Wednesday, April 22, 2009

ಸೋಲಿನೊಳಗಿನ ಗೆಲುವು

ಸೋತಾಗಲೆ ಗೆಲುವಿನ ರುಚಿ ಚೆನ್ನಾಗಿ ಗೊತ್ತಾಗುತ್ತದೆ.ಈ ಮಾತನ್ನು ನನಗೆ ಹೈಸ್ಕೂಲಿನಲ್ಲಿದ್ದಾಗ ನಮ್ಮ ಜಿ ಪಿ ಆರ್ ಸಾರ್ ಹೇಳುತ್ತಿದ್ದರು.ಗೆಲುವೆಂಬ ಸೋಪಾನದಲ್ಲೇ ತೇಲಬಯಸುತ್ತಿದ್ದ ನಾನು ಸೋಲೋ ಮಾತಿಗೆ ಅಪವಾದವಾಗಿದ್ದೆ. ಆದರೆ ಎರೆಡನೇ ಸ್ಥಾನದಲ್ಲೇ ಇರುತ್ತಿದ್ದೆಹೊಟ್ಟೆಕಿಚ್ಚಿನ ಶ್ರೀದೇವಿಯನ್ನ ಮಣಿಸಬೇಕೆಂಬ ಹಂಬಲ ಈಡೇರುತ್ತಲೇ ಇರಲಿಲ್ಲ . ಮೊದಲ ಸ್ಥಾನ ಅವಳದೇ ಯಾವಾಗಲೂಅವಳು ಓದಿನಲ್ಲಿ ಆಟದಲ್ಲಿ ನನ್ನನ್ನು ಮಣಿಸಿ ಸಂತಸ ಪಡುತ್ತಿದ್ದಳು.ಅವಳು ಮಣಿಸಿದಾಗಲೆಲ್ಲಾ ಅವಳ ಕಣ್ಣಲ್ಲಿ ವಿಜಯದ ನಗೆ,ನನ್ನ ಮನದಲ್ಲಿ ದ್ವೇಷ ತುಂಬಿ ತುಳುಕುತಿತ್ತು.ನಾನೂ ಜಾಣನೇ ಆದರೆ ಅದೇನೋ ನನಗಿಂತ ಶ್ರೀದೇವಿ ಯಾವಾಗಲೂ ಹೆಚ್ಚು ಅಂಕ ತೆಗೆದುಕೊಳ್ಳುತ್ತಿದ್ದಳು.ನಮ್ಮಿಬ್ಬರ ದ್ವೇಷ ಹೀಗೆ ಕಾಲೇಜಲ್ಲಿ ಮುಂದುವರೀತುಪ್ರತಿಸಲ ಅವಳು ಗೆದ್ದಾಗೆಲ್ಲಾ ಅವಳನ್ನು ಸೋಲಿನ ದವಡೆಗೆ ನೂಕಬೇಕೆಂಬ ಹಂಬಲ ಜೋರಾಗುತ್ತಿತ್ತು. ಕೆಲವು ಸಲ ಅವಳನ್ನು ಕೊಂದು ಬಿಡಲೇ ಎಂಬ ಭಾವನೆಯೂ ಮೂಡಿ ಬಂದಿತ್ತೆಂದರೆ ಸುಳ್ಳಾಗಲಾರದುಕಾಲೇಜಲ್ಲಿ ನಾನು ಪ್ರೇಮಿಸಿದ್ದು ಶ್ವೇತಾನ ಅವಳು ಸಾಗರ್‌ನ ಪ್ರೀತಿಸಿದಳು. ಅದರಲ್ಲೂ ಮೊದಲ ಮುಂದುವರಿಕೆ ಅವಳದೇ ಆಗಿತ್ತು.ಅವರಿಬ್ಬರೂ ಅಣ್ಣ ತಂಗಿಯರುಆದರೆ ನಾವಿಬ್ಬರೂ ಆ ಸಂಬಂಧದಿಂದ ಬಂಧುಗಳಾಗಬಹುದು ಎಂದು ಆ ಪ್ರೀತಿಯನ್ನೇ ದೂರ ಮಾಡಿದೆವುಹಾಡಿನ ಸ್ಪರ್ಧೆಯಲ್ಲಿ ಅನಾರೋಗ್ಯದ ಕಾರಣದಿಂದ ಅವಳು ಭಾಗವಹಿಸಲಾಗದೆ ಮೊದಲ ಬಹುಮಾನ ನನಗೆ ಬಂತು. ಆ ಸ್ಪರ್ಧೆಯಲ್ಲಿ ಅವಳಿರಲಿಲ್ಲ ಎಂಬ ಕಾರಣಕ್ಕೆಬಹುಮಾನವನ್ನೇ ತಿರಸ್ಕರಿಸಿದ್ದೆ.
ಡಿಗ್ರೀ ಮುಗಿಸಿದಾಗ ಕೆಲಸವೂ ನನಗಿಂತ ಮೊದಲೇ ಸಿಕ್ಕಿತು. ನನಗೆ ನಂತರ.ಆದರೆ ಅಲ್ಲಿಗೆ ನಮ್ಮಿಬ್ಬರ ಸ್ಪರ್ಧೆ ಮುಗಿದಿತ್ತು.ಅವಳ ಮದುವೆಯೂ ನನಗಿಂತ ಮೊದಲು ನಡೆದಿತ್ತುನಂತರ ಅವಳು ಹೊರಟೇ ಹೋದಳು ಗಂಡನ ಊರಿಗೆಸ್ಪರ್ದೆಯೊಂದರಲ್ಲಿ ಗೆಲ್ಲಲು ಎದುರಾಳಿ ಇರಬೇಕಲ್ಲವೇಎದುರಾಳಿ ಇಲ್ಲದೆ ನನ್ನ ಸ್ಪರ್ಧಾಮನೋಭಾವ ಕುಂಠಿತವಾಗಿತ್ತು.ಶ್ರೀದೇವಿ ಇರಬೇಕಿನಿಸುತ್ತಿತ್ತಾದರೂ ಅದು ಸಾಧ್ಯವಾಗಲಿಲ್ಲ. ಒಮ್ಮೆಯಾದರೂ ಅವಳನ್ನು ಸೋಲಿಸಿ ನಾನೂ ವಿಜಯದ ನಗೆ ನಗಲೇ ಬೇಕೆನಿಸುತ್ತಿತ್ತು. ಆದರೆ ಅವಳೇ ಸಿಗಲಿಲ್ಲಅದಾಗಿ ಮುವ್ವತ್ತು ವರ್ಷಗಳಾಗಿವೆ. ನನಗೂ ಮದುವೆಯಾಗಿ ಮಗ ರಾಕೇಶ್ ಹುಟ್ಟಿದ. ಅವನಲ್ಲೂ ಹೀಗೆ ಗೆಲುವಿನ ಬೀಜವನ್ನೇ ಬಿತ್ತಿದ್ದೆ. ನನ್ನ ಮಗ ಈಗ ಲಾಯರ್ .ನ್ಯಾಯವೋ ಅನ್ಯಾಯವೋ ಗೆಲುವುಂದೇ ಗುರಿ ಎಂಬಂತೆ ಬೆಳೆದಿದ್ದ. ಅವನ ಗೆಲುವು ನನ್ನದೂ ಆಗಬೇಕಿತು. ನನ್ನ ಸೋಲಿನ ನೆರಳು ಅವನನ್ನು ಕಾಡದಂತೆ ಕಾದಿದ್ದೆಇತ್ತೀಚಿಗೆ ರಾಕೇಶ್‍ನನ್ನು ನೋಡಲು ಇಬ್ಬರು ದೊಡ್ಡ ಕುಳಗಳು ಬಂದಿದ್ದರುಅತ್ಯಾಚಾರಕ್ಕೆ ಸಂಬಂಧ ಪಟ್ಟ ಕೇಸ್ ಅದು . ಅವರಿಬ್ಬರ ಮಕ್ಕಳು ಯಾರನ್ನೋ ಅತ್ಯಾಚಾರ ಮಾಡಿದ್ದರಂತೆಆರೋಪಿಯ ಪರವಾಗಿ ಕೇಸ್ ತೆಗೆದುಕೊಳ್ಳಲು ಅವರು ರಾಕೇಶನನ್ನು ಒತ್ತಾಯಿಸುತ್ತಿದ್ದರು . ರಾಕೇಶ ಸಾರಾ ಸಗಟಾಗಿ ತಿರಸ್ಕರಿಸಿದ.ನಾನೂ ಸುಮ್ಮನೆ ಫೈಲ್ ತೆಗೆದು ನೋಡುತ್ತಿದ್ದಾಗ ಕಾಣಿಸಿದ್ದು ಶ್ರೀದೇವಿಯ ಫೋಟೋ. ಎಷ್ಟೊಂದು ಬದಲಾಗಿ ಹೋಗಿದ್ದಾಳೆ .ನಂತರ ವಿಷಯ ತಿಳಿಯಿತುಶ್ರೀದೇವಿಯ ಮಗಳು ಅಂಬಿಕಾ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದಳು. ಅವಳ ಮೇಲೆ ಅವಳ ಇಬ್ಬರು ವಿದ್ಯಾರ್ಥಿಗಳಿಂದಲೇ ಅತ್ಯಾಚಾರವಾಗಿತ್ತು.ಶ್ರೀದೇವಿ ಧೈರ್ಯವಂತೆ ಹಾಗೆಲ್ಲಾ ಎದೆಗುಂದುವುದಿಲ್ಲ . ಅದು ನನಗೆ ಗೊತ್ತು. ಅದಕ್ಕಾಗಿ ಆ ಆರೋಪಿಗಳಿಗೆ ಶಿಕ್ಷೆ ಸಿಗಬೇಕೆಂದು ಪೋಲೀಸರಿಗೆ ದೂರು ಕೊಟ್ಟು ನ್ಯಾಯಕ್ಕಾಗಿ ಓಡಾಡುತ್ತಿದ್ದಾಳೆಗಂಡ ಮೂರು ವರ್ಷದ ಹಿಂದೆ ತೀರಿಕೊಂಡಿದ್ದಾನಂತೆ.ಶ್ರೀದೇವಿಯನ್ನು ಸೋಲಿಸಲು ಒಂದು ಒಳ್ಳೆಯ ಅವಕಾಶ. ನನ್ನೊಳಗಿನ ಮಾನವ ಎಲ್ಲೋಮಾಯವಾಗಿದ್ದ ಇದ್ದುದೊಬ್ಬನೇ, ಹೈಸ್ಕೂಲು , ಕಾಲೇಜುಗಳಲ್ಲಿ ಅವಳಿಂದಸೋತು ಸುಣ್ಣವಾಗಿದ್ದ ಆ ಜೋಲು ಮುಖದ ಹುಡುಗನ ಅಹಂ.ರಾಕೇಶನಿಗೆ ಕೇಸ್ ತೆಗೆದುಕೊಳ್ಳಲು ಒತ್ತಾಯಿಸಿದೆ. ಇದು ನನ್ನ ಗೆಲುವು ಎಂದೆರಾಕೇಶ ಅಚ್ಚರಿ ಪಟ್ಟ ಕೊನೆಗೆ ಒಪ್ಪಿಕೊಂಡ.ಕೋರ್ಟಿಗೆ ಮಗನ ಜೊತೆ ನಾನೂ ಹೋದೆಅಂಬಿಕಾ ಕಟಕಟೆಯಲ್ಲಿ ನಿಂತಿದ್ದಳುಮಗನ ವಾದಸರಣಿ ಶುರುವಾಯ್ತುಅವನ ವಾದಕ್ಕೆ ತಲೆ ದೂಗಲಾರಂಭಿಸಿದೆಪಕ್ಕದ ಸಾಲಿನಲ್ಲಿ ನನ್ನ ಪ್ರತಿ ಸ್ಪರ್ಧಿ ಕೂತಿದ್ದಳು. ಅವಳೇ ಶ್ರೀದೇವಿಅವಳ ಸೋಲು ಸನ್ನಿಹಿತವಾಗಿತ್ತುಅವಳಿಗೂ ಗೊತ್ತಾಗಿತ್ತೆನಿಸುತ್ತದೆ. ಒಮ್ಮೆಯೂ ನನ್ನೆಡೆ ನೋಡಲಿಲ್ಲಮಗನ ವಾದ ತೀರ ಗುಪ್ತ ಸಂಗತಿಯ ಕಡೆಗೆ ಹರಿಯಲಾರಂಭಿಸಿತು. ಅಶ್ಲೀಲವೆನಿಸುವ ಪ್ರಶ್ನೆಗಳು ದಾಳಿ ಮಾಡಲಾರಂಭಿಸಿದವುಅಂಬಿಕಾ ಉತ್ತರಿಸಲಾಗದೆ ಅಮ್ಮನನ್ನು ನೋಡುತ್ತಿದ್ದಳು. ಶ್ರೀದೇವಿ ಚಡಪಡಿಸುತ್ತಿದ್ದಳು.ಶ್ರೀದೇವಿಯ ತಳಮಳ, ಕಣ್ಣಲ್ಲಿ ನೀರು ನೋಡಿ ನನಗೆ ಸಂತಸ ವಾಗುತ್ತಿತ್ತು.. ಇದು ವಿಕೃತಿ ಎನಿಸಿದರೂ ಮನಸ್ಸು ಅದನ್ನೆ ಬಯಸುತ್ತಿತ್ತುಕೇಸ್ ವಿಚಾರಣೆಯನ್ನು ಮಾರನೆಯ ದಿನಕ್ಕೆ ಮುಂದೂಡಿದರು.ಕೋರ್ಟ್‌ನ ಆವರಣದಲ್ಲಿ ಬರುತ್ತಿದ್ದಂತೆಶ್ರೀದೇವಿ ನನ್ನೆದುರು ಬಂದು ನಿಂತಳು"ಶ್ರೀಕಾಂತ್ . ನೀನು ಸೋಲಿಸುತ್ತಿರುವುದು ನನ್ನನ್ನಲ್ಲ . ನಿನ್ನ ಅಂತರಾತ್ಮಾನ. ನಿನ್ನ ನೀತೀನ, ನಿನ್ನ ಒಳ್ಳೇಯತನಾನ, ನಾನು ಕೇವಲ ನಾನು ಸೋತರೂ ಅದು ನನಗೆ ಗೆಲುವೇ ಆಗಿರುತ್ತದೆಏಕೆಂದ್ರೆ ನಿನ್ನನ್ನ ನೈತಿಕವಾಗಿ, ಮಾನಸಿಕವಾಗಿ, ನಾನು ಸೋಲಿಸ್ತಾ ಇದ್ದೇನೆ.ನಾನು ಸೋಲಲ್ಲೂ ಗೆಲುವು ಕಾಣ್ತೀನಿ. ನೀನು ಗೆಲುವಲ್ಲೂ ಸೋಲೇ ಕಾಣುತ್ತೀಯ ಇದು ಮಾತ್ರ ಸತ್ಯನೀನು ನಿನ್ನಮಗನ್ನ ಅನ್ಯಾಯದ ಗೂಡಿಗೆ ದೂಡ್ತಿದ್ದೀಯಾ. ಆದರೆ ನಾನು ನನ್ನ ಮಗಳನ್ನು ನ್ಯಾಯ ನೀತಿ ಗೂಡಿಗೆ ಸೇರಿಸ್ತೀನಿ. ಇನ್ನು ಮೇಲೆ ನಿನ್ನಿಷ್ಟ .ನೀನು ನಿನ್ನ ಮಗನ್ನ ಒಳ್ಳೇ ಲಾಯರ್ ಮಾಡಿದ್ದೀಯಾ .ಚೆನ್ನಾಗಿ ವಾದ ಮಾಡ್ತಾನೆ. ಅವನಿಗೆ ಒಳ್ಳ್ಳೇದಾಗಲಿ " ಹೇಳಿ ಮುಂದೆ ಹೊರಟಳುನಾನು ಬೆಪ್ಪಾಗಿ ನಿಂತಿದ್ದೆ.----------------------**********************-----
[ಮೂರು ತಿಂಗಳಲ್ಲಿ ಏನೇನಾಯ್ತು ಎಂದು ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ಬೇಕು ಎನಿಸಿದರೆ ದಯವಿಟ್ಟು ಹೇಳಿ . ಅದನ್ನೂ ಬರೆಯುತ್ತೇನೆ)----------------------------------ಈ ಮೂರು ತಿಂಗಳಲ್ಲಿ----------------------------------------------
ಶ್ರೀದೇವಿಯ ಮಾತಿನಿಂದ ನಾನು ದಂಗಾಗಿ ಹೋಗಿದ್ದೆ.ಸೋಲಿನಲ್ಲೂ ಗೆಲುವು ನನ್ನದೇ ಎಂಬ ಅವಳ ಮಾತುಗಳು ನನ್ನನ್ನು ಅಧೀರನನ್ನಾಗಿಸಿತು."ರೀ ಯಾವುದೋ ಹೈಸ್ಕೂಲಿನ ಕಾಲೇಜಿನ ಘಟನೆಗಳಿಗೋಸ್ಕರ ಒಂದು ಅಸಹಾಯಕ ಹೆಣ್ಣಿನ ಜೀವನದ ಜೊತೆ ಸ್ಪರ್ಧೆಗಿಳಿಯುತ್ತಿದ್ದೀರಲ್ಲ .ನಾಚಿಕೆ ಆಗಲ್ವಾ . ಗೆಲ್ಲೋ ಅಂತೋರಾಗಿದ್ರೆ ಆಗಲೇ ಗೆಲ್ತಿದ್ರಿ ಈಗ ನಿಮ್ಮಗ ಕೇಸ್ ಗೆದ್ರೂ ಅದೂ ಅನ್ಯಾಯದ ಗೆಲುವು ಅಗಲ್ಲವಾ. ನೀವ್ಯಾಕೆ ಈಥರ ಯೋಚಿಸೋಕೆ ಶುರು ಮಾಡಿದ್ರಿ ನೀವು ನಿಮ್ಮ ಮಗ ಗೆದ್ರೂ ನನ್ನ ದೃಷ್ಟಿಯಲ್ಲೂ ನೀವಿಬ್ರೂ ಸೋಲ್ತೀರಾ" ಎಂದು ನನ್ನ ಕೈ ಹಿಡಿದಾಕೆ ಚುಚ್ಚಿದಳು ಅತ್ತ"ಅಪ್ಪ ನೀನೇನೂ ಹೆದರಬೇಡಾಪ್ಪ ಸೋಲಿನಲ್ಲಿ ಗೆಲುವು ಅಂತ ಹೇಳಿ ನಿಮ್ಮ ಮನಸನ್ನ ತಿರುಗಿಸೋ ಯೋಚನೆ ಮಾಡ್ತಾ ಇದಾಳೆ ಗೆಲ್ಲೋದು ನಾವೇ" ಎಂದ ಮಗ ಇತ್ತ.ದ್ವಂದ್ವದಲ್ಲಿ ತೇಲಾಡಿತುರಾತ್ರಿ ಎಲ್ಲಾ ನಿದ್ದೆ ಬರಲಿಲ್ಲ. ಕ್ಷಣ ಕ್ಷಣಕ್ಕೂ ಶ್ರೀದೇವಿಯ ಮಾತುಗಳು ಕಿವಿಯನ್ನು ಇರಿಯಲಾರಂಭಿಸಿದವು."ನಿನ್ನನ್ನ ನೈತಿಕವಾಗಿ, ಮಾನಸಿಕವಾಗಿ, ನಾನು ಸೋಲಿಸ್ತಾ ಇದ್ದೇನೆ .ನಾನು ಸೋಲಲ್ಲೂ ಗೆಲುವು ಕಾಣ್ತೀನಿ"ಅಂತರಾತ್ಮ ನಕ್ಕಿತು,ಅಹಂ ಹಲ್ಲು ಕಡಿಯಿತುರಾತ್ರಿ ಎಲ್ಲಾ ಇವುಗಳೆರೆಡರ ಕದನ ನಡೆಯುತ್ತಲೇ ಇತ್ತು.ಕೊನೆಗೂ ಗೆದ್ದದ್ದು ನನ್ನೊಳಗಿದ್ನ ಮಾನವ , ಅಹಂ ಗೆಲ್ಲಲಾಗದೆ ದೂರ ಓಡಿತ್ತುಮಗನಿಗೆ ಅವರುಗಳ ಪರ ಕೇಸ್ ಬಿಟ್ಟು ಬಿಡಲು ಹೇಳಿದೆ.ಯಾವ್ಯಾವುದೋ ರೂಲ್ಸ್ ಮಾತಾಡಿದ. ಅದು ಸಾಧ್ಯವಿಲ್ಲ ಕಷ್ಟ ಹಾಗೆ ಹೀಗೆ ಎಂದಅದೆಲ್ಲಾ ನನಗೆ ಗೊತ್ತಿಲ್ಲ. ನೀನು ಅಂಬಿಕಾ ಪರ ವಾದ ಮಾಡಬೇಕು ಎಂದೆನನ್ನಾಸೆಯಂತೆ ನಡೆಯಿತು.ಕೋರ್ಟಿನಲ್ಲಿ ರಾಕೇಶ ಅಂಬಿಕಾ ಪರ ವಕೀಲನಾದಆದರೆ ಒಂದು ಮಾತ್ರ ನನಗರಿವಿಲ್ಲದಂತೆ ಆಗಿತ್ತುಅದು ಅಂಬಿಕಾ ಹಾಗು ರಾಕೇಶನ ಪ್ರೇಮ . ಅಂಬಿಕಾಳ ಆ ಸ್ಥಿತಿಯಲ್ಲೂ ರಾಕೇಶ ಅವಳನ್ನು ಮದುವೆಯಾಗಬಯಸಿದ. ಜಾತಿ, ಅಂತಸ್ತು, ವಯಸ್ಸು ಯಾವುದೂ ಅಡ್ದ ಬರಲಿಲ್ಲ ಅವರ ಪ್ರೀತಿಗೆ .ನಾನಾಗಲಿ ನನ್ನ ಹೆಂಡತಿಯಾಗಲಿ ಇದನ್ನು ವಿರೋಧಿಸಲಿಲ್ಲ. ಶ್ರೀದೇವಿ ಕೃತಜ್ನತೆಯ ಕಣ್ಣೀರು ಹರಿಸಿದಳುಇಬ್ಬರೂ ಕೇಸ್ ಗೆದ್ದಮೇಲೆ ಮದುವೆಯಾಗುವುದಾಗಿ ಹೇಳಿದರುಮೂರು ತಿಂಗಳ ನಂತರ ರಾಕೇಶ ಕೇಸ್ ಗೆದ್ದಿದ್ದ.ಅವನ ಭಾವಿ ಹೆಂಡತಿ ಅಂಬಿಕಾ ಗೆಲುವಿನ ನಗೆ ಬೀರಿದ್ದಳು. ಆ ವಿದ್ಯಾರ್ಥಿಗಳಿಗೆ ಜೀವಾವಧಿ ಶಿಕ್ಷೆಯಾಗಿತ್ತು .ಇಬ್ಬರ ಮದುವೆಯ ದಿನದಂದು ಶ್ರೀದೇವಿ ಹೇಳಿದಳು"ಶ್ರೀಕಾಂತ್ ನೀನು ನಿಜವಾಗಲೂ ಈಗ ಗೆದ್ದೆ .ಗೆಲುವು ನಿನ್ನದಾಗಿದೆ""ಹೌದು ರೀ ನನ್ನನ್ನೂ ಈಗ ಗೆದ್ದುಬಿಟ್ಟಿರಿ ನೀವು " ಎಂದು ಕಿವಿಯಲ್ಲಿ ಪಿಸುನುಡಿದಳು ನನ್ನ ಹೆಂಡತಿನಾನು ಹೆಮ್ಮೆಯ ದೃಷ್ಟಿಯನ್ನು ನನ್ನ ಹೆಂಡತಿಯತ್ತ ಬೀರಿದೆ. ಅವಳು ಮೆಚ್ಚುಗೆಯಿಂದ ಕೈ ಹಿಡಿದಳು

Wednesday, April 15, 2009

ಎಡಗೈ ಬೆರಳ ಮೇಲಿನ ಮಚ್ಚೆ

"ಅಮ್ಮ ಆಗಿನಿಂದ ಅಪ್ಪನ ಫೋನಿಗೆ ಕಾಲ್ ಮಾಡ್ತಾ ಇದೀನಿ ಸ್ವಿಚ್ ಆಫ್ ಅಂತಾನೆ ಬರ್ತಿದೆ" ರಾಜೀವನ ದ್ವನಿಯಲ್ಲಿ ಗಾಭರಿ ಕಾಣುತ್ತಿತ್ತು

ರಾಯರು ಮನೆ ಬಿಟ್ಟು ಆರು ದಿನವಾಗಿತ್ತು.

ರಮ್ಯಾ ಮದುವೆಗೆ ಇನ್ನು ತಿಂಗಳಷ್ಟೆ ಉಳಿದದ್ದು.

ವಾರದ ಹಿಂದೆ ಮೈಸೂರಿನಲ್ಲಿ ತಿಳಿದಿರುವವರ ಬಳಿ ಒಡವೆ ಮಾಡಿಸಿಕೊಂಡು ಬರಲು ಹೋದವರು ನಂತರ ಕಂಡಿರಲಿಲ್ಲ.

ಆಚಾರಿಯ ಬಳಿ ಒಡವೆಗಳನ್ನು ತೆಗೆದುಕೊಂಡ ಅವರನ್ನು ಸ್ವತ: ರಾಯರ ತಮ್ಮ ಬಸ್ ಹತ್ತಿಸಿ ಕಳಿಸಿದ್ದರು .

ಅಲ್ಲಿಂದ ಹೊರಟಿದ್ದಗಿಯೂ ರಾಯರು ಫೋನ್ ಮಾಡಿದ್ದರು .

ಅದೇ ಅವರ ಕಡೇ ಕಾಲ್
ಪೋಲೀಸಿನವರಲ್ಲಿ ದೂರು ದಾಖಲಿಸಿದರೂ ಮುನ್ನಡೆಯಲಿಲ್ಲ.


ಅವರು ಹತ್ತಿದ ಬಸ್ ಹುಡುಕಿ ಕಂಡಕ್ಟರ್‌ಗೆ ಫೋಟೋ ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ನೆನಪಿಲ್ಲ ಎಂದ. ಟಿಕೆಟ್ ತೆಗೆದುಕೊಂಡಿದ್ದು ರಾಯರ ತಮ್ಮನೇ ಆದ್ದರಿಂದ ಕೌಂಟರ್ ಕ್ಲರ್ಕ್‌ಗೂ ಹೇಳಲಾಗಲಿಲ್ಲ. ಪೇಪರ್ ನಲ್ಲಿ ಹಾಕಿದ್ದರು. ಟಿವಿಯಲ್ಲಿ ತೋರಿಸಿದರು.

ರಾಯರು ಸ್ನೇಹ ಜೀವಿ.

ಎಲ್ಲರೊಡನೆ ಸಂತೋಷವಾಗಿ ಇರುತ್ತಿದ್ದರು ಕಷ್ಟ ಎಂದವರಿಗೆ ಕೈಲಾದಷ್ಟು ಸಹಾಯ ಮಾಡಿ ಸಂತಸ ಪಡುತ್ತಿದ್ದರು.

ಅವರಿಂದ ಸಹಾಯ ಪಡೆದವರು ಎಷ್ಟೋ ಮಂದಿ . ಅವರಲ್ಲಿ ರಾಜೀವನ ಸ್ನೇಹಿತ ಪ್ರಶಾಂತನೂ ಒಬ್ಬ. ರಾಯರ ಇನ್ನೊಬ್ಬ ಮಗನಂತೆ . ಯಾವಾಗಲೂ ರಾಯರ ಪ್ರಾವಿಷನ್ ಅಂಗಡಿಯಲ್ಲಿ ಕುಳಿತು ರಾಯರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ. ಮಗ ರಾಜೀವ ಮೋಜಿನ ಜೀವನ ನಡೆಸುತ್ತಿದ್ದ. ಅಂತಹ ಕೆಲಸವೂ ಸಿಕ್ಕಿರಲಿಲ್ಲ. ಹಾಗಾಗಿ ಮನೆಯಲ್ಲೇ ಕುಳಿತು ಬಿಟ್ಟಿ ಊಟ ತಿನ್ನುತಾನೆಂಬ ಕೊರಗೊಂದಿತ್ತು.


ಭಾವಿ ಬೀಗ ಸುಬ್ಬಣ್ಣ ಕೂಡ ಆತ್ಮೀಯ ಸ್ನೇಹಿತ ಎಲ್ಲಿ ಹೋದನೆಂದು ತಿಳಿಯದೆ ಕಂಗಾಲಾಗಿದ್ದರು

ಅವರ ಮಗ ಉಮೇಶ್‌ ಜೊತೆ ರಮ್ಯಾಳ ಮದುವೆ ನಿಶ್ಚಯವಾಗಿತ್ತು.

ಆರುದಿನ ,ಹದಿನೈದು ದಿನವಾಗಿತ್ತು

ರಾಯರು ಸಿಗಲಿಲ್ಲ.

ರಮ್ಯಾಳ ಮದುವೆಯನ್ನು ಮುಂದೂಡಲಾಯ್ತು.

ಅದೆಲ್ಲಾ ಆಗಿ ನಾಲ್ಕು ವರ್ಷಗಳೇ ಕಳೆದಿವೆ

ರಾಯರ ನೆನಪು ಪತ್ನಿ ಕಮಲಮ್ಮನವರನ್ನು ಹಿಂಸಿಸುತ್ತಿದೆ

ರಮ್ಯಾಳ ಅಪ್ಪ ಓಡಿ ಹೋಗಿದ್ದಾರೆ ಎಂದು ಗುಲ್ಲೆದ್ದಿರು ಆದರೂ ರಮ್ಯಾಳ ಮದುವೆ ಸುಬ್ಬಣ್ಣನವರ ಮಗನ ಜೊತೆ ಆಯ್ತು ಪ್ರಶಾಂತ್‍ನೇ ಮುಂದೆ ನಿಂತು ಮದುವೆ ಮಾಡಿದ. ರಾಜೀವನ ಸೋಮಾರಿತನವನ್ನು ಬಿಡಿಸಿ ಒಂದೆಡೆ ಕೆಲಸ ಕೊಡಿಸಿದ್ದ.

ರಾಯರ ನೆನಪಿನಲ್ಲಿಯೇ ಕಮಲಮ್ಮ ಹಾಸಿಗೆ ಹಿಡಿದಿದ್ದಾರೆ. ರಾಜೀವ ಮದುವೆಗೂ ಒಪ್ಪಿರಲಿಲ್ಲ. ಈಗ ಒಂದು ಸಂಬಂಧ ಬಂದಿದೆ. ಹುಡುಗಿ ಚೆನ್ನಾಗಿದ್ದಳು . ಕಮಲಮ್ಮನ ಹಾಗು ಪ್ರಶಾಂತನ ಬಲವಂತದಿಂದ ರಾಜೀವನು ಗತ್ಯಂತರವಿಲ್ಲದೆ ಒಪ್ಪಿದ
ಎಂಗೇಜ್‌ಮೆಂಟ್ ದಿನ

ಹುಡುಗಿಯ ಕಡೆಯವರೆಲ್ಲಾ ಮನೆಗೆ ಬಂದಿದ್ದರು.ರಾಜೀವನ ಕಡೆಯವರೂ ಸಹಾ. ಪ್ರಶಾಂತ್ ಅವನ ಸ್ನೇಹಿತರೂ ಕೂಡ ಬಂದಿದ್ದರು. ಎಲ್ಲರೂ ತುಂಬಾ ಓಡಾಡುತ್ತಿದ್ದರು

ಮನೆ ತುಸು ದೊಡ್ಡದೇ.

ಬಂದವರೆಲ್ಲಾ ದೊಡ್ಡದಾಗಿ ಹಾಕಿದ್ದ ರಾಯರ ಫೋಟೋಗೆ ನಮಸ್ಕರಿಸಿ ಕಣ್ಣನ್ನು ತೇವ ಮಾಡಿಕೊಳ್ಲುತ್ತಿದ್ದರು.
ಹುಡುಗಿಯ ಚಿಕ್ಕಪ್ಪ ಮಧು ಮಾತ್ರ ರಾಯರ ಫೋಟೋವನ್ನು ಎಚ್ಚರಿಕೆಯಿಂದ ಗಮನಿಸತೊಡಗಿದರು. ಅವರು ನೆನ್ನೆ ತಾನೆ ಅಮೇರಿಕಾದಿಂದ ಬಂದಿಳಿದಿದ್ದರು

"ಇವರನ್ನು ಇನ್ನೆಲ್ಲೋ ನೋಡಿದ್ದೇನೆ" ತಮ್ಮಷ್ಟೆಕ್ಕೆ ತಾವೇ ಹೇಳಿಕೊಂಡರು.
ಎಂಗೇಜ್‌ಮೆಂಟ್ ಮುಗಿಯಿತು

ಎಲ್ಲರೂ ಅವರವರ ಮನೆಗೆ ತೆರಳಿದರು


ಮನೆಗೆ ಬಂದ ನಂತರ ಮಧು ತಮ್ಮ ಲ್ಯಾಪಟಾಪ್ ತೆಗೆದು ನೋಡಿದರು. ಅದರಲ್ಲೇ ಇದ್ದ ಆ ವಿಡಿಯೋ ನೋಡಿದ ಕೂಡಲೆ ತನ್ನ ನೆನಪಿನ ಶಕ್ತಿಯ ಬಗ್ಗೆ ಹೆಮ್ಮೆ ಎನಿಸಿತು.

ಕಮಲಮ್ಮನವರ ಫೋನ್ ರಿಂಗಣಿಸಿತು

ರಾಜೀವ ಫೋನ್ ಅಟೆಂಡ್ ಮಾಡಿದ
ಅದು ಮಧು ಅವರ ಕಾಲ್

"ಹಲೋ ರಾಜೀವ್ ಇದು ಮಧು, ಒಂದು ಮುಖ್ಯವಾದ ವಿಷಯ ಮಾತಾಡೋದಿದೆ"

"ಹೇಳಿ ಅಂಕಲ್" ರಾಜೀವ ಕೇಳಿದ
ಆ ಕಡೆಯಿಂದ ಮಧು ಮಾತಾಡತೊಡಗಿದರು

"ನಾನು ನಾಲ್ಕು ವರ್ಷ್ದದ ಹಿಂದೆ ಇಲ್ಲಿಗೆ ಬಂದಿದ್ದೆ. ಆಗ ಮೈಸೂರಿನಲ್ಲಿ ಯಾವುದೋ ಕೆಲಸ ಇತ್ತು ಅಂತ ಹೋಗ್ತಿದ್ದಾಗ ದಾರೀಲಿ ಒಂದು ಪೆಟ್ಟಿಗೆ ಅಂಗಡೀಲಿ ಟೀ ಮಾರ್ತಿದ್ದರು. ಟೀ ಕುಡಿಯೋದಿಕ್ಕೆ ಅಂತ ಕಾರಿಂದ ಇಳಿದೆ, ನಂಗೆ ವಿಡಿಯೋಗ್ರಫಿಲಿ ತುಂಬಾ ಆಸಕ್ತಿ ಇದೆ, ಅದಕ್ಕೆ ಟೀ ಮಾರೋನು ಟೀ ಮೇಲಿಂದ ಕೆಳಗೆ ಹಾಕಿ ಬೆರೆಸೋದನ್ನ ಶೂಟ್ ಮಾಡ್ತಾ ಇದ್ದಾಗ ಸುತ್ತ ಮುತ್ತಾ ಇದ್ದವರು ಅದರಲ್ಲಿ ಸೆರೆ ಆಗಿದಾರೆ .ಅದರಲ್ಲಿ ನಿಮ್ಮ ತಂದೆ ಥರ ಇರೋ ಒಬ್ಬ್ರು ಟೀ ಕುಡೀತಾ ಯಾರ ಹತ್ತಿರಾನೋ ಮಾತಾಡ್ತಾ ಇದ್ದಾರೆ. ನೀವು ಅದನ್ನು ನೋಡಿದರೆ ಗೊತ್ತಾಗಬಹುದು"

"ಅದು ಯಾವ ಡೇಟ್ ಅಂತ ಹೇಳಕಾಗುತಾ ಅಂಕಲ್"

"ಒಂದು ನಿಮಿಷ, ಇದು ಶೂಟ್ ಮಾಡಿದ ದಿನ ೩-೧-೨೦೦೫"

"ಅರೆ ಅದೇ ದಿನದಲ್ಲೇ ಅಪ್ಪ ಮೈಸೂರಿನಿಂದ ಬಸ್ ಹತ್ತಿದ್ದು"

"ಹೌದಾ ಆದರೆ ಸುತ್ತಾ ಮುತ್ತಾ ಯಾವ ಬಸ್ಸೂ ಕಾಣಿಸ್ತಿಲ್ಲ. ಬಸ್ ಅಲ್ಲೆಲ್ಲಾ ಸ್ಟಾಪ್ ಕೊಡೋದಿಲ್ಲ ಅಲ್ವಾ"

"ಸರಿ ಹಾಗಿದ್ರೆ ಅವರ ಜೊತೆ ಮಾತಾಡ್ತಾ ಇರೋವರು ಯಾರು ಅಂತ ಗೊತ್ತಾಗುತ್ತಾ?"

"ನಾನು ಮುಖ ಶೂಟ್ ಮಾಡಿಲ್ಲ .ಬರೀ ಟೀ ಕಪ್ ಹಿಡಿದ ಕೈ ಮಾತ್ರ ಕಾಣಿಸ್ತಿದೆ , ಕೈಯಲ್ಲಿ ಒಳ್ಳೆ ದಪ್ಪ ಉಂಗುರ ಇದೆ " ಗೊಂದಲ ಕಾಣುತ್ತಿತ್ತು

"ಸರಿ ಅಂಕಲ್ ಈಗಲೆ ಅದನ್ನ ನಂಗೆ ಈ ಮೇಲ್ ಮಾಡಿ .ನೋಡಬೇಕು" ಎಂದು ತನ್ನ ಇ ಮೇಲ್ ಐಡಿ ಹೇಳಿದ

"ಆಯ್ತು"

ರಾಜೀವನ ಹೃದಯ ಹೊಡೆದುಕೊಳ್ಳುತ್ತಿತ್ತು.

ಅಮ್ಮನಿಗೆ ವಿಷಯ ಹೇಳಲು ಮನಸು ಬರಲಿಲ್ಲ

ಕೂಡಲೆ ಪ್ರಶಾಂತನಿಗೆ ಫೋನ್ ಮಾಡಿ ವಿಷ್ಯ ತಿಳಿಸಿದ.

"ಆಯ್ತು ನಾನೂ ಈಗಲೇ ಬರ್ತೀನಿ ಕಣೋ" ಎಂದ ಪ್ರಶಾಂತ

ರಾಜೀವ ಗಾಡಿ ಸ್ಟಾರ್ಟ್ ಮಾಡಿ ಸೈಬರ್ ಸೆಂಟರ್ ಹತ್ತಿರ ಹೋದ . ಆ ವೇಳೆಗಾಗಲೆ ಪ್ರಶಾಂತ್ ಸಹ ಅಲ್ಲಿಗೆ ಬಂದಿದ್ದ.

ಮಧು ಮೇಲೆ ಕಳಿಸಿದ್ದಾಗಿದೆ ಎಂದು ಫೋನ್ ಮಾಡಿದರು.

ರಾಜೀವ್ ಮೇಲ್ ಓಪನ್ ಮಾಡಿದ

ಮೇಲ್ ನೋಡಿದ ರಾಜೀವ ಅಳತೊಡಗಿದ. ತಂದೆಯನ್ನು ನೋಡಿ ಅಳುವೇ ಬಂದಿತ್ತು

ರಾಯರು ಯಾರೊಡನೆಯೋ ಬಹಳ ಸಲುಗೆಯಿಂದ ಮಾತಾಡುತ್ತಿದ್ದಾರೆ

ಅವರ ಮುಖವೂ ಅಸ್ಪಷ್ಟವಾಗಿಯೇ ಇತ್ತು/ ಏಕೆಂದರೆ ಫೋಕಸ್ ಪೂರ್ತಿ ಟೀ ಅಂಗಡಿಯವನ ಮೇಲೆ ಇತ್ತು.

ರಾಯರು ಯಾರೊಡನೆ ,ಮಾತಾಡುತ್ತಿದ್ದರೋ ಅವರ ಮುಖ ಕಾಣುತ್ತಿರಲಿಲ್ಲ

ಕೈ ಮಾತ್ರ ಕಾಣುತ್ತಿತ್ತು. ಕೈನಲ್ಲಿ ದಪ್ಪ ಉಂಗುರ. ಮಾತ್ರ ಎದ್ದು ಕಾಣುತ್ತಿತ್ತು.

ಇಬ್ಬರೂ ಯಾಂತ್ರಿಕವಾಗಿ ಕೈ ನೋಡಿಕೊಂಡರು.

ಇಬ್ಬರ ಬೆರಳೂಗಳಲ್ಲಿ ಆ ಥರ ಉಂಗುರವಿಲ್ಲ

ಅದನ್ನು ಕಾಪಿ ಮಾಡಿಕೊಂಡು ಮನೆಗೆ ಬಂದ ರಾಜೀವ್. ಪ್ರಶಾಂತ್ ತಾನು ನೆನಪಿಸಿಕೊಳ್ಳುವುದಾಗಿ ಹೇಳಿದ.

ಮನೆಗೆ ಬಂದ ಮೇಲೆ ಡಿವಿಡಿ ಆನ್ ಮಾಡಿ . ಅದರಲ್ಲಿ ಪೆನ್ ಡ್ರೈವ್ ಹಾಕಿದನು.

ಅಪ್ಪನನ್ನು ನೋಡುತ್ತ ಕಣ್ತುಂಬಿಕೊಳ್ಳುವಷ್ಟ್ರಲ್ಲಿ ಕಮಲಮ್ಮ ಕೇಳಿದರು

"ರಾಜೀವ ಏನೋ ಇದು ಎಲ್ಲಿತ್ತೋ ಇದು?"

"ಅಮ್ಮ ಇದು ಮಧು ಅಂಕಲ್ ಕಳಿಸಿದ್ದು. ಅವ್ರು ಮೈಸೂರಿಗೆ ಹೋಗ್ತಿದ್ದಾಗ ತೆಗೆದದ್ದು. ನೋಡು ಅಪ್ಪಾನೂ ಇದರಲ್ಲಿ ಇದ್ದಾರೆ. ಅವರು ಯಾರ ಜೊತೇನೋ ಮಾತಾಡ್ತಿದಾರೆ . ಅವರು ಯಾರು ಅಂತ ಕಾಣಿಸ್ತಿಲ್ಲ. ಬರೀಕೈ ಮಾತ್ರ ಕಾಣಿಸ್ತಿದೆ"

ಕಮಲಮ್ಮ ಯಾವುದನ್ನೂ ಕೇಳಿಸಿಕೊಳ್ಳುತ್ತಿರಲಿಲ್ಲ

ಪರದೆಯ ಮೇಲೆ ಮೂಡಿ ಬರುತ್ತಿದ್ದ ರಾಯರನ್ನೇ ನೋಡುತಾ ಕುಸಿದು ಕೂತರು.

"ಅಮ್ಮಾ ಸ್ವಲ್ಪ ಕಂಟ್ರೋಲ್ ಮಾಡ್ಕೋ ಆ ಕೈ ಯಾರದ್ದಂದ್ರೆ ನಮಗೆ ಅಪ್ಪ ಎಲ್ಲಿರಬಹುದು ಅನ್ನೋ ಅಂದಾಜು ಗೊತ್ತಾಗುತ್ತೆ. ನಿಂಗೇನಾದ್ರೂ ನೆನಪಿಗೆ ಬರುತ್ತಾ ನೋಡು? ಆ ಉಂಗುರ ಯಾರು ಹಾಕಿದ್ದರು ಅಂತ ಗೊತ್ತಾಗುತ್ತಾ "

"ಅಯ್ಯೋ ನಂಗೇನೋ ಗೊತ್ತಾಗುತ್ತೆ. ಇದೆಲ್ಲಾ. ನಂಗೆ ಭಯ ಆಗ್ತಿದೆ ಕಣೋ ಅವರಿಗೆ ಏನಾದರೂ ಆಗಿದ್ಯೋನೋ" ಕಮಲಮ್ಮನ ಆತಂಕ ಇಮ್ಮಡಿಸಿತು.

"ಅಮ್ಮ ಸಮಾಧಾನ ಮಾಡ್ಕೋ ಅಪ್ಪನ್ನ ಯಾರೋ ಕಿಡ್ನಾಪ್ ಮಾಡಿದಾರೆ ಅಂತಾ ಅನ್ನಿಸ್ತಾ ಇದೆ ಆದರೆ ಅಪ್ಪ ಅಷ್ಟು ಚೆನ್ನಾಗಿ ಮಾತಾಡ್ತಾ ಇರೋದನ್ನ್ ನೋಡಿದರೆ ಯಾರೋ ತುಂಬಾ ಗೊತ್ತಿರೋರೆ ಅನ್ಸುತ್ತೆ"

ಸ್ವಲ್ಪ ಹೊತ್ತು ಕಮಲಮ್ಮ ಪರದೆಯನ್ನೇ ನೋಡುತ್ತಿದ್ದರು

"ರಾಜೀವ ಆ ತೋರು ಬೆರಳಿನಮೇಲೆ ಒಂದು ಮಚ್ಚ್ಚೆ ಇದೆ ಕಾಣುತ್ತೇನೋ "

ರಾಜೀವ ಮತ್ತೆ ಆ ಸೀನನ್ನ ಬ್ಯಾಕವಾರ್ಡ್ ಮಾಡಿದ

ಹೌದಲ್ಲ ತನಗೆ ಗೊತ್ತೇ ಆಗಲಿಲ್ಲ

ಆ ಬೆರಳಲ್ಲಿ ಮಚ್ಚೆ ಒಂದಿದೆ

ಅದು ಬಹಳ ಅಪರೂಪದ್ದು ಆದರೆ ಆ ಥರ ಮಚ್ಚೆ ಎಲ್ಲೋ ನೋಡಿದಂತಿದೆಯಲ್ಲಾ

ಕಮಲಮ್ಮನವರ ತಲೆಗೆ ಏನೋ ಹೊಳೆಯಿತು.

"ರಾಜೀವಾ ಆ ಕೈ ಯಾರದು ಅಂತ ಗೊತ್ತಾಯ್ತು ನಂಗೆ ಆದರೆ ನಂಬೋದಿಕ್ಕೆ ಆಗ್ತಾ ಇಲ್ಲ"

"ಹೌದು ರಾಜೀವ. ನಿಂಗೆ ನೆನಪಿದೆ ಅಲ್ವಾ ಆವತ್ತು ಜ್ಯೋತಿಷ್ಯದ ವಿಷ್ಬಯ ಮಾತಾಡ್ತಾ ಇದ್ದಾಗ ನಿಮ್ಮಪ್ಪ ಅವನ ಎಡ ಕೈ ಬೆರಳಿನ ಮೇಲೆ ಇದ್ದ ಮಚ್ಚೆ ನೋಡಿ ನಿಂಗೆ ಇದರ ಕಾರಣದಿಂದ ತುಂಬಾ ಕಷ್ಟ ಬರುತ್ತೆ ಅಂತ ಹೇಳಿದ್ರು ಆಗ ನಾವು ಅದನ್ನು ನೋಡಿ ಇದೇನೋ ಪ್ರಶಾಂತ್ ನಿಂಗೆ ಮಚ್ಚೆ ವಿಚಿತ್ರವಾಗಿ ಬೆರಳಿನ ಮೇಲೆ ಇದೆ ಅಂತ ನಗಲಿಲ್ಲವಾ?"

ಆ ವೇಳೆಗಾಗಲೇ ರಾಜೀವನಿಗೂ ಗೊತ್ತಾಗಿ ಹೋಗಿತ್ತು

ಹೃದಯ ಚೂರಾಗುವಷ್ಟು ನೋವಾಯಿತು

"ಅಮ್ಮಾ ಇವನು ಯಾಕೆ ಹೀಗೆ ಮಾಡಿದ"

ಕೂಡಲೆ ಪ್ರಶಾಂತನಿಗೆಫೋನ್ ಮಾಡಿದ

ಫೋನ್ ರಿಂಗ್ ಆಗುತ್ತಿತ್ತೇ ಹೊರತು ಯಾರೂ ಎತ್ತಲಿಲ್ಲ

ಕೂಡಲೆ ಗಾಡಿಯಲ್ಲಿ ಅವನ ಮನೆಯತ್ತ ಹೊರಟ

ಪ್ರಶಾಂತ್ ಸಿಗಲಿಲ್ಲ.

ರಾಜೀವ ಪೋಲಿಸರಿಗೆ ದೂರು ಕೊಟ್ಟನು

ಸುಮಾರು ದಿನಗಳಾದ ಮೇಲೆ ಪೋಲೀಸರು ಹಿಡಿದರು

ಪೋಲಿಸರ ಆತಿಥ್ಯದ ನಂತರ ಪ್ರಶಾಂತ್ ಬಾಯಿ ಬಿಟ್ಟ. ಅದು ರೆಕಾರ್ಡ್ ಆಗಿ ರಾಜೀವ ಹಾಗು ಕಮಲಮ್ಮನವರ ಮುಂದೆ ಹೋಯಿತು.

"ಅಂಕಲ್ ನನ್ನನ್ನು ಚೆನ್ನಾಗಿ ನೋಡಿಕೊಂಡರು ಆದ್ರೆ ನಂಗೆ ಹಣ ಮಾಡಬೇಕಂತ ಆಸೆ ಇತ್ತು. ಎಷ್ಟು ದಿನ ಕಷ್ಟದಲ್ಲಿ ಇರೋದು. ಅಂಕಲ್ ಮೈಸೂರಿಗೆ ಹೋಗಿದ್ದು ಬರೀ ಒಡವೆ ಮಾಡಿಸೋದಿಕ್ಕೆ ಅಲ್ಲ. ಅವರು ಯಾವಾಗ್ಲೋ ಅವರ ಹೆಸರಲ್ಲಿ ಇಟ್ಟಿದ್ದ FD ತರೋದಿಕ್ಕೆ . ಅದು ಸುಮಾರು ಹದಿನೈದು ಲಕ್ಷಗಳು . ರಾಜೀವನ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ಅದಕ್ಕೆ ಅವರು ಈ ವಿಷ್ಯಾನ ಯಾರಿಗೂ ಹೇಳಿರಲಿಲ್ಲ. ನನಗೂ ಸಹ

ಆದರೆ ಫೋನ್ ನಲ್ಲಿ ಮಾತಾಡೋವಾಗ ನಾನು ವಿಷಯ ಕೇಳಿಸಿಕೊಂಡೆ. ಅದು ಅವರಿಗೆ ಗೊತ್ತಿರಲಿಲ್ಲ. ಮೈಸೂರಿಗೆ ಅವರಿಗೆ ಗೊತ್ತಿಲ್ಲದಂತೆ ಹೊರಟೆ. ಸ್ನೇಹಿತನೊಬ್ಬನ ಕಾರಿನಲ್ಲಿ. ಅವರು ಮೈಸೂರಿಂದ ಬಸ್ ಹತ್ತುತ್ತಿದ್ದಂತೆ ನಾನು ಕಾರಲ್ಲಿ ಬಸ್ ಫಾಲೋ ಮಾಡಿದೆ. ಬಸ್ ಹೋಟೆಲ್ ಹತ್ರ ಸ್ಟಾಪ್ ಮಾಡಿದಾಗ ಅವರನ್ನು ಮಾತಾಡಿಸಿದೆ. ಅವರೂ ಒಳ್ಲೇದೆ ಆಯ್ತು ಎಂದು ನನ್ನ ಕಾರಲ್ಲಿ ಕೂತುಕೊಂಡರು.

ಸ್ವಲ್ಪ ದೂರ ಹೋಗ್ತಿದ್ದ ಹಾಗೆ ಮೊದಲೇ ಪ್ಲಾನ್ ಮಾಡಿದ್ದ ನಾನು ಪೆಟ್ಟಿಗೆ ಅಂಗಡಿಯೊಂದರ ಬಳಿ ಸ್ಟಾಪ್ ಮಾಡಿ ಅವರಿಗೆ ಟಿ ಕುಡಿಯಲು ಹೇಳಿದೆ. ಟೀ ಯಲ್ಲಿ ಅವರಿಗೆ ಗೊತ್ತಾಗದಂತೆ ಮತ್ತು ಬರೋ ಔಷಧ ಸೇರಿಸಿದೆ."

ನಂತರ ಸ್ವಲ್ಪ ಹೊತ್ತಿನವರೆಗೆ ಮೌನ

ಮತ್ತೆ ಮಾತಾಡಿದ

ಆಮೇಲೆ ಕಾರಲ್ಲಿ ಕೂತ್ಕೊಂಡ ಮೇಲೆ ಅಂಕಲ್ ಪ್ರಜ್ನೆ ತಪ್ಪಿದರು

"ಆಮೇಲೆ ಏನೋ ಮಾಡಿದೆ ಬೊಗಳೋ"

ಇನ್ಸ್ಪೆಕ್ಟರ್ ದನಿ

"ಒಂದು ಕಡೆ ಸ್ಟಾಪ್ ಮಾಡಿ ಅಂಕಲ್ ಕುತ್ತಿಗೇನ ಚಾಕು ಇಂದ ಹಿರಿದು ಸಾಯಿಸಿ ಬಿಟ್ಟೆ"

ಕಮಲಮ್ಮ ಇಲ್ಲಾ ಎಂದು ಕಿರುಚಿದರು

ರಾಜೀವನ ಕಣ್ಣಲ್ಲಿ ದಳದಳ ನೀರು.

"ಅಯ್ಯೋ ಸೂ.. ಮಗನೆ . ನಾಯಿ ಕೂಡ ನಿಯತ್ತಿಂದ ಇರುತ್ತೆ . ಅದೂ ಇಲ್ಲವಲ್ಲೋ ನಿಂಗೆ . ಬಾಡಿ ಏನೋ ಮಾಡಿದೆ" ಮತ್ತೊಮ್ಮೆ ಇನ್ಸ್ಪೆಕ್ಸ್ಟರ್ ದನಿ ಜೋರಾಗೆ ಹೊಡೆದ ಸದ್ದು

" ತುಮುಕೂರಿಂದ ಶಿರಾ ಹೋಗೋ ದಾರೀಲಿ ಒಂದು ಪಾಳು ಬಿದ್ದಿರೋ ಹೊಲ ಇದೆ ಅಲ್ಲಿ ಯಾರೂ ಬರಲ್ಲ ಅಲ್ಲಿ ನೆಲ ಅಗೆದು ಬಾಡೀನ ಹೂತು ಬಿಟ್ಟೆ"

"ಅವರ ದುಡ್ದು ಹದಿನೈದು ಲಕ್ಶ ರೂಪಾಯಿ, ಜೊತೆಗೆ ಒಡವೆ ಒಂದು ಆರು ಲಕ್ಷದಷ್ಟು ಇತ್ತು.ಹಣ ಒಡವೇನ ಮಾರಿ ತಂಗಿ ಮದುವೆ ಮಾಡಿದೆ. ದುಡ್ಡಲ್ಲಿ ಚೆನ್ನೈನಲ್ಲಿ ಒಂದು ಸೈಟ್ ತೆಗೆದುಕೊಂಡಿದ್ದೇನೆ. ಇದೆಲ್ಲಾ ನನ್ನ ಬಡತನದಿಂದ ಮಾಡಿದ್ದು ಸಾರ್"

"ಬಡತನ ಅಂತ ಇನ್ನೊಬ್ಬರ ಜೀವಾನ್ ತೆಗೆದು ಶ್ರೀಮಂತ ಆಗ್ತೀಯಾ" ಮತ್ತೊಮ್ಮೆ ಏಟಿನ ಶಬ್ಧ ಕೇಳಿಸಿತು

ಕೋರ್ಟ್‌ನಲ್ಲಿ ರಾಜೀವನ ಪ್ರಯತ್ನದಿಂದ ಪ್ರಶಾಂತನಿಗೆ ಗಲ್ಲು ಶಿಕ್ಶೆ ವಿಧಿಸಲಾಯ್ತು.

ಕೋರ್ಟ್ನಿಂದ ಜೈಲಿಗೆ ಹೋಗಲು ಜೀಪನ್ನೇರಿದ ಪ್ರಶಾಂತನಿಗೆ ತನ್ನ ಎಡಗೈನಲ್ಲಿದ್ದ ಕಪ್ಪು ಮಚ್ಚೆ ಕಾಣಿಸಿತು.

ರಾಯರ ಮಾತು ನೆನಪಿಗೆ ಬಂತು

ಮುಖ ಮುಚ್ಚಿಕೊಂಡು ಅಳಲಾರಂಭಿಸಿದ. ಎಡಗೈನ ತೋರು ಬೆರಳ ಹಿಂಬದಿಯ ಮಚ್ಚೆ ನಗಲಾರಂಭಿಸಿತು.

Tuesday, April 7, 2009

ಹೆಣ್ಣೇ ನೀನೇಕೆ ಹೀಗಾದೆ?

" ಕುಮಾರಿ ಪ್ರಭಾವತಿಗೆ ಜೈ ಕುಮಾರಿ ಪ್ರಭಾವತಿಗೆ ಜೈ" ಜೈಕಾರಗಳು ಮುಗಿಲು ಮುಟ್ಟಿದವು.
ಪ್ರಭಾವತಿ ರಾಜ ಗಾಂಭೀರ್ಯದಿಂದ ಕಾರಿನಿಂದ ಇಳಿದರು ೪೫ರ ವಯಸಿನಲ್ಲೂ ಗಂಡಸರ ಆಸೆಗಳನ್ನು ಕೆರಳಿಸುವಂತಹ ಮೈಕಟ್ಟು. ಸೌಂದರ್ಯ . ಮದುವೆ ಆಗಿಲ್ಲ ಅಲ್ಲವೇ ಅದಕ್ಕೆ ಅಂತಾ ಸೌಂದರ್ಯ ಹಾಗೆ ಇದೆ ಎಂದು ಅವರ ವಾರಿಗೆಯ ಹೆಂಗಸರು ಅಸೂಯೆ ಪಟ್ಟು ನುಡಿಯುತ್ತಿದ್ದರು. ಯಾರೇನೆ ಅಂದರೂ ಗಜ ಗಾಮಿನಿಯಾದ ಪ್ರಭಾವತಿ ಕೇರ್ ಮಾಡುತ್ತಿರಲಿಲ್ಲ
ಭಾರತದ ಮುಂದಿನ ಪ್ರಧಾನಿ ಇವರಾಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿತ್ತು. ಅವರ ಒಂದು ಮಾತಿಗೆ ಇಡೀ ಡೆಲ್ಲಿಯನ್ನೇ ನಡುಗಿಸೋ ಅಂತಹ ಶಕ್ತಿ ಇತ್ತು. ಎಂತೆಂತಹ ರಾಜಕೀಯ ಹೇಮಾ ಹೇಮಿಗಳೆಲ್ಲಾ ಇವರೆದುರಿಗೆ ನಿಂತು ಚುನಾವಣೆಯಲ್ಲಿ ಸೋತಿದ್ದರು
ತಿಂಗಳು ಗಳಾದ ನಂತರ ಬೆಂಗಳೂರಿಗೆ ಬಂದಿದ್ದರು. ನೋಡಲು ಜನಸಾಗರವೇ ನಿಂತಿತ್ತು
ಹೂವಿನ ಹಾರಗಳ ಭಾರಕ್ಕೆ ನಲುಗಿದವರಂತೆ ಕಂಡರೂ ಕಣ್ಣಲ್ಲಿ ಗೆಲುವು . ಸುತ್ತಾ ನಿಂತಿದ್ದ ಜನರನ್ನು ನೋಡಿ ಹೆಮ್ಮೆಯಾಯಿತು. ಇದಕ್ಕೆ ಅಲ್ಲವೇ ತಾನು ಇಷ್ಟೊಂದು ಕಷ್ಟ ಪಟ್ಟಿದ್ದು. ಎಷ್ಟೋ ಜನರಿಗೆ ಸೆರಗು ಹಾಸಿ ಸೆರಗನ್ನೇ ನೇಣಾಗಿ ಮಾಡಲಿಲ್ಲವೇ? ತನ್ನ ಬುದ್ದಿವಂತಿಕೆಗೆ ಮೆಚ್ಚುಗೆಯಾಯಿತು. ಮನದಲ್ಲಿ ಏನೇ ಮಂಥನ ನಡೆಯುತ್ತಿದ್ದರೂ ತುಟಿಯಲ್ಲಿ ಮಾತ್ರ ಅದೇ ಜನರನ್ನು ಮೋಡಿ ಮಾಡುವ ನಗೆ ಹೊದ್ದು ಕೈ ಮುಗಿದುಕೊಂಡು ಬರುತ್ತಿದ್ದರು. ಹಿಂದೆ ಶಾಸಕರ ದಂಡು ಅವರ ಹಿಂದೆ ಕಾರ್ಯಕರ್ತರು.
ತಮ್ಮ ಬೇಳೆ ಏನಾದರೂ ಬೇಯಬಹುದೇ ಎಂದು ಕಾಯುತ್ತಿರುವ ಉದ್ಯಮಿಗಳು ತಾನೆ ಪ್ರಭಾವತಿ ಏನೋ ಎಂಬಂತೆ ಅವರನ್ನು ಗದರಿಸುತ್ತಾ ತಡೆಯುತ್ತಿದ್ದ ಕಾರ್ಯದರ್ಶಿ ಕುಮಾರ್ .ಇವರೆಲ್ಲರ ನಡುವೆ ಹೋಗುತ್ತಿದ್ದಂತೆ ಪ್ರಭಾ ನಿಂತು ಬಿಟ್ಟರು.
ಆ ಹುಡುಗಿ ಹಾಗು ಆ ಹುಡುಗಿಯ ಹಿಂದೆ ಸೋಮೇಶ ಇಬ್ಬರೂ ಬಿಂದಿಗೆಯಲ್ಲಿ ನೀರನ್ನು ಹೊತ್ತುಕೊಂಡು ಹೋಗುತ್ತಿದ್ದರು.
ಕಾಲನ್ನು ಕೀಳಲಾಗಲಿಲ್ಲ ಪ್ರಭಾವತಿಗೆ.ಹೆಗಲ ಮೇಲೆ ಬಿಂದಿಗೆ ಹೊತ್ತು ನಡೆಯುತ್ತಿದ್ದ ಸೋಮೇಶ್ ಒಂದರೆ ಕ್ಷಣ ನಿಂತ.
ಕಣ್ಣಲ್ಲಿ ಕಣ್ಣು ನೆಟ್ಟಿತು.
ಆ ಹುಡುಗಿಯತ್ತ ನೋಡಿದ ಪ್ರಭಾಳ ಕಣ್ಣು ಅವನನ್ನು ಏನೋ ಕೇಳಿತು. ಅದಕ್ಕೆ ಅವನ ಉತ್ತರ ಕಣ್ಣಲ್ಲಿ ಹೂ ಎಂಬ ಉತ್ತರ ಬಂದಿತು
ಸಮಾರಂಭದ ಸ್ಥಳಕ್ಕೆ ಎಲ್ಲರೂ ನಡೆದರು ಪ್ರಭಾವತಿಯ ಕಾಲು ವೇದಿಯಮೇಲೆ ನಡೆಯಿತು.
ಒಬ್ಬೊಬ್ಬರಾಗಿ ಮಾತಾಡತೊಡಗಿದರು

ಮುಂದೆ ಜನ ಸ್ಥೋಮ ವೇ ಇದ್ದರೂ ಪ್ರಭಾವತಿಯವರ ಗಮನ ಮಾತ್ರ ಬಿಂದಿಗೆಯನ್ನು ಕಾಲಬಳಿ ಇಟ್ಟುಕೊಂಡು ತನ್ನನ್ನೇ ನೋಡುತ್ತಿದ್ದ ಆ ಹುಡುಗಿಯ ಮೇಲೆ . ಓಡಿ ಹೋಗಿ ಅವಳನ್ನು ಅಪ್ಪಲೇ ಎನಿಸುತ್ತಿತ್ತು.

ಅಪ್ಪ ರಾಜ್ಯದ ರಾಜಕೀಯದಲ್ಲಿ ಪ್ರಕಾಶಿಸುತ್ತಿದ್ದರು. ಹಳ್ಳಿಯಲ್ಲಿ ಇದ್ದ ಸೋಮ ಮತ್ತು ಅವಳು ಪರಸ್ಪರ ಆಕರ್ಷಿತರಾದದ್ದು. ಒಮ್ಮೆ ಹೊಲದಮನೆಯಲ್ಲಿ ಇಬ್ಬರ ಮೈ ಒಂದಾಗಿದ್ದು. ಅಚಾತುರ್ಯದ ಫಲವಾಗಿ ಬಸುರಿಯಾದದ್ದು. ಅಮ್ಮ ಅದಕ್ಕೋಸ್ಕರ ಪ್ರಭಾಳನ್ನು ಬೇರೆ ಊರಿಗೆ ಕಳಿಸಿದ್ದರು ಹೆರಿಗೆಯಾಗಿ ಹೆಣ್ಣು ಮಗುವಿಗೆ ತಾಯಿಯಾಗಿದ್ದಳು. ಇನ್ನೇನು ಸೋಮೆಶ್ನೊಡನೆ ಮದುವೆಯಾಗಬೇಕೆಂದುಕೊಳ್ಳುತ್ತಿರುವಾಗಲೇ ರಾಜಕೀಯ ದಳ್ಳುರಿಗೆ ಅಪ್ಪ ಹಾಗು ಅಮ್ಮ ಇಬ್ಬರೂ ಬಲಿಯಾಗಿದ್ದರು . ಊರವರೆಲ್ಲಾ ತಂದೆಯ ಪ್ರತಿನಿಧಿಯಾಗಬೇಕೆಂದು ಕೇಳಿದಾಗ ಮೊದಲಿನಿಂದಲೇ ಮಹತ್ವಾಕಾಂಕ್ಷೆಯುಳ್ಳ ಪ್ರಭಾ ಚುನಾವಣೆಗೆ ನಿಲ್ಲಬೇಕೆಂಬ ನಿರ್ಧಾರಕ್ಕೆ ಬಂದಳು. ಆದರೆ ಸೋಮೇಶ ಇದಕ್ಕೆ ವಿರೋಧಿಸಿದ. ವಿವಾಹ ಎಂದರೆ ಸ್ವಾತಂತ್ರ್ಯದ ಹರಣ ಎಂದು ಅಂದೇ ಅನಿಸಿತು .ಮದುವೆ ಎಂಬ ಬಂಧ ಬೇಡ ಅನಿಸಿತು ಮಗುವನ್ನು ಯಾವುದಾದರೂ ಆಶ್ರಮಕ್ಕೆ ಬಿಡಬೇಕೆಂಬ ನಿರ್ಧಾರಕ್ಕೆ ಬಂದಿದ್ದಳು. ಸೋಮೇಶ್ ತನ್ನ ಮಗುವನ್ನು ತಾನೇ ಸಾಕುವುದಾಗಿ ಹೇಳಿದ. ತಾಯ್ತನವನ್ನು ಅಧಿಕಾರದ ವ್ಯಾಮೋಹ ಗೆದ್ದಿತ್ತು. ಅದಾದನಂತರ ಇಂದೇ ಅವರಿಬ್ಬರ ಭೇಟಿ.
ಕುಮಾರ್ ಪ್ರಭರವರ ಮುಖವನ್ನೇ ನೋಡುತ್ತಿದ್ದ. ಇನ್ನೇನಾಗಬಹುದು ಎಂದು ತಿಳಿದಿತ್ತು.ಅವನಿಗೆ ಪ್ರಭಾರವರ ಪ್ರತಿಯೊಂದು ವಿಷಯವೂ ಗೊತ್ತಿತ್ತು.
ಬಳಿ ಬಂದು ಪಿಸುಗುಟ್ಟಿದ "
",ಮೇಡಂ ಕಂಟ್ರೋಲ್ ಯುವರ್ ಸೆಲ್ಪ್"
"ಕುಮಾರ್ ಅವಳು ನನ್ನ ಮಗಳು". ಪಿಸುದನಿಯಲ್ಲಿ ಗದ್ಗದಿತರಾಗಿ ನುಡಿದರು
"ಮೇಡಂ ಮೀಡಿಯಾ ಎಲ್ಲಾ ನಿಮ್ಮನ್ನೇ ಫೋಕಸ್ ಮಾಡ್ತಿದೆ. ಏನಾದರೂಕೊಂಚ ಸುಳಿವು ಸಿಕ್ರೂ ಆಪ್ಪೋಜಿಶನ್ ಅದನ್ನೇ ದೊಡ್ಡ ವಿಷಯ ಮಾಡ್ತಾರೆ . ಜನರ ಸೆಂಟಿಮೆಂಟ್‌ಗೆ ಪೆಟ್ಟು ಬೀಳುತ್ತೆ. ಯು ಮೇ ನಾಟ್ ಅಚೀವ್ ಯುವರ್ ಟಾರ್ಗೆಟ್ .ಪ್ಲೀಸ್ ಮೇಡಂ ಇಷ್ಟು ದಿನದ ನಿಮ್ಮ ಸ್ಥಾನ ಮಾನ ಎಲ್ಲಾ ಕೆಳಗಾಗುತ್ತೆ"
ಕುಮಾರನ ಪಿಸುದ್ವನಿಯಲ್ಲಿಯೇ ಎಲ್ಲವನ್ನೂ ಹೇಳಿದ್ದ.
"ಮತ್ತೆ ಅವರಿಬ್ಬರನ್ನೂ ಅಲ್ಲಿ ನೋಡೋಕಾಗ್ತಿಲ್ಲ. ಪ್ಲೀಸ್ ಸೆಂಡ್ ದೆಮ್ ಫ್ರಮ್ ಹಿಯರ್"" ಸಾವರಿಸಿಕೊಂಡಿದ್ದರು.
ಸ್ವಲ್ಪ ಹೊತ್ತಿನ ನಂತರ ಪೋಲೀಸರಿಬ್ಬರು
"ಏ ಬಿಂದಿಗೆ ಹೊತ್ಕೊಂಡು ಇಲ್ಲೇನ್ ಮಾಡ್ತಾಇದ್ದೀರ. ಹೋಗಿ ಆಕಡೆ " ಎಂದು ಆ ಬಟ್ಟಲು ಕಂಗಳ ಹುಡುಗಿಯನ್ನು ಹಾಗು ಸೋಮೇಶನನ್ನು ಬೈದು ಕಳಿಸಿದರು. ಸೋಮೇಶನ ಕಣ್ಣು ಒಮ್ಮೆ ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದ ಪ್ರಭಾವತಿಯವರ ಕಡೆಗೆ ತಿರಸ್ಕಾರದಿಂದ ನೋಡಿತು.
"ಅಪ್ಪ ಯಾಕೆ ನಮ್ಮನ್ನ ಬೈದು ಕಳಿಸಿದರು ಅವರು ನಾವೇನು ಮಾಡಿದ್ವಿ? " ಆ ಹುಡುಗಿ ಕೇಳಿದಳು
"ಇಲ್ಲಮ್ಮ ನಮ್ಮಿಂದ ಅವರಿಗೆ ಯಾವ ಹಾನೀನೂ ಇಲ್ಲ. ಆದರೂ ಅವರಿಗೆ ಭಯ " ಎಂದು ಮಗಳ ಕೈನಲ್ಲಿದ್ದ ಬಿಂದಿಗೆಯನ್ನೂ ತಾನೆ ಎತ್ತಿಕೊಂಡ. ಮಗಳು ಹಿಂಬಾಲಿಸಿದಳು
ಇತ್ತ
ಪ್ರಭಾವತಿಯವರ ಭಾಷಣ ಸಾಗಿತ್ತು
"ನಮ್ಮ ದೇಶದಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಕೊಡಬೇಕು ಅನೋದೇ ನನ್ನ ಗುರಿ. ಇದನ್ನ ಸಾಧಿಸೋಕೆ ಹೆಣ್ಣು ಅಧಿಕಾರದಲ್ಲಿರಬೇಕು....................................."

Friday, April 3, 2009

ಹೀಗೊಬ್ಬ ಸ್ಯಾಡಿಸ್ಟ್ ಪ್ರೇಮಿಗೆ

ಲೋ
ಯಾಕೋ ಮತ್ತೆ ಬಂದೆ ಜೀವನದಲ್ಲಿ. ಕಾಲೇಜಿನ ದಿನಗಳು ಒಂಬು ಗೋಲ್ಡನ್ ಎರಾ ಇದ್ದ ಹಾಗೆ ಅವು ಮತ್ತೆ ಬರಬಾರದು . ಬಂದರೆ ಜೀವನ ಹಳೇ ಕಬ್ಬಿಣಕ್ಕೆ ಹಾಕೋಕೂ ಲಾಯಕ್ಕಿರಲ್ಲ ಕಣೋ ಹಂಗಾಗಿ ಬಿಡುತ್ತೆ.
ಈ ಲಡಕಾಸಿ ಕೆಲಸದ ಸಮಯದಲ್ಲೂ ಒಂದೂದ್ಸಲ ನೀನು ನನ್ನಕಾಲೇಜ್ ಎಲ್ಲಾ ನೆನಪಾಗುತ್ತೆ ಕಣೋ ಆದ್ರೇನು ಮಾಡೋದು ಜೀವನಾನೆ ಹಂಗೆ . ಕೆಲವೊಂದು ನೆನಪಾದ್ರೂ ಮರೀಲೇಬೇಕಾಗುತ್ತೆ. ಮರೆವೇ ಕೆಲವು ಬಾರಿ ಅನಾಹುತಾನ ತಪ್ಪಿಸುತ್ತೆ
ಆದರೂ ಈಗ ನೆನಪು ಮಾಡ್ಕೋಳ್ತೀನಿ ನಂಗಾಗಿ
ಕಾಲೇಜ್ ಡೇಸ್‌ನಲ್ಲಿ ನೀನು ನಂಗೆ ಪ್ರಪೋಸ್ ಮಾಡಿದ್ದು. ಪ್ರಪೋಸ್ ನಂಗೆ ಇಷ್ಟ ಆಗಿ ಒಪ್ಪಿದ್ದು . ಮೊದಲ ಭೇಟಿ, ನಂತರ ಮೊದಲ ಸಿನಿಮಾ ಆ ಕತ್ತಲ್ಲಲ್ಲಿ ಮೊದಲ ಚುಂಬನ ಜಾಮೂನು ಸಹಾ ಹಿಂಗಿರುತ್ತೋ ಇಲ್ವೋ ಅಂದೆಯಲ್ಲ, ನಾಚಿ ನೀರಾಗಿ ಎದ್ದು ಬಂದಿದ್ದೆ ನಾನು. ಸೆಂಟ್ರಲ್ ಕಾಲೇಜಿನ ಬಳಿಯಲ್ಲಿ ಸಾಯಂಕಾಲದ ಹನಿ ಹನಿ ಮಳೆಯಲ್ಲಿ ಕೈ ಕೈ ಸೇರಿಸಿಕೊಂಡು ಒತ್ತಿಕೊಂಡು ನಡೆಯುತ್ತಿದ್ದಾಗ ಇದೇ ಏನೋ ಪ್ರಪಂಚ ಅಂತನ್ನಿಸಿ ಸ್ವರ್ಗಾನೆ ಧರೆಗಿಳೀತು ಅನ್ಕೊಂಡೆ ಕಣೋ.
ಹಿಂಗೆ ಪ್ರೇಮ ಪರಾಕಾಷ್ಟೆ ಮುಟ್ಟಿತು ಅನ್ಕೊಂಡಾಗ್ಲೇ ಬಂತು ನೋಡು ಎಕ್ಸಾಮ್ ಭೂತ
ಪ್ರೇಮದ ಎಲ್ಲಾ ನಶೇನೂ ಒಂದೇ ಸಲ ಆಚೆ ದೂಡಿಬಿಡ್ತು
ಎಲ್ಲರ ದೃಷ್ಟೀಲೂ ಜಾಣ ಹುಡುಗಿಯಾಗಿದ್ದ ನಾನು ಪರೀಕ್ಷೇಲಿ ಏನೂ ಬರೀದೆ ಇದ್ದಾಗ ಇಷ್ಟೆಲ್ಲಾ ಆಗಿದ್ದು ನಿನ್ನ ಪ್ರೀತಿ ಇಂದಾನೆ ಅನ್ನಿಸ್ತು. ನಿನ್ನ ದೂರಮಾಡಲಾರಂಭಿಸಿದೆ
ನಿಜ ಕಣೋ ನಾನುಮಾಡಿದ್ದು ತಪ್ಪು
ನಾನು ಬರೀ ಪ್ರೇಮಾನ ಬೇಕೆಂದಾಗ ಬೇಕು ಬೇಡ ಎಂದಾಗ ಬೇಡ ಅನ್ಕೊಂಡೋಳು
ಆದ್ರೆ ನೀನು ಪ್ರೇಮಾನೆ ಉಸಿರು, ಪ್ರೀತಿನೆ ಬದುಕು ಅನ್ಕೊಂಡಿದ್ದು ಗೊತ್ತೇ ಆಗಲಿಲ್ಲ
ನೀನು ವಿಷ ಕುಡಿದೆ ಅಂದಾಗಲೂ ನಂಗೆ ನಿನ್ನ ಮೇಲೆ ಜಿಗುಪ್ಸೆ ಅಸಹ್ಯ ಆಯ್ತು ಹೊರತು ಆ ಪ್ರೀತಿ ಮತ್ತೆ ಚಿಗುರಲಿಲ್ಲ.
ನೀನು ದೇವದಾಸ್ ಅದೆ. ಕುಡಿಯಲಾರಂಭಿಸಿದೆ.
ನಿನ್ನ ಪ್ರೀತಿ ದ್ವೇಷವಾಗಿ ಬದಲಾಯ್ತೇನೊ . ಸುಮ್ಮನೆ ಚಿಂದಿ ಚಿಂದಿ ಕಾಗದಗಳನ್ನು ಮನೆಗೆ ಪೋಸ್ಟ್ ಮಾಡಿದೆ . ನಾನುಕೇರ್ ಮಾಡಲಿಲ್ಲ.
ನಮ್ಮ ಮನೆಯವರು ನಿಂಗೆ ಪ್ರಾಣ ಬೆದರಿಕೆ ಹಾಕಿದ್ರು ಅಂತಾನೂ ಗೊತ್ತಾಯ್ತು
ನಂಗೆ ಮನಸು ಕರಗಲಿಲ್ಲ
ಅದಾಗಿ ವರ್ಷಗಳೇ ಕಳೆಯಿತೇನೋ
ಈಗ ಎಲ್ಲಾ ಆದಮೇಲೆ ಓದು ಮುಗೀತು ಒಂದ್ಕಡೆ ಕೆಲಸ ಮಾಡಿಕೊಂಡು ಹಾಯಾಗಿರೋಣ ಅನ್ಕೊಂಡ್ರೆ ನೀನು ಮತ್ತೆ ವಕ್ಕರಿಸಿದೆಯಲ್ಲ.
ಬೇಡ ಕಣೋ ಸುಮ್ನೆ ಅನ್ಯಾಯವಾಗಿ ಸಾಯ್ತೀಯ ನಾನು ಮದುವೆಯಾಗಲಿರೋ ಹುಡುಗ ಪೋಲಿಸ್ ಡಿಪಾರ್ಟ್ಮೆಂಟ್ನಲ್ಲಿ ಇರೋನು ಖಂಡಿತಾ ಸಾಯ್ತೀಯ.
ಈ ಪ್ರೇಮಪ್ರೀತಿ ಎಲ್ಲಾ ಸಿನಿಮಾಗೆ ಸರಿ. ನೀನು ನಿನ್ನ ಲೆವೆಲ್‌ಲ್ಲಿ ಇರೊ ಅಂತ ಹುಡುಗೀನ ಮದುವೆಯಾಗಿ ಸುಖವಾಗಿರು.
ನಾನು ಈಗ ಸಾಫ್ಟ್‌ವೇರ್ ಇಂಜಿನಿಯರ್ ನೀನೋ ನಿನ್ನ ಎಜುಕೇಶನ್ ಕಂಪ್ಲೀಟ್ ಮಾಡಿಲ್ಲ ನಿನ್ನ ಮತ್ತೆ ಪ್ರೀತಿಸಿ ನಾನು ಸುಖವಾಗಿರ್ತೀನಾ ಹೇಳು?
ಅದಕ್ಕೆ ಹೇಳೋದು ಕಾಲೇಜಿನ ದಿನಗಳು ಮತ್ತೆ ಬರಬಾರದು ಅಂತ
ಸಾಕು ಕಣೋ ಇಲ್ಲಿಗೆ

ನಾನೆಂದೂ ಇರಲಿಲ್ಲ ನಿನ್ನ ಪಾಲಿಗೆ
ನಿನ್ನ ನೆನಪೂ ಬೇಡ ನನ್ನ ಬಾಳಿಗೆ
ನಡೆಯುತ್ತಿರುವೆನಾ ಬಾಳ ಮತ್ತೊಂದು ತಿರುವಿಗೆ
ನೀ ಬಾರದಿರು ಮತ್ತೆಂದು ನನ್ನ ಹಾದಿಗೆ

ಹೀಗೊಂದಷ್ಟು ಹನಿಗಳು-೨

ಅಂದು ನಿನ್ನ ಹಾಗೆ ಯಾರೂ ಇಲ್ಲ ಕಣೆ ಎಂದು ಚುಂಬಿಸಿದ ಹುಡುಗ ಇಂದೂ ನಿನ್ನ ಹಾಗೆ ಯಾರೂ ಇಲ್ಲ ಕಣೆ ಎಂದು ದೂರ ಓಡುತ್ತಿದ್ದಾನೆ. ಹೆಂಡತಿ ಕಾಳಿಯಾಗಿದ್ದಾಳೆ
------------------------------------------------------------------------------------------------
ನಿಂಗೇನು ಬೇಕಾದ್ರೂ ಕೇಳು ಕೊಡಿಸ್ತೀನಿ ಅಂತಿದ್ದ ಅಪ್ಪ ಮಗಳು ಕೇಳಿದ ಹುಡುಗನ್ನ ಕೊಡಿಸಲಾಗದೆ ಸಿಡಿಮಿಡಿಯಾಗಿದ್ದಾನೆ
-------------------------------------------------------------------------------------------------
ನನ್ನ ಹತ್ರ ಬೇಕಾದಷ್ಟು ದುಡ್ಡಿದೆ ಅಂತ ಕುಣೀತಿದ್ದ ನಮ್ಮೂರ ಜಿಪುಣ ತಾತ ಇಂದು ಮಲಗಿದ್ದಾನೆ ಹೆಣವಾಗಿ ದುಡ್ಡೆಲ್ಲಾ ಅವನ ಮಗನ ಕೈ ಸೇರಿದೆ
---------------------------------------------------------------------------------------------
ಅಮ್ಮನ ದಿನದಂದು ಅಮ್ಮನ ಬಗ್ಗೆ ಉದ್ದದ ಭಾಷಣ ಬಿಗಿದು ಎಲ್ಲರ ಕಣ್ಣಲ್ಲಿ ನೀರು ತರಿಸಿದ ಸಮಾಜ ಸೇವಕನ ಅಮ್ಮ ಅವನನ್ನು ವೃದ್ದಾಶ್ರಮದ ಟಿ.ವಿಯಲ್ಲಿ ನೋಡಿ ನಿಟ್ಟುಸಿರು ಬಿಟ್ಟಳು
----------------------------------------------------------------------------------------------

ನೀವು ಬರೆಯೋ ಕತೆಯಲ್ಲೆಲ್ಲಾ ನಾಯಕಿಯರು ಯಾವಾಗ್ಲೂ ಸಾಯ್ತಾರೇಕೆ ಎಂದು ಪ್ರಶ್ನಿಸಿದವನ ಮುಖ ನೋಡಿ ನಕ್ಕ ಆ ಕತೆಗಾರ. ಈಗ ತಾನೆ ತನ್ನ ಮೂರನೇ ಪ್ರೇಯಸಿಯನ್ನೂ ಕೊಂದದ್ದು ನೆನಪಾಗಿರಬೇಕು.
------------------------------------------------------------------------------------------------
ಅತ್ತೆ ಹೆಂಡತಿ ಬಹಳ ಹೊತ್ತಾದರೂ ಬಾರದಿದ್ದುದ್ದನ್ನು ಕಂಡು ಬ್ಯೂಟಿ ಪಾರ್ಲರ್ ಬಾಗಿಲ ಬಳಿಯಲ್ಲಿ ನಿಂತವನಿಗೆ ಮುಂದೆ ಇದ್ದ ಇಬ್ಬರಲ್ಲಿ ಹೆಂಡತಿ ಯಾರು ಎಂಬುದು ಸಮಸ್ಯೆಯಾಯಿತು
-------------------------------------------------------------------------------------------------
ಗೆಳೆಯ ನನಗೆ ನಿನ್ನ ಅಸ್ತಿ ಬೇಡ ಬ್ಯಾಂಕ್ ಬ್ಯಾಲೆನ್ಸ್ ಬೇಡ ನೀನೊಬ್ಬನಿದ್ದರೆ ಸಾಕು ಎಂದು ಹಾಡುತ್ತಿದ್ದ ಹುಡುಗಿ ಇಂದು ಸಾರಿ ಗೆಳೆಯ ನನಗೆ ನೀನೂ ಬೇಡ ಎಂದು ಕೂಗುತ್ತಿದ್ದಾಳೆ. ಅವಳ ಹೊಸ ಬಾಯಫ್ರೆಂಡ್ ಮರ್ಸಿಡೀಸ್ ಬೆಂಜ್ ಕೊಡಿಸಿದ್ದಾನಂತೆ
-------------------------------------------------------------------------------------