Tuesday, December 2, 2008

ಮಗುವೇ ತಂದೆಯ ಕೊಲೆ ಮಾಡುತ್ತದೆ

ಆಕೆ ನಡುಗಿ ಹೋದಳು. ಅವಳ ಗಂಡ ಜೋರಾಗಿ ನಕ್ಕು ಮಗುವನ್ನು ಹತ್ತಿರಕ್ಕೆಳೆದುಕೊಂಡ . ಜ್ಯೋತಿಷಿ ಮಾತ್ರ ಗಂಭೀರವಾಗಿ ಮೇಲಿನ ಮಾತನ್ನು ಹೇಳಿದ."ಸ್ವಾಮಿ ನೀವು ಹೇಳ್ತಿರೋದು ನಿಜಾನಾ? ಇನ್ನೊಂದು ಸಲ ನೋಡಿ . ಎಲ್ಲೋ ಜಾತಕ ಬದಲಾಗಿರಬೇಕು" ಆಕೆ ಗಡಿಬಿಡಿಯಿಂದ ಹೇಳಿದಳು.
"ಇಲ್ಲ ನಿಮ್ಮ ಮಗುವಿನ ರಾಶೀನೆ ಹಾಗಿದೆ.ಅವನ ಜಾತಕದಲ್ಲೇ ಈ ಥರ ಇದೆ."ಅವಳು ಜೋರಾಗಿ ಉಸಿರೆಳೆದುಕೊಂಡಳುಒಮ್ಮೆ ಮಗುವನ್ನು ಗಂಡನನ್ನು ನೋಡಿದಳು . ತನ್ನ ಮಾಂಗಲ್ಯವನ್ನು ತನ್ನ ಕರುಳ ಕುಡಿಯೇ ಕೀಳುತ್ತಾನೆಯೇ?.
ಇನ್ನೂ ಹಾಲುಗಲ್ಲದ ಮಗು .ಹತ್ತು ವರ್ಷ ಮಕ್ಕಳಿಲ್ಲದೆ ದೇವರಲ್ಲಿ ಬೇಡಿ ಕೊನೆಗೆ ಹುಟ್ಟಿದ ಮಗು. ತನ್ನ ಅಪ್ಪನನ್ನೇ ಕೊಲ್ಲುತ್ತಾನೆಯೇ?ಆತನೋ ಪ್ರಖ್ಯಾತ ಜ್ಯೋತಿಷಿ . ಅವನ ಮಾತು ಎಂದಿಗೂ ಸುಳ್ಳಾದದ್ದು ಇಲ್ಲಹೋಗಲಿ ಕೊಲೆ ಯಾವಾಗ ನಡೆಯುತ್ತದೆ ಎಂಬ ಅವಳ ಪ್ರಶ್ನೆಗೆ ಮಗುವಿಗೆ ಐದು ತುಂಬುವುದರೊಳಗಾಗಿ ಎಂದು ಉತ್ತರ ಬಂತು
ಅವಳ ಗಂಡ ಆ ಜ್ಯೊತಿಷಿಗೆ ತಲೆ ಕೆಟ್ಟಿದೆ ಎಂದ. ಯಾಕೆಂದರೆ ಮಾರನೆಯ ದಿನವೇ ಮಗುವಿನ ಐದನೆಯ ಹುಟ್ಟಿದ ಹಬ್ಬ.ಅವಳು ಮಗುವನ್ನು ಶಪಿಸಿಕೊಂಡಳು. ಇಂಥ ಕೊಲೆಗಾರ ಮಗು ಏಕೆ ಹುಟ್ಟಿತು ಎಂದು ಬೈದುಕೊಂಡಳು.
ಮಗು ಮಾತ್ರ ಮುಗ್ದವಾಗಿ ನಕ್ಕಿತು. ಗಂಡ ಅವಳಿಗೆ ಸಮಾಧಾನ ಮಾಡಿದ . ಇದನ್ನೆಲ್ಲಾ ನಂಬಬೇಡ . ದುಡ್ದು ಮಾಡುವುದಕ್ಕೆ ಒಂದು ಸುಳ್ಳು ಎಂದ.ಆಕೆ ಮಾತ್ರ ಅಳುತ್ತಲೇ ಇದ್ದಳು.
ಮಾರನೆಯ ದಿನ
ಮಗು ಬಾಲ್ಕನಿಯಲ್ಲಿ ಆಟವಾಡುತ್ತಿತ್ತು.
ಅವಳು ದೇವರ ಮುಂದೆ ಕುಳಿತಿದ್ದಳು.ಗಂಡ ಟಿ.ವಿ ನೋಡುತ್ತಿದ್ದ.ದೊಡ್ಡ ಬಂಗಲೆ ಅದು.ಮನೆಯಲ್ಲಿ ಹಲವಾರು ಜನ ಕೆಲಸ ಮಾಡುತ್ತಿದ್ದರು.ತೋಟದಾಳು ಸಿದ್ದ ಬೆಳಗ್ಗೆ ಏನೂ ತರಲೆಂದು ಹೋದವನು ಇನ್ನೂ ಬಂದಿರಲಿಲ್ಲ. ಹೆಂಡತಿ ದೇವರ ಪೂಜೆಗೆ ಸಾಮಾನು ತರಲು ಕಳಿಸಿದ್ದಳು.. ಪರಿಹಾರಕ್ಕಾಗಿ ದೊಡ್ಡ ಹೋಮ ಮಾಡಬೇಕಿತ್ತು
ಗಂಡ ಇದ್ದಕಿದ್ದಂತೆ ಎದ್ದ . ಮಗುವನ್ನು ಪಾರ್ಕಿಗೆ ಕರೆದುಕೊಂಡು ಹೋಗುತ್ತೇನೆ ಎಂದ.ಅವಳು ಇಂದು ಮಾತ್ರ ಬೇಡ . ಇಂದು ಕಳೆದರೆ ಸಾಕು ಎಂದು ಗೋಗರೆದಳುಗಂಡ ಕೇಳಲಿಲ್ಲಅದೇನಾಗುತ್ತೋ ನೋಡೋಣ ಎಂದು ಮಗುವನ್ನು ಕರೆದುಕೊಂಡು ಹೊರಟೇ ಬಿಟ್ಟ.ಹೆಂಡತಿ ಅಳು ಜೋರಾಯ್ತು.
ಇತ್ತ ಪಾರ್ಕಿನಲ್ಲಿ ಮಗುವನ್ನು ಆಟವಾಡಿಸುತ್ತಾ ಅವಳ ಗಂಡ ಆ ಘಳಿಗೆಗಾಗಿ ಕಾಯುತ್ತಿದ್ದ.
ಕೊನೆಗೂ ವ್ಯಕ್ತಿ ಕಾಣಿಸಿದಅವನನ್ನು ಮಾತಾಡಿಸಿದ"ಯಾಕೋ ಸಿದ್ದ ಮಾರ್ಕೆಟಿಗೆ ಹೋಗಿ ಬಾ ಅಂದರೆ ಇಲ್ಲೇನು ಮಾಡ್ತಾ ಇದ್ದೀಯಾ?"ಸಿದ್ದ ಮಾತಾಡಲಿಲ್ಲ
ಮಗು ಸಿದ್ದನ್ನನ್ನು ಕಂಡಕೂಡಲೆ "ಸಿದ್ದಾ" ಎಂದು ತಬ್ಬಿಕೊಂಡಿತು. ಆತ ಮಗುವನ್ನು ದೂರ ತಳ್ಳಿದ." ಸಿದ್ದ ಯಾಕೋ ಕೋಪ " ಮತ್ತೆ ಅವನ ಮೇಲೆ ಬಿದ್ದಿತು . ಅವನಿಗೊ ಮಗುವಿಗೂ ತುಂಬಾ ಪ್ರೀತಿ .
ಆತ ಮತ್ತೆ ಗಾಭರಿಯಿಂದ ನೂಕಿದ.ಮಗುವಿಗೂ ಕೋಪ ಬಂತು . ತಂದೆಯ ಕೈ ಹಿಡಿದುಕೊಂಡು ನಿಂತಿತು
ಗಂಡ ಸಿದ್ದನನ್ನು ಮನೆಗೆ ಕರೆದ . ಸಿದ್ದನಿಗೆ ಒಪ್ಪದೆ ವಿಧಿ ಇರಲಿಲ್ಲ ವಾದ್ದರಿಂದ ಅವನೊಂದಿಗೆ ಹೊರಟ
ದಾರಿಯಲ್ಲಿ"ಸಿದ್ದ ನಂಗೆಲ್ಲಾ ಗೊತ್ತು. ಏನು ಗೊತ್ತಾಗಬಾರದು ಅಂತಿದ್ರೋ ಅದು ನಂಗೆ ತಿಳೀತು ಆದರೆ ನಾನೇನು ಮಾಡಲ್ಲ ಹೆದರ್ಕೋಬೇಡ" ಸಿದ್ದ ಬೆವೆತಿದ್ದ ಗಡ ಗಡ ನಡುಗುತ್ತಿದ್ದ.ಆ ತೋಟದ ಮನೆಯ ಹತ್ತಿರ ಬರುತ್ತಿದ್ದಂತೆ "ಬುದ್ದಿ ತಪ್ಪಾಯ್ತು ನಾನೆಷ್ಟು ಹೇಳಿದರು ಅಮ್ಮಾವ್ರು ಕೇಳಲಿಲ್ಲ" ಕಾಲಿಗೆ ಬಿದ್ದ.ಹೋಗಲಿ ಬಿಡು ಅಳಬೇಡ ಆಗಿದ್ದಾಗಿ ಹೋಯ್ತು . ಇನ್ನು ಇವತ್ತು ಮಗುವಿನ ಐದನೇ ಹುಟ್ಟುಹಬ್ಬ .ಫಂಕ್ಶ್ನ‌ಗೆ ರೆಡಿ ಮಾಡೋಣ"ಮೇಲೆದ್ದ ಸಿದ್ದನಿಗೆ ಯಾರೋ ನೂಕಿದಂತಾಯ್ತು .
ಆಯ ತಪ್ಪಿದ ಆತ ಬಾವಿಗೆ ಬಿದ್ದ. ಬೀಳುವಾಗ ಆ ಮಗು ಕೇಕೆ ಹಾಕಿ ನಕ್ಕಿದ್ದು ಕಂಡಿತು.ಒಂದೇ ಚೀತ್ಕಾರದ ನಂತರ ಇಡೀ ತೋಟ ನಿಶ್ಯಬ್ಧವಾಯ್ತು .ಸಿದ್ದ ಬಿದ್ದ ಸಿದ್ದ ಬಿದ್ದ ಎಂದು ಮಗು ನಗುತ್ತಿತ್ತು
ಆಗಲೆ ಅವನು ತನ್ನನ್ನು ನೂಕಿದ ಸೇಡನ್ನು ಮಗು ತೀರಿಸಿಕೊಂಡಿತ್ತು.ಸ್ವಲ್ಪ ಸಮಯದ ನಂತರ ಆತ ಮೊಬೈಲ್ ತೆಗೆದು ಫೋನ್ ಮಾಡಿದ"ಸಾರ್ ನಿಮ್ಮಿಂದ ದೊಡ್ಡ ಸಹಾಯವಾಯ್ತು . ನನ್ನ ಮಗುವಿನ ತಂದೆಯನ್ನು ಮಗುವಿನ ಕೈನಲ್ಲೇ ಕೊಲ್ಲಿಸಿದೆ.ನನಗೆ ಈಗ ತೃಪ್ತಿಯಾಯ್ತು ""ಒಕೆ ಒಕೆ" ಅದು ಜ್ಯೋತಿಷಿಯ ದನಿ
ಸ್ವಲ್ಪ ಹೊತ್ತಿನ ನಂತರ ಮಗುವಿನ ಕೈ ಹಿಡಿದುಕೊಂಡು ಮನೆಗೆ ಬಂದ"ಆ ಜ್ಯೋತಿಷಿ ಹೇಳಿದ್ದೆಲ್ಲಾ ಸುಳ್ಳು. ಪಾಪು ಸಿದ್ದನನ್ನು ಬಾವಿಗೆ ಬೀಳಿಸ್ತು. ಸುಮ್ಮನ್ದೆ ನನ್ನ ಕೊಲೆ ಮಾಡುತ್ತೆ ಅಂತ ಹೇಳಿದ"ಅವಳ ಮುಖ ಬಿಳುಚಿಕೊಂಡಿತು."ಮಗು ಸಾಯ್ಸಿದ್ದ್ದು ಅಂತ ಯಾರಿಗೂ ಹೇಳಬೇಡ . ಸುಮ್ಮನ್ದೆ ಇಲ್ಲ ಸಲ್ಲದ ತೊಂದರೆ . ಆಯ್ತಾ "ಅವಳ ಕಂಗಳು ಕಣ್ಣೀರಿನಿಂದ ತುಂಬಿತ್ತು . ಆಯಿತು ಎನ್ನುವಂತೆ ತಲೆ ಆಡಿಸಿದಳು
ಕೊನೆ ಕೊಸರು: ಸಿದ್ದನನ್ನು ಬಾವಿಗೆ ಬೀಳಿಸಿದ್ದು ಮಗು ಅಲ್ಲ ಮಗುವಿನ ತಾಯಿಯ ಗಂಡ . ಆ ಸತ್ಯ ರಹಸ್ಯವಾಗಿಯೇ ಉಳಿಯಿತು ಹಾಗೆಯೇ ಆ ಮಗುವಿನ ತಂದೆ ಸಿದ್ದ ನೆಂಬ ರಹಸ್ಯ ತಾಯಿಗಲ್ಲದೆ ಬೇರಾರಿಗೂ ಗೊತ್ತಿಲ್ಲವೆಂದು ಅವಳು ತಿಳಿದಿದ್ದಳು ಕೊನೆಯವರೆಗೂ

ಮಕ್ಕಳ ಹಾಡುಗಳು ಮೆಲುಕುವುದಕ್ಕೆ

ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್ ಅನ್ನು ಕನ್ನಡಕ್ಕೆ ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು
ಪುಟ್ಟಿ ಜೊತೆ ಇತ್ತೊಂದು ಕುರಿಮರಿಅದರ ಆಟ ಏನ್ಹೇಳ್ತೀತಿರಿ ರೀ
ಬಣ್ಣ ಅದರದು ಬಿಳುಪು ಕಣ್ಣ್ಣು ಫಳ ಫಳ ಹೊಳಪು
ಎಲ್ಲಿಗೋದ್ರೂ ಪುಟ್ಟಿ , ಅವಳ ಬೆನ್ನು ಹತ್ತಿಮರಿ ಹೋಗ್ತಿತ್ತು ಬಿಟ್ಟು ತನ್ನ ಹಟ್ಟಿ
ಒಮ್ಮೆ ಹೋಗಿ ಪುಟ್ಟಿ ಶಾಲೆಗೆಮಾಡ್ತು ತುಂಬಾ ದಾಂಧಲೆಟೀಚರಮ್ಮ ಹೊಡ್ಯೋಕೆ ಹೋದರೆಓಡ್ತು ಬ್ಯ್ಬಾ ಬ್ಯಾ ಅಂತಲೇ
ಹೊಳೆ ಹೊಳೆಯುವ ನಕ್ಷತ್ರ ಬಾರೋ ಒಮ್ಮೆ ನನ್ಹತ್ರಅದು ಹೆಂಗೆ ಹೋಗಿ ಸೇರಿದೆ ಆಕಾಶನನ್ನೂ ಕರ್ಕೊಂಡು ಹೋಗು ಬಾಬಾರಾ
ಗುಂಡ ಗುಂಡಿ ನೀರಿಗೋದ್ರು ಕೆರೆಯ ಏರಿಗೆಗುಂಡ ಗುಂಡಿ ಜಾರಿ ಬಿದ್ರು ನಡು ದಾರಿಗೆ
ದೂರ ಹೋಗು ಮಳೆರಾಯಆಟ ಆಡ್ಬೇಕು ನಾನಯ್ಯ
ನೀನು ಬಾ ನಾಳೆಸ್ಕೂಲಿಗೆ ಹೋಗೋ ಟೈಮಲ್ಲೇಅಮ್ಮ ನೋಡಿ ನಿನ್ನ ಬೇಡ ಸ್ಕೂಲಿಗೆ ಅಂತಾಳೆ

Monday, December 1, 2008

qan

ನಮ್ಮ ತಾಯಿಯ ಅಜ್ಜಿಯ ಊರು ಈ ಕಣಕಟ್ಟೆ. ಅಲ್ಲಿನ ದೇವಿ ದುಗ್ಗಮ್ಮನನ್ನು ನೋಡಲು ಹೊರಟಿದ್ದಾದರೂ ನಮ್ಮ ಮುತ್ತಜ್ಜಿಯ ಊರು , ಅಲ್ಲಿನ ನಮ್ಮ ಅಜ್ಜಿಯ ಮನೆ, ಎಲ್ಲವನ್ನೂ ನೋಡುವ ಆಸೆಯೇ ನಮ್ಮಲ್ಲಿ ಹೆಚ್ಚಾಗಿದ್ದು ಸುಳ್ಳಲ್ಲ.ನಾವು ಶುಕ್ರವಾರ ಸಂಜೆ ವೇಳೆ ಹೊರಟ್ಟಿದ್ದರಿಂದ ಅರಸೀಕೆರೆ ಸೇರಿದ್ದು ರಾತ್ರಿ ಹನ್ನೆರೆಡು ಘಂಟೆಗೆ . ಹರಿಹರಪುರ ಶ್ರೀಧರ್‌ರವರು ಸಲಹೆಯಂತೆ ಅಲ್ಲಿನ ಮಯೂರ ಲಾಡ್ಜ್‌ನಲ್ಲಿ ಅಂದು ತಂಗಿದೆವು. ಬೆಳಗ್ಗೆ ೮.೩೦ ಗೆ ಹೊಟ್ಟೆ ತುಂಬಿಸಿಕೊಳ್ಳಲು ಅಯೋಧ್ಯ ಹೋಟೆಲ್‌ಗೆ ನುಗ್ಗಿದೆವು. ರುಚಿಯಾದ ತಿಂಡಿಗಳು, ನಿಜಕ್ಕೂ ಹೋಟೆಲ್ ಚಿಕ್ಕದಾದರೂ ತಿಂಡಿ ಬಹಳ ರುಚಿ. ನಿಲ್ಲಲೂ ಜಾಗವಿಲದಂತಹ ಪರಿಸ್ಥಿತಿಯಲ್ಲೂ ತಮ್ಮ ಸರದಿಗಾಗಿ ಜನ ಕಾಯುತ್ತಿರುತ್ತಾರೆ.ಅಲ್ಲಿಂದ ಹೊರಟಿದ್ದು ಸೀದಾ ಕಣಕಟ್ಟೆಗೆ ಬಾಣಾವರದ ದಾಟಿ ಹೋಗುತ್ತಿದಂತೆ ಅಲ್ಲಿನ ಹಸಿರು ಕಣ್ಣು ತುಂಬಿತು . ತೀರ ಬಯಲು ಸೀಮೆಯಲ್ಲಿ ಬೆಳೆದ ನಮಗೆ ನಮ್ಮ ಮಕ್ಕಳಿಗೆ ಅವನ್ನು ನೋಡುವುದೇ ಒಂಥರಾ ಪರಮಾನಂದ. ನಮ್ಮ ತಾಯಿಗಂತೂ ಸಡಗರ . ಎಷ್ಟಾದರೂ ತಮ್ಮ ಅಜ್ಜಿಯ ಊರಲ್ಲವೇ?ಅಂತೂ ಇಂತೂ ನಾವು ಬಯಸುತ್ತಿದ್ದ ಕಣಕಟ್ಟೆ ಬಂದೇ ಬಿಟ್ಟಿತು ಅಮ್ಮ ಅಲ್ಲಿನ ಅಂಗಡಿಯೊಂದರಲ್ಲಿ ಮಾತಾಡಿದರು . ನರಸಕ್ಕ(ನಮ್ಮ ಮುತ್ತಜ್ಜಿಯ ಹೆಸರು) ತುಂಬಾನೆ ಪ್ರಸಿದ್ದವಾದ ಹೆಸರು ಅಲ್ಲಿನ ಊರಿನವರಿಗೆ . ಅವರು ಈಗ ಇಲ್ಲವಾದರೂ ಅವರ ಹೆಸರು ಮಾತ್ರ ಜನರ ನಾಲಿಗೆಯ ಮೇಲೆ ಇನ್ನೂ ಹರಿದಾಡುತ್ತಿದೆ. ನರಸಕ್ಕನ ಮೊಮ್ಮಗಳು ತನ್ನ ಮೊಮ್ಮ್ಮಕ್ಕಳೊಂದಿಗೆ ಊರಿಗೆ ಭೇಟಿ ನೀಡಿದ್ದೇ ಅಲ್ಲಿನ ಜನರ ಕೌತಕಕ್ಕೆ ಕಾರಣವಾಗಿತ್ತು.ಮೊದಲು ದೇವಿಯ ದರ್ಶನ ನಂತರ ಊರನ್ನು ನೋಡುವುದು ಎಂದು ನಿರ್ಧಾರವಾಯ್ತು ದುಗ್ಗಮ್ಮ್ಮ ಅಲ್ಲಿನ ಕಣಕಟ್ಟೆ ಕೆರೆಯ ಏರಿಯ ಮೇಲೆ ಉದ್ಭವಾಗಿರುವಂತಹ ದೇವಿ . ಕಣಕಟ್ಟೆ ಊರಿನ ಜನರ ರಕ್ಷೆಗೆಂದೆ ಉದ್ಭವಿಸಿರುವಂತಹವಳೆಂದು ಪ್ರತೀತಿ. ನಮ್ಮ ತಾಯಿಯ ಮನೆಯವರೆಲ್ಲಾ ಯಾವುದೇ ಶುಭ ಕಾರ್ಯಕ್ಕೆ ಹೋಗುವ ಮುನ್ನ ಆ ದೇವಿಯ ದರ್ಶನ ಪಡೆದೇ ಹೋಗುತ್ತಾರೆ .

ಅಲ್ಲಿ ನಾವುಗಳೇ ದೇವಿಗೆ ಗರ್ಭಗುಡಿಯೊಳಗೆ ಹೋಗಿ ಪೂಜೆ ಮಾಡಬಹುದು. ಜಾತಿಯ ಪ್ರಶ್ನೆ ಅಂತಲ್ಲ ಆದರೆ ಬ್ರಾಹ್ಮಣರಿಗೆ ಮಾತ್ರ ಅಲ್ಲಿನ ಪೂಜಾರಿಗಳು ಕೊಡುವ ಮರ್ಯಾದೆ ಇದು.

ನಾವು ಹೋದಾಗ ದೇವಸ್ಥಾನ ಬಾಗಿಲು ಹಾಕಿತ್ತು. ನಮ್ಮ ಭಾವ ಹಾಗು ಅಮ್ಮ ಪೂಜಾರಿಯನ್ನು ಕರೆದುಕೊಂಡು ಬರಲು ಮತ್ತೆ ಊರಿಗೆ ಹೋದರು.

ಅಷ್ಟು ಹೊತ್ತಿಗಾಗಲೇ ಆ ಪೂಜಾರಿಗೆ ಯಾರು ಬ್ರಾಮ್ರು ಅಮ್ಮಾವರ ದರ್ಶನಕ್ಕೆ ಬಂದವ್ರೆ ಎಂಬ ವಿಶ್ಯ ಗೊತ್ತಾದದ್ದರಿಂದ ಆತ ಕೂಡಲೆ ಬಸ್ ಮಾಡಿಕೊಂಡು ಬಂದಿದ್ದ್ದ . ನಂತರ ನಮ್ಮ ಭಾವನಿಗಾಗಿ ಕಾದು ಕೊನೆಗೆ ಸುಮಾರು ಒಂದು ಘಂಟೆ ಕಾಯುವಂತಾಯ್ತು .

ಕೊನೆಗೂ ಆ ತಾಯಿಯ ದರ್ಶನ ಮಾಡಿಕೊಂಡು , ಪೂಜೆ ಮಾಡಿ ಅಲ್ಲಿನ ದೇವಸ್ಥಾನದ , ಕೆರೆಯ ಒಂದಷ್ಟು ಫೋಟೊ ತೆಗೆದುಕೊಂಡು ನಂತರ ಇನ್ನೇನು ಹೊರಡಬೇಕೆಂದುಕೊಂಡೆವು ಆಗ ನಮ್ಮ ಅತ್ತೆ ಬೆಳಗೂರು ಶ್ರೀ ಆಂಜನೇಯ ಸ್ವಾಮಿಯ ದರ್ಶನ ಮಾಡಿಕೊಂಡು ಹೊರಡೋಣ ಎಂದರು.

ಅಂತೆಯೇ ದರ್ಶನ ಮುಗಿಸಿಕೊಂಡು ಬರುವಷ್ಟರಲ್ಲಿ ಕಣಕಟ್ಟೆಗೆ ಬರುವಷ್ಟರಲ್ಲಿ ಸಂಜೆ ಏಳು ಘಂಟೆಯಾಗಿತ್ತು . ಅಮ್ಮನ ಅಜ್ಜಿಯ ಮನೆ ನೋಡುವ ಕಾತುರ ನಮಗೆ ಇನ್ನೂ ಹೆಚ್ಚಾಗಿತ್ತು.

ಅಂತೂ ಇಂತು ನಮ್ಮ ಮುತ್ತಜ್ಜಿಯ ಮನೆ ಇದ್ದ ಜಾಗಕ್ಕೆ ಬಂದೆವು . ನಮ್ಮ ಆಸೆ ಎಲ್ಲಾ ಟುಸ್ ಆಯಿತು ಏಕೆಂದರೆ ನಮ್ಮ ಮುತ್ತಜ್ಜಿಯ ಮನೆ ಇದ್ದ ಜಾಗ ಏರ್‌ಟೆಲ್ ಟವರ್‌ಗೆ ಆಶ್ರಯವಾಗಿತ್ತು ನಮ್ಮ ಮುತ್ತಜ್ಜಿಯ ಮನೆ ಈಗ ಅಲ್ಲಿತ್ತು ಎಂಬುದಕ್ಕೆ ಕುರುಹೂ ಇರಲಿಲ್ಲ . ಅಲ್ಲಿಗೆ ಹೋಗುವುದಿರಲಿ ನೋಡುವುದಕ್ಕೂ ಬಹಳ ಕಷ್ಟ ಪಡಬೇಕಿತ್ತು. ರಾತ್ರಿ ಯಾದ್ದರಿಂದ ಫೋಟೋಗೂ ಸಿಗಲಿಲ್ಲ . ಆದರೂ ನಮ್ಮ ಯಜಮಾನರು ಬಂದದ್ದು ಬರಲಿ ಎಂದು ಒಂದಷ್ಟು ಕ್ಲಿಕ್ಕಿಸಿದರು.

ಊರು ಬಣ ಬಣ ಅನ್ನುತ್ತಿತ್ತು . ಅಲ್ಲಿ ಮನೆಗಳಿದ್ದರೂ ವಾಸಿಸಲು ಜನರೇ ಇಲ್ಲ ಹಾಗೂ ಹೀಗೂ ನಮ್ಮ ತಾಯಿಯ ಚಿಕ್ಕಮ್ಮನ ವಾರಿಗೆಯವರೊಬ್ಬರು ಸಿಕ್ಕರು. ಅಲ್ಲಿ ಇನ್ನೊಂದೆರೆಡು ನಿಮಿಷ ಇದ್ದರೆ ತಲೆ ಚಿಟ್ಟು ಹಿಡಿಯುತ್ತದೆಯೇನೋ ಎಂಬ ಅನುಮಾನ ಕಾಡತೊಡಗಿತು ಕೇವಲ ಏಳು ಘಂಟೆ ಅಂಥ ನೀರವ ಮೌನ , ಕತ್ತಲು ನಾನೆಂದೂ ಕಂಡಿದ್ದಿಲ್ಲ.

ಅಲ್ಲೆ ಕೊಂಚ ಮೇಲೆ ಶ್ರೀ ಲಕ್ಶ್ಮಿ ನಾರಾಯಣ ಸ್ವಾಮಿಯ ದೇವಸ್ಥಾನವಿತ್ತು . ಅದರ ಅರ್ಚಕರ ಮನೆಯೂ ಹತ್ತಿರವೇ ಇತ್ತು. ಅವರೂ ಕೂಡಲೆ ಬಂದರು . ಆ ದೇವರ ಮಹಾತ್ಮೆಯನ್ನು ಕೇಳಿ ಅಲ್ಲಿನ ಪೂಜೆ ಮುಗಿಸಿಕೊಂಡು ಬಂದು ಅಲ್ಲೇ ಇದ್ದ ಮುಕ್ಕಣ್ಣ ಮಾರಮ್ಮ ಎಂಬ ದೇವಿಯ ದೇವಸ್ಥಾನಕ್ಕೆ ಬಂದೆವು . ಅಂದು ನಮ್ಮ ಅದೃಷ್ಟವೋ ಏನೊ ದೇವಿ ಹೊರಡಿಸುವುದು(ದೇವಿ ಮೈ ಮೇಲೆ ಬರುವ ಸನ್ನಿವೇಶ) ನಡೆಯುತ್ತಿತ್ತು. ಒಂದಷ್ಟು ಜನರು ತಮ್ಮ ತಮ್ಮ ಸಮಸ್ಯೆಗಳನ್ನು ದೇವಿಯ ಮುಂದೆ ಇಡುತ್ತಿದ್ದರು. ದೇವಿಯ ದೊಡ್ಡ ಮುಖವಾಡ ಧರಿಸಿದ ವ್ಯಕ್ತಿಯೂಬ್ಬರ ಮೈ ಮೇಲೆ ದೇವಿ ಬಂದಿತ್ತಂತೆ.
ನಾವು ಹೊರಡಬೇಕು ಎಂದುಕೊಳ್ಳುತ್ತಿದ್ದಂತೆ ದೇವಿಯಿಂದ ನಾವಲ್ಲೇ ಇರಬೇಕೆಂಬ ಅಪ್ಪಣೆಯಾಯಿತು .
ಫೋಟೋ ಕ್ಲಿಕ್ಕಿಸಲು ಭಯ. ಹಾಗಾಗಿ ಫೋಟೊ ತೆಗೆಯಲಿಲ್ಲ
ಅಷ್ಟರಲ್ಲಿ ನನ್ನ ಮಗಳು ಆ ಮಾಮಿಯನ್ನು(ದೇವಿಯನ್ನು) ಮುಟ್ಟಬೇಕು ಎಂದು ಹಟ ಹಿಡಿದಳು.
ಕೊನೆಗೂ ಹೊರಡಬಹುದೆಂದು ನಮಗೆ ಅಪ್ಪಣೆಯಾಯಿತು . ನನ್ನ ಮಗಳು ದೇವಿಯ ಮುಖವಾಡವನ್ನು ಮುಟ್ಟಿ ಬಂದಳು.
ಕೊನೆಗೂ ಕಟ್ಟೆಯಿಂದ ಹೊರಡುತ್ತಿದ್ದಂತೆ ಅಮ್ಮನ ಕಣ್ಣಲ್ಲಿ ನೀರು .

ಯಾವುದೋ ಹಳೆಯ ನೆನಪು .ನಮ್ಮ ಅಜ್ಜಿಯ ಮನೆಗಾಗಿದ್ದ ಗತಿ ಅವಳಿಗೆ ನೋವು ತಂದಿತ್ತು
ಸಾಧ್ಯವಾದರೆ ಆ ಜಾಗವನ್ನು ಕೊಂಡುಕೊಳ್ಳುವುದೆಂದು ನಿರ್ಧರಿಸಿದೆ.
ನಂತರ ಮತ್ತೆ ಅರಸೀಕೆರೆ ಎಡೆಗೆ ಪಯಣ . ಮುತ್ತಜ್ಜಿಯ ಮನೆ ಊರು ಇವುಗಳ ಬಗ್ಗೆ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದ ನಮಗೆ ಅಲ್ಲಿನ ಪಾಳು ಜಾಗ, ಪಾಳು ಬಿದ್ದ ಓರು ನಿರ್ಜನ ಬೀದಿಗಳ ನೋಡಿದ ಮೇಲೆ ಮನಸ್ಸು ಭಾರವಾಗಿತ್ತು