Friday, December 17, 2010

ಹೀಗೆರೆಡು ಪ(ಪಾ)ತ್ರಗಳು

ಪ್ರೀತಿಯ ಸಂಜನಾಗೆ
ಸಂಜೂ ಇದು ನನ್ನ ಹತ್ತನೇ ಪತ್ರ ಒಂದಕ್ಕೂ ನಿನ್ನಿಂದ ಉತ್ತರ ಬಂದಿಲ್ಲ. ಹಾಗಾಗಿ ಆ ಎಲ್ಲಾ ಒಂಬತ್ತೂ ಪತ್ರಗಳನ್ನೂ ಒಟ್ಟಾಗಿ ಸೇರಿಸಿ ನನ್ನ ಹತ್ತನೇ ಪತ್ರ ಬರೆಯುತ್ತಿದ್ದೇನೆ. ನಿನ್ನಿಂದ ಪಾಸಿಟೀವ್ ಉತ್ತರ ಬರಲಿಲ್ಲವಾದಲ್ಲಿ ಇದು ನನ್ನ ಜೀವಮಾನದ ಕಡೆಯ ಪತ್ರವಾಗಿರುತ್ತದೆ
ದಂಗಾದೆಯಾ? ಹೌದು ಸಂಜೂ ನೀನು ನನ್ನ ಹೃದಯಕ್ಕೆ ಅಂತಹದೊಂದು ನಂಟನ್ನು ಬೆಳೆಸಿದ್ದೀಯ .
ನಾನು ನಿನ್ನನ್ನು ನೋಡಿದ್ದಾದರೂ ಯಾವತ್ತು?
ಇಂದಿಗೆ ಸರಿಯಾಗಿ ತಿಂಗಳ ಮುಂಚೆ.
ಆವತು ಯಾವುದೋ ಸಿನಿಮಾದ ಶೂಟಿಂಗ್ ಅಂತ ನೀನು ಬಂದಿದ್ದೆ . ಅದೇಕೋ ಚಿತ್ರದ ಹೀರೋಯಿನ್ ಸಂಪ್ರೀತಾ ನಂಗೆ ಹಿಡಿಸಲಿಲ್ಲ ಅವಳ ಮನೆ ಕೆಲಸದವಳಾಗಿ ಅವಳಿಂದ ಕೆನ್ನೆಗೆ ಹೊಡೆಸಿಕೊಳ್ಳುತ್ತಿದ್ದ ನೀನು ನಂಗೆ ಹಿಡಿಸಿಯೇಬಿಟ್ಟೆ
ಆಗಲೇ ನನ್ ಮನಸು ಹೇಳಿತು ನಂಗೆ ನೀನೆ ತಕ್ಕ ಜೋಡಿ
ಅಂದಿನಿಂದ ಇಂದಿನವರೆಗೆ ನಾನು ಪತ್ರಗಳನ್ನು, ಮೆಸೇಜುಗಳನ್ನು ಕಳಿಸ್ತಾನೇ ಇದ್ದೇನೆ . ಅಟ್ ಲೀಸ್ಟ್ ನಿಂಗೆ ನಾನು ಇಷ್ಟಾನಾ ಇಲ್ಲವಾ ಎಂಬ ಮಾತೂ ಇಲ್ಲ .
ಅಂದ ಹಾಗೆ ನಾನು ಶೇಖರ್ . ಗಾರ್ಮೆಂಟ್ಸ್‌ನಲ್ಲಿ ಸೂಪರ್ ವೈಸರ್ ಆಗಿದ್ದೀನಿ. ತಿಂಗಳಿಗೆ ಇಪ್ಪತ್ತು ಸಾವಿರದ ತನಕ ಸಂಬಳ . ಹೆಂಡತಿಯನ್ನು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಮಟ್ಟಿಗೆ ಸಂಪಾದನೆ ಇದೆ
ಇನ್ನೂ ನಿನ್ನ ಬಗ್ಗೆ ಏನು ಗೊತ್ತು ಎಂದು ಕೇಳಬೇಡ. ಎಲ್ಲವನ್ನೂ ಅರಿತಿದ್ದೇನೆ
ನೀನು ಮೂರು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಪಾತ್ರಕ್ಕಾಗಿ ಹೆಣಗಾಡುತ್ತಿದ್ದೀಯಾ
ಆಗೊಮ್ಮೆ ಈಗೊಮ್ಮೆ ನಾಯಕಿಯ ಮನೆ ಕೆಲಸದವಳೋ ಅಥವ ಸ್ನೇಹಿತೆಯೋ ಅಥವ ನಾಯಕಿ ನಾಯಕ ಮರ ಸುತ್ತುತ್ತಾ ಹಾಡುತ್ತಿದ್ದಾಗ ಲಾ ಲಾ ಲಾ ಎಂದು ಕುಣಿಯುವ ಹುಡುಗಿಯರ ಪೈಕಿ ಒಬ್ಬಳಾಗಿ ಪಾತ್ರ ಮಾಡುತ್ತಿದ್ದೀಯಾ
ಈ ಸಿನಿಮಾ ಇಂಡಸ್ಟ್ರಿಯಲ್ಲಿ ಏನೆಲ್ಲಾ ಕೊಳಕುಗಳಿವೆಯೋ ಅವುಗಳಲ್ಲೆಲ್ಲಾ ನೀನು ಮುಳುಗಿದ್ದೀಯಾ
ಆದರೆ ನೀನು ನನ್ನ ಪಾಲಿಗಂತೂ ಗಂಗೆಯ ಥರ . ಗಂಗೆ ಯಾವತ್ತಿದ್ದರೂ ಗಂಗೆಯೇ.
ನೀನು ಹೇಗೆ ಇದ್ದರೂ ನಾನು ನಿನ್ನಪ್ರೀತಿಸುವೆ.
ಇಷ್ಟೆಲ್ಲಾ ಆದಮೇಲೂ ನೀನು ನನ್ನನ್ನ ತಿರಸ್ಕರಿಸಿದರೆ ,
ನಾಳೆಯೇ ನನ್ನ ಹೆಣದ ದರ್ಶನ ಮಾಡಬೇಕಾಗುತ್ತದೆ. ನನ್ನ ಸಾವಿಗೆ ನೀನೆ ಕಾರಣಳಾಗುತ್ತೀಯಾ
ಯೋಚಿಸು.....

ನಿನ್ನವ ಶೇಖರ್

ಶೇಖರನೆಂಬ ಮುಟ್ಟಾಳನಿಗೆ
ಪ್ರೀತಿ ಪ್ರೇಮವೆಂಬ ಭಾವನೆಗಳ ಕಡಲಲ್ಲಿ ಈಜಾಡ್ತಾ ಇದ್ದೀಯಾ ಸರಿ. ಆದರೆ ಆ ಈಜಿಗೆ ಜೊತೆಯಾಗಿ ನನ್ನ ಯಾಕೆ ಕರೀತ್ತಿದ್ದೀಯ

ಸಿನಿಮಾಗಳಲ್ಲಿ ಪ್ರೀತಿ ಪ್ರೇಮವೆಂಬ ಭಾವನೆಗಳನ್ನು ಮಾರ್ತಾ ಮಾರ್ತಾ ನಾವೆಲ್ಲಾ ಆ ಭಾವನೆಗಳನ್ನು ಹತ್ತಿರಕ್ಕೂ ಸೇರಿಸಲ್ಲಾ ಯಾಕೆ ಗೊತ್ತಾ?
ನಾವು ಯಾವತ್ತಿದ್ದರೂ ಭಾವನೆಗಳನ್ನು ಮಾರಿ ಲಾಭಗಳಿಸೋರು ಅದರಿಂದ ಬರೋ ನೋವು ನಮಗೆ ಬೇಡ

ನಿನ್ನ ಒಂಬತ್ತೂ ಪತ್ರಗಳನ್ನ ನಾನು ಓದಿದ್ದೇನೆ . ಇಂತಹ ಸಾವಿರ ಪತ್ರಗಳು ನನ್ನ ಬಳಿ ಇವೆ

ಯಾಕೆಂದರೆ ನಾವು ಸಿನಿಮಾದವರು ಹತ್ತು ಜನಕ್ಕೆ ಗ್ಲಾಮರ್ ಹೆಸರಲ್ಲಿ ಮೈ ಕೈ ತೋರಿಸೋರು

ಸಿನಿಮಾದಲ್ಲಿ ಪ್ರೀತಿಗೋಸ್ಕರ ಸಾವನ್ನೇ ಎದುರಿಸುವವರು....................

ಇಂತಹವಳು ಸಿಕ್ಕರೆ ಯಾರಿಗೆ ಬೇಡ ಹೇಳು..............?

ನೀನು ಸತ್ತು ಹೋಗ್ತೀಯಾ ಅಂತ ನಾನು ನಿನಗೆ ಉತ್ತರ ಕೊಡ್ತಾ ಇಲ್ಲ

ಯಾಕೆಂದರೆ ನೀನು ಸತ್ತರೆ ನನಗೇನು ನಷ್ಟವೂ ಇಲ್ಲ ಬದುಕಿದ್ದರೆ ಲಾಭವೂ ಇಲ್ಲ

ಆದರೆ ನಿನ್ನನ್ನೇ ನಂಬಿಕೊಂಡಿರುವ ನಿನ್ನ ಕುಟುಂಬದ ಶಾಪ ನನ್ನನ್ನ ತಾಕದಿರಲಿ ಅಂತ ಪತ್ರ ಬರೆಯುತ್ತಿದ್ದೇನೆ

ನಿನಗೆ ನನ್ನ ಬಗ್ಗೆ ಗೊತ್ತಿರೋದು ಕೇವಲ ಸ್ವಲ್ಪವೇ ಕೇವಲ ಪುಸ್ತಕದ ಹೊರಕವಚ ನೋಡಿ ಪುಸ್ತಕದ ಕಥೆಯನ್ನೇ ಹೇಳುತ್ತೀನಿ ಎಂಬ ಹುಂಬಮನೋಭಾವದವನು ನೀನು

ಇನ್ನೂ ನನ್ನ ಬಗ್ಗೆ ತಿಳಿಯೋದು ತುಂಬಾ ಇದೆ

ಅದಕ್ಕೂಮೊದಲು ನೀನು ನನ್ನನ್ನೆ ಯಾಕೆ ಬಯಸಿದೆ ಅನ್ನೋದು

ತುಂಬಾ ಹುಡುಗರಿಗೆ ಸಿನಿಮಾದವರು ಎಂದರೆ ಏನೋ ಕುತೂಹಲ. ಸಿನಿಮಾದ ಹುಡುಗಿಯನ್ನು ಮದುವೆಯಾಗುತ್ತಿದ್ದೇವೆ ಎಂಬ ಸ್ವಯ್ಂ ತೃಪ್ತಿ . ನೀನು ನೀನು ಕೂಡ ಹಾಗೆಯೇ

ಆವತ್ತು ಶೂಟಿಂಗ್ ಇದ್ದ ದಿನ ನಿನಗೆ ಸಿನಿಮಾ ಹೀರೋಇನ್ ಸಂಪ್ರೀತಾ ಹಿಡಿಸಲಿಲ್ಲ ಅಂದೆ

ಯಾಕೆ ಹಿಡಿಸಲಿಲ್ಲ ? ಹಾಗಿಲ್ಲವಾದಲ್ಲಿ ಅವಳ ಹತ್ತಿರ ಆಟೋಗ್ರಾಫ್ ತೆಗೆದುಕೊಳ್ಳುವಾಗ ಮೇಡಮ್ ನಾನು ನಿಮ್ಮ ಅಭಿಮಾನಿ ಅನ್ನುತ್ತಿದ್ದಾಗ, ಅವಳ ಬಳಿಯೇ ಆಗಷ್ಟೇ ಅವಳಿಂದ ಕೆನ್ನೆಗೆ ಹೊಡೆಸಿಕೊಂಡ ಕೆಲಸದವಳ ಪಾತ್ರ ಮಾಡಿದ್ದ ನಾನು ಅಲ್ಲೇ ನಿಂತಿದ್ದಾಗ ನನ್ನತ್ತ ನಿನ್ನ ಕಣ್ಣೂ ಹಾಯಲಿಲ್ಲವೇಕೇ?

ನಿನ್ನ ಮಟ್ಟಕ್ಕೆ ಅವಳು ನಿಲುಕದ ನಕ್ಷತ್ರ. ಸಿನಿಮಾದವಳನ್ನೇ ಮದುವೆಯಾಗುತ್ತೇನೆ ಎಂಬ ನಿನ್ನ ಹಟಕ್ಕೆ ಕಂಡಿದ್ದು
ನಾನು, ಅಷ್ಟೇ .
ಅದನ್ನೇ ಪ್ರೀತಿ ಎಂದುಕೊಂಡಿದ್ದೀಯ ಸುಳ್ಳು ಕಣೋ ಬೆಪ್ಪ.
ನಾಳೇ ನಾನೇನಾದರೂ ದೊಡ್ಡ ಹೀರೋಯಿನ್ ಆದಲ್ಲಿ ...................................?
ಇದಕ್ಕೆ ಉತ್ತರ ಹೇಳು.
ಅಂದ ಹಾಗೆ ನನ್ನ ಬಗ್ಗೆ ಏನೇನೋ ಗೊತ್ತಿದೆ ಎಂದೆ
ಮಲಿನವಾಗದ ಗಂಗೆ ಎಂದೆ
ಇಲ್ಲ ಕಣೋ ನಾವುಗಳು ಸೈಡ್ ಆಕ್ಟ್ರೆಸ್ಗಳು ಗಂಗೆಯೂ ಅಲ್ಲ ಗೌರಿಯೂ ಅಲ್ಲ . ಆ ಪದಗಳೆಲ್ಲಾ ಏನಿದ್ದರೂ ಸಿನಿಮಾಪರದೆಯ ಮೇಲೆ
ಹಿಂದೆ ನಾವುಗಳು ಬ್ರಾಂದಿ ವಿಸ್ಕಿಗಳು.
ಮತ್ತೇರುವ ತನಕ ಕುಡಿಯುತ್ತಾರೆ
ನಂತರ ಕುಸಿಯುತ್ತಾರೆ ಮತ್ತೆ ಹೊಸ ವಿಸ್ಕಿಗಳಿಗೆ ಕಣ್ಣ್ ಹಾಕ್ತಾರೆ ಅಷ್ಟೇ
ನಾನು ಸಿನಿಮಾರಂಗಕ್ಕೆ ಬಂದಿದ್ದು ದೊಡ್ಡ ಹೀರೋಯಿನ್ ಆಗೋಕೇನೆ
ಆದರೆ ಆಗಿದ್ದು ಮಾತ್ರ ಸೈಡ್ ಆಕ್ಟ್ರೆಸ್
ನಿಂಗೆ ಗೊತ್ತಾ?
ನಾನು ಮೊನ್ನೆ ಮಾಡಿದ್ದ " ಅಮರ್" ಫಿಲಂ ನಲ್ಲಿ ಹೀರೋ ಜೊತೆ ಮರ ಸುತ್ತಿದಂತೆ ಅವನ ಮೇಲೆ ಬೀಳುವ ಕನಸು ಕಾಣುವ ಒಂದು ಪಾತ್ರದಲ್ಲಿ ನಟಿಸಿದ್ದೆನಲ್ಲಾ. ಆ ಫಿಲ್ಂ ಹೀರೋ ರಜತ್ ಕೇವಲ ಹತ್ತು ವರ್ಷದ ಹಿಂದೆ ನನ್ನ ತಂದೆಯ ಪಾತ್ರ ಮಾಡಿದ್ದ ನಾನು ಬೇಬಿ ಸಂಜನಾ ಆಗಿದ್ದೆ
ಈಗ ಅದೇ ಅವನ ಜೊತೆ ಮರ ಸುತ್ತುವ ಪಾತ್ರ.
ನಾಳೆ ಅವನಿಗೇನೇ ಅಕ್ಕನೋ, ಇಲ್ಲ ಅತ್ತಿಗೆಯೋ ನಾಡಿದ್ದು ಅಮ್ಮನಾಗಿ ಪಾತ್ರ ನಿರ್ವಹಿಸಬೇಕಾಗುತ್ತದೆ .
ಏಕೆಂದರೆ ನಮಗೆ ವಯಸಾಗಿರುತ್ತದಲ್ಲಾ?
ಅದಕ್ಕೆ ಹೇಳಿದ್ದು ನಾವು ಬ್ರಾಂದಿಗಳು ವಿಸ್ಕಿಗಳು ಅಂತ.
ನಾನು ಮಲಿನವಾಗಿದ್ದೇನೆ ಅಂತ ನಂಗೆ ಯಾವತ್ತೂ ಅನ್ನಿಸಿಯೇ ಇಲ್ಲ
ಯಾಕೆ ಹೇಳು?
ನೀರಲ್ಲಿಯೇ ಇರುವ ಮೀನಿಗೆ ನೀರು ಯಾವತ್ತೂ ಬೋರೆನಿಸೋದಿಲ್ಲ . ಆದರೆ ಒಂದು ನಿಮಿಷ ನೀರಿಲ್ಲದೇ ಇದ್ದಲ್ಲಿ ಉಸಿರಾಡಲಾಗುವುದಿಲ್ಲ.


ಮತ್ತೆ ಇದನ್ನೆಲ್ಲಾ ಬಿಟ್ಟು ನಾನು ನಿನ್ನ ಜೊತೆ ಬಂದುಬಿಟ್ಟೆ ಅಂತಂದುಕೋ

ಸ್ವಲ್ಪ ದಿನ ಚೆನ್ನಾಗಿರುತ್ತೆ ನಂತರ?
ನಂಗೆ ನೀನು ಬೋರಾಗಲಾರಂಭಿಸುತ್ತೀಯಾ. ಏಕೆಂದರೆ ನಿನ್ನ ಸಂಪಾದನೆ ನನಗೆ ಏನನ್ನೂ ಕೊಡಿಸುವುದಿಲ್ಲ.
ನೀನೋ ನನ್ನ ಹಿಂದಿನ ಕಥೆಗಳನ್ನೆಲ್ಲಾ ಎಳೆದುಕೊಂಡ ಬೈಯ್ಯಲಾರಂಭಿಸುತ್ತೀಯ, ಅನುಮಾನ ಪಡ್ತೀಯಾ
ನನಗೂ ನಿನ್ನ ಬಗ್ಗೆ ಅಸಹನೇ ನಿನಗೂ ನನ್ನ ಬಗ್ಗೆ ಬೇಜಾರು
ಕೊನೆಗೆ ಎರೆಡೇ ವರ್ಷದಲ್ಲಿ ನನ್ನ ದಾರಿ ನನದು ಅಂತ ಇಲ್ಲಿಗೆ ಮತ್ತೆ ಹಾರಿ ಬರುತ್ತೇನೆ
ಇಲ್ಲಿ ಪರಿಸ್ಥಿತಿ ಟೋಟಲಾಗಿ ಬದಲಾಗಿರುತ್ತದೆ
ಹೊಸ ಹೊಸ ಹುಡುಗಿಯರು ಬಂದು
ನನ್ನ ಫ್ರೆಶ್‌ನೆಸ್ ಹೋಗಿರುತ್ತದೆ ನನ್ನ ತಾಯಿ ಪಾತ್ರಕ್ಕೋ ಇಲ್ಲ ಅತ್ತೆಯ ಪಾತ್ರಕ್ಕೋ ಹಾಕುತ್ತಾರೆ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಇಷ್ತೇಲ್ಲಾ ಯಾಕೆ.
ಇನ್ನೂ ಯೌವ್ವನ ಇದೆ . ಅದರಿಂದಲೇ ಕೈ ತುಂಬಾಹಣವೂ ಬರ್ತಿದೆ. ಇದನ್ನೆಲ್ಲಾ ಬಿಟ್ಟು ನನಗಂತೂ ಬರಲು ಮನಸಿಲ್ಲ.

ಮದುವೆಯಾಗುವ ಕನಸಿದ್ದರೂ ಆ ಕನಸಿನಲ್ಲಿ ಬರುತ್ತಿರುವ ಮುಖವೇ ಬೇರೆ ಅದು ನೀನಲ್ಲ

ನಿನಗೆ ಸಂಪ್ರೀತಾ ಹೇಗೆ ನಿಲುಕದ ನಕ್ಷತ್ರವೋ ಹಾಗೆಯೇ ನನಗೆ ಮತ್ತೊಬ್ಬ ಹೀರೋ

ಈ ಹುಚ್ಚಾಟವನ್ನೆಲ್ಲಾ ಬಿಟ್ಟುಬಿಡು ಅಂತ ನಾನು ಕೇಳೋದಿಲ್ಲ ಯಾಕೆಂದರೆ ಯು ಆರ್ ನಥಿಂಗ್ ಟು ಮಿ

ಮತ್ತೆ ನನಗೆ ಲೆಟರ್ ಬರೆಯಬೇಡ . ನಾನು ಓದೋದಿಲ್ಲ
ಇದೇ ನನ್ನ ಮೊದಲ ಮತ್ತು ಕಡೆಯ ಪತ್ರ

ನಿನಗೆ ಯಾರೂ ಅಲ್ಲದ
ಸಂಜನಾ
















Saturday, October 30, 2010

ಅಕ್ವಿಶಿಸನ್- ಭಾವನೆಗಳ ಒತ್ತುವರಿ

"ರಿಯಲ್ಲಿ ಈ ನೈಸ್ ರೋಡ್ ಮಾಡಿರೋ ಖೇಣಿಗೆ ನೂರು ವಂದನೆ ಹೇಳಿದರೂ ಸಾಲದು ಏನಂತೀಯಾ?" ಶುಭಾಂಕ್ ಗುನಗಿದ.
ಅವನ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ . ಅವನಿಗೆ ಅದು ಬೇಕೂ ಇರಲಿಲ್ಲ
ಮತ್ತೆ ಮಾತಾಡಿದ
"ಇಂತಹ ಒಂದುಪ್ರಾಜೆಕ್ಟ್‌ಗೆ ಅಡ್ಡವಾಗಿ ನಿಂತ್ರಿದಲ್ಲ ಇವರೆಲ್ಲಾ . ಈಗ ನೋಡು ಮೈಸೂರು ಒಂದು ದೂರದ ಊರೇ ಅಲ್ಲ ಅನ್ನೋ ಹಾಗಿದೆ. ಸುಮ್ಮನೆ ಪ್ರಚಾರಕ್ಕೆ , ಎಲೆಕ್ಷನ್‌ಗೆ , ದುಡ್ಡಿಗೆ ನೂರಾರು ವೇಷಗಳು....." ಇನ್ನೂ ಮಾತಾಡುತ್ತಾನೆ ಇದ್ದ
ಹೌದಾ ಅಷ್ಟೇನಾ ಕಾರಣಗಳು. ಕಣ್ಣ ಮುಂದಿನ ದೃಶ್ಯಗಳು ಎಲ್ಲೋ ಹಾರಿತು. ಅವುಗಳಿಂದ ಬೋಳು ಹಣೆಯ ಅಮ್ಮನ ಮೋರೆ. ಕಣ್ಣಿಂದ ನೀರು ಜಿನುಗಿತು. ಸುಮ್ಮನಾದೆ . ಮನದಲ್ಲಿರುವ ಭಾವ ಪೂರ್ಣ ಮಾತುಗಳು ಶುಭಾಂಕ್‌ಗೆ ಹಿಡಿಸುವುದಿಲ್ಲ ಅಂತ ಗೊತ್ತಿತ್ತು.
"ಬಿ ಪ್ರಾಕ್ಟಿಕಲ್ ಯಾರ್ " ಎಂದನುವುದೇ ಅವನ ಸ್ವಭಾವ
ಹೌದು ವಾಸ್ತವವಾದಿಯಾಗಿರುವುದೇ ಎಷ್ಟೋ ಮೇಲು . ಭಾವನೆಗಳಿಗೆ ಈ ಪ್ರಪಂಚದಲ್ಲಿ ಬೆಲೆ ಎಲ್ಲಿರುತ್ತದೆ?

ಕಾರ್ ಮುಂದೆ ಹೋಗುತ್ತಾನೆ ಇತ್ತು ಹಾಗೆ ಶುಭಾಂಕನ ಮಾತುಗಳು ಚಟ ಪಟ ಎನ್ನುತ್ತಾ ಸಿಡಿಯುತ್ತಿದ್ದವು. ನನ್ನ ಆಲೋಚನೆಗಳು ಮಾತ್ರ ನಿಂತಲ್ಲಿಂದ ಮುಂದೆ ಬರುತ್ತಿರಲಿಲ್ಲ.

"ಮಮ್ಮಾ ಆ ಮನೆ ನೋಡು ಹೇಗೆ ಪಾಳು ಬಿದ್ದಿದೆ." ನಿಶು ತೋರಿಸಿದ . ಹೌದು ನನ್ನ ಕಣ್ನುಗಳೂ ಅದನ್ನೇ ಹುಡುಕುತ್ತಿದ್ದವು ಕಾತುರ ಎಲ್ಲಿ ಶುಭಾಂಕನ ಕೈ ಸ್ಟಿಯರಿಂಗ್ ಅನ್ನು ತಿರುಗಿಸುತ್ತದೋ ಎಂಬ ಆತಂಕ .
"ಶುಭಾಂಕ್ ನಾನ್ಹೇಳ್ತಾ ಇದ್ದನಲ್ಲ ಈ ನೈಸ್ ರೋಡಿನಲ್ಲಿ ನಮ್ಮದೂ ಒಂದುಮನೆ ಇತ್ತು ಅಂತ ಅದೇ ಸ್ವಲ್ಪ ನಿಲ್ಲಿಸು"
"ಓಹ್ ಹೌದಲ್ವಾ ಹೇಳಿದ್ದೆ ಯಾವಾಗ ಅಕ್ವೈರ್ ಮಾಡಿಕೊಂಡರು ಚೆನ್ನಾಗಿಯೇ ಕಟ್ಟಿದ್ದರು ಅನ್ಸುತ್ತೆ" . ಶುಭಾಂಕ್ ಕಾರ್ ನಿಲ್ಲಿಸಿದ .

ಮೇನ್ ರೋಡಿನಿಂದ ಸುಮಾರು ನೂರು ಮೀಟರ್ ದೂರದಲ್ಲಿತ್ತು
ಕಾಂಪೌಂಡ್ ಒಡೆದು ಹೋಗಿತ್ತು
ಮೊದಲನೇ ಪ್ಲ್ಹೋರ್‍ ಅರ್ಧ ಬಿದ್ದು ಹೋಗಿದೆ.
ಅದೇ ಮನೆಯಲ್ಲಿ ತಾನು ಆಟವಾಡಿದ್ದು. ಇಲ್ಲೇ ತನ್ನ ಓಡಾಟ .ಮೊದಲಿದ್ದ ಬಾಡಿಗೆ ಮನೆಯಲ್ಲಿ ನೀರಿಗೆ ಪರದಾಟ ಓನರ್ ನ ಕಾಟ ಸಹಿಸಿ ಸಹಿಸಿ ಅಪ್ಪ ಹಣ್ಣಾಗಿ ಹೋಗಿದ್ದರು. ತಾಳಲಾರದೆ ವಿ ಆರ್ ಎಸ್ ತೆಗೆದುಕೊಂಡು ಬೇಗೂರಿನ ಹೊರವಲಯದಲ್ಲಿ ಯಾವಾಗಲೋ ಕೊಂಡಿದ್ದ ಸೈಟನಲ್ಲಿ ಮನೆ ಕಟ್ಟಲಾರಂಭಿಸಿದರು.
ಅಂದು ಅಮ್ಮ ತನ್ನ ಕೊರಳಲ್ಲಿದ್ದ ಮಾಂಗಲ್ಯದ ಸರ ತೆಗೆದುಕೊಟ್ಟಿದ್ದರು." "ರೀ ನಮ್ಮದೇ ಒಂದು ಮನೆ ಆದರೆ ಎಷ್ಟು ಚೆನ್ನಾಗಿರುತ್ತೆ. ಆಮೇಲೆ ಚಿನ್ನ ಗಿನ್ನ ಎಲ್ಲಾ" ಮತ್ತೆ ಚಿನ್ನದ ಮಾಂಗಲ್ಯ ಅಮ್ಮನ ಕೊರಳಲ್ಲಿ ಕಾಣುವ ದಿನ ಬರಲೇ ಇಲ್ಲ

ಅಪ್ಪ ಮನೆ ಕಟ್ಟಿದ್ದರು . ಅದು ಬರೀ ಮನೆಯಾಗಿರಲಿಲ್ಲ.ತಮ್ಮ ಕುಟುಂಬದ ಭಾಗವೇ ಆಗಿ ಹೋಗಿತ್ತು . ಮನೆಯಲ್ಲಿ ಏನೋ ಸಂಭ್ರಮ . ಸ್ವಂತ ಮನೆಯ ಮೇಲೆ ಕೇವಲ ಹಕ್ಕೊಂದೇ ಅಲ್ಲ ಮಮತೆ ಪ್ರೀತಿ ,ವಾತ್ಸಲ್ಯ. ಅಮ್ಮನಂತೂ ಮನೆಗೆ ಎಷ್ಟೊಂದು ಅಲಂಕಾರ ಮಾಡುತ್ತಿದ್ದಳು.
ಮನೆಯ ಮುಂದೆ ತೋಟ. ತೋಟದ ಅಷ್ಟೂ ಗಿಡಕ್ಕೆಲ್ಲಾ ಭಾವಿಯಿಂದ ನೀರು ಸೇದಿ ಹಾಕುತ್ತಿದ್ದಳು. ದಣಿವೆಂಬುದೇ ಇರುತ್ತಿರಲಿಲ್ಲ ಅವಳಿಗೆ.
ಎರೆಡು ಫ್ಲೋರ್ ಮನೆಯಲ್ಲಿ ಆಟವೇ ಆಟ .ಕರೆಂಟ್ ಇರಲಿಲ್ಲ. ಆದರೂ ಆ ಚಿಮಣಿಯಲ್ಲಿಯೇ ಸಾಗಿದ ವಿದ್ಯಾಭ್ಯಾಸ . ಬಾವಿಯಲ್ಲಿ ಇಂಗದ ನೀರು. ನಿರ್ಜನ ಪ್ರದೇಶ. ಎಲ್ಲೋ ದೂರದಲ್ಲಿದ್ದ ಶಾಂತ ಆಂಟಿಯ ಮನೆ . ಅಪ್ಪನ ಲೂನಾದಲ್ಲಿ ತನ್ನ ಸ್ಕೂಲಿಗೆ ಪಯಣ.
ಹಾಗು ಹೀಗೂ ಆ ಏರಿಯಾಗೆ ಕರೆಂಟ್ ಲೈನ್ ಬಂದಿತ್ತು
ಮನೆಯಲ್ಲಿ ಕರೆಂಟ್ ಬಂದಿತ್ತು. ಎಸ್ ಎಸ್ ಎಲ್ ಸಿ ಓದುತ್ತಿದ್ದ ಮಗಳಿಗೆ ಅನುಕೂಲವಾಗಲೆಂದು ಅಪ್ಪ ಹಾಕಿಸಿದ್ದರು
ಆಗಲೇ ಸಿಡಿಲಿನಂತಹ ಸುದ್ದಿ
ಈ ಮನೆ ಸರಕಾರಿ ರಸ್ತೆಗೆ ಆಹುತಿಯಾಗುತ್ತಿತ್ತು.
ಅಪ್ಪ ಕುಸಿದಿದ್ದರು. ಅಮ್ಮನ ಅಳು ಕಣ್ಣಿಗೆ ಕಟ್ಟಿದಂತಿತ್ತು.
ಬೀದಿ ನಾಯಿಗಳನ್ನು ಅಟ್ಟುವಂತೆ ಅವರುಗಳು ಅಟ್ಟಿದ್ದರು ತಮ್ಮನ್ನು.
ಸ್ವಂತ ಮನೆ ಕಳೆದುಕೊಂಡ ದು:ಖದಲ್ಲಿ ಹಾಸಿಗೆ ಹಿಡಿದ ಅಪ್ಪ ಮತ್ತೆ ಮೇಲೇಳಲೇ ಇಲ್ಲ.
ಎಷ್ಟೋ ಜನ ದಿನಾ ಪ್ರತಿಭಟಿಸುತ್ತಿದ್ದರು.
ಅಮ್ಮ ಮಾತ್ರ ಕಲ್ಲಾಗಿಬಿಟ್ಟಳು
ಮಗಳನ್ನು ಓದಿಸಿ ಅವಳಿಗೆ ಮದುವೆ ಮಾಡುವವರೆಗೆ ಉಸಿರು ಬಿಗಿ ಹಿಡಿದ್ದಿದ್ದ ಜೀವ ಅಪ್ಪನನ್ನು ಅರಸಿ ಹೊರಟಿಯೇ ಬಿಟ್ಟಿತ್ತು.
"ಸ್ಮಿತಾ ನಾನು ಕೇಳಿದ್ದು ಯಾವಾಗ ಅಕ್ವಿಸಿಷನ್ ಆಗಿದ್ದು ಅಂತ ಯಾಕೆ ಮಾತಾಡ್ತಾ ಇಲ್ಲ?"ಶುಭಾಂಕ್ ಹಿಡಿದು ಆಡಿಸಿದ
ನೆನಪುಗಳ ಮೂಟೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮನಸು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ.
ದಣಿವಾಗಿ ಹೋಗಿದ್ದೆ
ಮನೆ ., ಹೆತ್ತವರು ,ನೆಂಟರು ಯಾವುದೂ ಇರದೆ ಪರದೇಶಕ್ಕೆ ಹೋಗಿ ಪರದೇಶಿಯಾಗಿ ಹೋಗಿಬಿಟ್ಟಿದ್ದೆ.
" ಸ್ಮಿತಾ ಆರ್ ಯು ಆಲ್ ರೈಟ್?" ಶುಭಾಂಕ್ ಪ್ರಶ್ನಿಸಿದ
"ಮಮ್ಮ ಆ ಮನೇನ ನೋಡೋಣ ಬಾಮ್ಮ" ನಿಶು ಕರೆಯುತ್ತಿದ್ದ

ನನಗೆ ನೋಡುವುದು ಬೇಕಿರಲಿಲ್ಲ. ಶುಭಾಂಕನ ಮುಂದೆ ಕುಸಿಯುವುದು ಬೇಕಿರಲಿಲ್ಲ. ಮತ್ತೊಮ್ಮೆ ಎಮೋಷನಲ್ ಫೂಲ್ ಆನ್ನಿಸಿಕೊಳ್ಳುವುದು ಬೇಕಿರಲಿಲ್ಲ

"ಶುಭಾಂಕ್ ನಾವು ಹೋಗೋಣ ಮುಹೂರ್ತಕ್ಕೆ ಲೇಟ್ ಆಗುತ್ತೆ. ನಿಶು ಈಗ ಬೇಡ ಇನ್ನೊಂದು ಸಲ ನೋಡೋಣ ಆಯ್ತಾ?"
ಶುಭಾಂಕ್ ಕಾರ್ ಸ್ಟಾರ್ಟ ಮಾಡಿದ

ಕಾರ್ ಮುಂದೆ ಹೋಗುತ್ತಿದ್ದಂತೆ ಅಪ್ಪನ ಮನೆ ಹಿಂದೆ ಹೋಗಲಾರಂಭಿಸಿತು.
ಇತ್ತ ಭಾವನೆಗಳನ್ನು ವಾಸ್ತವತೆ ಒತ್ತುವರಿ ಮಾಡಿಕೊಳ್ಳುತ್ತಿತ್ತು.













Monday, June 28, 2010

ಮಾಯವಾದ ಮುಖದ ಮೇಲಿನ ಕಲೆಗಳು

ಸುನಂದಾಗೆ ಇತ್ತೀಚಿಗೆ ಕನ್ನಡಿ ನೋಡಿಕೊಂಡಾಗೆಲ್ಲಾ ಸಂತೋಷ. ಇತ್ತೀಚಿಗೆ ಅವಳ ಮುಖದ ಮೇಲಿನ ಕಲೆಗಳು, ಕಾಣಲಾರದವಾಗಿದ್ದವು. "ರೀ ನನ್ನಮುಖದಲ್ಲಿ ಕಲೆಗಳೆಲ್ಲಾ ಕಡಿಮೆ ಆಗ್ತಾ ಇವೆ" ಖುಷಿ ಇಂದಲೇ ಹೇಳುತ್ತಿದ್ದಳು. "ಅಬ್ಬಾ ಆ ಕಲೆಗಳು ಎಷ್ಟು ದೊಡ್ಡ ದೊಡ್ಡದವಾಗಿದ್ದವು ಕನ್ನಡಿ ನೋಡೋಕೆ ಬೇಜಾರಾಗುತ್ತಿತ್ತು. ಈಗ ನೋಡಿ ಎಲ್ಲಾ ಕಡಿಮೆಯಾಗಿ ಎಷ್ಟು ಚೆನ್ನಾಗಿ ಕಾಣಿಸ್ತಾ ಇದ್ದೇನೆ. "
ಗಂಡ ಹೌದೆಂದು ತಲೆಯಾಡಿಸುತ್ತಿದ್ದ. ಪುಟ್ಟ ಮಗನನ್ನೂ ಕೇಳಿ ಖಾತ್ರಿ ಪಡಿಸಿಕೊಳ್ಳುತ್ತಿದ್ದಳು. ಆದರೆ ತಾನೇನೂ ಹಚ್ಚಿಕೊಳ್ಳದೆ ಕಡಿಮೆಯಾಗ್ತಿರೋದು ಹೇಗೆ ಎಂಬುದೇ ಅವಳಿಗೆ ಗೊತ್ತಾಗುತ್ತಿರಲಿಲ್ಲ . ಆದರೂ ತಾನು ಬರ ಬರುತ್ತಾ ಸುಂದರವಾಗಿ ಕಾಣುತ್ತಿರುವುದು ಅವಳಿಗೆ ಅರಿವಾಯ್ತು
ಹೌದು ಆ ಕಲೆಗಳು ಇದ್ದುದುರಿಂದಲೇ ಅವಳ ಮದುವೆ ನಿಧಾನಕ್ಕೆ ಆಯ್ತು. ತಂಗಿಯರ ಮದುವೆ ಎಲ್ಲಾ ಆದ ಮೇಲೆ ಕಷ್ಟ ಪಟ್ಟು ಹೆತ್ತವರು ರವಿಯನ್ನು ಹುಡುಕಿ ಕಟ್ಟಿದ್ದರು. ಈಗಾಗಲೇ ಅವಳಿಗೆ ೩೫ ವರ್ಷ. ಆ ಕಲೆಗಳೆಂದರೆ ನರಕ. ಕನ್ನಡಿ ನೋಡಲೇ ಹೆದರಿಕೊಳ್ಳುತ್ತಿದ್ದಳು. ಆ ಕಲೆ ಹೇಗಾದರೂ ಮಾಯವಾಗಬಾರದೆ ಎಂದುಎಷ್ಟು ಸಲ ಬೇಡಿಕೊಂಡಿದ್ದಳೋ. ಈಗ ಅದಾಗಿಯೇ ಕಡಿಮೆ ಆಗುತ್ತಿರುವುದು ಸಂತಸವನೀಯತೊಡಗಿತು
ಕಾಲ ಹಾಗೆ ಇರೋದಿಲ್ಲ
ಹಾಗೆಯೇ ಅವಳಿಗೆ ಕಣ್ಣು ಮಸುಕು ಮಸುಕಾಗುತ್ತಿದ್ದೆ ಎಂದನಿಸಿತು ಬಸ್ಸಿನ ನಂಬರ್ ದೂರದಿಂದ ಕಾಣಿಸುತ್ತಿಲ್ಲ ಎಂದನಿಸಲಾರಂಭಿಸಿತು.ಆಫೀಸಿನ ಕಡತಗಳು ಅಕ್ಷರಗಳು ನಾಟ್ಯ ಮಾಡಲಾರಂಭಿಸಿದಾಗ
ನಾರಾಯಣ ನೇತ್ರಾಲಯಕ್ಕೆ ಹೋಗಿ ಬಂದಳು. ಎರೆಡು ದಿನದಲ್ಲಿ ಕಣ್ಣಿಗೆ ಕನ್ನಡಕ ಬಂದಿತು
ಕನ್ನಡಕ ಧರಿಸಿ ಕನ್ನಡಿಯ ಮುಂದೆ ನಿಂತಳು.ಅರೆ ಕಲೆಗಳು ಮತ್ತೆ ಕಾಣಿಸಲಾರಂಭಿಸಿದವು. ಸತ್ಯ ತಲೆಗೆ ಹೊಳೆಯಿತು. ಕೂಡಲೇ ಕನ್ನಡಕ ಬಿಚ್ಚಿದಳು
ಈಗ ಸುನಂದ ಕನ್ನಡಿಯ ಮುಂದೆ ನಿಂತಾಗೆಲ್ಲಾ ಕನ್ನಡಕ ತೆಗೆದೇ ನಿಲ್ಲುತ್ತಾಳೆ . ತನ್ನ ಮುಖದ ಕಲೆಗಳು ಕಾಣಬಾರದೆಂದು

Monday, May 24, 2010

ಪ್ರೇಮವೊಂದು ಹುಚ್ಚು ಹೊಳೆ-ಉತ್ತರ ಭಾಗ

ರಾಜೀವನ ಮನಸ್ಸು ಡೋಲಾಯಮಾನವಾಗಿತ್ತು. ಅಬ್ಬಾ ಈ ಐದು ವರ್ಷಗಳಲ್ಲಿ ಏನೇನಾಗಿ ಹೋಯಿತು?ಹರೀಶನೇನೋ ಜೈಲಿಗೆ ಹೋದ. ಜೀವಾವಧಿ ಶಿಕ್ಷೆ ಆಯ್ತು . ಆತ ಏನು ಮಾಡಿದರೂ ಜೈಲಿನಿಂದ ಹೊರಬರದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದೂ ಆಯ್ತು.
ಆರು ತಿಂಗಳಲ್ಲಿ ಮದುವೆ ಆಗುತ್ತೇನೆಂದ ಸ್ಮಿತ ಮದುವೆಯ ಮಾತೆತ್ತಿದರೆ ಮಾತು ಮುಂದುವರೆಸುವುದಿಲ್ಲ ಇನ್ನೂ ಗೆಲ್ಲುವ ಕುದುರೆಯೇ ಆದ್ದರಿಂದ ರಾಜೀವನೂ ಬಲವಂತ ಮಾಡಲು ಹೋಗುತ್ತಿರಲಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಮಿತಾಗೆ ಎದುರು ನಿಲ್ಲುವವರು ಯಾರೂ ಇರಲಿಲ್ಲ. ಆರು ವರ್ಷಗಳಿಂದ ಸತತವಾಗಿ ನಂ ೧ ಸ್ಥಾನದಲ್ಲಿಯೇ ಮುಂದುವರೆದಿದ್ದಳು. ಕೈ ತುಂಬಾ ಹಣ ಕಣ್ಣು ಕುಕ್ಕುವ ರೂಪ, ಹದಿನೆಂಟರಂತೇ ಇರುವ ಅದೇ ಪ್ರಾಯ, ಅವಳ ಕಣ್ಣನ್ನುನೆತ್ತಿಯ ಮೇಲೆ ಇಟ್ಟಿದ್ದವು. ಒಮ್ಮೊಮ್ಮೆ ತಾನು ಕಡೇಗಣಿಸಲ್ಪಡುತ್ತಿದ್ದೇನೆಯೇ ಎಂದೂ ಯೋಚಿಸುತ್ತಿದ್ದ ರಾಜೀವ.

ಆದರೂ ಸ್ಮಿತಾಳೇ ತನ್ನ ಜೀವ ಎಂದೇನೂ ಅವನೇನು ಅಂದುಕೊಂಡಿರಲಿಲ್ಲ. ಅಂತಹ ಪ್ರೀತಿಯೂ ಅವಳ ಮೇಲಿರಲಿಲ್ಲ

ಇದ್ದುದ್ದೆಲ್ಲಾ ಕೇವಲ ಎಷ್ಟು ಸವಿದರೂ ಮತ್ತಷ್ಟು ಸವಿಯಬೇಕೆನಿಸುವ ಅವಳ ದೇಹದ ಮೇಲಿನ ದಾಹ, ಹಾಗು ಅಮರ ಪಾಲ್ ನ ನೂರಾರು ಕೋಟಿ ರೂಗಳ ಆಸ್ತಿ ಅಷ್ಟೇ .

ಯಾವುದಾದರೂ ಸಮಯ ನೋಡಿ ಅಟ್ ಲೀಸ್ಟ್ ಅರ್ಧದಷ್ಟು ಆಸ್ತಿಯನ್ನ್ನಾದರೂ ತನ್ನ ಹೆಸರಿಗೆ ಮಾಡಿಕೊಂಡರೆ ಸಾಕು ಅದಕ್ಕೆ ಕಾಯುತ್ತಿದ್ದ ಆದರೆ ಅವಳೋ ತನ್ನ ನೆರಳನ್ನೂ ನಂಬದವಳು. ಇನ್ನೂ ರಾಜೀವನನ್ನು ನಂಬುತ್ತಾಳೆಯೇ. ಅದಕ್ಕೆ ಆಸ್ಪದವೇ ಕೊಡುತ್ತಿರಲಿಲ್ಲ.

ಆಗಿನಿಂದಲೂ ರಾಜೀವ ಪಿ ಎ ಆಗಿದ್ದಷ್ಟೇ ಅವನ ಭಾಗ್ಯ. ಅವಳ ಕೆಲಸ ಮಾಡಿ ಮಾಡಿ ಬಳಲಿದ್ದ. ಆಗಲೇ ಅನ್ನಿಸಿದ್ದು ತನಗೊಬ್ಬ ಅಸಿಸ್ಟೆಂಟ್ ಬೇಕೆಂದು. ಆದರೆ ಬರುವವರು ನಂಬಿಕಸ್ತರಾಗಿರಬೇಕು . ಮುಗ್ದರಾಗಿರಬೇಕು. ತಮ್ಮಷ್ಟಕ್ಕೆ ತಾವು ಇರಬೇಕು. ಹೆಚ್ಚು ಓದಿರಬಾರದು .ಇಂಗ್ಲೀಷ ಮತ್ತು ಕಂಪ್ಯೂಟರ್ ಗೊತ್ತಿದ್ದರೆ ಸಾಕು. ಬಡವರಾಗಿರಬೇಕು. ಅಂತಹವರು ಯಾರಿದ್ದಾರೆ ?



ಗೌರಿ ನೆನಪಾಯ್ತು. ಹೌದು ಗೌರಿ ಅಂತಹವಳೇ . ಅವಳ ಪರಿಚಯವಾಗಿದ್ದೂ ಆಕಸ್ಮಿಕವೇ. ಅಂದು ಸ್ಮಿತಾಳ ಅನಾಥೆ ಚಿತ್ರದ ಶೂಟಿಂಗ್ ಇದ್ದುದ್ದು ರಾಜಾಜಿ ನಗರದ ಅಬಲಾಶ್ರಮದಲ್ಲಿ . ಅಲ್ಲಿಯೇ ಆ ಹದಿನೆಂಟರ ಹುಡುಗಿಯ ಪರಿಚಯವಾಗಿತ್ತು. ಗೌರಿ ಅಪ್ಪ ಅಮ್ಮ ಯಾರೆಂದು ಗೊತ್ತಿರದ ಪಾಪದ ಹುಡುಗಿ. ಸಾಧಾರಣ ರೂಪಿನವಳು ನೋಡಿದರೆ ಮುಗ್ದೆ ಎಂದು ತಿಳಿಯುತಿತ್ತು. ಮೊದಲು ಬಳ್ಳಾರಿಯ ಆಶ್ರಮದಲ್ಲಿ ಇದ್ದವಳು ಹದಿನೆಂಟು ವಯಸಾದ ಮೇಲೆ ಅವರೇ ಇಲ್ಲಿ ಅವಳನ್ನು ಕಳಿಸಿದ್ದರು ಅಶ್ರಮಕ್ಕೆ ಬಂದು ಒಂದು ತಿಂಗಳಾಗಿತ್ತಷ್ಟೇ. ಎಲ್ಲಾದರೂಕೆಲಸ ಇದ್ದರೆ ಹೇಳಿ ಎಂದು ಅತ್ತುಕೊಂಡಿದ್ದಳು. ಸಿನಿಮಾದಲ್ಲಿ ಸೈಡ್ ಆಕ್ಟ್ ಮಾಡ್ತೀಯ ಎಂದು ಕೇಳಿದ್ದಳು ಸ್ಮಿತಾ. ಇಲ್ಲ ಎಂದು ತಲೆ ಆಡಿಸಿದ್ದಳು . ತನ್ನ ಈ ರೂಪಿಗೆ ಸಿನಿಮಾ ಸರಿಯಾದ ಫೀಲ್ಡ್ ಅಲ್ಲ ಎಂದಿದ್ದಳು. ಪಿ ಯು ಸಿ ಮಾಡಿದ್ದಾಳೆ .ಜೊತೆಗೆ ಇಂಗ್ಲೀಷ್ ಜ್ನಾನವೂ ಇತ್ತು. ಕಂಪ್ಯೂಟರ್ ಮಾತ್ರ ಹೇಳಿಕೊಟ್ಟರೆ ಆಗುತ್ತದೆ

ಇದಾಗಿ ಎರೆಡು ವರ್ಷಗಳೇ ಕಳೆದಿವೆ . ಅವಳೇನು ಅಲ್ಲೇ ಇದ್ದಾಳ ಇಲ್ಲವಾ ಅದು ಗೊತ್ತಿಲ್ಲ . ಆಫೀಸಿನಿಂದ ಅಬಲಾಶ್ರಮಕ್ಕೆ ಕಾಲ್ ಮಾಡಲು ಹೇಳಿದ.

ಎರೆಡೇ ನಿಮಿಷದಲ್ಲಿ ಉತ್ತರ ಬಂತು

ಗೌರಿ ಯಾವುದ್ ಕಂಪೆನಿಯಲ್ಲಿ ಕೆಲ್ಸ ಮಾಡುತ್ತಿದ್ದಾಳೆ. ಅಬಲಾಶ್ರಮದಲ್ಲಿ ಇಲ್ಲ.

ಆ ಕಂಪನಿಯ ಫೋನ್ ನಂ ತೆಗೆದುಕೊಂಡು ಅವಳನ್ನು ಸಂಪರ್ಕಿಸಿದರು.

ಕೊನೆಗೂ ಗೌರಿ ಬಂದಳು . ಅದೇ ಸಾಧಾರಣ ರೂಪ ಅದೇ ಮುಗ್ಧತೆ , ಅದೇ ಮಾತು. ಬೆಂಗಳೂರಿನ ಬೆಡಗು ಅವಳನ್ನು ಎಳ್ಳಷ್ಟೂ ಬದಲಾಯಿಸಿರಲಿಲ್ಲ. ಮೇಕ್ ಅಪ್ ಇಲ್ಲದ ಮುಖ . ರಾಜೀವನಿಗೂ ಅದೇ ಬೇಕಾಗಿತ್ತು. ಹಾಗಿದ್ದಲ್ಲಿ ತಮ್ಮೆಲ್ಲಾ ವಿಷಯಗಳಿಗೂ ತಲೆಹಾಕುವುದಿಲ್ಲ

ರಾಜೀವನ ಅಸಿಸ್ಟೆಂಟ್ ಆಗಿರಲು ಒಪ್ಪಿದಳು. ಸ್ಮಿತಾ ಕೂಡ ಈ ಎಣ್ಣೆಗೆಂಪಿನ ಸಾಧಾರಣ ಹುಡುಗಿಯನ್ನು ಯಾವುದೇ ಮಾತ್ಸರ್ಯವಿಲ್ಲದೇ ಒಪ್ಪಿದಳು.

ಗೌರಿ ನಿಜಕ್ಕೂ ಮೌನ ಗೌರಿಯೇ ತಾನಾಯ್ತು ತನ್ನ ಕೆಲಸವಾಯ್ತು. ಎಲ್ಲರ ಜೀವನದಲ್ಲೂ ಇದ್ದಂತೆ ಅವಳ ಜೀವನಕ್ಕೂ ಒಂದು ಗುರಿ ಇತ್ತು . ಬೇರೆಡೆ ಕೆಲಸ ಮಾಡಿ ತಾನಂದುಕೊಂಡದ್ದನ್ನು ಪಡೆಯಲಾಗುವುದಿಲ್ಲ ಎಂದು ತಿಳಿದಿತ್ತು. ಇಲ್ಲಿ ಕೈ ತುಂಬಾ ಸಂಬಳ . ತನ್ನಾಸೆ ಇಲ್ಲಿ ಖಂಡಿತಾ ಈಡೇರುತ್ತದೆ ಎಂಬ ನಂಬಿಕೆ ಬಂತು .ಜೊತೆಗೆ ಪ್ರತ್ಯೇಕ ಕೋಣೆ . ಊಟ ಉಪಚಾರ ಎಲ್ಲಾ ಸ್ಮಿತಾ ಮನೆಯಲ್ಲೇ.
ಗೌರಿಯ ಕೆಲಸ ಸ್ಮಿತಾಳ ದಿನಚರಿಯನ್ನು ಸಿದ್ದಗೊಳಿಸುವುದು. ಅವಳ ಮಿಂಚಂಚೆಗೆ ಉತ್ತರಿಸುವುದು. ಲೆಟರ್ ಕರೆಸ್ಪಾಂಡೆನ್ಸ್ ಮಾಡುವುದು. ಜೊತೆಗೆ ಸ್ಮಿತಾ ಹೊಸತೊಂದು ಬಿಸಿನೆಸ್ ಆರಂಭಿಸಿದ್ದಳು . ಅದರ ಮೇಲುಸ್ತುವಾರಿ ನೋಡಿಕೊಳ್ಳುವುದು.
ರಾಜೀವನಿಗೆ ಈಗ ಪ್ರಯಾಸ ಕಡಿಮೆಯಾಗಿತ್ತು. ಎಲ್ಲಾ ಕೆಲಸಗಳನ್ನೂಗೌರಿ ಒಂದಿನಿತೂ ಬೇಸರಿಸಿಕೊಳ್ಳದೇ ಮಾಡುತ್ತಿದ್ದಳು. ಹುಡುಗಿಯರು ಇಷ್ಟು ಸಾಫ್ಟ್ ,ಟ್ರೆಡಿಷನಲ್ , ಗಂಭೀರವಾಗಿರುತ್ತಾರ ? ಎಂದು ಅಚ್ಚರಿ ಪಡುತ್ತಿದ್ದ. ಸ್ಮಿತಾಳೂ ಗೌರಿಯನ್ನ ರೇಗಿಸುತ್ತಿದ್ದಳು
"ಗೌರಿ ಸ್ವಲ್ಪವಾದರೂ ಚೇಂಜ್ ಇರಬೇಕು . ಹೀಗಿದ್ದಲ್ಲಿ ಮುಂದೆ ಯಾರೇ ನಿನ್ನನ್ನ ಮದುವೆ ಆಗ್ತಾರೆ? "
"ಮೇಡಮ್ ನನಗೆ ಅಂತ ಯಾರನ್ನೋ ಭಗವಂತ ಸೃಷ್ಟಿ ಮಾಡಿರುತ್ತಾನೆ ಸಮಯ ಬಂದಾಗ ಅವನೇ ನನ್ನ ಮುಂದೆ ಬರ್ತಾನೆ.ನನ್ನನ್ನ ಹೇಗಿದ್ದೀನೋ ಹಾಗೆ ಒಪ್ಪಿಕೊಳ್ಳೋ ಅಂತಹ ಗಂಡು "ಮುಗ್ದ ಉತ್ತರ
"ಅಕಸ್ಮಾತ್ ಯಾರೂ ಬರಲಿಲ್ಲಾಂದರೆ"ಸ್ಮಿತಾ ನಗುತ್ತಿದ್ದಳು
"ನನ್ನ ಹಣೇಲಿ ಮದುವೆ ಅನ್ನೋ ಪದ ಇಲ್ಲಾ ಅನ್ಕೋತೀನಿ" ಬೇಜಾರಾಗುತ್ತಿತ್ತೇನೋ ಗೌರಿ ಎದ್ದು ಹೋಗಿಬಿಡುತ್ತಿದ್ದಳು.
ಹೀಗೆ ದಿನಗಳು ಕಳೆಯುತ್ತಿದ್ದವು
ಅರಿವಿಲ್ಲದೆ ಸ್ಮಿತಾಗೆ ಗೌರಿ ತುಂಬಾ ಹತ್ತಿರದವಳಾಗಿದ್ದಳು. ರಾಜೀವನಿಗೂ ಸಹಾ . ಗೌರಿ ಅವಕಾಶ ಕೊಟ್ಟರೆ ಗೌರಿಯನ್ನ ವಶಪಡಿಸಿಕೊಳ್ಳಲು ರಾಜೀವನೂ ತಯಾರಿದ್ದ. ಆದರೆ ಗೌರಿಯೇ ಅಂತಹವಳು ಬೆಂಕಿ ಚೆಂಡಿನಂತಹವಳು. ರಾಜೀವನಷ್ಟೆ ಅಲ್ಲಾ ಎಲ್ಲಾ ಗಂಡಸರನ್ನೂ ಮೂರು ಅಡಿ ದೂರದಲ್ಲೇ ಇರಿಸಿ ಮಾತಾಡುತ್ತಿದ್ದಳು. ಅಲ್ಲದೇ ಗೌರಿ ಸ್ಮಿತಾಗೆ ತುಂಬಾ ಬೇಕಾದವಳಾದ್ದರಿಂದ ರಾಜೀವನೂ ಹೆದರುತ್ತಿದ್ದ.

ಇಂತಹ ಗೌರಿಯ ಜೀವನವನ್ನೇ ಬದಲಾಯಿಸುವಂತಹ ಘಟನೆ ನಡೆಯುತ್ತದೆ ಎಂದೂ ರಾಜೀವನೇಕೆ ಗೌರಿಯೂ ಊಹಿಸಿರಲಿಲ್ಲ.
(ಮುಂದುವರೆಯುತ್ತದೆ)
[ ಎಲ್ಲೋ ಒಂದು ಕಡೆ ಪ್ರೇಮವೊಂದು ಹುಚ್ಚು ಹೊಳೆ ಅಪೂರ್ಣ ಎನಿಸಿದ್ದರಿಂದ ಅದನ್ನ ಮುಂದುವರೆಸುತಿದ್ದೇನೆ. ’ಗಮ್ಯ’ಕ್ಕೂ ಅಂತ್ಯ ಕಾಣಿಸಬೇಕೆಂದಿದ್ದೇನೆ. ಎಲ್ಲಕ್ಕೂ ಸಮಯದ ತೊಂದರೆ. ಓದುಗರು ದಯವಿಟ್ಟು ಸಹಿಸಿಕೊಳ್ಳಿ-ರೂಪ)

Tuesday, April 27, 2010

ಫಲಿತಾಂಶ

ಪ್ರಣತಿಯನ್ನು ನೋಡುತ್ತಿರುವಂತೆ ನನ್ನ ಮನದಲ್ಲೇನೋ ಅಪರಾಧಿ ಪ್ರಜ್ನೆ ಹೀಗೇ ಧುಮ್ಮಿಕ್ಕುತ್ತಿದೆ. ಅವಳನ್ನು ಪ್ರೀತಿಸುತ್ತಿದ್ದೇನೆ ನಾನು ಆದರೆ ಅವಳು ನನ್ನನ್ನ ಪ್ರೀತಿಸುತ್ತಿದ್ದಾಳೇಯೇ. ಅವಳು "ಅನಿಲ್ ಐ ರಿಯಲ್ಲಿ ಐ ಲವ್ ಯು "ಅಂದಾಗಲೂ ಹೃದಯ ಹಿಗ್ಗಲಿಲ್ಲ ಬದಲಿಗೆ ಕುಗ್ಗಿತು. ಒಂದು ಹೆಣ್ಣನ್ನು ಪ್ರೀತಿಸಲು ಮುಖವಾಡ ಹಾಕ್ತೀಯಾ ಹೇಡಿ ಎಂದಿತ್ತು. ಆದರೂ ಭಂಡ ನಾನು .ಯಾವುದಕ್ಕೂ ಬಗ್ಗೋದಿಲ್ಲ. ಇನ್ನೂನನ್ನದೇ ಮಾತಿಗೆ ಬಗ್ಗುತ್ತೇನೆಯೇ. ಅದನ್ನ ಗದರಿದ್ದೆ.


ಈ ಪ್ರಣತಿ ನನ್ನನ್ನ ಈ ಒಂದು ಕೀಳು ಮಟ್ಟಕ್ಕೆ ಇಳಿಸಿಬಿಡುತ್ತಾಳೆ ಎಂದು ನಾನಾದರೂ ಯಾವಾಗ ತಿಳಿದಿದ್ದೆ.


ಪ್ರೀತಮ್ ನನ್ನ ಕಂಪೆನಿಯಲ್ಲಿ ಕೇವಲ ಕೆಲಸಗಾರನಾಗಿರಲಿಲ್ಲ ನನ್ನ ಜೀವದ ಗೆಳೆಯನಾಗಿದ್ದ. ಸ್ವಭಾವತ: ಚಿಪ್ಪಿನಲ್ಲಿ ಮುಳುಗಿ ಹೋಗುವ ಹುಡುಗ. ಅದು ಹೇಗೋ ಅವನು ನನ್ನ ಗೆಳೆತನದ ಪರಿಧಿಯಲ್ಲಿ ತೂರಿದ್ದ.


ಅವನಿಗೆ ಹೇಗೋ ಹತ್ತಿತ್ತು ಬ್ಲಾಗ್ ಹುಚ್ಚು. ಸದಾ ಒಂಟಿ ಆತ . ಕಲ್ಪನೆಯ ಸಾಗರದಲ್ಲಿ ಮುಳುಗಿರುತ್ತಿದ್ದ. ತನ್ನ ಮನಸಿನ ಭಾವನೆಗೆ ಮಾತಿನ ರೂಪ ಕೊಡಲಾಗದ ಆತ ಮೊರೆ ಹೊಕ್ಕಿದ್ದು ಈ ಬ್ಲಾಗೆಂಬ ಮಹಾಸಾಗರದಲ್ಲಿ. ಅದು ಗೊತ್ತಿದ್ದುದು ನನಗೆ ಮಾತ್ರ ."ಮಾತಿರದ ಅಕ್ಷರಗಳು" ಇದಲ್ಲವೇ ಆತನ ಬ್ಲಾಗಿನ ಶೀರ್ಷಿಕೆ . ತನ್ನ ಬದುಕಿನ ಕಥೆಯೆಲ್ಲವನ್ನೂ , ಭಾವನೆಯನ್ನೂ ಅಕ್ಶರದ ರೂಪದಲ್ಲಿರಿಸುತ್ತಿದ್ದ. ಎಲ್ಲೂ ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ’ಅಕ್ಷರಿಗ’ ಎಂಬ ಹೆಸರನ್ನೇ ತನ್ನ ಮೇಲ್‌ಗೆ ಇಟ್ಟಿದ್ದ . ಒಂದು ಚಿಪ್ಪಿನಲ್ಲಿಯೇ ಉಳಿದಿದ್ದ. ಅವನು ಈ ’ನಿರೀಕ್ಷೆ’ ಎಂಬ ಮುದ್ದು ಹುಡುಗಿಯ ಬಲೆಗೆ ಹೇಗೆ ಬಿದ್ದನೋ ಗೊತ್ತಿಲ್ಲ. ಆದರೆ ಅವಳನ್ನೇ ಆರಾಧಿಸಿದ ಮೊಗವನ್ನೂ ಕೂಡ ನೋಡದೆ. ಅವಳೂ ಅಷ್ಟೇ ಅವನ ಪ್ರೀತಿಗೆ ಬಿದ್ದಿದ್ದಳು. ಆದರೆ ತನ್ನ ಹೆಸರನ್ನೂ ಹೇಳಿರಲಿಲ್ಲ. ಅವಳೂ ಅಷ್ಟೆ ತನ್ನ ನಿಜ ಹೆಸರನ್ನು ತಿಳಿಸಿರಲಿಲ್ಲ. ನಿರೀಕ್ಷೆ ಎಂದು ಹೆಸರನ್ನಿಟ್ಟಿಕ್ಕೊಂಡಿದ್ದಳು.ಅದು ಅವರು ತಮ್ಮಪ್ರೇಮವನ್ನು ಪರೀಕ್ಷೈಸಿಕೊಳ್ಳುವ ಪರಿಯಂತೆ


ಇದೆಲ್ಲಾ ನನಗೆ ಮಾತ್ರ ಗೊತ್ತಿತ್ತು. ಎಷ್ಗ್ಟೊ ಬಾರಿ ನಾನೆ ಅವನಿಗೆ ಬೈದಿದ್ದೆ. ಈ ಥರಾ ಭ್ರಮಾಲೋಕದಲ್ಲಿ ಯಾಕೆ ಬದುಕುತೀಯಾ ಎಂದು. ಜೊತೆಗೆ ಕಂಪೆನೀಲಿ ಕೆಲ್ಸ ಮಾಡೋ ಅಂದ್ರೆ ಬ್ಲಾಗ್ಸ್ ಬರೆದು ಟೈಮ್ ವೇಸ್ಟ್ ಮಾಡ್ತಿಯಾ ಎಂದು ಕೀಟಲೆಮಾಡಿದ್ದೆ. ಆತ ನಗುತ್ತಿದ್ದ


ಆವತ್ತೂ ಅವಳ ಮೇಲ್ ಬಂದ ಖುಶಿಯಲ್ಲಿ ನನಗೆ ತೋರಿಸಿದ. ಇಬ್ಬರೂ ಭಾನುವಾರದ ಸಂಜೆ ಭೇಟಿಯಾಗುವ ಮನಸು ಮಾಡಿದ್ದರು. ಕೇವಲ ಬಟ್ಟೆಯ ಆಧಾರದ ಮೇಲೆ ಗುರುತಿಸುವುದು. ನನಗೋ ನಗು. ಕೊನೆಗೆ ಆಲ್ ದಿ ಬೆಸ್ಟ್ ಹೇಳಿ ಕ್ಯಾಬಿನ್‌ಗೆ ಬಂದು ಪ್ರೀತಿಗೆ ಇಂಥಾ ಶಕ್ತಿ ಇದ್ಯಾ ಎಂದು ಯೋಚಿಸಿದ್ದೇ ಬಂತು. ಏಕೆಂದರೆ ನನಗೇನೂ ಅದರ ಅನುಭವ ಆಗಿರಲಿಲ್ಲವಲ್ಲ.

ಯಾಕೋ ಯಾರೆ ನೀನು ಚೆಲುವೆ ಬೇಡಾವೆಂದರೂ ನೆನಪಾಗುತ್ತಿತ್ತು


ಆದರೆ ಅವರಿಬ್ಬರ ಮಿಲನಕ್ಕೆ ವಿಧಿಯ ಸಮ್ಮತಿ ಇರಲಿಲ್ಲವೇನೋ. ಮದ್ಯಾಹ್ನ ಬೇಗನೆ ಖುಷಿಯಲ್ಲಿ ಹೋಗುತ್ತಿದ್ದವ ಎದುರು ಯಮ ದೂತನಾಗಿದ್ದ ಲಾರಿಯನ್ನು ಗಮನಿಸಲಿಲ್ಲ. ಅವನನ್ನು ಜಜ್ಜ್ಜಿಹಾಕಿತ್ತು. ಇದೊಂದು ರೀತಿಯ ಆಘಾತ ನನಗೆ. ಆತ್ಮೀಯ ಮಿತ್ರನ ಮರಣ ನನ್ನನ್ನು ಮಂಕಾಗಿಸಿದರೂ ಅವನ ಪ್ರೀತಿಯ ಹುಡುಗಿಗೆ ಈ ವಿಷಯ ತಿಳಿಸಲೇಬೇಕಿತ್ತು. ಅಂದು ಭಾನುವಾರ ಪ್ರೀತಮ್‍ನ ಮೇಲ್ನಲ್ಲಿ ಇದ್ದಂತೆ ಹಳದಿ ಹಾಗು ಕೆಂಪು ಚೌಕಳಿ ಇರುವ ಶರ್ಟ್ ಹಾಕಿಕೊಂಡು ಆ ’ನಿರೀಕ್ಷೆ’ಯನ್ನು ಮೀಟ್ ಮಾಡಲೆಂದು ಬಂದೆ.


ಅವಳಿಗೆ ಹೇಗೆ ಸಮಾಧಾನ ಮಾಡಬೇಕೆಂಬ ಯೋಚನೆಯಲ್ಲಿ ನಿಂತವನ ಎದುರಿಗೆ ಬಂದು ನಿಂತ ಆ ಅಪ್ಸರೆ ಮನಸನ್ನು ಸೂರೆ ಮಾಡಿಬಿಟ್ಟಳು. ತಾನೇ ಆ ’ನಿರೀಕ್ಷೆ’ ಎಂದವಳ ಮಾತಿಗೆ ಅವಳ ನಿನಾದಕ್ಕೆ ,ಕೊರಳು ಕೊಂಕಿಸುವ ರೀತಿಗೆ ನಗುವ ಮೋಡಿಗೆ ಬಲಿಯಾಗಿಬಿಟ್ಟೆ. ಅವಳಿಗೆ ನಾನ್ಯಾರು ಎಂದು ಹೇಳಬೇಕೆಂಬ ಯೋಚನೆಯೂ ಬರಲಿಲ್ಲ ನನ್ನನ್ನೆ ಅವಳು ’ಅಕ್ಷರಿಗ’ ಎಂದುಕೊಂಡಳು. ನಾನು ಇಲ್ಲವೆನ್ನಲಿಲ್ಲ. ನನ್ನಹೆಸರನ್ನು ಹೇಳಿಕೊಂಡೆ . ಅನಿಲ್’


ಆಗಲೆ ಆ ಸುಂದರ ಹೆಣ್ಣಿನ ಹೆಸರೂ ಇನ್ನೂ ಸುಂದರ .’ ಪ್ರಣತಿ ’ಎಂದು ತಿಳಿಯಿತು

ಅಂತಹ ಸುಂದರಿ ನನ್ನನ್ನು ಎಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದಾಳೆ.

ನಾಳೆ ನಮ್ಮ ಎಂಗೇಜ್ ಮೆಂಟ್ . ನನ್ನ ಅಲ್ಲಲ್ಲ ’ಅಕ್ಷರಿಗ’ ಹಾಗು ’ನಿರೀಕ್ಶೆ’ಯ ಎಂಗೇಜ ಮೆಂಟ್. ನಾನು ’ಅಕ್ಷರಿ’ಗನ ವೇಷದಲ್ಲಿರುವ ವಂಚಕ ಎಂದು ತಿಳಿದರೆ ಅವಳ ಮನಸಿಗೆ ಎಷ್ಟು ನೋವಾದೀತು. ಆದರೆ ನಾನು ಅವಳು ನನ್ನನ್ನು ಪ್ರೀತಿಸಲಿ ಎಂದು ಬಯಸುತ್ತೇನೆ. ಜೀವನವೆಲ್ಲಾ ’ಪ್ರೀತಮ‌’ನ ಹಂಗಲ್ಲಿ ಇರುವುದು ಯಾಕೋ ಬೇಡವೆನ್ನುತ್ತಿದೆ ಮನಸು. ಒಂದೊಮ್ಮೆ ಅವಳು ಒಪ್ಪದೇ ಹೋದರೆ

ಇಲ್ಲಾ ಹೇಳಿಬಿಡುವುದೇ ಒಳ್ಳೇಯದು. ಅವಳ ನಿರ್ಧಾರ ಏನೆ ಆಗಲಿ

ಗಟ್ಟಿ ಮನಸು ಮಾಡಿಕೊಂಡೆ ಪ್ರಣತಿಗೆ ಫೋನ್ ಮಾಡಿದೆ.

ಹೋಟೆಲ್ ವುಡ್‌ಲ್ಯಾಂಡ್ಸ್ನ ಎದುರಲ್ಲಿದ್ದ ಲಾನ್‍ ನಮ್ಮ ಮುಂದಿನ ಮಾತುಕತೆಗೆ ಸಾಕ್ಷಿಯಾಗುವುದರಲ್ಲಿತ್ತು. ಪ್ರಣತಿ ಬಂದಳು. ಮಂಜಿನಲ್ಲಿ ಮುಳುಗೆದ್ದ ಹೂವಿನ ಸೌಂದರ್ಯ ಅವಳದು.

ಈ ಸೌಂದರ್ಯವೇ ತನ್ನನ್ನು ವಂಚಕನನ್ನಾಗಿ ಮಾಡಿದ್ದೆ. ಕಣ್ಣು ಮುಚ್ಚಿದೆ ಮತ್ತೆ ಕರಗಬಾರದೆಂದು

ಬಂದು ಕೂತಳು

ನನ್ನ ಕೈ ಅವಳ ಕೈನಲ್ಲಿ ಬಂಧಿಯಾಯ್ತು.

ನಿಧಾನವಾಗಿ ಕೈ ಬಿಡಿಸಿಕೊಂಡು ಎದ್ದು ನಿಂತೆ ಅವಳತ್ತ ಬೆನ್ನು ಮಾಡಿ

ಎಲ್ಲವನ್ನೂ ಹೇಳಿಬಿಟ್ಟೆ. ಮುಖ ನೋಡಲು ಧೈರ್ಯ ಸಾಲಲಿಲ್ಲ.

ಸ್ವಲ್ಪ ಹೊತ್ತು ಮೌನ

ಇದೇನು ಅವಳಿಂದ ಮಾತಿಲ್ಲ ಎಂದು ಅವಳತ್ತ ತಿರುಗಿದೆ

ಅವಳ ಕಣ್ಣಲ್ಲಿ ನೀರು.

ಕೊಂಚ ಹೊತ್ತು ಹಾಗೆ ನಿಂತವಳು .

"ನೀವು ನನ್ನನ್ನ ಅಂಧಾಕಾರದಲ್ಲಿಟ್ರಿ ಇಷ್ಗ್ಟು ದಿನಾ. ನಾನು ಪ್ರೀತಿಸಿದ್ದು ’ಅಕ್ಷರಿಗ’ನನ್ನ . ಅವರ ಮುಖ ನೋಡದೆ ಅವರ ಹೆಸರು ಕೇಳದೆ ಕೇವಲ ಅವರ ಬರಹವನ್ನೇ ಪ್ರೀತಿಸಿದೆ, ಆದರೆ ನೀವು ಹೀಗೆ ಮಾಡಬಾರದಿತ್ತು . ನಿಮ್ಮ ಪ್ರಾಣ ಸ್ನೇಹಿತನ ಪ್ರಿಯತಮೆಯನ್ನ ಮೋಸ ಮಾಡಿಬಿಟ್ರಿ"

ನಾನು ಸುಮ್ಮನಾಗಿಬಿಟ್ಟೆ. ಇದೆಲ್ಲಾ ಬೇಕಾಗಿತ್ತು ನನಗೆ ಎಂದುಕೊಂಡೆ

"ಆದರೆ ನಿಜ ವಿಷಯ ಹೇಳಿ ನನ್ನನ್ನ ಗೆದ್ದುಬಿಟ್ರಿ " ಆಕೆಯ ಮಾತು ಮುಂದುವರೆಯುತ್ತಿದ್ದಂತೆ

ನಾನು ಚಕಿತನಾದೆ

ನಾನು ನಿಮ್ಮನ್ನ ಮುಟ್ಟಲು ಬಂದಾಗಲೆಲ್ಲಾ ನೀವು ದೂರ ಹೋಗುತ್ತಿದ್ದುದ್ದನ್ನ ಕಂಡು ಸಂಕೋಚವಿರಬಹುದು ಎಂದುಕೊಂಡಿದ್ದೆ ಆದರೆ ನಿಮ್ಮ ಮನಸಲ್ಲಿ ಇಂತಾ ತುಮುಲವಿತ್ತು ಎಂದು ಈಗ ತಿಳಿಯುತ್ತಿದೆ . ನಿಮ್ಮ ಹೃದಯದಲ್ಲಿ ಎಂತಾ ಬಿರುಗಾಳಿ ಎದ್ದಿರಬಹುದು ಎಂದೂ ನಾನು ಊಹಿಸಬಲ್ಲೆ. ನೀವು ಒಳ್ಳೆಯವರೇ ನಿಜ ಆದರೆ ನಾನು ಈಗಲೇ ಯಾವುದನ್ನೂ ನಿರ್ಧರಿಸಲು ಅಶಕ್ಯೆ. ನಮ್ಮ ಎಂಗೇಜ್‌ಮೆಂಟ್ ನಾಳೆ ನಡೆಯಲೂ ಬಹುದು ಅಥವ ಇಲ್ಲದೇ ಇರಬಹುದು ಏನೆ ಆಗಲಿ ನಾನಂತೂ ನಿಮ್ಮ ಗೆಳತಿಯಾಗಿರಲು ಬಯಸುತ್ತೇನೆ "

ಅವಳು ನುಡಿದು ಭಾವನೆಗಳ ತೀವ್ರತೆ ತಾಳಲಾರದವಳಂತೆ ಕಾರಿನತ್ತ ಓಡಿದಳು

ಅವಳ ಮಾತು ಸಂತಸ ತಂದಿತು. ಅವಳು ನನಗೆ ದಕ್ಕುತ್ತಾಳೋ ಇಲ್ಲವೋ ಎಂಬ ಯೋಚನೆಗಿಂತ ಅವಳ ದೃಷ್ಟಿಯಲ್ಲಿ ನಾನು ಬೀಳಲಿಲ್ಲವಲ್ಲ ಎಂಬುದೇ ಹೆಮ್ಮಯ ವಿಷಯವಾಗಿತ್ತು

ನಾಳೆಯ ಫಲಿತಾಂಶ ಏನೆ ಆಗಲಿ ನಾನು ನಾನಾಗಿದ್ದೆ. ಅವಳು ನಿರಾಕರಿಸಲಿ ಅಥವ ಬಯಸಲಿ ಅದು ನಾನೇ, ಅನಿಲ್ ಆಗಿರುತ್ತೇನೆ . ಇದು ಅನಿಲ್‌ನ ಫಲಿತಾಂಶ

ನಾಳೆಗಾಗಿ ಕಾಯತೊಡಗಿದೆ

**************************************

Tuesday, March 30, 2010

ಬಾಗಿಲ ಚಿಲಕ

ಆತನೇನೋ ಆಹ್ವಾನ ನೀಡಿದ್ದ. ಮರುಭೂಮಿಯಾಗಿದ್ದ ದೇಹಕ್ಕೆ ಪ್ರೀತಿ ನೀರಿನ ಸಿಂಚನ ಮಾಡುವುದಾಗಿ ಹೇಳಿದ್ದ . ತೊಳಲಾಟದಲ್ಲಿ ಸಿಕ್ಕಿದ್ದಳು. ಒಪ್ಪುವುದೇ ಬೇಡವೇ? ಗಂಡನಂತೂ ಇನ್ನು ಒಂದು ವರ್ಷ ಬರುವುದಿಲ್ಲ. ಮಾನಸಿಕವಾಗಿ ಗಂಡನನ್ನೇ ಪ್ರೀತಿಸುತ್ತಿದ್ದರೂ ದೈಹಿಕ ಬಯಕೆಗಳನ್ನೆಂತು ಸಮಾಧಾನಗೊಳಿಸುವುದು? ಆಗಲೇ ಸಿಕ್ಕಿದ್ದ ಈ ಪೋರ ಮಾತಿನಲ್ಲಿಯೇ ಅರಮನೆಯನ್ನೇ ತೋರಿದ್ದ. ಮೌನದ ಅವಧಿಯಲ್ಲೂ ಅವಳ ನೆನಪಿನ ಭಾಗವಾಗುತ್ತಿದ್ದ.

ಮಾತು ಮೌನಗಳ ಮೀರಿ ಅವಳು ಬಯಸಿದ ಭಾಗ್ಯ ಅವಳದಾಗುತ್ತಿದ್ದಾಗ ಅಹ್ವಾನ ತಿರಸ್ಕರಿಸಲು ಮನಸು ಬಾರಲಿಲ್ಲ . ರಾತ್ರಿ ಬಾಗಿಲಿಗೆ ಚಿಲಕ ಹಾಕದಂತೆ ಹೇಳಿದ್ದ ಆತ . ಸಾಯಂಕಾಲವಾಗುತ್ತಿದ್ದಂತೆ ಬೆವರು ಹಣೆಯಲ್ಲಿ ಮುತ್ತಾಗುತಿತ್ತು . ಎದೆಯ ಡವಡವ ಅವಳಿಗೇ ಕೇಳುವಂತೆ ಹೊಡೆದುಕೊಳ್ಳುತ್ತಿತ್ತು. ಕಂಪೆನಿಯಿಂದ ಮನೆಗೆ ಬಂದೊಡನೆ ಎಂದಿಗಿಂತ ಹೆಚ್ಚಾಗಿಯೇ ಅಲಂಕರಿಸಿಕೊಂಡಳು. ಕನ್ನಡಿಯಲ್ಲಿ ತನ್ನ ರೂಪು ನೋಡಿ ಅವಳಿಗೇ ಅಸೂಯೆಯಾಯಿತು. ಘಂಟೇ ಏಳಾಯಿತು. ಎಂಟು ಆಯಿತು. ತುಂಬಾ ಹೊತ್ತಿನ ತನಕ ಟೀವಿ ನೋಡುತ್ತಿದ್ದಳು. ಟಿವಿ ಆಫ್ ಮಾಡಿ ಮಂಚದ ಮೇಲೆ ಉರುಳಿದಳು

ಮನಸಲ್ಲಿ ಏನೇನೋ ಯೋಚನೆಗಳು . ಗಂಡನಿಗೆ ಮೋಸ ಮಾಡುತ್ತಿದ್ದೇನೇಯೇ ಎಂದೊಮ್ಮೆ ಅಳುಕಾಯ್ತು. ಇಲ್ಲ ಅವನೂ ಆ ಊರಲ್ಲಿ ಹೀಗೆ ಮತ್ತೊಬ್ಬಳೊಡನೇ .. ಛೆ ಛೆ ಇಲ್ಲ ಅವನು ಅಂತಹವನಲ್ಲ. ಕೇವಲ ದೈಹಿಕ ಬಯಕೆಗೆ ಈಡಾಗುವ ಗಂಡು ಅವನಲ್ಲ.

ಅವನು ಹಾಗಿಲ್ಲ್ದದಿದ್ದಲ್ಲಿ ತಾನೇಕೆ ಹೀಗೆ?

ಪ್ರಶ್ನೆ ಮನಸಲ್ಲಿ ಮೂಡುತ್ತಿತ್ತು. ಉತ್ತರ ಕೊಡಲು ಆಗಲಿಲ್ಲ ಎಂಬುದಕ್ಕಿಂತ ಅವಳೇ ಪ್ರಶ್ನೆಯನ್ನು ಅಳಿಸಿದಳು.

ಹಾಗೆ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದಂತೆ . ಏನೋ ನೆನಪಾದವಳಂತೆ ಬಾಗಿಲ ಬಳಿ ಹೋಗಿ ಬಂದಳು

ಅಂದು ರಾತ್ರಿ ಕಳೆಯಿತು.

ಸಮಾಧಾನದ ನಿದ್ದೆಯಿಂದ ಎಚ್ಚೆತ್ತಳು.



ಬೆಳಗ್ಗೆ ಆತನ ಫೋನ್ ಬಂತು

"ಬಾಗಿಲ ಚಿಲಕ ಏಕೆ ಹಾಕಿದ್ದೆ?"

"ಬಾಗಿಲು ಭದ್ರವಾಗಿರಲಿ ಅಂತ"ಹೇಳಿ ಫೋನ್ ಆಫ್ ಮಾಡಿದಳು, ಎದುರಿದ್ದ ಗಂಡನ ಫೋಟೋ ಸಮಾಧಾನದ ನಗೆ ನಕ್ಕಂತೆ ಕಂಡಿತು

Friday, March 5, 2010

ಸಾಧ್ಯವಾದಾಗಲೆಲ್ಲ ನಿನ್ನನ್ನು ಇರಿಯಲು ಕಾಯುತ್ತಿರುತ್ತದೆ ಈ ಸಮಾಜ

ಅಪ್ಪಾ,
ನನಗೆ ಗೊತ್ತು ನನ್ ಪತ್ರ ನೋಡುತ್ತಿದ್ದಂತೆ ಇವಳೇಕೆ ಪತ್ರ ಬರೆದಳು ಎಂದು ಎಲ್ಲರೆದುರಿಗೆ ಹಾರಾಡಿ ಕೊನೆಗೆ ಪತ್ರವನ್ನ ಚಿಂದಿ ಚಿಂದಿ ಮಾಡಿ ಕಸದ ಬುಟ್ಟಿಗೆ ಎಸೀತೀಯಾ . ಆದರೆ ನಿನ್ನ ಕಣ್ಣೀರು ಮಾತ್ರ ಕಟ್ಟೇಯೊಡೆಯೋಕೆ ಕಾಯ್ತಾ ಇರುತ್ತೆ. ಯಾರು ಇಲ್ಲದ ಸಮಯಾ ನೋಡಿ ಕಸದ ಬುಟ್ಟಿಯಿಂದ ನನ್ನ ಪತ್ರಾನ ಆಯ್ದು ತಂದು ಬಿಕ್ಕಳಿಸಿ ಬಿಕ್ಕಳಿಸಿ ಅಳ್ತೀಯಾ ಅಂತಾ. ಹಾಗೆ ಮಾಡೋಕೆ ಮುಂಚೆ ಇದನ್ನ ಓದು ಪ್ಲೀಸ್ ಇಪ್ಪತ್ತು ವರುಷ ನೀನೆ ಬೆಳೆಸಿದ ನಿನ್ನ ಗೊಂಬೆಗೋಸ್ಕರ .
ಯಾಕಪ್ಪಾ ಈ ನಾಟಕಾ? ಯಾರಿಗಾಗಿ ನಾಟಕಾ? ನಾವು ನಾವಾಗಿ ಇರೋಕೆ ಬಿಡದ ಈ ಸಮಾಜಕ್ಕಾ? ಅಥವಾ ನಮ್ಮನ್ನು ನೆಮ್ಮದಿಯಿಂದ ಇರೋಕೆ ಬಿಡದ ಈ ನೆಂಟರಿಗಾಗಿಯಾ?
ಈ ಇಳಿ ವಯಸಲ್ಲಿ ನಾನು ನಿಂಗೆ ಕೊಡಬಾರದ ನೋವು ಕೊಟ್ಟೇ ಅಂತ ನಿಂಗನ್ನಿಸುತ್ತಿದೆ. ಆದರೆ ನಂಗೆ ಏನನ್ನಿಸುತ್ತಿದೆ ಗೊತ್ತಾ. ಆ ನೋವನ್ನ ನೀನೆ ಮಾಡಿಕೊಂಡಿರೋದು. ನಿನ್ನ ಮಗಳಿಗಿಂತ ಈ ಸಮಾಜಾನೇ ಮುಖ್ಯಾಂತ ನೀನು ತಿಳ್ಕೊಂಡಿರೋದೆ ಇದಕ್ಕೆಲ್ಲಾ ಕಾರಣ.
ಅಪ್ಪಾ ಹೆಣ್ಣು ಅಮ್ಮನ ಹೊಟ್ಟೇಲಿ ಇರೋವರೆಗೂ ಅಮ್ಮಾನೆ ಸರ್ವಸ್ವ ಅಂತ ಅವಳ ಬೆಚ್ಚನೆಯ ಒಡಲಲ್ಲಿ ಹಾಯಾಗಿ ಇರುತ್ತಾಳೆ.ನಂತರ ತಾಯಿ ತನ್ನನ್ನ ಆ ಬೆಚ್ಚಗಿನ ಒಡಲಿಂದ ನೂಕಿಬಿಟ್ಟಳಲ್ಲ ಎಂದು ಅಳುತ್ತಾಳೆ. ನಾನೂ ಅತ್ತಿದ್ದೆ ಆದರೆ ಎತ್ತಿಕೊಳ್ಳಲ್ಲು ನನ್ನ ತಾಯಿ ಇರಲಿಲ್ಲ . ನೀನಿದ್ದೆ . ತಾಯಿಯನ್ನೂ ಮೀರಿಸುವ ಬೆಚ್ಚಗಿನ ಪ್ರೀತಿಯಲ್ಲಿ ನನ್ನನ್ನು ಮುಳುಗಿಸಿದೆ. ದೇವರು ಅಮ್ಮನನ್ನು ಕರೆದುಕೊಂಡೂ ನನಗೆ ಅಮ್ಮನ ಪ್ರೀತಿಯ ನೆನಪೇ ಆಗದಷ್ಟು ಅಗಾಧವಾಗಿ ಮಮತೆ ತೋರಿದ ಅಪ್ಪನನ್ನು ಕೊಟ್ಟ
ಹಾಗೆ ಅಪ್ಪಾ ನಾನೂ ನಿನ್ನ ಬಿಟ್ಟರೆ ಬೇರೆ ಲೋಕವೇ ಇಲ್ಲಾ ಎಂಬಷ್ಟು ನಿನ್ನನ್ನು ಪ್ರೀತಿಸುತ್ತಿದ್ದೆ. ಬದುಕಿನ ಯಾವ ಹಂತದಲ್ಲೂ ಅಮ್ಮನ ಕೊರತೆ ನನ್ನನ್ನು ಕಾಡಲಿಲ್ಲ. ಹುಡುಗಿ ಹೆಣ್ಣಾದ ಘಳಿಗೆಯನ್ನು ಮೊದಲು ಹೇಳುವುದು ಅಮ್ಮನಿಗೆ ಆದರೆ ಆ ವಿಷಯವೂ ಮೊದಲು ನಿನಗೆ ತಿಳಿದಿದ್ದು. ಇಂಟರ್ ನೆಟ್ನಿಂದ ನನಗಾಗಿ ಎಷ್ಟೊಂದು ವಿಷಯಗಳನ್ನು ಸಂಗ್ರಹಿಸಿಕೊಟ್ಟಿದ್ದೆ ನೀನು. ನಾನು ಹೊಟ್ಟೆನೋವು ಎಂದು ಅತ್ತಾಗ ಆ ನೋವು ನಿನ್ನ ಕಣ್ಣಿನಿಂದ ನೀರಾಗಿ ಬರುತ್ತಿತ್ತು. ಅಪ್ಪಾ ಅಪ್ಪಾ ನೀನು ನನಗಾಗಿ ಪಟ್ಟಕಷ್ಟ ನೋವು ನೆನೆಸಿಕೊಂಡರೆ ನಾನು ದೊಡ್ಡ ಅಪರಾಧಿ ಎಂದನಿಸುತ್ತದೆ. ಆದರೆ ಮರುಕ್ಷಣವೇ ನಾನು ಮಾಡಿದ್ದು ತಪ್ಪಲ್ಲ ಎಂದನಿಸಿ ಸಮಾಧಾನ ಮಾಡಿಕೊಳ್ಳುತ್ತೇನೆ
ಅಪ್ಪಾ ನಂಗೆ ನೆನಪಿದೆ ನಾನು ಆವತ್ತು ಹುಡುಗನೊಬ್ಬ ಹಿಂಬಾಲಿಸಿ ಹಾಡು ಹೇಳಿದ ಎಂದಂದ ಮಾತ್ರಕ್ಕೆ ಹುಡುಕಿಕೊಂಡು ಹೋಗಿ ಆತ ಸತ್ತೇ ಎಂದುಕೂಗುವಷ್ಟು ಹೊಡೆದದ್ದು. ಯಾವ ಹುಡುಗರ ನೆರಳೂ ಬೀಳದಂತೆ ನನ್ನನ್ನು ಕಾದಿದ್ದ ನಿನಗೆ ಪಕ್ಕದ ಮನೆಯಲ್ಲಿದ್ದ ಇರ್ಫಾನ್ ಕಾಣಿಸಲಿಲ್ಲ .
ಆದರೆ ಅವ ಕಂಡದ್ದು ನನಗೆ . ನನ್ನನ್ನು ನಿನ್ನಷ್ಟು ಪ್ರೀತಿಸಲೇ ಸಾಧ್ಯವಿಲ್ಲ ಎಂದುಕೊಳ್ಳುತ್ತಿದ್ದ ನನಗೆ ಪ್ರೀತಿ ಬೇರೆ ವಾತ್ಸಲ್ಯ ಬೇರೆ ಎಂದು ಕಲಿಸಿಕೊಟ್ಟ. ಅವನೂ ನನ್ನನ್ನು ಪ್ರಾಣಕ್ಕಿಂತ ಮಿಗಿಲಾಗಿ ಇಷ್ಟ ಪಟ್ಟ .

ಅಪ್ಪಾ ನಾನು ಮಾಡಿದ್ದು ತಪ್ಪಾಗಿರಲಿಲ್ಲ. ನಾನು ಅವನ್ನ ಮದುವೆಯಾಗುತ್ತೇನೆ ಎಂದು ಹೇಳಿದ್ದೇ ನಿನಗೆ ಇನ್ನಿಲ್ಲದ ಕೋಪ ಬಂತು. ಮಗಳು ಮಮಕಾರ ಎಲ್ಲಾ ಮಾಯವಾಯ್ತು. ಥೇಟ್ ಅದೇ ಭೈರಪ್ಪನವರ ಆವರಣದಲ್ಲಿನ ಅಪ್ಪನ ಥರಾ ಕೋಪಿಸಿಕೊಂಡೆ.ಮಗಳು ಸತ್ತೇ ಹೋದಳು ಎಂದು ನನ್ನ ಶ್ರಾದ್ದ ಮಾಡಿದೆ. ಲವ್ ಜಿಹಾದ್ ಎಂದು ನನ್ನನ್ನು ನನ್ನ ಇರ್ಫಾನ್‌ನನ್ನು ಕೋರ್ಟಿಗೆಳೆದೆ . ಕೊನೆಗೆ ನಾನು ನಿನ್ನ ವಿರುದ್ದವಾಗಿ ಮಾತಾಡಲೇ ಬೇಕಿತ್ತು. ಅಪ್ಪಾ ಆಗ ನನಗಾದ ಸಂಕಟ ಈ ಪತ್ರದಲ್ಲಿ ಬರೆಯಲಾಗುವುದಿಲ್ಲ.

ಅಪ್ಪಾ ಲವ್ ಅನ್ನೋದು ಪವಿತ್ರ ಅದನ್ನು ಜಿಹಾದ್ ಜೊತೆ ಒಡಗೂಡಿಸುವ ಕಲ್ಪನೆಯೇ ವಿಚಿತ್ರ ಎಲ್ಲೋ ಯಾರೋ ಒಬ್ಬ ಹಾಗೆ ಮಾಡುತ್ತಾನೆಂದರೆ ಪ್ರತಿಯೊಬ್ಬರೂ ಹಾಗೆಯೇ ಎಂದು ಭಾವಿಸಿ ಅವರನ್ನು ಅಪರಾಧಿಯಂತೆ ಕಾಣುವುದೇಕೆ? ಅಂತಹ ಪ್ರೀತಿ ಪ್ರೀತಿಯೇ ಅಲ್ಲಾ.
ಅಪ್ಪಾ ಇರ್ಫಾನ್ ನಿನ್ನ ಹಾಗು ಸಮಾಜದ ಪಾಲಿಗೆ ಏನೇ ಆಗಿರಬಹುದು. ನನ್ನ ಪಾಲಿಗೆ ಆತ ಕೇವಲ ನನ್ನ ಪ್ರೀತಿಯ ಹುಡುಗ.
ನಿನ್ನನ್ನು ಬಿಟ್ಟು ಬರುವುದು ಬಹಳ ಕಷ್ಟವಾಗಿತ್ತು ಆದರೆ ಇರ್ಫಾನ್‌ನಿಗಾದ ಅವಮಾನ ಅದಕ್ಕಿಂತ ದೊಡ್ಡದಿತ್ತು
ಈಗ ಪತ್ರ ಬರೆದ ಉದ್ದೇಶವೇನೆಂದರೆ

ನಾನೀಗ ಇರ್ಫಾನ್ ಮನೆಯಲ್ಲಿಯೂ ಇಲ್ಲ . ನಮ್ಮನ್ನು ಅಲ್ಲಿ ಸೇರಿಸಲಿಲ್ಲ ಎಂಬುದು ನಿನಗೆ ಚೆನ್ನಾಗಿ ಗೊತ್ತು .

ಸಣ್ಣ ಪುಟ್ಟ ಭಿನ್ನಾಭಿಪ್ರಾಯದ ಹೊರತು ನಾವಿಬ್ಬರೂ ಈಗ ಸುಖವಾಗಿದ್ದೇವೆ ನೀನು ನನ್ನನ್ನು ಪುಟ್ಟ ಗೊಂಬೆ ಎಂದು ಕರೆಯುತ್ತಿದ್ದೆ . ನಿನ್ನ ಪುಟ್ಟ ಗೊಂಬೆ ಮತ್ತೊಂದು ಪುಟ್ಟ ಗೊಂಬೆಯೊಂದಕ್ಕೆ ತಾಯಿಯಾಗಿದ್ದಾಳೆ.
ಈ ನಿನ್ನ ಪುಟ್ಟಗೊಂಬೆಯ ಪುಟ್ಟಿಯನ್ನು ನೋಡುವುದಕ್ಕೆ ಮನಸು ಎಳೆಯುತ್ತಿದ್ದರೂ ನೀನು ಬರುವುದಿಲ್ಲ ಎಂದು ಗೊತ್ತಿದೆ.

ಅಪ್ಪಾ ಒಂದು ತಿಳಿದುಕೋ . ನೀನು ಯಾವ ಸಮಾಜಕ್ಕಾಗಿ ನನ್ನನ್ನು ದೂರ್ ಅಟ್ಟಿದ್ದೀಯೋ ಆ ಸಮಾಜ ನಿನ್ನ ಮಗಳಂತೆ ನಿನಗೆ ಪ್ರೀತಿ ಕೊಡಲು ಸಾಧ್ಯವಿಲ್ಲ . ಪದೇ ಪದೇ ಸಾಧ್ಯವಾದಾಗಲೆಲ್ಲ ನಿನ್ನನ್ನು ಇರಿಯಲು ಕಾಯುತ್ತಿರುತ್ತದೆ. ಆ ಸಮಾಜ ನಿನಗೆ ಬೇಕಾ? ಅಮ್ಮನಂತೂ ಇಂತಹ ಸಮಯದಲ್ಲಿ ಇಲ್ಲಾ ನೀನಾದರೂ ಬರುವೆ ಏನೋ ಎಂದು ನಿನ್ನ ಬರುವಿಕೆಯನ್ನೇ ಕಾಯುತ್ತಿರುವ ಈ ನಿನ್ನಮುದ್ದು ಕಂದಾ ನಿನಗೇ ಬೇಡವಾ?
ನಿನ್ನ ಪುಟ್ಟ ಗೊಂಬೆ
ಶಮಿತಾ

Tuesday, February 9, 2010

ಈ ಬರ್ತ್ ಡೇ ಗಿಫ್ಟ್ ಕೊಡೋಕೆ ಆಗತ್ತಾ ಮಮ್ಮಾ?

"ಅಮ್ಮಾ ನಿನ್ನನ್ನ ಅಮ್ಮಾ ಅಂತ ಕರೆದ್ರೆ ಬೈತೀಯಾ ಮತ್ತೆ ಏನಂತ ಕರೆದ್ರೆ ನಿಂಗೆ ಖುಶಿ ಆಗುತ್ತೆ. ಹಾ ಮಮ್ಮ ಅಂತ ಕರೆದ್ರೆ ಅಲ್ವಾ? ಸರಿ ಮಮ್ಮಾ ನೆನ್ನೆ ನೀನು ನನ್ನ ಹತ್ರ "ವಿನು ನೆನ್ನೆ ನೀನು ಹುಟ್ಟಿ ನಾಳೆಗೆ ೩ ಯಿಯರ್ಸ್ ಆಗುತ್ತೆ ನಿಂಗೇನು ಬೇಕು ಪುಟ್ಟಾ ಅಂತ ಕೇಳಿದೆಯಲ್ಲಾ . ಮಮ್ಮ ನಂಗೆ ಐಸ್ ಕ್ರೀಮ್ ಬೇಡಾ ಚಾಕ್ಲೇಟ್ ಬೇಡಾ, ಡಾಲ್ಸ್ ಬೇಡಾ. ನಂಗೆ ನೀವಿಬ್ರೂ ಬೇಕು ಅಂತಾ ಹೇಳಿಬಿಡೋಣ ಅನ್ನಿಸ್ತು . ಆದರೆ ನಿಂಗೆ ಬೇಜಾರಾಗುತ್ತೆ ಅಂತಾ ನಾನೇನೂ ಹೇಳಲಿಲ್ಲ ಮಮ್ಮಾ. ಇನ್ನೂ ನಂಗೇನೇನೋ ಅನ್ನಿಸ್ತಾ ಇದೆ ಎಲಾ ಹೇಳಿ ಬಿಡ್ತೀನಿ ಅಳ್ತಾನೆ . ಅರ್ಥ ಆದರೆ ಮಾಡಿಕೋ ಇಲ್ಲಾಂದ್ರೆ ಯಾವಾಗಲೂ ಮಾಡೋ ಹಾಗೆ ಆ ಕೆಲ್ಸದ ನ್ಯಾನಿ ಹತ್ರ ಕೊಟ್ಟು ಕಳಿಸಿಬಿಡು ನನ್ನನ್ನ

ಮಮ್ಮಾ ನಾನು ಹುಟ್ಟಿದಾಗ ಸುತ್ತಾ ಮುತ್ತಾ ನೋಡಿದೆ ಬಿಳಿ ಬಟ್ಟೇ ಹಾಕೊಂಡಿದ್ದವರಿಬ್ಬರೂ ನನ್ನನ್ನ ಎತ್ತಿ ನೋಡಿ ಮೇಲ್ ಬೇಬಿ ಅಂದರು. ನಂಗೆ ಅವರ ಮಾತು ಬೇಕಿರಲಿಲ್ಲ . ನಂಗೆ ನೀನು ಬೇಕಿತ್ತು. ಆದರೆ ನಿಂಗೆ ಸಿಸೇರಿಯನ್ ಮಾಡಿಬಿಟ್ಟಿದ್ರಲ್ಲಾ ಹಾಗಾಗಿ ನನ್ನನ್ನ ದೂರಾನೇ ಇಟ್ಟುಬಿಟ್ರು. ಹುಟ್ಟಿದ ತಕ್ಶಣ ಅಮ್ಮನ ಹಾಲನ್ನು ಹೀರುವ ಭಾಗ್ಯ ಸಿಗಲಿಲ್ಲ. ಆ ಎರೆಡು ದಿನಾ ನಾನು ಅಮ್ಮಾ ಅಮ್ಮ ಅಂತ ಅಳ್ತಾನೆ ಇದ್ದೆ . ಅಪ್ಪ ಬಂದು ಒಮ್ಮೆ ನನ್ನನ್ನು ನೋಡಿ ನೈಸ್ ಬೇಬಿ ಅಂದು ಕೆನ್ನೆ ಜಿಗುಟಿ ಸಾರಿ ಡಿಯರ್ ಇ ಹ್ಯಾವ್ ಲಾಟ್ಸ್ ಆಫ್ ವರ್ಕ್ ಅಂತ ಹೇಳಿ ಹೋದದ್ದಷ್ಟೇ ಆಮೇಲೆ ಕಾಣಲೇ ಇಲ್ಲ. ನಂಗೆ ನರ್ಸ್ ಹಾಕಿದ ಮೇಲು ಹಾಲು ಕುಡಿಯೋದು ಅಮ್ಮನ ಪಕ್ಕ ಸಿಗುತ್ತಾ ಅಂತ ನೋಡೋದು ಅಳೋದು . ನಾನು ಅಳ್ತಾನೆ ಇದ್ದೆ. ಇದೊಂದು ಸುಮ್ನೆ ಅಳ್ತಾನೆ ಇರುತ್ತೆ ಅಂತ ಮತ್ತೆ ಮತ್ತೆ ಮೇಲು ಹಾಲು ಹಾಕೋಳು. ಅವಳಿಗೇನು ಗೊತ್ತು ನಂಗೆ ಅಮ್ಮನ ಬೆಚ್ಚನೆಯ ಪಕ್ಕ , ಅಮ್ಮನ ಹಾಲು ಬೇಕು ಅಂತ.

ಮಮ್ಮಾ ಕೊನೆಗೂ ಆ ದಿನಾ ಬಂದೇ ಬಿಟ್ಟಿತು. ನನ್ನ ಸೌಭಾಗ್ಯದ ದಿನ . ನನ್ನನ್ನ ನಿನ್ನ ಪಕ್ಕ ಮಲಗಿಸಿದರು. ನಾನಂತೂ ಸಂತಸದಲ್ಲಿ ತೇಲಾಡಿದೆ. ನೀನೂ ನನ್ನನ್ನ ಮುದ್ದಾಡಿದೆ .

ಆ ಮೂರು ತಿಂಗಳು ನಾನು ನಿನ್ನ ಬಳಿ ಇದ್ದುದ್ದೇ ನನ್ನ ಲಾಭ. ಮೂರನೇ ತಿಂಗಳಾಗುತ್ತಿದ್ದ ಹಾಗೆ ಎಂದಿನಂತೆ ನಿನ್ನ ಬಳಿ ಮಲಗಿ ಹಾಲನ್ನು ಸವಿಯುವ ಕನಸು ಕಾಣುತ್ತಿದ್ದ ನನ್ನ ಬಾಯಿಗೆ ಏನೋ ಬೇರೆಯ ವಸ್ತುವಿನ ಸ್ಪರ್ಷ ವಾಯ್ತು ನೋಡಿದರೆ ಬಾಟಲಿ ಹಾಲು . ಮಮ್ಮಾ ಆಗಲ್ಲಾ ಆಗಲ್ಲಾ ಎಂದೂ ನಾನು ಕಿರುಚಿದ್ದು ನಿನಗೆ ಕೇಳಿಸಲೇ ಇಲ್ಲವೇನೋ ಎನ್ನುವಂತೆ ನೀನು ಕನ್ನಡಿ ಮುಂದೆ ರೆಡಿಯಾಗುತ್ತಿದ್ದೆ.

"ಚಿನ್ನು ಬಾಯ್. ಟುಡೇ ಆನ್ವಾರ್ಡ್ಸ್ ಐ ಹ್ಯಾವ್ ಟು ಗೋ ಟು ವರ್ಕ್" ಎಂದು ಮುತ್ತು ಕೊಟ್ಟು ಹೋಗೇ ಬಿಟ್ಟೇ. ನನ್ನ ಅಳು ಕೇಳಲೇ ಇಲ್ಲ ನಿಂಗೆ

ಮಮ್ಮಾ ಅವತ್ತ ನಾನೆಷ್ಟುಅತ್ತೆ ಗೊತ್ತಾ. ಆಗಲೇ ಈ ನ್ಯಾನಿ ಮನೆಗೆ ಬಂದದ್ದು . ನನ್ನನ್ನ್ ನೋಡಿಕೊಳ್ಳೋಕೆ. ಮಮ್ಮಾ ನಾನು ನಿಜ ಹೇಳ್ತೀನಿ ನಂಗೆ ಎಷ್ಟಿ ಬೇಜಾರಾಯ್ತು ಅಂದರೆ ಆವತ್ತೆಲ್ಲಾ ಅಳ್ತಾನೆ ಇದ್ದೆ ನೀನಿದ್ದಿದ್ರೆ ನನ್ನನ್ನ ಎತ್ತ್ಕೋತಿದ್ದೆ ಮುದ್ದಾಡ್ತಿದೆ ಆದರೆ ನ್ಯಾನಿ ಬೈಕೊಂಡು ನನ್ನನ್ನ ಒಂದು ತೊಟ್ಟಿಲಲ್ಲಿ ಹಾಕಿದಳು. ಆವತ್ತಿಂದ ನಂಗೆ ನಿನ್ನ ಹಾಲು ಸಿಗಲಿಲ್ಲಾಮ್ಮ

ಹಿಂಗೆ ನಾನು ನಿನ್ನನ್ನ ತುಂಬಾ ಮಿಸ್ ಮಾಡ್ಕೋತಿದ್ದೆ. ನೀನು ಬರೋ ಸಮಯಕ್ಕೆ ನಂಗೆ ಅತ್ತೂ ಅತ್ತೂ ನಿದ್ರೆ ಬಂದಿರ್ತಿತ್ತು. ಯಾವಾಗಲೋ ಎಚ್ಚರ ಆಗಿ ನಿನ್ನ ಬಳಿ ಬೆಚ್ಚಗೆ ಮಲಗಬೇಕು ಅಂತನ್ನಿಸಿ ನಿನಗಾಗಿ ತಡಕಾಡ್ತಾ ಇದ್ದಾಗ ನೀನು ಪಪ್ಪಾ ಹತ್ರ ಮಲಗಿರ್ತಿದ್ದೆ .ಅತ್ತರೆ ಬೈಕೊಂಡು ಬಂದು ಮಲಗ್ತಿದ್ದೆ. ಹೇಗೋ ಹೊಂದ್ಕೊಂಡುಬಿಟ್ಟೆ. ನಾನು ಮಮ್ಮಾ ಅಂದದ್ದೂನಿಂಗೆ ಗೊತ್ತಾಗಿರಲಿಲ್ಲ.

ನಂಗೆ ನಡೆಯೋಕೆ ಬಂದ ದಿನ ನಾನು ನಡೆದದ್ದನ್ನ ನ್ಯಾನಿ ನಿಂಗೆ ಫೋನ್ ಮಾಡಿ ಹೇಳಿದಳು. ಆವತ್ತಾದ್ರೂ ನೀನು ಬೇಗ ಬರ್ತೀಯಾ ಅನ್ಕೊಂಡೆ.
ಊಹೂ ನೀನು ಬರಲೇ ಇಲ್ಲಾ ಬೇಗ. ಲೇಟಾಗಿ ಬಂದು ಸಾರಿ ಬೇಬಿ ಎಲ್ಲಾ ನಿಂಗೋಸ್ಕರ ಚಿನ್ನೂ ಅಂತ ಮುತ್ತು ಕೊಟ್ಟು ಮಲಗೇ ಬಿಟ್ಟೆ.
ಮಮ್ಮಾ ನಂಗೆ ನೀನು ಬೇಕು .ನಂಗೋಸ್ಕರ ಏನು ಮಾಡ್ಟೀಯಾ ನೀನು . ನಾನು ಬಯಸಿದಾಗ ನೀನಿರಬೇಕು. ಅದಿಲ್ಲವಾದರೆ ನೀನೇನು ಮಾಡಿದರೂ ನಂಗೆ ಪ್ರಯೋಜನ ಇಲ್ಲಾಮ್ಮ
ಅದಾದ ಮೇಲೆ ನನ್ನ ಪ್ಲೇ ಹೋಮ್‌ಗೆ ಸೇರಿಸಿದೆ.
ಮಮ್ಮಾ ಅಲ್ಲಿ ಎಲ್ಲರ ಅಮ್ಮಾನೂ ಬಂದು ಮಕ್ಕಳಿಗೆ ಮಮ್ಮು ತಿನ್ನಿಸಿ ಹೋಗ್ತಾರೆ. ಆದರೆ ನೀನು ಮಾತ್ರ ಬರೋದಿಲ್ಲ. ಮದ್ಯಾಹ್ನ ಎಲ್ಲರ ಮಮ್ಮಾನೂ ಬಂದು ಅವರವರ ಪಾಪುಗಳನ್ನು ಕರ್ಕೊಂಡು ಹೋಗ್ತಾರೆ ಆದರೂ ನೀನು ಮಾತ್ರ ಬರೋಲ್ಲಾ.
ನನ್ನ ಸ್ಕೂಲ್ ಆಯಾ ಕರ್ಕೊಂಡು ಬರ್ತಾಳೆ .
ನಮ್ಮನೆ ಎದುರಿಗೆ ಮನೆ ಕಟ್ತಾ ಇದ್ದಾರಲ್ಲಾ ಮಮ್ಮಾ ಅಲ್ಲಿ ಒಂದು ಪಾಪು ಇದೆ. ಅದು ಕೂಲಿಯವರ ಪಾಪು ಇರಬೇಕು .ಅದೂ ಅಮ್ಮನ ಹಾಗೆ ಮೈಗೆ ಮುಖಕ್ಕೆ ಮಣ್ಣು ಮೆತ್ಕೊಂಡಿರುತ್ತೆ.
ಆದರೂ ಅದರಮ್ಮ ಅದನ್ನು ಎತ್ತಿಕೊಂಡು ಮುತ್ತು ಕೊಟ್ಟು ತನ್ನ ಜೊತೇನೆ ಇಟ್ಟುಕೊಳ್ತಾಳೆ. ಅದಕ್ಕೆ ಮುದ್ದು ಮಾಡಿ ಊಟ ಮಾಡಿಸ್ತಾಳೆ . ಹಾಡು ಹೇಳ್ತಾಳೆ, ಲಾಲಿ ಲಾಲಿ ಅಂತಾಳೆ . ನಂಗೆ ತುಂಬಾ ಬೇಜಾರಾಗುತ್ತೆ ಮಮ್ಮ ನೀನು ಮಾತ್ರ ನಂಜೊತೆ ಇರಲ್ಲಾ.
ನಮ್ಮ ಮನೆ ಮುಂದೆ ಇರೋ ಮರದಲ್ಲಿ ಗುಬ್ಬಚ್ಚಿ ಯಾವಾಗಲೂ ತನ್ನ ಮರೀ ಜೊತೇನೆ ಇರುತ್ತೆ. ಕೆಳಗಡೆ ಇರೋ ನಾಯಿಗೂ ಪಾಪುಇದೆ. ಅದೂ ಯಾವಾಗಲೂ ಪಾಪೂ ಜೊತೇನೆ ಇರುತ್ತೆ. ಆದರೆ ನೀನ್ಮಾತ್ರ ನಿನ್ನ ಪಾಪು ಜೊತೆ ಇರಲ್ಲಾಮ್ಮ. ಯಾಕಮ್ಮಾ?
ಸ್ಕೂಲಿಂದ ಬಂದ ತಕ್ಷಣ ನ್ಯಾನಿ ಏನೋ ತಿನ್ನಿಸ್ತಾಳೆ ಆದರೆ ನೀನು ತೋರೋ ಥರಾ ಪ್ರೀತಿ ಇರಲ್ಲಾ ಅದು ಬರೀ ಮಮ್ಮು ಆಗಿರುತ್ತೆ. ಆಮೇಲೆ ಮಲಗಿಸ್ತಾಳೆ ಇಲ್ಲಾ ಟಿವಿ ನೋಡು ಅಂತಾಳೆ. ಆದರೆ ನಿನ್ನ ಜೊತೆ ಇರೋ ಅಂತಾ ಫೀಲಿಂಗ್ ಇರೋದಿಲ್ಲಾಮ್ಮ.ರಾತ್ರಿ ಮಮ್ಮು ತಿನ್ನಿಸಿ ಮಲಗಿಸ್ತಾಳೆ ಹಾಡಿಲ್ಲಾ ಮಾತಿಲ್ಲ. ನಾನು ಮಲಗಿರ್ತೀನಿ. ನೀನು ಬರ್ತೀಯ ಬೆಳಗ್ಗೆ ನಾನು ಎದ್ದು ನೋಡೋ ಅಷ್ಟ್ರಲ್ಲಿ ಆಫೀಸಿಗೆ ಹೋಗೋಕೆ ರೆಡಿಯಾಗಿರ್ತೀಯಾ.
ಹೋದಸಲ ಅಜ್ಜಿ ಬಂದಾಗ ಪುಣ್ಯ ಕೋಟಿ ಹಾಡು ಹೇಳಿಕೊಟ್ಟಿದ್ದರು
ಆ ಕರು ಅಮ್ಮನ್ನ ಕೇಳುತ್ತಾಲ್ಲಾ ಹಾಗೆ ನಾನು ನಿನ್ನನ್ನ ಕೇಳ್ತೀನಿ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಆಡಲಮ್ಮ
ಆರು ನನಗೆ ಹಿತವರು

ನಂಗೆ ಗೊಂಬೆ ಬೇಡ ಚಾಕಲೇಟ್ ಬೇಡ ನಂಗೆ ಬಿಸ್ಕತ್ ಬೇಡ ಹೊಸ ಬಟ್ಟೇ ಬೇಡ, ನಂಗೆ ನೀನು ನನ್ನ ಜೊತೇನೆ ಇದ್ದರೆ ಸಾಕು . ಅದೇ ನನ್ನ ಬರ್ತಡೇ ಗಿಫ್ಟ್ . ಇದನ್ನ ನಾನು ಕೇಳ್ತಾ ಇದ್ದೀನಿ ಕೊಡೋದಿಕ್ಕೆ ಆಗತ್ತಾ ಅಮ್ಮಾ?

Wednesday, January 13, 2010

ಗಮ್ಯ ಹುಡುಕುತ್ತಾ ಐದನೆಯ ಕಂತು

ಕಣ್ಣಮ್ಮಾ ಎದ್ದು ಕೂರಲೂ ಕಷ್ಟ ಪಡುತ್ತಿತ್ತು. ಹಾಗೂ ಹೀಗೂ ಎದ್ದು ಕೂತು ತನ್ನ್ ಪ್ರವರ ಹೇಳಲಾರಂಭಿಸಿತು. ಕನ್ನಡದಲ್ಲಿಯೂ ಸ್ವಲ್ಪ ಮಾತಾಡುತ್ತಿತ್ತು .
" ಶಾಲು ನನ್ನದೇ ಇದನ್ನ ಪೊಣ್ಣಿಗೆ ಕೊಟ್ಟಿದ್ದೆ"
"ಯಾರಿಗೆ " ರೆಡ್ಡಿಯವರು ಪ್ರಶ್ನಿಸಿದರು
ಕಣ್ಣಮ್ಮಾ ನೆನಪು ಮಾಡಿಕೊಳ್ಳಲಾರಂಭಿಸಿತು. ವಯಸಿನ ಪ್ರಭಾವದಿಂದ ನೆನಪು ಕೈ ಕೊಡುತ್ತಿತ್ತು ಮಾತುಗಳು ಸರಿಯಾಗಿ ಬರುತ್ತಿರಲಿಲ್ಲ. ಅವಳ ಮಾತುಗಳನ್ನು ಪೋಣಿಸಿ ಹೆಣೆಯಬೇಕಾಯಿತು ರೆಡ್ದಿಯವರಿಗೆ
ಕಣ್ಣಮ್ಮ ಆಗಷ್ಟೇ ಬೆಂಗಳೂರಿಗೆ ಬಂದಿದ್ದಳು. ಅದು ದೇವನ ಹಳ್ಳಿಯ ಬಳಿ ಇರಬೇಕು. ಇನ್ನೂ ಕಾಡಿನಂತಿತ್ತು. ಆಗಾಕೆಗೆ ಐವತ್ತಾರು ವರ್ಷವಿರಬಹುದೇನೋ. ಆಗ ಚೆನ್ನಾಗಿಯೇ ಇದ್ದವರು .ಗಂಡ ಸತ್ತು ಹತ್ತು ವರ್ಷಗಳಾಗಿದವು. ಮಗನಿಗೂ ಮದುವೆಯಾಗಿತ್ತು. ಮಗ ಗಾರೆ ಕೆಲ್ಸದ ಮೇಸ್ತ್ರಿ ಆಗಿದ್ದ . ದೇವನ ಹಳ್ಳಿಯ ಅಪಾರ್ಟ್ಮೆಂಟ್‌ನ ಕಟ್ಟುವುದಕ್ಕೆ ಕೂಲಿ ಸಿಕ್ಕಿದುದರಿಂದ ಇಲ್ಲಿಗೆ ವಲಸೆ ಬಂದಿದ್ದರು. ತಿನ್ನುವುದಕ್ಕೆ ಉಡುವುದಕ್ಕೆ ಅಂತಹ ತೊಂದರೆ ಏನೂ ಇರಲಿಲ್ಲ. ಆ ಅಪಾರ್ಟ್ಮ್ಮೆಂಟ್ ಓನರ್ ತಮ್ಮದೇ ಜಾಗದಲ್ಲಿ ಮೂರ್ನಾಲ್ಕು ಮನೆಗಳನ್ನುಕಟ್ಟಿದ್ದರು. ಬಾಡಿಗೆ ಕಡಿಮೆ ಎಂದು ಇಲ್ಲಿಯೇ ಬಂದು ನೆಲೆಸಿದ್ದರು
ಅವರ ಮನೆಯ ಪಕ್ಕಕ್ಕೆ ಹುಡುಗಿ ಬಂದಿದ್ದಳು. ಚೆಲುವಿನ ಖನಿ. ಅಪ್ಪಟ ಬ್ರಾಹ್ಮಣ ಮನೆತನದ ಹುಡುಗಿ. ಹೆಸರು ವೀಣಾ . ಮಾತು ಮೃದು.ಗಂಡನ ಜೊತೆಯಲ್ಲಿ ಇದ್ದಳು. ಗಂಡನ ಹೆಸರೇನೋ ಸೀತಾರಾಮನೆಂದಿರಬೇಕು. ಹುಡುಗಿ ಹದಿನೆಂಟನ್ನೂ ತಲುಪಿರಲಿಲ್ಲ. ಗಂಡನೋ ಕೋಪಿಷ್ಟ . ಪ್ರತಿಯೊಂದಕ್ಕೂ ಹಾರಾಡುತ್ತಿದ್ದ. ಜೊತೆಗೆ ವೀಣಾಗೆ ಆಗಾಗ ಹೊಡೆಯುತ್ತಿದ್ದ. ಇಷ್ಟ ಬಂದರೆ ಮನೆಗೆ ಬರುತ್ತಿದ್ದ ಇಲ್ಲವಾದಲ್ಲಿ ಅದೆಲ್ಲಿ ಹೋಗುತ್ತಿದ್ದನೋ ಗೊತ್ತಿರಲಿಲ್ಲ. ಹಾಗೆಂದು ಕೆಲಸ ಎಂದೇನೂ ಇರಲಿಲ್ಲ. ವೀಣಾ ಮಾತ್ರ ಹುಳಿ ಪುಡಿ, ಚಕ್ಕುಲಿ ಚಟ್ಣಿ ಪುಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದಳು .ಇಂತಹ ಗಂಡಿಗೆ ಇಂತಾ ರತ್ನ ಹೇಗೆ ಸಿಕ್ಕಿತು ಎಂಬುದು ಮಾತ್ರ ಕಣ್ಣಮ್ಮನಿಗೆ ತಿಳಿದಿರಲಿಲ್ಲ. ಒಟ್ತಿನಲ್ಲಿ ಪಾಪದ ಹುಡುಗಿಯಾಗಿದ್ದಳು. ಕಣ್ಣಮನಿಗೆ ಭಾಷೆ ಬಾರದ ಕಾರಣ ಹೆಚ್ಚು ವಿಷಯ ತಿಳಿಯಲೂ ಸಾಧ್ಯವಿರಲಿಲ್ಲ
ಒಮ್ಮೆ ಅವರ ಮನೆಯಲ್ಲಿ ಗಲಾಟೆ ಕೇಳಿಸುತ್ತಿತ್ತು. ವೀಣಾಳ ಆಕ್ರಂದನ ಕೇಳಿಸುತ್ತಿದ್ದುದರಿಂದ . ಸುತ್ತ ಮುತ್ತಲಿದ್ದ ಜನರೆಲ್ಲರೂ ಅವಳ ಮನೆಯತ್ತ ಧಾವಿಸಿದರು.
ಸೀತಾರಾಮ ವೀಣಾಗೆ ದನಕ್ಕೆ ಬಡಿದಂತೆ ಬಡೆಯುತ್ತಿದ್ದ ಎಂಬುದು ತೆರೆದ ಕಿಟಕಿಯಿಂದ ಕಾಣಿಸುತ್ತಿತ್ತು. ಸುತ್ತ ನೆರೆದಿದ್ದ ಜನರಲ್ಲಿಯೇ ಒಬ್ಬಳು ಅವನಿಗೆ ಚೆನ್ನಾಗಿ ದಬಾಯಿಸಿದಾಗ ಬಾಗಿಲು ತೆರೆದ.
ವೀಣಾ ಹೆಂಗಸಿನ ಬಳಿ ಏನೋ ಹೇಳಿಕೊಂಡು ಅತ್ತಳು. ಅದರಲ್ಲಿ ಕಣ್ಣಮ್ಮನಿಗೆ ಅರಿವಾಗಿದ್ದು ವೀಣಾ ಬಸುರಿ ಎಂಬುದು ಮಾತ್ರ.
ಏನಾಗಿದೆ ಯಾಕೆ ಎಂದೇನೂ ತಿಳಿಯಲಿಲ್ಲ. ಗಂಡನಿಗೆ ಮಗು ಇಷ್ಟವಿಲ್ಲವೇನೋ ಎಂದನಿಸಿತ್ತು.
ಅದಾದ ಮೇಲೂ ಹುಡುಗಿಯ ಕೋಟಲೆ ತಪ್ಪಿರಲಿಲ್ಲ.
ಗರ್ಭಿಣಿ ಹೆಂಗಸು ಅದೆಷ್ಟೋ ದೂರ ದೂರ ನಡೆದು ಹುಳಿ ಪುಡಿ ಚಟ್ನಿ ಪುಡಿ ಹಪ್ಪಳ ಇವುಗಳನ್ನುಮಾರಿ ಬರುತ್ತಿದ್ದುದನ್ನ ನೋಡಿ ಎಷ್ಟೋ ಬಾರಿ ಕಣ್ಣಮ್ಮ ಬೇಜಾರು ಮಾಡಿಕೊಳ್ಳುತ್ತಿದ್ದಳು. ಆದರೂ ಅವರಿಬ್ಬರ ನಡುವೆ ಯಾವುದೇ ಸಂವಹನ ಸಾಧ್ಯವಾಗಿರಲಿಲ್ಲ. ಭಾಷೆ ಬರುತ್ತಿರರಲಿಲ್ಲವಾದ್ದರಿಂದ ಬರೀ ಪರಿಚಯದ ನಗುವಿನ ವಿನಿಮಯವಾಗುತ್ತಿತ್ತು. ಅವಳ ಹೊಟ್ಟೆ ದಿನೇ ದಿನೇ ಉಬ್ಬುತ್ತಿತ್ತು
ಅದೊಮ್ಮೆ ರಾತ್ರಿ ಎಂಟು ಘಂಟೆಯಾಗಿರಬಹುದು . ಜೋರು ಮಳೆಯಾಗುತ್ತಿತ್ತು. ಕೆಲಸಕ್ಕೆ ಹೋದ ಮಗ ಇನ್ನೂ ಬಂದಿರಲಿಲ್ಲ. ಸೊಸೆ ಹೆರಿಗೆಗೆಂದು ಊರಿಗೆ ಹೋಗಿದ್ದಳು.
ಯಾರೋ ಬಾಗಿಲು ಬಡಿದದ್ದು ಕೇಳಿಸಿತು
ಯಾರೆಂದು ತೆಗೆದರೆ ವೀಣಾ
ನೋವು ಅವಳ ಮುಖದಲ್ಲಿ ಕಾಣುತ್ತಿತ್ತು ಹೆರಿಗೆ ನೋವು ಶುರುವಾಗಿತ್ತು. ನರಳುತ್ತಿದ್ದಳು
ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಕಣ್ಣಮ್ಮ ಅವಳ ಹೆರಿಗೆಗೆ ಸಿದ್ದರಾದರು. ಸುಮಾರು ಹೊತ್ತಿನ ನಂತರ ಅವಳು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಮಗುವನ್ನು ಸ್ವಚ್ಚ ಮಾಡಿದ ನಂತರ . ಮಗುವಿಗೆ ಬಟ್ಟೆಯೂ ಇರಲಿಲ್ಲ.
ಕಣ್ಣಮ್ಮ ಮುಂದಿನದನ್ನು ಯೋಚಿಸಲಿಲ್ಲ. ತನ್ನ ಗಂಡನ ಏಕೈಕ ಕೊಡುಗೆಯಾದ ದುಬಾರಿ ಶಾಲನ್ನೇ ಮಗುವಿಗೆ ಸುತ್ತಿದಳು. ಪ್ರಜ್ನೆ ಬಂದ ನಂತರ ವೀಣ ಕೇವಲ ಕೈ ಮುಗಿದಳು.ಮಗುವನ್ನು ನೋಡುತ್ತಿದ್ದಂತೆ ಅಳಲಾರಂಭಿಸಿದಳು. ಅವ್ಯಕ್ತ ಭಯ ಅವಳ ಮುಖದಲ್ಲಿ ಕಾಣತೊಡಗಿತು. ಕಣ್ಣಮ್ಮನಿಗೆ ಮತ್ತೊಮ್ಮೆ ವಂದಿಸಿ ಹೋಗಲು ಸಿದ್ದಳಾದಳು. ಇನ್ನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೋ ಎಂದು ಹೇಳಿದ ಕಣ್ಣಮ್ಮನಿಗೆ ಇಲ್ಲವೆಂಬಂತೆ ಹೇಳಿ ಮಗುವನ್ನು ಎತ್ತಿಕೊಂಡು ಹೊರಗಡೆ ಬಂದಳು. ಕಣ್ಣಮ್ಮ ನೋಡು ನೋಡುತ್ತಿದ್ದಂತೆ ತನ್ನ ಮನೆಗೆ ಹೋಗದೆ ಮಳೆಯಲ್ಲಿಯೇ ಎಲ್ಲೋ ಮರೆಯಾಗಿ ಹೋದಳು ವೀಣಾ .ಎಲ್ಲಿಗೆ ಹೋದಳೆಂಬುದು ತಿಳಿಯಲಿಲ್ಲ. ಯಾರಿಗಾದರೂ ಹೇಳೋಣವೆಂದರೆ ಮನೆಗಳು ಕೊಂಚ ದೂರದಲ್ಲಿದ್ದವು . ಏನಾಗುತ್ತಿದೆ ಎಂಬುದೂ ತಿಳಿಯಲಿಲ್ಲ.
ಮಾರನೆ ದಿನ ಬಂದ ಅವಳ ಗಂಡ ಸೀತಾರಾಮ ಬಂದವನೇ ಹುಚ್ಚನಂತೆ ಮನೆಯನ್ನೆಲ್ಲಾ ಜಾಲಾಡಿದ.
ಅಲ್ಲಿ ಇಲ್ಲಿ ಹುಡುಕಿಕೊಂಡು ಬಂದವನೇ ಕಣ್ಣಮ್ಮನ ಮನೆ ಬಾಗಿಲು ಬಡಿದ. ಕಣ್ಣಮ್ಮನ ಮಗನನ್ನು ತನ್ನ ಹೆಂಡತಿಯ ಬಗ್ಗೆ ವಿಚಾರಿಸಿದ.
ಕಣ್ಣಮ್ಮ ವೀಣಾಗೆ ಹೆರಿಗೆ ಆದುದನ್ನೂ ಅವಳು ಎಲ್ಲೋ ಹೋದುದನ್ನೂ ಹೇಳಿದಳು.
ಸೀತಾರಾಮ ಯಾವ ಮಗುಎಂದು ಕೇಳಿದ
ಪೊಣ್ಣುಕೊಳಂದು ಎಂದುತ್ತರಿಸಿದಳು
ಅವನ ಮುಖ ಇನ್ನೂ ಉರಿಯಿತು. ಹಾ ಹೂ ಎಂದುಕೊಂಡು ವೀಣ ಹೋದಳೆಂದು ಕಣ್ಣಮ್ಮ ಹೇಳಿದ ದಿಕ್ಕಿಗೆ ಹೊರಟು ಹೋದ.
ಅಷ್ಟೇ ಅವರು ನಂತರ ಬರಲೇ ಇಲ್ಲ ಅವರ ಮನೆ ಹಾಗೆ ಖಾಲಿಯೇ ಬಿದ್ದಿತ್ತು. ಅದಾದ ನಂತರ ಅಪಾರ್ಟ್ಮೆಂಟ್ನಲ್ಲಿ ಗಾರೆ ಕೆಲ್ಸ ಮುಗಿದುದರಿಂದ ಕಣ್ಣಮ್ಮ ಮನೆ ಬಿಟ್ಟು ಬೇರೆಡೆ ಬಂದರು. ಆಮೇಲಾನಾಯ್ತೋ ಗೊತ್ತಿಲ್ಲ.
ಕಣ್ಣಮ್ಮ ನಿಟ್ಟುಸಿರಿಟ್ಟಳು. ಅವಳ ಕಣ್ಣಲ್ಲಿ ನೀರು ತುಂಬಿತ್ತು. ಹೇಳುತ್ತಾ ಹಾಗೆ ಒಮ್ಮೆ ಸ್ವಾತಿಯತ್ತ ತಿರುಗಿದಳು.
"ಆಮ ಇದೇ ಮಾರಿ ಆ ಪೊಣ್ಣು ಇತ್ತು" ಸ್ವಾತಿಯತ್ತ ಕೈ ತೋರಿಸಿ ಹೇಳಿದಳು
ಸ್ವಾತಿ ದಿಗ್ನ್ರಾಂತಳಾಗಿದ್ದಳು. ಪದೇ ಪದೇ ನಿಗೂಡವಾಗುತ್ತಿದೆಯಲ್ಲ ಎಂದು. ಜೊತೆಗೆ ಆ ವೀಣಾ ತನ್ನ ತಾಯಿ ಇರಬಹುದೇ ಎಂದು ಯೋಚಿಸುತ್ತಿದ್ದಂತೆಯೇ ಕಣ್ಣಮ್ಮ ಹೇಳಿದ ಮಾತು ಗಲಿಬಿಲಿಯಾಗುವಂತೆ ಮಾಡಿತು.
"ಏನು" ಹುಬ್ಬುಗಳೆರೆಡನ್ನು ಎತ್ತಿ ಕಣ್ ರೆಪ್ಪೆಗಳನ್ನು ಒಮ್ಮೆ ಬಡಿದು ಕೇಳಿದಳು.
"ಆ ಇದೇ ಪೊಣ್ಣುತ್ತಾ ಆ ಕೊಳಂದು" ಮತ್ತೆ ತಮಿಳಿನಲ್ಲಿ ಹೇಳಿದಳು
ರೆಡ್ಡಿಯವರು ವಿವರಿಸಿದರು
"ಅ ವೀಣಾ ನಿನ್ನ ಹಾಗೆ ಇದ್ದಳಂತೆ. ಹಾಗೆ ನಿನ್ನ ಕಣ್ಣೂ ಸಹಾ ಹಾಗೆಯೇ ವೀಣಾಳ ಕಣ್ಣಿನಂತೆ ಇದೆ . ಅದಕ್ಕೆ ಆ ವೀಣಾ ಮಗು ನೀನೆ ಎನ್ನುತ್ತಿದ್ದಾಳೇ"
ಸ್ವಾತಿಗೆ ಉಸಿರು ಒಮ್ಮೆ ಒಳ ಹೋದಂತಾಗಿ ಮೇಲೆಳೆದು ಕೊಂಡಳು.

ಅವಳು ಹುಡುಕುತ್ತಿದ್ದ ಅವಳ ತಾಯಿಯ ಅಸ್ತಿತ್ವ ಇಂದಿಗೆ ಸಿಕ್ಕಿತ್ತು.

ಆದರೆ ತನ್ನ ತಾಯಿ ಅನುಭವಿಸಿದ ವೇದನೆ ತೊಂದರೆ ಅವಳ ನೋವು ನೆನೆಸಿಕೊಳ್ಳುತ್ತಿದ್ದಂತೆ ಕಣ್ಣಾಲಿ ತುಂಬಿ ಬಂತು . ಅಂತಹ ಕಷ್ಟವೇನಿತ್ತು ಆಕೆಗೆ ಹುಟ್ಟಿದ ಮಗುವನ್ನು ಅದರ ತಂದೆಗೆ ತೋರಿಸಲು ಸಾಧ್ಯವಿಲ್ಲದಿದ್ದ ಕಾರಣ ಏನಿದ್ದೀತು. ಎರೆಡು ವರ್ಷದಲ್ಲಿ ಸ್ವಾತಿಯ ಮನಸು ವಯಸಿಗೆ ಮೀರಿ ಯೋಚನೆ ಮಾಡಲಾರಂಭಿಸಿತ್ತು.


"ಮಾವಾ . ಅವರಿದ್ದುದ್ದು ಎಲ್ಲಿ ಅಂತ ಕೇಳ್ತೀರಾ? ಸರಿಯಾದ ವಿಳಾಸ?" ಶಿವು ರೆಡ್ಡಿಯವರನ್ನು ಕೇಳಿದ.

ಮುದುಕಿ ನೆನಪಿಸಿಕೊಳ್ಳಲಾರಂಭಿಸಿತು. ತಲೆ ಕೆರೆದುಕೊಂಡಿತು . ಉತ್ತರಿಸಲಾಗಲಿಲ್ಲ.
"ಅದು ಎನಕ್ಕೆ ಮರೆತುಹೋಗಿದೆ . "ಎಂದಿತು
"ನಿಮ್ಮ ಮಗನಿಗೆ ಗೊತ್ತಿದೆ ಅಂದ್ಕೋತೀನಿ" ರೆಡ್ಡಿಯವರೇ ಮುಂದುವರೆದರು
ಮುದುಕಿಯ ಕಣ್ಣಲ್ಲಿ ನೀರು ಹರಿಯಿತು.
ಮಗ ಎಲ್ಲಿ ಸೊಸೆ ಎಲ್ಲಿ ಯಾರೂ ಇಲ್ಲ" ಎಂದು ಮೇಲೆ ಕೈ ತೋರಿಸಿ ಚೆಲ್ಲಿತು
ಎಲ್ಲರೂ ಕ್ಷಣಕಾಲ ಮೌನವಾಗಿದ್ದರು.
ಮೌನ ಅಸಹನೀಯವೆನಿಸಿತು ಸ್ವಾತಿಗೆ. ತಡೆಯಲಾಗಲಿಲ್ಲ. ಅವಳಿಗಾದರೂ ಮಗ ಸತ್ತ ಎಂದಾದರೂ ಗೊತ್ತಿದೆ ಆದರೆ ತನ್ನ ತಾಯಿ ತಂದೆ ಇದ್ದಾರೆಯೇ ಇಲ್ಲವೇ ಎಂಬ ತನ್ನ ದುಗುಡ ಕಣ್ಣಮ್ಮನದಕ್ಕಿಂತ ಹೆಚ್ಚು ಎಂದನಿಸಿತು
"ಕಣ್ಣಮ್ಮಾ ಇದು ನನ್ನ ಬದುಕಿನ ಪ್ರಶ್ನೆ . ಆ ಬಿಲ್ಡಿಂಗ್ ಯಾವುದು ಅಂತ ನೆನಪು ಮಾಡಿಕೋ . " ಸ್ವಾತಿ ಹೇಳಿದಳು
ಕಣ್ಣಮ್ಮ ಯೋಚಿಸುತ್ತಲೇ ಇತ್ತು ಕೊನೆಗೊಮ್ಮೆ ತನ್ನ ಹಳೆಯ ಟ್ರಂಕ್‌ನೆಡೆ ಕೈ ತೋರಿತು
ಶಿವು ಅದನ್ನು ಹೊತ್ತುಕೊಂಡು ಬಂದ
ತಾನೆ ಕೈಯ್ಯಾರೆ ಟ್ರಂಕ್ ತೆಗೆಯಿತು. ಒಂದೊಂದಾಗಿ ಬಟ್ಟೇ ತೆಗೆಯಲಾರಂಬಿಸಿತು. ಒಂದೊಂದು ಬಟ್ಟೆಯೂ ಅದಕ್ಕೆ ಯಾವ್ಯಾವುದೋ ಇತಿಹಾಸ ನೆನಪು ಮಾಡಿಕೊಡುತ್ತಿತ್ತು . ತನ್ನ ಗತಕಾಲವನ್ನು ನೆನೆಸಿಕೊಳ್ಳುತ್ತಾ ಅಳುತ್ತಾ ಬಟ್ಟೆಗಳನ್ನು ಎದೆಗೊತ್ತಿಕೊಳ್ಳುತ್ತಿತ್ತು.
ಕೊನೆಗೊಂದು ಫೋಟೊ ತೆಗೆಯಿತು. ಹಳೆಯ ಫೋಟೋ
ಬಹುಷ: ಕಟ್ಟಡದ ಕೆಲಸಗಾರರೆಲ್ಲರನ್ನೂ ಸೇರಿಸಿ ತೆಗೆದ ಫೋಟೋ ಇದ್ದಿರಬೇಕು.
"ಇದು ತಾ ಎನ್ನ್ ಪಯ್ಯಾ" ಫೋಟೋದಲ್ಲಿದ್ದ ಯುವಕನನ್ನು ತೋರಿಸಿ ಅತ್ತಿತ್ತು.
ಯಾವುದೋ ಕಟ್ಟಡದ ಕೆಲಸದಲ್ಲಿ ಆದ ಆಕಸ್ಮಿಕಕ್ಕೆ ಮಗ ಬಲಿಯಾಗಿ ಹೋಗಿದ್ದ .ಜೊತೆಗೆ ಸೊಸೆಯೋ ಅವನ ಚಿಂತೆಯಲ್ಲಿಯೇ ಕೊರಗಿ ಉಸಿರು ಬಿಟ್ಟಿದ್ದಳು ಇದ್ದ ಒಬ್ಬನೇ ಮೊಮ್ಮಗ ಪೋಲಿ ಬಿದ್ದು ಹೋಗಿ ರೌಡಿಜಂ ಮಾಡಿಕೊಂಡಿದ್ದಾನೆ ಎಂದು ತಿಳಿಯಿತು. ಈ ಇಳಿಗಾಲದಲ್ಲಿ ಕಣ್ಣಮ್ಮ ಒಬ್ಬಂಟಿಯಾಗಿ ಹೋಗಿದ್ದಳು. ಅಲ್ಲಿ ಇಲ್ಲಿ ಬಿಕ್ಷೆ ಬೇಡಿ ತಿನ್ನುವಂತಹ ಗತಿ ಬಂದಿತ್ತು ಅವಳಿಗೆ. ಸ್ವಾತಿಯ ಕಣ್ಣಲ್ಲಿ ನೀರು . ತನ್ನಮ್ಮನ ಕಷ್ಟದಲ್ಲಿ ನೆರವಾದ ಕಣ್ಣಮ್ಮನ ಈಗಿನ ಸ್ಥಿತಿ ನೋಡಿ ಮನಸು ಮರುಗಿತು. ರೆಡ್ದಿಯವರ ಕಡೆಗೆ ನೋಡಿದಳು . ಹುಟ್ಟಿಸ್ದ ಅಪ್ಪ ಅಲ್ಲವಾದರೂ ಅವಳನ್ಮು ಬೆಳೆಸಿದ ಅಪ್ಪ ಅಲ್ಲವೇ? ಮಗಳ ಮನಸನ್ನು ಅರ್ಥ್ ಮಾಡಿಕೊಂಡರು.
"ಕಣ್ಣಮ್ಮ ನೀನು ಬೇಜಾರು ಮಾಡಿಕೋಬೇಡ . ನಿನ್ನನ್ನು ನಾವೆಲ್ಲಾ ಸೇರಿ ನೋಡಿಕೊಳ್ಳುತ್ತೇವೆ" ಎಂದು ಮೂಳೆ ಎದ್ದು ಕಾಣುತ್ತಿದ್ದ ಕಣ್ಣಮ್ಮನ ಅಂಗೈಗೆ ಭರವಸೆ ಎಂಬಂತೆ ಇಟ್ಟರು.
ಸ್ವಾತಿಯ ಮುಖದಲ್ಲಿ ಮಿಂಚು ಕಂಡು ತುಟಿ ಬಿರಿಯಿತು ಸಂತಸದಿಂದ.
ಆ ಫೋಟೋವನ್ನೇ ತೆಗೆದು ನೋಡುತ್ತಿದ್ದ ಶಿವು.
"ಮಾವ ಇದು ಶುಭೋದಯ ಲೇಔಟ್‌ನಲ್ಲಿರೋ ಮಂದಾರ ಅಪಾರ್ಟ್ಮೆಂಟ್ ಥರ ಇದೆ" ಹೊಳೆದವನಂತೆ ಹೇಳಿದ
"ಮಂದಾರ ಅಪಾರ್ಟ್ ಮೆಂಟ್ ಯಾರದ್ದು?" ರೆಡ್ಡಿಯವರು ನೆನಪಿಸಿಕೊಳ್ಳುತ್ತಿದ್ದರು
"ಮಾವ ಅದು ಎಸ್ ಕೆ ಡೆವಲಪರ್ಸ್‌ ಅವರದ್ದು" ಇತ್ತೀಚಿಗಷ್ಟೇ ನನ್ನ ಸ್ನೇಹಿತ ಅಲ್ಲಿ ಒಂದು ಫ್ಲಾಟ್ ಕೊಂಡುಕೊಂಡಿದಾನೆ."
"ಎಸ್ ಕೆ‍ನಾ ? ನನಗೆ ಚೆನ್ನಾಗಿ ಗೊತ್ತು . ಅದಿರಲಿ ಶಿವು ಆ ಅಪಾರ್ಟ್ಮೆಂಟ್‌ಗೆ ಹೋಗಿ ಏನುಮಾಡ್ತೀಯಾ? ಯಾವ ವಿವರ ಸಿಗುತ್ತೆ?"
"ಮಾವಾ ಆ ಡೆವಲಪರ್ರೇ ಇವರಿದ್ದ ಮನೆ ಓನರ್ ಅಂತ ಹೇಳಿದಾರಲ್ಲಾ . ಒಮ್ಮೆ ಚಾನ್ಸ್ ನೋಡೋಣ . ಏನಂತೀಯಾ ಸ್ವಾತಿ"
ಸ್ವಾತಿ ತಲೆ ಆಡಿಸಿದಳು.
"ಸರಿ ಅವನ ಫೋನ್ ನಂ ಮನೇಲಿ ಇದೆ ಅನ್ನಿಸುತ್ತೆ ಈಗಮನೆಗೆ ಹೋಗೋಣ ಕಣ್ಣಮ್ಮನ್ನ ನಮ್ಮನೆ ಔಟ್ ಹೌಸಲ್ಲಿ ಇರಿಸೋಣ. ಏನೇನು ಮೆಡಿಕಲ್ ಚೆಕ್ ಅಪ್ ಇದೆಎಲ್ಲ ಮಾಡಿಸೋಣಾ ಸರೀನಾ ಸ್ವಾತಿ?"
. ಮರೆಯಾದ ಗತಕಾಲಕ್ಕೆ ಆಸರೆಯಾಗಿ ಬಂದವಳು ಈ ಕಣ್ಣಮ್ಮ . ಅವಳಿಗೆ ಆಸರೆಯಾಗಿ ತನ್ನಪ್ಪ ನಿಂತಾಗ ಸ್ವಾತಿಯ ಕಣ್ಣಲ್ಲಿ ಮಿಂಚು.
ಕಣ್ಣಮ್ಮನನ್ನು ಔಟ್ ಹೌಸಿನಲ್ಲಿ ಇರಿಸಿ ಕೆಲ್ಸದವರಿಗೆ ಹೇಳಿ ರೂಮಿಗೆಬಂದವಳೇ ಕಂಪ್ಯೂಟರ್ ಮೇಲ್ ಚೆಕ್ ಮಾಡಿದಳು. ಅವಳು ಬಹಳ ದಿನದಿಂದ ಕಾಯುತ್ತಿದ್ದ ಮೇಲ್ ಬಂದಿತ್ತು ಪ್ರೊ ಗೌರವ್ ರವರಿಂದ
ಗೌರವ್ ಹೆಸರಿಗೆ ತಕ್ಕಂತೆ ಗೌರವ ಕೊಡುವಂತಿದ್ದವರು. ಯುಎಸ್ ನಲ್ಲಿ ನೆಲೆಸಿದ್ದರು ಮಾನವರ ನಡುವಿನ ಸೂಕ್ಷ್ಮ ಸಂಬಂಧಗಳ ಸಂಶೋದನೆಯಲ್ಲಿ ಡಾಕ್ಟರೇಟ್ ಪಡೆದಿದ್ದರು . ಹಾಗೆಯೇ ಲೇಖಕರೂ ಕೂಡ . ಸ್ವಾತಿ ಅವರ ಅಭಿಮಾನಿಯಾಗಿದ್ದಳು. ಅವರ ಎಲ್ಲಾ ಪುಸ್ತಕಗಳನ್ನು ಓದಿದ್ದಳು . ಫೇಸ್ ಬುಕ್‌ನಲ್ಲಿ ಅವರಿಗೆ ಸ್ವಾತಿಯ ಪರಿಚಯವಾಗಿತ್ತು. ಆಗಿನಿಂದಲೂ ಅವರಿಬ್ಬರ ಮಾತುಕಥೆಗಳು ನಡೆಯುತ್ತಲೇ ಇದ್ದವು.
ಇಂದಿನ ಮೇಲ್‌ನಲ್ಲಿ ಭಾರತಕ್ಕೆ ಬರುವುದಾಗಿ ತಿಳಿಸಿದ್ದರು. ಸ್ವಾತಿಯ ಸಂತೋಷ ಹೆಚ್ಚಿತು. ನಾಳೆ ಗೌರವ್ ಬರುವ ಸಂತಸ ಜೊತೆಗೆ ಕಣ್ಣಮ್ಮ ಸಿಕ್ಕ ಸಂತೋಷ ,ಜೊತೆಗೆ ತಾನು ಹುಟ್ಟಿದ ಸ್ಥಳಕ್ಕೆ ಭೇಟಿ ನೀಡಲಿರುವ ಸಂತೋಷ. ಮೊದಲ ಬಾರಿಗೆ ನಿರುಮ್ಮಳಾಗಿ ನಿದ್ರಿಸಿದಳು