನು ಭೇಟಿ ಮಾಡುವ ಇಂಗಿತ ವ್ಯಕ್ತ ಪಡಿಸಿದಳು.. ಹೀರೊ ತಥಾಸ್ತು ಎಂದ.
ಇಬ್ಬರೂ ಭೇಟಿಯಾದರು. ತನ್ನ ಮನದಾಸೆಯನ್ನು ಅವನ ಮುಂದೆ ತೋಡಿಕೊಂಡಳು. ತಾನು ಮದುವೆ ಎನ್ನುವುದಾದರೆ ನಿನ್ನನ್ನೇ ಎಂದಳು. ಅದಕ್ಕೇನು ಪುರಾವೆ ಎಂದು ಕೇಳಿದ. ತನ್ನ ಚೆಲುವೆಲ್ಲಾ ನಿನ್ನದೆ ಎಂದು ತನ್ನನ್ನು ತಾನೆ ಅರ್ಪಿಸಿಕೊಂಡಳು. ಆತನೋ ಜಾಣ ಏನನ್ನೂ ಬಾಯಿ ಬಿಡದೆ ಏನನ್ನೂ ಕೇಳದೆ ಎಲ್ಲಾ ಪಡೆದುಕೊಂಡ. ಎಲ್ಲವನ್ನೂ ಸೂರೆಹೊಡೆದ.
ಚೆಲುವೆ ತನ್ನ ಬಾಳು ಪಾವನವಾಯ್ತು ಎಂದುಕೊಂಡಳು.
ಸರಿ ಮನೆಯವರನ್ನು ಒಪ್ಪಿಸಿ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿ ಅವಳನ್ನು ಮರಳಿ ಕಳಿಸಿದ.
ಕೊಂಚ ದಿನದಲ್ಲೇ ಆತ ಪ್ರಸಿದ್ದ ನಾಯಕನಾಗಿ ಬದಲಾದ ಅವನಿಗಾಗಿ ಕೋಟಿ ಕೋಟಿ ಸುರಿಯಲು ನಿರ್ಮಾಪಕರು ಸಾಲು ನಿಂತರು. ಸಾಲು ಸಾಲಾಗಿ ಚಿತ್ರ ಬಿಡುಗಡೆಯಾಗತೊಡಗಿದವು. ಹುಡುಗಿಯ ಕೈಗೆ ಸಿಗಲೂ ಆತ ಬಿಡುವಾಗಲಿಲ್ಲ
ಕೆಲವು ದಿನದಲ್ಲೆ ಆತನ ಮದುವೆ ಸುದ್ದಿ ಪತ್ರಿಕೆಗಳಲ್ಲಿ ಬಂತು. ಹುಡುಗಿ ಗಾಬರಿಯಾದಳು. ಹೀರೋನ ಮನೆ ಮುಂದೆ ಹೋಗಿ ಅತ್ತುಕೊಂಡಳು. ನಿಂಥರ ಎಷ್ಟೊಂದು ಹುಡುಗೀರು ಬರ್ತಾರೆ ಗೊತ್ತ. ಒಬ್ಬ ದೊಡ್ಡ ಹೀರೋ ಅಂದ್ರೆ ಅವನ ಹೆಸರು ಕೆಡಿಸೋಕೆ ಜನ ಕಾಯ್ತಾ ಇರ್ತಾರೆ ಎಂದು ಅಲ್ಲಿದ್ದ ಜನ ಅವಳನ್ನ ಓಡಿಸಿದರು.
ಮನೆಗೆ ಬಂದವಳೇ ಆಳಲೂ ಶಕ್ತಿ ಇಲ್ಲದವಳಂತೆ ಕೂತಳು . ಇನ್ನೂ ಹದಿನೆಂಟು ತುಂಬದ ವಯಸ್ಸು. ಆತ ತನ್ನವನಾಗಲಿಲ್ಲ ಎಂಬ ಬೇಗುದಿ ಒಂದೆಡೆಯಾದರೆ, ತಾನು ಯಾರವಳೂ ಆಗಲಾಗದ ದಳ್ಳುರಿ ಸುಡಲಾರಂಭಿಸಿತು. ಮುಂದೆ...........
ಆ ಹೀರೋನ ಮದುವೆ ವಿಜ್ರಂಭಣೆಯಿಂದ ಜರುಗಿತು.
ಪತ್ರಿಕೆಗಳಲ್ಲಿ ಈ ಸುದ್ದಿಯ ಜೊತೆ ಕೆಳಗಡೆ ಇಂತಹ ಹೀರೊ ಮದುವೆಯಾಗುತ್ತಿದ್ದಾನೆಂದು ಸಹಿಸದ ಹುಡುಗಿಯೊಬ್ಬಳ ಆತ್ಮಹತ್ಯೆ ಎಂಬ ಬರಹ ಕಾಣಿಸಿತು.
ಆ ಹೀರೊ " ಸಿನಿ ನಾಯಕರೂ ನಿಮ್ಮ ಹಾಗೆ ಮನುಶ್ಯರು . ಅವರೇ ನಿಮ್ಮ ಹೀರೊಗಳಲ್ಲ. ದಯವಿಟ್ಟು ಇಂಟಹ ನಿರ್ಧಾರ ತೆಗೆದುಕೊಳ್ಳಬೇಡಿ " ಎಂದು ಹುಡುಗಿಯರಿಗೆ ಕಿವಿ ಮಾತು ಹೇಳಿದ.
ಜನ ಚಪ್ಪಾಳೆ ಹೊಡೆದರು.