Tuesday, May 31, 2011

ಸೂರ್ಯನ ಸುತ್ತಾ ಸುತ್ತುವುದು ಭೂಮಿ

"ಸೂರ್ಯನ ಸುತ್ತಾ ಭೂಮಿ ಸುತ್ತುವುದು .ಚಂದ್ರ ಭೂಮಿಯ ಸುತ್ತಾ ತಿರುಗುತ್ತದೆ" ಪಕ್ಕದ ಮನೆ ಸುಮಿ ಓದುತ್ತಿದ್ದರೆ ನನ್ನ ಮನದಲ್ಲಿ ಸಿಟ್ಟು . ಹೇಳಲಾಗದ ನೋವು. ಇಲ್ಲಾ ಭೂಮಿ ನನ್ನ ಸುತ್ತಾನೆ ಸುತ್ತೋದು .


ಇವತ್ತು ಒಂದರಲ್ಲಿ ಎರೆಡು ನಿರ್ಧಾರವಾಗಲೇ ಬೇಕು ನಾನೋ ಇಲ್ಲಾ ಭಾಸೀನೋ ಅಂತ ಇವತ್ತು ಹೇಳಲಾಗದಿದ್ದರೆ ಮುಂದೆಂದೂ ಧರಿತ್ರಿ ಸಿಗೋದಿಲ್ಲ. ಇವತ್ತು ಕತ್ತೇ ಬಡವ ಅದು ಹೇಗೆ ಅವಳನ್ನ ಹಾರಿಸಿಕೊಳ್ತಾನೋ ನೋಡೇ ಬಿಡೋಣ. ಎಂದಿಗಿಂತ ಮುಂಚೇಯೇ ಹೊರಟಿದ್ದೆ ನನ್ನ ಹೊಸ ಕಾರಲ್ಲಿ . ನೆನ್ನೆ ತಾನೆ ತಗೊಂಡಿದ್ದೆ.


ಹೌದು ನಾನಾಗ ಹೈಸ್ಕೂಲಿನಲ್ಲಿದ್ದೆ ಆಗಲೇ ಬಂದವಳು ಈ ಧರಿತ್ರಿ . ನೋಡಿದಾಗಲೇ ಏನೋ ಆಕರ್ಷಣೆ . ಅವಳ ಬಂಗಲೆಯೂ ನನ್ನ ಪುಟ್ಟ ಇಟ್ಟಿಗೆ ಮನೆಯೂ ಎದುರು ಬದುರಾಗಿದ್ದುದು ವಿಪರ್ಯಾಸ. ನಮ್ಮಿಬ್ಬರ ಅಂತರಕ್ಕೆ ಮತ್ತಷ್ಟು ದೂರ ಸೇರಿದ್ದು ಅವಳ ಮನೆಯ ಪಕ್ಕಕ್ಕೆ ಇದ್ದ ಭಾಸಿಯ ಮನೆ. ಅವಳೊಂದಿಗೆ ಹೋಗಬೇಕೆಂದುಕೊಂಡಾಗಲೆಲ್ಲಾ ಅವಳು ಭಾಸಿಯೊಟ್ಟಿಗೆ ಹೋಗುತ್ತಿದ್ದಳು. ಹೌದು ನನ್ನಂತಹ ಬಡವನ ಜೊತೆ ಏಕಾದರೂ ಬರುತ್ತಾಳೆ ಎಂದುಕೊಂಡು ನಿಟ್ಟುಸಿರು ಬಿಡುತ್ತಿದ್ದೆ. ಆದರೂ ಹೇಗೋ ನಮ್ಮ ಮೂವರ ಸ್ನೇಹದ ಗಿಡ ಚಿಗುರಿತ್ತು. ಆ ಗಿಡ ನನ್ನ ನಿರಾಸೆಯ ಕಾವಿಗೆ ಆಗಾಗ ಬಾಡುತ್ತಿದ್ದರೂ ಮತ್ತೆ ಧರಿತ್ರಿಯ ನಗು ನೀರೆರೆಯುತ್ತಿತ್ತು. ಮತ್ತೆ ಬೆಳೆಯುತ್ತಿತ್ತು.


ಅಪ್ಪ ಆಗಷ್ಟೇ ಒಂದು ಹೊಸ ಮನೆ ತೆಗೆದುಕೊಂಡಿದ್ದರು. ಎರೆಡು ರೂಮಿರುವ ಮನೆ ಅದು ಏನೋ ಹೊಸ ಆತ್ಮ ವಿಶ್ವಾಸ ನನ್ನಲ್ಲಿ . ನಮ್ಮಿಬ್ಬರ ಅಂತರ ಕಡಿಮೆಯಾಗಿತ್ತು. ಇಂದಿನಿಂದಾದರೂ ಅವಳ ಜೊತೆ ಹೋಗುವ ಕನಸು ನಿಜವಾಗಬಹುದು. ಹಾಗೆಂದುಕೊಂಡೇ ಸ್ಕೂಲಿಗೆ ಹೋಗಿದ್ದು ಆದರೆ ಭಾಸಿ ಅಂದು ಹೊಸ ಸೈಕಲ್ ತಂದಿದ್ದ. ಅಂದು ಧರಿತ್ರಿ ಅವನ ಜೊತೆಯೇ ಹೊರಟು ಹೋಗಿದ್ದಳು. ಕನಸು ಕನಸಾಗಿಯೇ ಉಳಿದಿತ್ತು.


ಹತ್ತನೇ ತರಗತಿಯಲ್ಲಿ ಕ್ಲಾಸಿಗೆ ಮೊದಲಿಗನಾಗಿ ಬಂದಿದ್ದೆ . ಆ ಸಂತೋಷಕ್ಕೆ ಅಪ್ಪ ನನಗೊಂದು ಸೈಕಲ್ ಕೊಡಿಸಿದ್ದರು.


ಸೈಕಲ್ ಕೊಂಡ ಸಂತೋಷದಲ್ಲಿ ಅವಳ ಮನೆಯತ್ತ ಹೋಗುತ್ತಿದ್ದಂತೆ ಶಾಕ್ ಆಗಿತ್ತು ಭಾಸಿ ಹೊಸದೊಂದು ಬೈಕ್ ಕೊಂಡಿದ್ದ . ಅವನು ಪಾಸ್ ಆಗಿದ್ದಕ್ಕೆ ಕೊಡಿಸಿದ್ದಂತೆ.


ನನ್ನ ಅದೃಷ್ಟಕ್ಕೆ ಧರಿತ್ರಿ ನಾನು ಒಂದೇ ಕಾಲೇಜಿನಲ್ಲಿ ಓದಲಾರಂಭಿಸಿದೆವು. ಆದರೆ ದುರಾದೃಷ್ಟವೂ ಬೆಂಬತ್ತಿ ಬಂತು. ಭಾಸಿಯೂ ಅದೇ ಕಾಲೇಜಿಗೆ ಸೇರಿದ್ದ. ಎಂದಿನಂತೆ ನಾನು ಸೈಕಲ್ , ಅವನು ಬೈಕ್‌ನಲ್ಲಿ ಅವಳು ಅವನ ಹಿಂದೆ. ಜೋಲು ಮೋರೆ ಹೊತ್ತು ಹೋಗುತ್ತಿದ್ದೆ.


ಸೆಕಂಡ್ ಇಯರ್ ಪಾಸ್ ಆಯ್ತು ನಂತರ ಇಂಜಿನಿಯರಿಂಗ್ ಸೀಟ್ ಸಿಕ್ಕಿತು ನನಗೆ . ಅವರಿಬ್ಬರೂ ಹಿಂದೆಯೇ ಉಳಿದಿದ್ದರುಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದು ಸೇರಿದ್ದು ಆಯ್ತು. ಮುಂದಿನದೆಲ್ಲಾ ಇತಿಹಾಸ ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಸೆಲೆಕ್ಟ್ ಆಗಿ ಹೆಸರಾಂತ ಐಟಿ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತ್ತು. ಆಗಾಗ ಅವರಿಬ್ಬರ ನೆನಪು ಬರುತ್ತಿತ್ತು.ಧರಿತ್ರಿ ಬೆಂಗಳೂರಿನಲ್ಲೇ ಇದ್ದಾಳೆ ಎಂದು ತಿಳಿದು ಅವಳ ವಿಳಾಸ ಪಡೆದುಕೊಂಡೆ . ಆಗಷ್ಟೇ ಹೊಸದಾಗಿ ಕೊಂಡಿದ್ದ ಬೈಕ್ ಸವಾರಿ ಮಾಡಿಕೊಂಡು ಅವಳ ಮನೆಯತ್ತ ಹೋಗಿದ್ದೆ .


ಧರಿತ್ರಿ ಸಿಕ್ಕಳು ಮೊದಲಿಗಿಂತ ಚೆಂದವಾಗಿದ್ದಳು. "ಹೇ ಶಶಿ ಹೇಗಿದ್ದೀಯಾ? " ಎಂದೆಲ್ಲಾ ವಿಚಾರಿಸಿದಳು.


"ತುಂಬಾ ಸಂತೋಷವಾಯ್ತು ನೀನು ಸೆಟಲ್ ಆಗಿದ್ದು ನಮ್ಮ ಹಳ್ಳಿಯೇ ಹೆಮ್ಮೆ ಪಡಬೇಕಾದ ಹುಡುಗ" ನೀನು ಎಂದಳು. ಬೈಕ್ ಮುಟ್ಟಿ ಸಂಭ್ರಮಿಸಿದಳು.


" ಶಶಿ ಬೈಕ್ ಚೆನ್ನಾಗಿದೆ. ನೆನ್ನೆ ತಾನೆ ಭಾಸಿ ಬಂದಿದ್ದ ಅವನೂ ಕಾರ್ ತಗೊಂಡಿದ್ದಾನೆ. ನೆನ್ನೆ ಎಲ್ಲಾ ಲಾಂಗ್ ಡ್ರೈವ್ ಹೋಗಿದ್ದೆವು."


ನನ್ನ ಸಂಭ್ರಮದ ಬಲೂನ್ ಒಡೆದು ಹೋಯ್ತು. ಇಲ್ಲಿಯೂ ಭಾಸಿ ನನಗಿಂತ ಮುಂದಿದ್ದ. ಕಸಿವಿಸಿಗೊಂಡು ಬಂದಿದ್ದೆ


ದಿನಾ ನಾನು ಹೋಗುತ್ತಿದ್ದೆ ಅಟ್ಲೀಸ್ಟ್ ಇಲ್ಲಾದರೂ ಅವಳಿಗೆ ಡ್ರಾಪ್ ಮಾಡೋಣ ಎಂದುಕೊಂಡು ಅವಳು ನಿಲ್ಲುತ್ತಿದ್ದ ಬಸ್ ಸ್ಟಾಪಿಗೆ. ಆದರೆ ಅವಳಾಗಲೇ ಭಾಸ್ಕರನ ಕಾರ್ ಹತ್ತಿ ಹೋಗುತ್ತಿದ್ದಳು.ಒಂದು ವರ್ಷವಾಗಿದೆ.



ಈಗ ನಾನು ತೆಗೆದುಕೊಂಡಿರೋದು ಮರ್ಸಿಡೀಸ್ ಬೆಂಜ್. ಸಾಲ ಮಾಡಿಯೇ ಕೊಂಡಿದ್ದು. ಇವತ್ತು ನಾನೇ ಮುಂದೆ. ಇವತ್ತು ಗೆಲ್ಲಲೇ ಬೇಕು.


ಬಸ್ ಸ್ಟಾಪ್ ಬಂದೇ ಬಿಟ್ಟಿತು. ಕಾರ್ ನಿಲ್ಲಿಸಿ ,ಕೆಲಸಕ್ಕೆ ಹೋಗಲು ಬಸ್ಸಿಗೆ ಕಾಯುತ್ತಿದ್ದ ಧರಿತ್ರಿಯತ್ತ ವೇವ್ ಮಾಡಿದೆ.


"ವಾವ್ ಶಶಿ . ನ್ಯೂ ಕಾರಾ? ಸೂಪರ್."


"ಇವತ್ತಾದರೂ ನನ್ನ ಜೊತೆ ಬರ್ತೀಯಾ ಧರಿ?"


"ಖಂಡಿತಾ .ಬರೋದಷ್ಟೇ ಅಲ್ಲ ಲಾಂಗ್ ಡ್ರೈವ್‌ಗೆ ಹೋಗೋಣ" ಅವಳ ಕಣ್ಣುಗಳು ಸಂತಸದಿಂದ ಅರಳಿದವು.



ಕಾರ್ ಚಿಕ್ಕಬಳ್ಳಾಪುರದ ಕಡೆಗೆ ಹೋಗುತ್ತಿತ್ತು.


"ಶಶಿ ಒಂದು ಸ್ವಲ್ಪ ಹೊತ್ತು ನಿಲ್ಲಿಸ್ತೀಯಾ ನಾನು ನಿಂಜೊತೆ ಮಾತಾಡಬೇಕು." ನನ್ನ ಕಡೆಗೆ ನೋಡುತ್ತಾ ನುಡಿದಳು


ಹುಡುಗಿ ಇಷ್ಟೊಂದು ಫಾಸ್ಟ್ ಇದ್ದಾಳೆ ಪರವಾಗಿಲ್ಲ ಎಂದನಿಸಿತು ನಾನಂದುಕೊಂಡದ್ದನ್ನ ಅವಳೇ ಹೇಳಿಬಿಡಲಿ


ಎಂದುಕೊಂಡೆ ಕಾರ್ ನಿಲ್ಲಿಸಿದೆ


ಸ್ವಲ್ಪ ಹೊತ್ತು ಅಂಗೈಯನ್ನೇ ನೋಡುತ್ತಿದ್ದವಳು ಮತ್ತೆ ನನ್ನ ತ್ತ ನೋಡಿದಳು.


"ನಾನು ನಿಂಗೆ ತುಂಬಾ ದಿನದಿಂದ ಹೇಳಬೇಕಂತ ಇದ್ದೆ. ಆದರೆ ಸಮಯಾನೆ ಬಂದಿರಲಿಲ್ಲ. " ರೋಮಾಂಚನಗೊಂಡೆ. ಎದೆಯ ಬಡಿತ ನನಗೇ ಕೇಳಿಸುವಷ್ಟು ಜೋರಾಗಿತ್ತು. ಮೌನಕ್ಕೆ ಶರಣಾಗಿದ್ದೆ


"ನಂಗೆ ನೀನಂದ್ರೆ ತುಂಬಾ ಇಷ್ಟ. ಇಷ್ಟ ಅಂದ್ರೆ ಒಂಥರಾ ಅದಕ್ಕೆ ವಿವರಣೆ ಕೊಡೋಕಾಗಲ್ಲ. ನೀನು ಬುದ್ದಿವಂತ. ಹಿಡಿದ ಛಲ ಬಿಡುವ ಹುಡುಗ ಅಲ್ಲ . ಬಹಳ ಚಟುವಟಿಕೆ ಇರೋ ಅಂತೋನು. ನಿನ್ನ ಬಾಯಿ ಏನೋ ಹೇಳದಿದ್ದರೂ ನಿನ್ನ ಈ ಅರಳು ಕಂಗಳು ಎಲ್ಲಾ ಹೇಳಿಬಿಡುತ್ತೆ. ಅದರಲ್ಲಿ ಪ್ರಾಮಾಣಿಕತೆ ಇದೆ"


ನಾನು ಅವಳತ್ತ ನೋಡುವ ಸಾಹಸಕ್ಕೆ ಕೈ ಹಾಕಲಿಲ್ಲ ಆದರೆ ಎದುರಿದ್ದ ಕನ್ನಡಿಯಲ್ಲಿ ಅವಳ ಮುಖ ಕಾಣಿಸಿತು.


ಅವಳೂ ನೋಡಿದಳು


"ನಂಗೆ ಎಲ್ಲಾ ಅರ್ಥವಾಗುತ್ತೆ. "


ಮತ್ತೆ ಅವಳತ್ತ ನೋಡಿ ಬೇರೆ ಕಡೆ ಮುಖ ತಿರುಗಿಸಿದೆ ಮುಂದಿನ ವಾಕ್ಯಕ್ಕಾಗಿ ಕಾಯುತ್ತಾ


"ಆದರೆ ನಾನು ಅಸಹಾಯಕಳು. ಐ ಆಮ್ ಹೆಲ್ಪ್ ಲೆಸ್"


ಸಿಡಿಲು ಬಡಿದಂತಾಯ್ತು


ಕಣ್ಣು ಮುಚ್ಚಿದೆ


"ನಾನು ಈಗಾಗಲೆ ಭಾಸಿಗೆ ಮನಸು ಕೊಟ್ಟುಬಿಟ್ಟಿದ್ದೀನಿ. ಜೀವನ ಪೂರ್ತಿ ಅವನೊಟ್ಟಿಗೆ ಪ್ರಯಾಣ ಮಾಡೋದು ಅಂತ ನಿರ್ಧಾರ ಮಾಡಿದೀನಿ. ಹಾಗಾಗಿ ಇದು ನನ್ನ ನಿನ್ನ ಕಡೆಯ ಪ್ರಯಾಣ ಇರಬಹುದು. ದಯವಿಟ್ಟು ನನ್ನ ಬಗ್ಗೆ ಇಲ್ಲದ ಆಸೆ ಇಟ್ಟುಕೋಬೇಡ . ಇದನ್ನ ನಿನಗೆ ಬಿಡಿಸಿ ಹೇಳೋದಿಕ್ಕೆ ನಂಗೆ ಸಮಯ ಸಿಗಲಿಲ್ಲ. ನನ್ನ ಆತ್ಮೀಯ ಗೆಳೆಯ ನಮ್ಮ ಕುಟುಂಬಕ್ಕೆ ಆತ್ಮೀಯನಾಗಿರ್ತಾನೆ ಅಂತ ಬಯಸಲೇ?" ಮುಂದೆ ಕೈ ಚಾಚಿದಳು


ನನ್ನತ್ತ ಬಂದ ಕೈಗೆ ಭಾಷೆ ಕೊಡುವಂತೆ ಕೈ ಇಟ್ಟೆ.


**************************************---------


"ಸೂರ್ಯನ ಸುತ್ತಾ ಸುತ್ತುವುದು ಭೂಮಿ." ಮಗಳು ಹಾಡುತ್ತಿದ್ದಳು. ಯಾವುದೋ ಜಾಹಿರಾತಿನ ಹಾಡದು.


ಎಲ್ಲಾ ನೆನಪಾಗಿ ಒಮ್ಮೆ ಮನಸು ಭಾರವಾಯ್ತು. "ರೀ ಕಾಫಿ ತಗೊಳ್ಳಿ " ಪೂರ್ಣಿಮಾ ಕಾಫಿ ಕಪ್ ಹಿಡಿದು ನಿಂತಿದ್ದಳು. ಅವಳ ನಗೆ ನೋಡಿ ಮನಸು ಹಗುರಾಯ್ತು. ಒಮ್ಮೆ ನಕ್ಕೆ


"ರೀ ನಿಮ್ಮಫ್ರೆಂಡ್ ಭಾಸ್ಕರ ಮ್ಯಾರೇಜ್ ಆನಿವರ್ಸರಿ ಇದೆ ಸಂಜೆ ಬೇಗ ಬನ್ನಿ ಹಾಗೆ ನಮ್ಮದೂ ಸಹಾ ನಮ್ಮ ಫಂಕ್ಷನ್ ಮುಗಿಸಿಕೊಂಡು ಅವರ ಪಾರ್ಟಿಗೆ ಹೋಗೋಣ "


ಚಂದ್ರನ ಬೆಂಬಲಕ್ಕೆ ಪೂರ್ಣಿಮಾ ಇದ್ದಳು.

ಮಾತನಾಡದೆ ಅವಳನ್ನು ಬಳಿಗೆಳೆದುಕೊಂಡೆ


Tuesday, May 24, 2011

ಸವಿ ಪ್ರೀತಿಯೊಂದೆ ಮರು ಕಾಣಿಕೆ

ಈ ಸುಂದರ ಸಂಜೆಯಲ್ಲಿ, ನಿನ್ನೊಲವಿನ ಮಂಜಿನಲ್ಲಿ
ಮುಳುಗೆದ್ದ , ಹೂವಿನ ದಳದಳದಲ್ಲಿ
ನಿನ್ನ ಪ್ರೀತಿಯ ಜೇನಿನ ಹನಿ ಹನಿಯ ಚಿತ್ತಾರ.......

ನೀ ನುಡಿದ ಮಾತುಗಳೆಲ್ಲಾ ಪನ್ನೀರ ಪದಗಳಾಗಿ
ಮುದುಡಿದ ಮನಸಿಗೀಗ ಅಹ್ಲಾದದ ಸಿಂಚನ

ಈ ಮನದಲಿ ನೀನೊತ್ತಿದ ಭಾವಗಳ ಸಿಂಧೂರಕೆ
ಈ ನನ್ನ ಸವಿ ಪ್ರೀತಿಯೊಂದೆ ಮರು ಕಾಣಿಕೆ

ಹೆಸರಿಡದ ಪ್ರೀತಿಯ ಬಂಧದಲಿ
ನಾ ಬಂದು ಸೇರಿದ್ದು ಹೇಗೆಂದು
ಅರಿವಾಗುವ ಮುನ್ನವೇ ಈ
ವರ್ಷಧಾರೆಯ ಅನುಭೂತಿ

ನೀ ಕೊಟ್ಟ ಈ ಕ್ಷಣಗಳ ಸಂತಸವನು
ಮರೆತೂ ಕೂಡ ಮರೆಯಲಾರೆನು
ಮತ್ತದೇ ಕೇಳುತ್ತಿದ್ದೆ ಮನ ನಿನ್ನನ್ನು
ಮತ್ತೆಂದು ಬರುವೆ ನೀನು?

Wednesday, May 18, 2011

ನೀನಿಲ್ಲದಿದ್ದಲ್ಲಿ

ಗೆಳೆಯಾ
ನೀ ಸಿಗದಿದ್ದರೆ ಬಾಳೇನೂ ಬಾಡುತ್ತಿರಲಿಲ್ಲ
ಆದರೂ ಬದುಕಿನಾಸೆ ಇಷ್ಟೊಂದು ಇರುತ್ತಿರಲಿಲ್ಲ

ಗೆಳೆಯಾ
ನೀ ನನ್ನ ನೋಡದಿದ್ದಲ್ಲಿ ಈ ರೂಪವೇನೂ ಮುದುಡುತ್ತಿರಲಿಲ್ಲ
ಆದರೂ ಈ ತುಟಿಯ ಮಿಂಚಿನ ನಗೆ ಕಾಣುತ್ತಿರಲ್ಲಿಲ್ಲ

ಗೆಳೆಯಾ
ನೀ ನನ್ನ ಜೊತೆಗೆ ಮಾತಾಡಿರದಿದ್ದಲಿ, ನಾನೇನೂ ಮೂಕಿಯಾಗುತ್ತಿರಲಿಲ್ಲ
ಆದರೂ ಮಾತಿಗೆ ಇಷ್ಟೊಂದು ಶಕ್ತಿ ಇರುತ್ತಿರಲಿಲ್ಲ............

ಗೆಳೆಯಾ
ನೀ ನನ್ನ ಜೊತೆ ಹೆಜ್ಜೆ ಹಾಕದಿದ್ದಲ್ಲಿ , ನಾನೇನು ಮುಂದೆ ಸಾಗದಿರುತ್ತಿರಲಿಲ್ಲ
ಆದರೂ ಆ ನಡೆಗೆ ಇಂತಹ ಗುರಿ ಇದ್ದಿರಲಿಕ್ಕಿಲ್ಲ

ಗೆಳೆಯಾ
ನೀನಿಲ್ಲದೆಯೂ ನಿಜವಾಗಿಯೂ ನಡೆದೀತು ಜೀವನ
ಆದರೆ ಆ ಜೀವನಕೆ ಇಂತಹದೊಂದು ನೆಲೆ ಸಿಗುವುದಿಲ್ಲ



Sunday, May 8, 2011

ಶಾಪ ವಿಮೋಚನೆಯಾಗದ ಅಹಲ್ಯೆಯರು

ರಾಮಾಯಣದ ಸೀತಾ ಸ್ವಯಂವರದ ನಾಟಕದ ತಾಲೀಮು ನಡೆಯುತ್ತಿತ್ತು.
ಅದರಲ್ಲಿ ಬರುವ ಅಹಲ್ಯಾ ಶಾಪ ವಿಮೋಚನೆಯ ಪ್ರಸಂಗವನ್ನೂ ವೇದಿಕೆಯಮೇಲೆ ತರೋಣ ಎಂದು ಮೇಡಮ್ ಹೇಳಿದ್ದರು, ಜೊತೆಗೆ ನಾಟಕದ ಪಾತ್ರಗಳಿಗೆ ಆಯ್ಕೆ ನಡೆಯುತ್ತಿತ್ತು.

"ಗೀತಾ ಅಹಲ್ಯಾ ಪಾತ್ರ ನೀನೇ ಮಾಡಬೇಕು ." ಮೇಡಂ ನನ್ನನ್ನು ಈ ಪಾತ್ರಕ್ಕೆ ಕರೆದಾಗ ನಾನು ಕಕ್ಕಾಬಿಕ್ಕಿ, ಜೊತೆಗೆ ಒಮ್ಮೆಗೆ . ಮಾಡಬಾರದೆನಿಸಿತು
"ಮೇಡಂ ನಾ.............ನು ............ಈ ಪಾರ್ಟ್ ಮಾಡಲ್ಲ. ........." ಹಿಂಜರಿಕೆಯಿಂದಲೇ ನುಡಿದೆ.

"ಯಾಕೆ ಗೀತಾ "? ನನ್ನತ್ತಲೇ ತೀಕ್ಷ್ಣವಾಗಿ ನೋಡುತ್ತಾ

"ಮೇಡಂ iam not happy with Ahalya's charactor. ತುಂಬಾ ಸಲ ಅನ್ಕೂಂಡಿದ್ದೀನಿ ಯಾಕೆ ಈ ಪಂಚ ಮಹಾ ಕನ್ನಿಕೆಯರ ಹೆಸರಲ್ಲಿ ಅಹಲ್ಯಾ ಹೆಸರು ಸೇರಿದೆ ಅಂತ?"
"ಯಾಕಮ್ಮಾ"? ಮತ್ತೆ ಪ್ರಶ್ನೆ ಎಸೆದರು.
" ಹಾಗಲ್ಲ ಮೇಡಂ ಗಂಡ ಇರದಿದ್ದಾಗ ಮತ್ತೊಬ್ಬನ ಜೊತೆ ಸಂಬಂಧ ಹೊಂದಿದವಳು. ಅಸಲಿಗೆ ಆ ಕಥೆಯೇ ಬೇಕಿರಲಿಲ್ಲ .ರಾಮನ

ಔನ್ನತೆಯನ್ನ ಎತ್ತಿ ತೋರೋದಿಕ್ಕೆ ಈ ಕತೆ ಸೇರಿಸಿದ್ದಾರೆ ಅಷ್ಟೆ.
"ಸರಿ . ಆಯ್ತು, ನಿನಗೆ ಯಾವ ಪಾತ್ರ ಬೇಕೋ ಅದನ್ನೇ ಚೂಸ್ ಮಾಡು ಆದರೂ ಪಾತ್ರಕ್ಕಿಂತ ಪಾತ್ರಧಾರಿಯ ಆ ಪಾತ್ರದಲ್ಲಿ ಹೇಗೆ ಇನ್‌ವಾಲ್ವ್ ಆಗ್ರಾನೆ ಅನ್ನೋದು ಮುಖ್ಯ. ಮತ್ತೆ ಪುರಾಣದಲ್ಲಿ ಕೇಳಿದ ಕಥೆಯನ್ನ ಆ ನೆಲೆಯಲ್ಲಿಯೇ ನೋಡುವುದಕ್ಕಿಂತ ಒಂದು ವಿಭಿನ್ನ ನೆಲೆಯಲ್ಲಿ ನೋಡಿದರೆ ಪಾತ್ರ ಇಂಟರೆಸ್ಟಿಂಗ್ ಆಗಿರುತ್ತೆ. ಅಹಲ್ಯಾ ಜೀವನದಲ್ಲಿ ನಿಜಕ್ಕೂ ಏನು ನಡೆದಿರಬಹುದು ಅನ್ನೋದನ್ನ ಯೋಚಿಸಿದರೆ ಆ ಪಾತ್ರ ನಿಜಕ್ಕೂ ತುಂಬಾ ಕಾಂಪ್ಲಿಕೇಟೆಡ್ ಅನ್ಸುತ್ತೆ. "ಮೇಡ್ಂ ಒಂದೇ ಸಲಕ್ಕೆ ಒಪ್ಪಿ ಜೊತೆಗೇ ನನ್ನ ಮನಸಲ್ಲಿ ಅಲೆಯನ್ನು ಎಬ್ಬಿಸಿದರು.

ಯಾಕೋ ಅವರ ಮನಸು ಸ್ವಲ್ಪ ಗಂಭೀರವಾಯ್ತೆನಿಸಿತು.
ಅವರಿಗೆ ಹಾಗೆಯೇ ಪಾತ್ರಗಳಲ್ಲಿ ತಲ್ಲೀನರಾಗುವ ಮನಸು..

"ರೇವತಿ ಯಾರ್ ಯಾರಿಗೆ ಯಾವ ಯಾವ ಪಾರ್ಟ್ ಬೇಕು ಅನ್ನೋದನ್ನ ನೀನೆ ಪಟ್ಟಿ ಮಾಡಿ ನನಗೆ ತಂದುಕೊಡು. ನಾನೀಗ ಹೊರಡ್ತೀನಿ"
ಮೇಡಮ್ ಮತ್ತೊಮ್ಮೆ ನನ್ನತ್ತ ನೋಡಿ ಹೊರಟೇ ಹೋದರು.

ಯಾವ ಬೇರೆ ನೆಲೆಯಲ್ಲಿ ಯೋಚಿಸಲೂ ಸಾಧ್ಯವಾಗಲಿಲ್ಲ. ನಿಜಕ್ಕೂ ಅಹಲ್ಯಾ ನನ್ನನ್ನ ಕಾಡತೊಡಗಿದಳು.
ಕಾಲೇಜಿನ ಅವಧಿ ಮುಗಿದ ಮೇಲೆ ಮೇಡಮ್ ಅನ್ನೇ ಕೇಳಲು ಸ್ಟಾಫ್ ರೂಮಿಗೇ ನಡೆದೆ.
"ಮೇಡಮ್ ನಾನು ಮತ್ತೆ ತೊಂದರೆ ಕೊಡ್ತಾ ಇದ್ದೇನೆ. ಸಾರಿ"
"ಇಲ್ಲ ಹೇಳು ಗೀತಾ............"
"ನನಗೆ ಮತ್ತೆ ಯಾವ ಹಿನ್ನೆಲಯಲ್ಲಿ ಯೋಚಿಸಲೂ ಸಾದ್ಯವಾಗ್ತಿಲ್ಲ. ಆದರೆ ಈ ಪಾತ್ರಾನ ಅರ್ಥ ಮಾಡಿಕೊಂಡ ನಂತರ ನನಗೆ ಇಷ್ಟವಾದಲ್ಲಿ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ ಅನ್ಸುತ್ತೆ. ಅದನ್ನ ಅರ್ಥ ಮಾಡಿಸೋಕೆ ನಿಮ್ಮಿಂದ ಮಾತ್ರ ಅದು ಸಾಧ್ಯಾ"

ಮೇಡಂ ಕೈಲಿದ್ದ ಪೆನ್ನನ್ನೇ ನೋಡತೊಡಗಿದರು. ಸ್ವಲ್ಪ ಹೊತ್ತು. ............. ಹಾಗೆ ಕುರ್ಚಿಯಮೇಲೆ ಒರಗಿದವರು ಕಣ್ಣುಮುಚ್ಚಿದರು



"ಗೀತಾ ಅಹಲ್ಯಾ ಅನುಪಮ ಚೆಲುವೆ. ಬ್ರಹ್ಮನ ಮಾನಸ ಪುತ್ರಿ ಅಂತಾರೆ. ಆದರೆ ಅದನ್ನ ಪುರಾಣದ ಹಿನ್ನೆಲೆ ಬಿಟ್ಟು ಬೇರೆಯಾಗಿ ನೋಡಿದರೆ ಅವಳು ಖಂಡಿತಾ ರಾಜ ಪುತ್ರಿನೆ ಆಗಿರುತ್ತಾಳೆ. ಅಂತಹ ಚೆಲುವೆ ಈ ಗೌತಮ ಮುನಿಯ ಕಣ್ನಿಗೆ ಬಿದ್ದಿರ್ತಾಳೆ. ಮುನಿಗಳಾದರೇನು ಅವರೂ ಗಂಡಸರಲ್ಲವೇ. ಚೆಲುವಿನದೆಲ್ಲಾ ತನಗೆ ಬೇಕೆಂಬ ಅಹ್ಂ. ಡಿಮ್ಯಾಂಡ್ ಮಾಡುತ್ತಾನೆ
ಮೊದಲೇ ಮುನಿ . ಮುನಿದರೆ ಶಾಪ ಕೊಟ್ಟಾನೆಂಬ ಭಯದಲ್ಲಿ ರಾಜ ಈ ಅರಗಿಣಿಯನ್ನ ಆ ಸದಾ ಕಾಡಲ್ಲಿ ಅಲೆದಾಡುವ ಈ ಗೌತಮರಿಗೆ ಕೊಡುತ್ತಾನೆ.ಮಗಳನ್ನು ನಿನಗೆ ಇಷ್ಟಾ ಇದೆಯಾ ಇಲ್ಲವೇ? ಅನ್ನೋದು ಊಹೂ ........... ಕೇಳಿರೊಲ್ಲ........................"

ಒಂದು ಕ್ಷ್ಗಣ ಮೇಡಮ್‌ನ ವಾಯ್ಸ್ ಅರ್ಥವಾಗದಂತೆ ಬದಲಾಯ್ತು. ಆದರೆ ಅದಕ್ಕಿಂತ ಮೊದಲು ನಾನು ಆ ಕಥೆಯಲ್ಲಿ ತೇಲುತ್ತಿದ್ದೆ

ಅಹಲ್ಯಾಳ ಸ್ಥ್ತಿತಿ ಯನ್ನು ಕಲ್ಪಿಸಿಕೊಳ್ಳತೊಡಗಿದೆ, ಸುಂದರಿ ಸುಕುಮಾರಿ ಈ ಒರಟು ಮುಖದ ಗಡ್ಡದಾರಿ ಜೊತೆ ಸಂಸಾರ ನಡೆಸುವ ಸ್ಥಿತಿಯನ್ನು ನೆನೆಸಿಕೊಂಡು ನಡುಗುವುದನ್ನ ಚಿತ್ರಿಸಿಕೊಳ್ಳತೊಡಗಿದೆ.

ಆಗಲೆ ಮೇಡ್ಂ ಮಾತು ನಿಲ್ಲಿಸಿದ್ದು ಗೊತ್ತಾಯ್ತು

"ಮೇಡಂ..................."
ಎಚ್ಚರಿಸಿದೆ

"ಹೌದು ಗೀತ ........ಈ ದೇಶದಲ್ಲಿ .......................... ಹೆಣ್ಣಿಗೆ ಪೂಜ್ಯ ಸ್ಥಾನ ಕೊಟ್ಟಿದ್ದಾರೆ ನಿಜ ಆದರೆ ಅವಳ ಭಾವನೆಗಳನ್ನು ಗೌರವಿಸುವುದಿಲ್ಲ, ಅನಿಸಿಕೆಗೆ ಬೆಲೆಯೂ ಇಲ್ಲ. ಇಂತಹ ದೇಶದಲ್ಲಿ ಹುಟ್ಟಿದ್ದ ... ಆಹಲ್ಯಾ ಳಾನ್ನು ಒಂದು ಆಶ್ರಮಕ್ಕೆ ತಂದು ಬಿಡುತ್ತಾನೆ ಗೌತಮ. ಕಾಡಲ್ಲಿ ಸದಾ ಇದ್ದು, ಹೆಣ್ನಿನ ನವಿರು ಭಾವನೆಗಳಿಗಿಂತ ತನ್ನ ಅಗತ್ಯಗಳನ್ನು ತಣಿಸಿಕೊಳ್ಳುವುದರಲ್ಲಿಯೇ ತೊಡಗಿರೋ ಆ ಗೌತಮನಿಂದ ಹೆಣ್ಣಿಗೆ ಸಹಜವಾಗಿ ಬೇಕಾದ ಮೆಚ್ಚುಗೆ, ಗೌರವ, ಕಾಳಜಿ, ಪ್ರೇಮ ಇವುಗಳನ್ನ ಹೇಗಾದರೂ ನಿರೀಕ್ಷಿಸಿಕೊಳ್ಳುತ್ತಾಳೆ ಹೇಳು ಆ ಅಹಲ್ಯಾ?
ಒಂಟಿಯಾಗಿ ಇರಬೇಕು ಇದ್ದಕ್ಕಿದ್ದಂತೆಯೇ ಎಲ್ಲೋ ಹೋಗಿಬಿಡುವ ಗಂಡ, ವಾರಾನುಗಟ್ಟಲೇ ಒಬ್ಬಳೇ, ಪುಂಡರಿಂದ ರಕ್ಸಿಸಿಕೊಳ್ಳಬೇಕು,
ಜೊತೆಗೇ ಒಂಟಿತನ.......................... ನಿನಗೆ ಅರ್ಥವಾಗಲ್ಲ ಗೀತ ಅದು ಬಹಳ ಕ್ರೂರ . ಅದರಲ್ಲೂ ಹೆಣ್ಣಿಗೆ ಮಾತು ತನ್ನ ಭಾವನೆಗಳನ್ನ ದುಗುಡಾನ, ಹತಾಶೆನಾ ಕೋಪಾನ ಪ್ರಕಟಿಸೋ ಸಾಧನ
ಅಂತಹ ಮಾತು ಆವಳಿಗೆ ಸಿಗಲಿಲ್ಲ ಭಾವನೆಗಳನ್ನುಹಂಚಿಕೊಳ್ಳಲು ಅವಳಾದರು ಯಾರ ಮೊರೆ ಹೋಗುತ್ತಾಳೆ ಹೇಳು.
ಕಿವಿಯಾಗಬೇಕಾದ ಗಂಡ ಕಿವಿ ಇದ್ದೂ ಕಿವುಡಾಗಿದ್ದ, ಅಂತಹ ಸುಂದರ ಹೆಣ್ಣನ್ನು ಹೊಗಳಲಾಗದೆ ಬಾಯಿದ್ದ್ಡೂ ಮೂಕನ ಸಮನಾಗಿದ್ದೆ.
ಹೆಣ್ಣನ್ನು ಪಂಜರದ ಗಿಣಿಯಂತೆ ಕೂಡಿಹಾಕಿಹೋಗುವುದಷ್ಟೇ ಅಲ್ಲ ಅವಳ ಮಾತಿಗೆ ಕಿವಿಯಾಗಿ,ಪ್ರತಿಮಾತಿಗೆ ಪ್ರೀತಿ ಸುರಿಸಬೇಕು ಎನ್ನುವ ಆ ಹೆಣ್ಣು ಮನಸು ಆ ಗೌತಮನ ಗಂಡು ಬುದ್ದಿಗೆ ಅರ್ಥವಾಗಲೇ ಇಲ್ಲ"

ಮೇಡಮ್ ತುಂಬಾ ಭಾವುಕರಾಗಿದ್ದಂತೆ ಕಂಡು ಬಂದರು.
ವಯಸಿನ ಪ್ರಭಾವವೋ ಏನೋ ಸುಸ್ತಾದಂತೆ ಕಂಡು ಬಂದರು. ಕುರ್ಚಿಯಿಂದ ಎದ್ದು ಕಿಟಕಿಯತ್ತ ನೋಡತೊಡಗಿದರು

"ಅಂತ ಆಹಲ್ಯೆಗೆ , ಚೈತನ್ಯದ ಚಿಲುಮೆಯಂತಹ ಇಂದ್ರ ಬೆಳಕಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಆತನೂ ತನ್ನ ಕಾರ್ಯ ಸಾಧ್ಯಕ್ಕಾಗಿಯೇ ಬಂದಿದ್ದರೂ ಅವನಪ್ರೇಮ ಸುಳ್ಳಾಗಿದ್ದರೂ ಅವನ ನಡೆ ನುಡಿಯಲ್ಲಿ ಪ್ರೀತಿಯನ್ನ ತೋರಿಸಿದ, ಅವಳನ್ನು ಹೆಣ್ಣಾಗಿಸಿದ, ಮೆಚ್ದುಗೆಯ ಹೊನಲುಹರಿಸಿದ, ಅಹಲ್ಯೆ ಕರಗಿದಳು............. ಅವಳ ಸ್ಥಾನದಲ್ಲಿ ಯಾವುದೇ ಸಾಮಾನ್ಯ ಹೆಣ್ಣಿದ್ದರೂ ಹೀಗೆ ಆಗುತ್ತಿತ್ತು................... ಅಂತಹ ವ್ಯಕ್ತಿಯಿಂದ ಅಲ್ಪ ಸಮಯವಾದರೂ ನೆಮ್ಮಧಿ ಸುಖ ಸಿಗುತ್ತಿತ್ತು......................... "
ಯಾಕೋ ಮಾತಾಡಿ ಆ ಮಾತಿನ ಓಘವನ್ನು ಕೆಡಿಸಲು ಮನಸು ಬರಲಿಲ್ಲ
"ಆದರೆ ಕೊನೆಗೆ ಗೌತಮನಿಗೆ ಇದು ತಿಳಿದೇ ಹೋಯ್ತು. ಯಾವ ಗಂಡನಾದರೂ ಸುಮ್ಮನೆ ಇರುವುದಿಲ್ಲ ಶಾಪ ಕೊಟ್ಟ. ಕಲ್ಲಾಗಿ ಹೋಗು ಅಂತ ಅದು ಕಥೆಯ ಪ್ರಕಾರ. ನನ್ ಪ್ರಕಾರ ಅಹಲ್ಯೆಯೇ ಕಲ್ಲಿನಂತಾಗಿಹೋದಳು, ಗಂಡನಿಗೆ ಮೋಸ ಮಾಡಿದ ಗಿಲ್ಟ್ ಅವಳನ್ನುಕಾಡತೊಡಗಿದೆ. ಹಾಗಾಗಿ ನಿರ್ಲಿಪ್ತಳಂತೆ ಇದ್ದುಬಿಟ್ಟಿದ್ದಾಳೆ. ಅವಳನ್ನು ಸರಿ ಮಾಡಲು ರಾಮನೇ ಬರಬೇಕಾಯ್ತು"
ನನ್ನೆಡೆಗೆ ತಿರುಗಿದರು.
" ನಿಜ ಹೇಳಲಾ ನಮ್ ಸುತ್ತಾ ಮುತ್ತಾನೆ ಎಷ್ಟೊಂದು ಅಹಲ್ಯೆರಿದ್ದಾರೆ. ಕಲ್ಲಾಗಿ ಹೋಗಿದ್ದಾರೆ. ಆದರೆ ಅವರಿಗೆ ಜೀವ ಕೊಡಲು ರಾಮ ಬರಲೇ ಇಲ್ಲ, ರಾಮ ಬರುವುದೇ ಇಲ್ಲ. ಹಾಗಾಗಿ ಆ ಅಹಲ್ಯೆಯರ ಪ್ರತಿಮೆಗಳು ಸಜೀವಗೊಳ್ಳುತ್ತಲೆ ಇಲ್ಲ......................... ಅವರೆಲ್ಲಾ ಶಾಪವಿಮೋಚನೆಯಾಗದ ಅಹಲ್ಯೆಯರು. ಅಹಲ್ಯೆಯೇ ನಮ್ಮ ದೇಶ ಹೆಣ್ಣಿನ ಭಾವಾಭಿವ್ಯಕ್ತಿಗೆ ಒಂದು ಪ್ರತಿಮೆಯಾಗಿದ್ದಾಳೆ ............... "ಮೇಡಮ್ ಕಣ್ಣಿನ ಅಂಚಿನಲ್ಲಿ ನೀರು ಜಿನುಗುತ್ತಿತ್ತು.
ಯಾವುದೋ ಪ್ರಪಂಚದಲ್ಲಿ ಮುಳುಗಿದರು ಎಂದೆನಿಸುತ್ತದೆ. ಅವರನ್ನು ಡಿಸ್ಟರ್ಬ್ ಮಾಡಲು ಹೋಗಲಿಲ್ಲ

ಏನೂ ಮಾತಾಡದೆ ಹೊರಗಡೆ ಬಂದೆ. ರೇವತಿಗೆ ಕರೆ ಮಾಡಿದೆ,
"ರೇವತಿ. ಅಹಲ್ಯಾ ಪಾತ್ರಕ್ಕೆ ನಾನು ರೆಡಿ" ಅಂದೆ

ಮೇಡಮ್‌ನ ಮೊಗ ನೆನೆಸಿಕೊಳ್ಳಲು ಪ್ರಯತ್ನಿಸಿದೆ, ಏಕೋ ಅವರ ಮೊಗ ಶಿಲಾಪ್ರತಿಮೆಯಾದ ಅಹಲ್ಯಾಳಂತೆ ಮೂಡತೊಡಗಿತು................