Wednesday, April 15, 2009

ಎಡಗೈ ಬೆರಳ ಮೇಲಿನ ಮಚ್ಚೆ

"ಅಮ್ಮ ಆಗಿನಿಂದ ಅಪ್ಪನ ಫೋನಿಗೆ ಕಾಲ್ ಮಾಡ್ತಾ ಇದೀನಿ ಸ್ವಿಚ್ ಆಫ್ ಅಂತಾನೆ ಬರ್ತಿದೆ" ರಾಜೀವನ ದ್ವನಿಯಲ್ಲಿ ಗಾಭರಿ ಕಾಣುತ್ತಿತ್ತು

ರಾಯರು ಮನೆ ಬಿಟ್ಟು ಆರು ದಿನವಾಗಿತ್ತು.

ರಮ್ಯಾ ಮದುವೆಗೆ ಇನ್ನು ತಿಂಗಳಷ್ಟೆ ಉಳಿದದ್ದು.

ವಾರದ ಹಿಂದೆ ಮೈಸೂರಿನಲ್ಲಿ ತಿಳಿದಿರುವವರ ಬಳಿ ಒಡವೆ ಮಾಡಿಸಿಕೊಂಡು ಬರಲು ಹೋದವರು ನಂತರ ಕಂಡಿರಲಿಲ್ಲ.

ಆಚಾರಿಯ ಬಳಿ ಒಡವೆಗಳನ್ನು ತೆಗೆದುಕೊಂಡ ಅವರನ್ನು ಸ್ವತ: ರಾಯರ ತಮ್ಮ ಬಸ್ ಹತ್ತಿಸಿ ಕಳಿಸಿದ್ದರು .

ಅಲ್ಲಿಂದ ಹೊರಟಿದ್ದಗಿಯೂ ರಾಯರು ಫೋನ್ ಮಾಡಿದ್ದರು .

ಅದೇ ಅವರ ಕಡೇ ಕಾಲ್
ಪೋಲೀಸಿನವರಲ್ಲಿ ದೂರು ದಾಖಲಿಸಿದರೂ ಮುನ್ನಡೆಯಲಿಲ್ಲ.


ಅವರು ಹತ್ತಿದ ಬಸ್ ಹುಡುಕಿ ಕಂಡಕ್ಟರ್‌ಗೆ ಫೋಟೋ ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ನೆನಪಿಲ್ಲ ಎಂದ. ಟಿಕೆಟ್ ತೆಗೆದುಕೊಂಡಿದ್ದು ರಾಯರ ತಮ್ಮನೇ ಆದ್ದರಿಂದ ಕೌಂಟರ್ ಕ್ಲರ್ಕ್‌ಗೂ ಹೇಳಲಾಗಲಿಲ್ಲ. ಪೇಪರ್ ನಲ್ಲಿ ಹಾಕಿದ್ದರು. ಟಿವಿಯಲ್ಲಿ ತೋರಿಸಿದರು.

ರಾಯರು ಸ್ನೇಹ ಜೀವಿ.

ಎಲ್ಲರೊಡನೆ ಸಂತೋಷವಾಗಿ ಇರುತ್ತಿದ್ದರು ಕಷ್ಟ ಎಂದವರಿಗೆ ಕೈಲಾದಷ್ಟು ಸಹಾಯ ಮಾಡಿ ಸಂತಸ ಪಡುತ್ತಿದ್ದರು.

ಅವರಿಂದ ಸಹಾಯ ಪಡೆದವರು ಎಷ್ಟೋ ಮಂದಿ . ಅವರಲ್ಲಿ ರಾಜೀವನ ಸ್ನೇಹಿತ ಪ್ರಶಾಂತನೂ ಒಬ್ಬ. ರಾಯರ ಇನ್ನೊಬ್ಬ ಮಗನಂತೆ . ಯಾವಾಗಲೂ ರಾಯರ ಪ್ರಾವಿಷನ್ ಅಂಗಡಿಯಲ್ಲಿ ಕುಳಿತು ರಾಯರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ. ಮಗ ರಾಜೀವ ಮೋಜಿನ ಜೀವನ ನಡೆಸುತ್ತಿದ್ದ. ಅಂತಹ ಕೆಲಸವೂ ಸಿಕ್ಕಿರಲಿಲ್ಲ. ಹಾಗಾಗಿ ಮನೆಯಲ್ಲೇ ಕುಳಿತು ಬಿಟ್ಟಿ ಊಟ ತಿನ್ನುತಾನೆಂಬ ಕೊರಗೊಂದಿತ್ತು.


ಭಾವಿ ಬೀಗ ಸುಬ್ಬಣ್ಣ ಕೂಡ ಆತ್ಮೀಯ ಸ್ನೇಹಿತ ಎಲ್ಲಿ ಹೋದನೆಂದು ತಿಳಿಯದೆ ಕಂಗಾಲಾಗಿದ್ದರು

ಅವರ ಮಗ ಉಮೇಶ್‌ ಜೊತೆ ರಮ್ಯಾಳ ಮದುವೆ ನಿಶ್ಚಯವಾಗಿತ್ತು.

ಆರುದಿನ ,ಹದಿನೈದು ದಿನವಾಗಿತ್ತು

ರಾಯರು ಸಿಗಲಿಲ್ಲ.

ರಮ್ಯಾಳ ಮದುವೆಯನ್ನು ಮುಂದೂಡಲಾಯ್ತು.

ಅದೆಲ್ಲಾ ಆಗಿ ನಾಲ್ಕು ವರ್ಷಗಳೇ ಕಳೆದಿವೆ

ರಾಯರ ನೆನಪು ಪತ್ನಿ ಕಮಲಮ್ಮನವರನ್ನು ಹಿಂಸಿಸುತ್ತಿದೆ

ರಮ್ಯಾಳ ಅಪ್ಪ ಓಡಿ ಹೋಗಿದ್ದಾರೆ ಎಂದು ಗುಲ್ಲೆದ್ದಿರು ಆದರೂ ರಮ್ಯಾಳ ಮದುವೆ ಸುಬ್ಬಣ್ಣನವರ ಮಗನ ಜೊತೆ ಆಯ್ತು ಪ್ರಶಾಂತ್‍ನೇ ಮುಂದೆ ನಿಂತು ಮದುವೆ ಮಾಡಿದ. ರಾಜೀವನ ಸೋಮಾರಿತನವನ್ನು ಬಿಡಿಸಿ ಒಂದೆಡೆ ಕೆಲಸ ಕೊಡಿಸಿದ್ದ.

ರಾಯರ ನೆನಪಿನಲ್ಲಿಯೇ ಕಮಲಮ್ಮ ಹಾಸಿಗೆ ಹಿಡಿದಿದ್ದಾರೆ. ರಾಜೀವ ಮದುವೆಗೂ ಒಪ್ಪಿರಲಿಲ್ಲ. ಈಗ ಒಂದು ಸಂಬಂಧ ಬಂದಿದೆ. ಹುಡುಗಿ ಚೆನ್ನಾಗಿದ್ದಳು . ಕಮಲಮ್ಮನ ಹಾಗು ಪ್ರಶಾಂತನ ಬಲವಂತದಿಂದ ರಾಜೀವನು ಗತ್ಯಂತರವಿಲ್ಲದೆ ಒಪ್ಪಿದ
ಎಂಗೇಜ್‌ಮೆಂಟ್ ದಿನ

ಹುಡುಗಿಯ ಕಡೆಯವರೆಲ್ಲಾ ಮನೆಗೆ ಬಂದಿದ್ದರು.ರಾಜೀವನ ಕಡೆಯವರೂ ಸಹಾ. ಪ್ರಶಾಂತ್ ಅವನ ಸ್ನೇಹಿತರೂ ಕೂಡ ಬಂದಿದ್ದರು. ಎಲ್ಲರೂ ತುಂಬಾ ಓಡಾಡುತ್ತಿದ್ದರು

ಮನೆ ತುಸು ದೊಡ್ಡದೇ.

ಬಂದವರೆಲ್ಲಾ ದೊಡ್ಡದಾಗಿ ಹಾಕಿದ್ದ ರಾಯರ ಫೋಟೋಗೆ ನಮಸ್ಕರಿಸಿ ಕಣ್ಣನ್ನು ತೇವ ಮಾಡಿಕೊಳ್ಲುತ್ತಿದ್ದರು.
ಹುಡುಗಿಯ ಚಿಕ್ಕಪ್ಪ ಮಧು ಮಾತ್ರ ರಾಯರ ಫೋಟೋವನ್ನು ಎಚ್ಚರಿಕೆಯಿಂದ ಗಮನಿಸತೊಡಗಿದರು. ಅವರು ನೆನ್ನೆ ತಾನೆ ಅಮೇರಿಕಾದಿಂದ ಬಂದಿಳಿದಿದ್ದರು

"ಇವರನ್ನು ಇನ್ನೆಲ್ಲೋ ನೋಡಿದ್ದೇನೆ" ತಮ್ಮಷ್ಟೆಕ್ಕೆ ತಾವೇ ಹೇಳಿಕೊಂಡರು.
ಎಂಗೇಜ್‌ಮೆಂಟ್ ಮುಗಿಯಿತು

ಎಲ್ಲರೂ ಅವರವರ ಮನೆಗೆ ತೆರಳಿದರು


ಮನೆಗೆ ಬಂದ ನಂತರ ಮಧು ತಮ್ಮ ಲ್ಯಾಪಟಾಪ್ ತೆಗೆದು ನೋಡಿದರು. ಅದರಲ್ಲೇ ಇದ್ದ ಆ ವಿಡಿಯೋ ನೋಡಿದ ಕೂಡಲೆ ತನ್ನ ನೆನಪಿನ ಶಕ್ತಿಯ ಬಗ್ಗೆ ಹೆಮ್ಮೆ ಎನಿಸಿತು.

ಕಮಲಮ್ಮನವರ ಫೋನ್ ರಿಂಗಣಿಸಿತು

ರಾಜೀವ ಫೋನ್ ಅಟೆಂಡ್ ಮಾಡಿದ
ಅದು ಮಧು ಅವರ ಕಾಲ್

"ಹಲೋ ರಾಜೀವ್ ಇದು ಮಧು, ಒಂದು ಮುಖ್ಯವಾದ ವಿಷಯ ಮಾತಾಡೋದಿದೆ"

"ಹೇಳಿ ಅಂಕಲ್" ರಾಜೀವ ಕೇಳಿದ
ಆ ಕಡೆಯಿಂದ ಮಧು ಮಾತಾಡತೊಡಗಿದರು

"ನಾನು ನಾಲ್ಕು ವರ್ಷ್ದದ ಹಿಂದೆ ಇಲ್ಲಿಗೆ ಬಂದಿದ್ದೆ. ಆಗ ಮೈಸೂರಿನಲ್ಲಿ ಯಾವುದೋ ಕೆಲಸ ಇತ್ತು ಅಂತ ಹೋಗ್ತಿದ್ದಾಗ ದಾರೀಲಿ ಒಂದು ಪೆಟ್ಟಿಗೆ ಅಂಗಡೀಲಿ ಟೀ ಮಾರ್ತಿದ್ದರು. ಟೀ ಕುಡಿಯೋದಿಕ್ಕೆ ಅಂತ ಕಾರಿಂದ ಇಳಿದೆ, ನಂಗೆ ವಿಡಿಯೋಗ್ರಫಿಲಿ ತುಂಬಾ ಆಸಕ್ತಿ ಇದೆ, ಅದಕ್ಕೆ ಟೀ ಮಾರೋನು ಟೀ ಮೇಲಿಂದ ಕೆಳಗೆ ಹಾಕಿ ಬೆರೆಸೋದನ್ನ ಶೂಟ್ ಮಾಡ್ತಾ ಇದ್ದಾಗ ಸುತ್ತ ಮುತ್ತಾ ಇದ್ದವರು ಅದರಲ್ಲಿ ಸೆರೆ ಆಗಿದಾರೆ .ಅದರಲ್ಲಿ ನಿಮ್ಮ ತಂದೆ ಥರ ಇರೋ ಒಬ್ಬ್ರು ಟೀ ಕುಡೀತಾ ಯಾರ ಹತ್ತಿರಾನೋ ಮಾತಾಡ್ತಾ ಇದ್ದಾರೆ. ನೀವು ಅದನ್ನು ನೋಡಿದರೆ ಗೊತ್ತಾಗಬಹುದು"

"ಅದು ಯಾವ ಡೇಟ್ ಅಂತ ಹೇಳಕಾಗುತಾ ಅಂಕಲ್"

"ಒಂದು ನಿಮಿಷ, ಇದು ಶೂಟ್ ಮಾಡಿದ ದಿನ ೩-೧-೨೦೦೫"

"ಅರೆ ಅದೇ ದಿನದಲ್ಲೇ ಅಪ್ಪ ಮೈಸೂರಿನಿಂದ ಬಸ್ ಹತ್ತಿದ್ದು"

"ಹೌದಾ ಆದರೆ ಸುತ್ತಾ ಮುತ್ತಾ ಯಾವ ಬಸ್ಸೂ ಕಾಣಿಸ್ತಿಲ್ಲ. ಬಸ್ ಅಲ್ಲೆಲ್ಲಾ ಸ್ಟಾಪ್ ಕೊಡೋದಿಲ್ಲ ಅಲ್ವಾ"

"ಸರಿ ಹಾಗಿದ್ರೆ ಅವರ ಜೊತೆ ಮಾತಾಡ್ತಾ ಇರೋವರು ಯಾರು ಅಂತ ಗೊತ್ತಾಗುತ್ತಾ?"

"ನಾನು ಮುಖ ಶೂಟ್ ಮಾಡಿಲ್ಲ .ಬರೀ ಟೀ ಕಪ್ ಹಿಡಿದ ಕೈ ಮಾತ್ರ ಕಾಣಿಸ್ತಿದೆ , ಕೈಯಲ್ಲಿ ಒಳ್ಳೆ ದಪ್ಪ ಉಂಗುರ ಇದೆ " ಗೊಂದಲ ಕಾಣುತ್ತಿತ್ತು

"ಸರಿ ಅಂಕಲ್ ಈಗಲೆ ಅದನ್ನ ನಂಗೆ ಈ ಮೇಲ್ ಮಾಡಿ .ನೋಡಬೇಕು" ಎಂದು ತನ್ನ ಇ ಮೇಲ್ ಐಡಿ ಹೇಳಿದ

"ಆಯ್ತು"

ರಾಜೀವನ ಹೃದಯ ಹೊಡೆದುಕೊಳ್ಳುತ್ತಿತ್ತು.

ಅಮ್ಮನಿಗೆ ವಿಷಯ ಹೇಳಲು ಮನಸು ಬರಲಿಲ್ಲ

ಕೂಡಲೆ ಪ್ರಶಾಂತನಿಗೆ ಫೋನ್ ಮಾಡಿ ವಿಷ್ಯ ತಿಳಿಸಿದ.

"ಆಯ್ತು ನಾನೂ ಈಗಲೇ ಬರ್ತೀನಿ ಕಣೋ" ಎಂದ ಪ್ರಶಾಂತ

ರಾಜೀವ ಗಾಡಿ ಸ್ಟಾರ್ಟ್ ಮಾಡಿ ಸೈಬರ್ ಸೆಂಟರ್ ಹತ್ತಿರ ಹೋದ . ಆ ವೇಳೆಗಾಗಲೆ ಪ್ರಶಾಂತ್ ಸಹ ಅಲ್ಲಿಗೆ ಬಂದಿದ್ದ.

ಮಧು ಮೇಲೆ ಕಳಿಸಿದ್ದಾಗಿದೆ ಎಂದು ಫೋನ್ ಮಾಡಿದರು.

ರಾಜೀವ್ ಮೇಲ್ ಓಪನ್ ಮಾಡಿದ

ಮೇಲ್ ನೋಡಿದ ರಾಜೀವ ಅಳತೊಡಗಿದ. ತಂದೆಯನ್ನು ನೋಡಿ ಅಳುವೇ ಬಂದಿತ್ತು

ರಾಯರು ಯಾರೊಡನೆಯೋ ಬಹಳ ಸಲುಗೆಯಿಂದ ಮಾತಾಡುತ್ತಿದ್ದಾರೆ

ಅವರ ಮುಖವೂ ಅಸ್ಪಷ್ಟವಾಗಿಯೇ ಇತ್ತು/ ಏಕೆಂದರೆ ಫೋಕಸ್ ಪೂರ್ತಿ ಟೀ ಅಂಗಡಿಯವನ ಮೇಲೆ ಇತ್ತು.

ರಾಯರು ಯಾರೊಡನೆ ,ಮಾತಾಡುತ್ತಿದ್ದರೋ ಅವರ ಮುಖ ಕಾಣುತ್ತಿರಲಿಲ್ಲ

ಕೈ ಮಾತ್ರ ಕಾಣುತ್ತಿತ್ತು. ಕೈನಲ್ಲಿ ದಪ್ಪ ಉಂಗುರ. ಮಾತ್ರ ಎದ್ದು ಕಾಣುತ್ತಿತ್ತು.

ಇಬ್ಬರೂ ಯಾಂತ್ರಿಕವಾಗಿ ಕೈ ನೋಡಿಕೊಂಡರು.

ಇಬ್ಬರ ಬೆರಳೂಗಳಲ್ಲಿ ಆ ಥರ ಉಂಗುರವಿಲ್ಲ

ಅದನ್ನು ಕಾಪಿ ಮಾಡಿಕೊಂಡು ಮನೆಗೆ ಬಂದ ರಾಜೀವ್. ಪ್ರಶಾಂತ್ ತಾನು ನೆನಪಿಸಿಕೊಳ್ಳುವುದಾಗಿ ಹೇಳಿದ.

ಮನೆಗೆ ಬಂದ ಮೇಲೆ ಡಿವಿಡಿ ಆನ್ ಮಾಡಿ . ಅದರಲ್ಲಿ ಪೆನ್ ಡ್ರೈವ್ ಹಾಕಿದನು.

ಅಪ್ಪನನ್ನು ನೋಡುತ್ತ ಕಣ್ತುಂಬಿಕೊಳ್ಳುವಷ್ಟ್ರಲ್ಲಿ ಕಮಲಮ್ಮ ಕೇಳಿದರು

"ರಾಜೀವ ಏನೋ ಇದು ಎಲ್ಲಿತ್ತೋ ಇದು?"

"ಅಮ್ಮ ಇದು ಮಧು ಅಂಕಲ್ ಕಳಿಸಿದ್ದು. ಅವ್ರು ಮೈಸೂರಿಗೆ ಹೋಗ್ತಿದ್ದಾಗ ತೆಗೆದದ್ದು. ನೋಡು ಅಪ್ಪಾನೂ ಇದರಲ್ಲಿ ಇದ್ದಾರೆ. ಅವರು ಯಾರ ಜೊತೇನೋ ಮಾತಾಡ್ತಿದಾರೆ . ಅವರು ಯಾರು ಅಂತ ಕಾಣಿಸ್ತಿಲ್ಲ. ಬರೀಕೈ ಮಾತ್ರ ಕಾಣಿಸ್ತಿದೆ"

ಕಮಲಮ್ಮ ಯಾವುದನ್ನೂ ಕೇಳಿಸಿಕೊಳ್ಳುತ್ತಿರಲಿಲ್ಲ

ಪರದೆಯ ಮೇಲೆ ಮೂಡಿ ಬರುತ್ತಿದ್ದ ರಾಯರನ್ನೇ ನೋಡುತಾ ಕುಸಿದು ಕೂತರು.

"ಅಮ್ಮಾ ಸ್ವಲ್ಪ ಕಂಟ್ರೋಲ್ ಮಾಡ್ಕೋ ಆ ಕೈ ಯಾರದ್ದಂದ್ರೆ ನಮಗೆ ಅಪ್ಪ ಎಲ್ಲಿರಬಹುದು ಅನ್ನೋ ಅಂದಾಜು ಗೊತ್ತಾಗುತ್ತೆ. ನಿಂಗೇನಾದ್ರೂ ನೆನಪಿಗೆ ಬರುತ್ತಾ ನೋಡು? ಆ ಉಂಗುರ ಯಾರು ಹಾಕಿದ್ದರು ಅಂತ ಗೊತ್ತಾಗುತ್ತಾ "

"ಅಯ್ಯೋ ನಂಗೇನೋ ಗೊತ್ತಾಗುತ್ತೆ. ಇದೆಲ್ಲಾ. ನಂಗೆ ಭಯ ಆಗ್ತಿದೆ ಕಣೋ ಅವರಿಗೆ ಏನಾದರೂ ಆಗಿದ್ಯೋನೋ" ಕಮಲಮ್ಮನ ಆತಂಕ ಇಮ್ಮಡಿಸಿತು.

"ಅಮ್ಮ ಸಮಾಧಾನ ಮಾಡ್ಕೋ ಅಪ್ಪನ್ನ ಯಾರೋ ಕಿಡ್ನಾಪ್ ಮಾಡಿದಾರೆ ಅಂತಾ ಅನ್ನಿಸ್ತಾ ಇದೆ ಆದರೆ ಅಪ್ಪ ಅಷ್ಟು ಚೆನ್ನಾಗಿ ಮಾತಾಡ್ತಾ ಇರೋದನ್ನ್ ನೋಡಿದರೆ ಯಾರೋ ತುಂಬಾ ಗೊತ್ತಿರೋರೆ ಅನ್ಸುತ್ತೆ"

ಸ್ವಲ್ಪ ಹೊತ್ತು ಕಮಲಮ್ಮ ಪರದೆಯನ್ನೇ ನೋಡುತ್ತಿದ್ದರು

"ರಾಜೀವ ಆ ತೋರು ಬೆರಳಿನಮೇಲೆ ಒಂದು ಮಚ್ಚ್ಚೆ ಇದೆ ಕಾಣುತ್ತೇನೋ "

ರಾಜೀವ ಮತ್ತೆ ಆ ಸೀನನ್ನ ಬ್ಯಾಕವಾರ್ಡ್ ಮಾಡಿದ

ಹೌದಲ್ಲ ತನಗೆ ಗೊತ್ತೇ ಆಗಲಿಲ್ಲ

ಆ ಬೆರಳಲ್ಲಿ ಮಚ್ಚೆ ಒಂದಿದೆ

ಅದು ಬಹಳ ಅಪರೂಪದ್ದು ಆದರೆ ಆ ಥರ ಮಚ್ಚೆ ಎಲ್ಲೋ ನೋಡಿದಂತಿದೆಯಲ್ಲಾ

ಕಮಲಮ್ಮನವರ ತಲೆಗೆ ಏನೋ ಹೊಳೆಯಿತು.

"ರಾಜೀವಾ ಆ ಕೈ ಯಾರದು ಅಂತ ಗೊತ್ತಾಯ್ತು ನಂಗೆ ಆದರೆ ನಂಬೋದಿಕ್ಕೆ ಆಗ್ತಾ ಇಲ್ಲ"

"ಹೌದು ರಾಜೀವ. ನಿಂಗೆ ನೆನಪಿದೆ ಅಲ್ವಾ ಆವತ್ತು ಜ್ಯೋತಿಷ್ಯದ ವಿಷ್ಬಯ ಮಾತಾಡ್ತಾ ಇದ್ದಾಗ ನಿಮ್ಮಪ್ಪ ಅವನ ಎಡ ಕೈ ಬೆರಳಿನ ಮೇಲೆ ಇದ್ದ ಮಚ್ಚೆ ನೋಡಿ ನಿಂಗೆ ಇದರ ಕಾರಣದಿಂದ ತುಂಬಾ ಕಷ್ಟ ಬರುತ್ತೆ ಅಂತ ಹೇಳಿದ್ರು ಆಗ ನಾವು ಅದನ್ನು ನೋಡಿ ಇದೇನೋ ಪ್ರಶಾಂತ್ ನಿಂಗೆ ಮಚ್ಚೆ ವಿಚಿತ್ರವಾಗಿ ಬೆರಳಿನ ಮೇಲೆ ಇದೆ ಅಂತ ನಗಲಿಲ್ಲವಾ?"

ಆ ವೇಳೆಗಾಗಲೇ ರಾಜೀವನಿಗೂ ಗೊತ್ತಾಗಿ ಹೋಗಿತ್ತು

ಹೃದಯ ಚೂರಾಗುವಷ್ಟು ನೋವಾಯಿತು

"ಅಮ್ಮಾ ಇವನು ಯಾಕೆ ಹೀಗೆ ಮಾಡಿದ"

ಕೂಡಲೆ ಪ್ರಶಾಂತನಿಗೆಫೋನ್ ಮಾಡಿದ

ಫೋನ್ ರಿಂಗ್ ಆಗುತ್ತಿತ್ತೇ ಹೊರತು ಯಾರೂ ಎತ್ತಲಿಲ್ಲ

ಕೂಡಲೆ ಗಾಡಿಯಲ್ಲಿ ಅವನ ಮನೆಯತ್ತ ಹೊರಟ

ಪ್ರಶಾಂತ್ ಸಿಗಲಿಲ್ಲ.

ರಾಜೀವ ಪೋಲಿಸರಿಗೆ ದೂರು ಕೊಟ್ಟನು

ಸುಮಾರು ದಿನಗಳಾದ ಮೇಲೆ ಪೋಲೀಸರು ಹಿಡಿದರು

ಪೋಲಿಸರ ಆತಿಥ್ಯದ ನಂತರ ಪ್ರಶಾಂತ್ ಬಾಯಿ ಬಿಟ್ಟ. ಅದು ರೆಕಾರ್ಡ್ ಆಗಿ ರಾಜೀವ ಹಾಗು ಕಮಲಮ್ಮನವರ ಮುಂದೆ ಹೋಯಿತು.

"ಅಂಕಲ್ ನನ್ನನ್ನು ಚೆನ್ನಾಗಿ ನೋಡಿಕೊಂಡರು ಆದ್ರೆ ನಂಗೆ ಹಣ ಮಾಡಬೇಕಂತ ಆಸೆ ಇತ್ತು. ಎಷ್ಟು ದಿನ ಕಷ್ಟದಲ್ಲಿ ಇರೋದು. ಅಂಕಲ್ ಮೈಸೂರಿಗೆ ಹೋಗಿದ್ದು ಬರೀ ಒಡವೆ ಮಾಡಿಸೋದಿಕ್ಕೆ ಅಲ್ಲ. ಅವರು ಯಾವಾಗ್ಲೋ ಅವರ ಹೆಸರಲ್ಲಿ ಇಟ್ಟಿದ್ದ FD ತರೋದಿಕ್ಕೆ . ಅದು ಸುಮಾರು ಹದಿನೈದು ಲಕ್ಷಗಳು . ರಾಜೀವನ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ಅದಕ್ಕೆ ಅವರು ಈ ವಿಷ್ಯಾನ ಯಾರಿಗೂ ಹೇಳಿರಲಿಲ್ಲ. ನನಗೂ ಸಹ

ಆದರೆ ಫೋನ್ ನಲ್ಲಿ ಮಾತಾಡೋವಾಗ ನಾನು ವಿಷಯ ಕೇಳಿಸಿಕೊಂಡೆ. ಅದು ಅವರಿಗೆ ಗೊತ್ತಿರಲಿಲ್ಲ. ಮೈಸೂರಿಗೆ ಅವರಿಗೆ ಗೊತ್ತಿಲ್ಲದಂತೆ ಹೊರಟೆ. ಸ್ನೇಹಿತನೊಬ್ಬನ ಕಾರಿನಲ್ಲಿ. ಅವರು ಮೈಸೂರಿಂದ ಬಸ್ ಹತ್ತುತ್ತಿದ್ದಂತೆ ನಾನು ಕಾರಲ್ಲಿ ಬಸ್ ಫಾಲೋ ಮಾಡಿದೆ. ಬಸ್ ಹೋಟೆಲ್ ಹತ್ರ ಸ್ಟಾಪ್ ಮಾಡಿದಾಗ ಅವರನ್ನು ಮಾತಾಡಿಸಿದೆ. ಅವರೂ ಒಳ್ಲೇದೆ ಆಯ್ತು ಎಂದು ನನ್ನ ಕಾರಲ್ಲಿ ಕೂತುಕೊಂಡರು.

ಸ್ವಲ್ಪ ದೂರ ಹೋಗ್ತಿದ್ದ ಹಾಗೆ ಮೊದಲೇ ಪ್ಲಾನ್ ಮಾಡಿದ್ದ ನಾನು ಪೆಟ್ಟಿಗೆ ಅಂಗಡಿಯೊಂದರ ಬಳಿ ಸ್ಟಾಪ್ ಮಾಡಿ ಅವರಿಗೆ ಟಿ ಕುಡಿಯಲು ಹೇಳಿದೆ. ಟೀ ಯಲ್ಲಿ ಅವರಿಗೆ ಗೊತ್ತಾಗದಂತೆ ಮತ್ತು ಬರೋ ಔಷಧ ಸೇರಿಸಿದೆ."

ನಂತರ ಸ್ವಲ್ಪ ಹೊತ್ತಿನವರೆಗೆ ಮೌನ

ಮತ್ತೆ ಮಾತಾಡಿದ

ಆಮೇಲೆ ಕಾರಲ್ಲಿ ಕೂತ್ಕೊಂಡ ಮೇಲೆ ಅಂಕಲ್ ಪ್ರಜ್ನೆ ತಪ್ಪಿದರು

"ಆಮೇಲೆ ಏನೋ ಮಾಡಿದೆ ಬೊಗಳೋ"

ಇನ್ಸ್ಪೆಕ್ಟರ್ ದನಿ

"ಒಂದು ಕಡೆ ಸ್ಟಾಪ್ ಮಾಡಿ ಅಂಕಲ್ ಕುತ್ತಿಗೇನ ಚಾಕು ಇಂದ ಹಿರಿದು ಸಾಯಿಸಿ ಬಿಟ್ಟೆ"

ಕಮಲಮ್ಮ ಇಲ್ಲಾ ಎಂದು ಕಿರುಚಿದರು

ರಾಜೀವನ ಕಣ್ಣಲ್ಲಿ ದಳದಳ ನೀರು.

"ಅಯ್ಯೋ ಸೂ.. ಮಗನೆ . ನಾಯಿ ಕೂಡ ನಿಯತ್ತಿಂದ ಇರುತ್ತೆ . ಅದೂ ಇಲ್ಲವಲ್ಲೋ ನಿಂಗೆ . ಬಾಡಿ ಏನೋ ಮಾಡಿದೆ" ಮತ್ತೊಮ್ಮೆ ಇನ್ಸ್ಪೆಕ್ಸ್ಟರ್ ದನಿ ಜೋರಾಗೆ ಹೊಡೆದ ಸದ್ದು

" ತುಮುಕೂರಿಂದ ಶಿರಾ ಹೋಗೋ ದಾರೀಲಿ ಒಂದು ಪಾಳು ಬಿದ್ದಿರೋ ಹೊಲ ಇದೆ ಅಲ್ಲಿ ಯಾರೂ ಬರಲ್ಲ ಅಲ್ಲಿ ನೆಲ ಅಗೆದು ಬಾಡೀನ ಹೂತು ಬಿಟ್ಟೆ"

"ಅವರ ದುಡ್ದು ಹದಿನೈದು ಲಕ್ಶ ರೂಪಾಯಿ, ಜೊತೆಗೆ ಒಡವೆ ಒಂದು ಆರು ಲಕ್ಷದಷ್ಟು ಇತ್ತು.ಹಣ ಒಡವೇನ ಮಾರಿ ತಂಗಿ ಮದುವೆ ಮಾಡಿದೆ. ದುಡ್ಡಲ್ಲಿ ಚೆನ್ನೈನಲ್ಲಿ ಒಂದು ಸೈಟ್ ತೆಗೆದುಕೊಂಡಿದ್ದೇನೆ. ಇದೆಲ್ಲಾ ನನ್ನ ಬಡತನದಿಂದ ಮಾಡಿದ್ದು ಸಾರ್"

"ಬಡತನ ಅಂತ ಇನ್ನೊಬ್ಬರ ಜೀವಾನ್ ತೆಗೆದು ಶ್ರೀಮಂತ ಆಗ್ತೀಯಾ" ಮತ್ತೊಮ್ಮೆ ಏಟಿನ ಶಬ್ಧ ಕೇಳಿಸಿತು

ಕೋರ್ಟ್‌ನಲ್ಲಿ ರಾಜೀವನ ಪ್ರಯತ್ನದಿಂದ ಪ್ರಶಾಂತನಿಗೆ ಗಲ್ಲು ಶಿಕ್ಶೆ ವಿಧಿಸಲಾಯ್ತು.

ಕೋರ್ಟ್ನಿಂದ ಜೈಲಿಗೆ ಹೋಗಲು ಜೀಪನ್ನೇರಿದ ಪ್ರಶಾಂತನಿಗೆ ತನ್ನ ಎಡಗೈನಲ್ಲಿದ್ದ ಕಪ್ಪು ಮಚ್ಚೆ ಕಾಣಿಸಿತು.

ರಾಯರ ಮಾತು ನೆನಪಿಗೆ ಬಂತು

ಮುಖ ಮುಚ್ಚಿಕೊಂಡು ಅಳಲಾರಂಭಿಸಿದ. ಎಡಗೈನ ತೋರು ಬೆರಳ ಹಿಂಬದಿಯ ಮಚ್ಚೆ ನಗಲಾರಂಭಿಸಿತು.