Wednesday, November 18, 2009

ಗಮ್ಯ ಹುಡುಕುತ್ತಾ ಮೂರನೆ ಕಂತು

"ಶಿವು ಏನ್ಮಾಡೋದು ಈಗಾ?" ಗೊಂದಲದ ಕಣ್ಣುಗಳಲ್ಲಿ ಮುಂದೇನು ಎಂಬ ಆತಂಕ ಮನೆ ಮಾಡಿತ್ತು


"ಸ್ವಾತಿ ಆ ಸ್ವಾಮಿ ಯಾರು ಎಲ್ಲಿಯವನು ಏನು ಗೊತ್ತಿಲ್ಲ . ಐ ಥಿಂಕ್ ಇಟ್ ಈಸ್ ಡಿಫಿಕಲ್ಟ್ ಟು ಟ್ರೇಸ್" ಕಾರ್ ಕೀ ಹಾಕುತ್ತಾ ನುಡಿದ ಮತ್ತೆಮುಂದುವರೆಸಿದ


" ಆದರೂ ಕೆಲವೊಂದು ಸಾಧ್ಯತೆಗಳನ್ನು ಊಹಿಸಬಹುದು"


ಅವನತ್ತ ಏನು ಎಂಬಂತೆ ನೋಡಿದಳು


"ಸಾಧ್ಯತೆ ಒಂದು . ನೀನು ಆ ಸ್ವಾಮಿಯ ಮಗಳಾಗಿರಬಹುದು" ಸ್ವಾತಿಯ ಮುಖ ಬಿಳುಚಿತು ಅದನ್ನು ಗಮನಿಸದವನಂತೆ ಮುಂದುವರೆಸಿದ


"ಗಂಡು ಮಗು ಬೇಕು ಅನ್ನೊ ಕಾರಣಕ್ಕೆ ಬದಲಾಯಿಸಿರಬಹುದು . ಹಾಗಿದ್ದಲ್ಲಿ ಆ ಸ್ವಾಮೀನ ಹುಡುಕಬೇಕು"


"ಸಾಧ್ಯತೆ ಎರೆಡು ಆ ಸ್ವಾಮಿ ಯಾವುದೋ ಮಾಟ ಮಂತ್ರ ಮಾಡುವವನಾಗಿದ್ದು ಗಂಡುಮಗುವನ್ನು ಬಲಿಕೊಡಬೇಕಿದ್ದುದರಿಂದ ಗಂಡು ಮಗುವನ್ನು ಕೊಂಡೊಯ್ದಿದ್ದಾನೆ. ಹಾಗಿದ್ದಲ್ಲಿ ಅವನು ನಿನ್ನನ್ನ ಎಲ್ಲಿಂದಕರೆತಂದ ಎಂಬುದನ್ನು ಪತ್ತೆ ಹಚ್ಚಬೇಕು ಅದು ಹೇಗೆ?" ಶಿವು ಕನ್ನಡಿಯಲ್ಲಿ ತನ್ನ ಮುಖವನ್ನೆ ನೋಡುತ್ತಿದ್ದ




ಸ್ವಾತಿಯ ಮೈ ಕಂಪಿಸಿತು



"ಶಿವು ನೀನುಮೊಬೈಲ್ ನಲ್ಲಿ ಮರಿಯಮ್ಮನ ಮಾತನ್ನೆಲ್ಲಾ ರೆಕಾರ್ಡ್ ಮಾಡಿಕೊಂಡಿದ್ದೀಯಲ್ಲಾ ಅದನ್ನ ಹಾಕು ಒಂದ್ಸಲ ಕೇಳೋಣ" ಮರಿಯಮ್ಮನಿಗೆ ಗೊತ್ತಾಗದ ಹಾಗೆ ಅವಳ ಮಾತನ್ನೆಲ್ಲಾ ರೆಕಾರ್ಡ್ ಮಾಡಿಕೊಳ್ಳುವ ಉಪಾಯ ಸ್ವಾತಿಯೇ ಕೊಟ್ಟಿದ್ದು




ಶಿವು ಆನ್ ಮಾಡಿದ




ಮಾತುಮುಂದುವರೆಯುತ್ತಿತ್ತು




"ಅವನು ಕೊಟ್ಟ ಹಣ ತಗೊಂಡು ಮಗೂನ ಅವನಿಗೆ ಕೊಟ್ಟು ನಿನ್ನನ್ನ ಕೈಗೆತ್ತಿಕೊಂಡೆ. ತುಂಬಾ ಚೆನ್ನಾಗಿದ್ದೆ ನೀನು. ನಿನ್ನ ಬಟ್ಟೆ ಬರೆ ಹೊದ್ಕೊಂಡಿದ್ದು ಎಲ್ಲಾನೂ ಬಿಚ್ಚಿ ಒಂದು ಬ್ಯಾಗಲ್ಲಿ ಹಾಕಿ ನಿನ್ನನ್ನ ಪಾರ್ವತಮ್ಮನ ಪಕ್ಕದಲ್ಲಿ ಮಲಗಿಸಿದೆ"




"ಶಿವು ಸ್ಟಾಪ್ ಮಾಡು" ಸ್ವಾತಿ ಏನೋ ಹೊಳೆದವಳಂತೆ ನುಡಿದಳು




"ಮರಿಯಮ್ಮ ನನ್ನ ಬಟ್ಟೇನ್ಲೆಲ್ಲಾ ಯಾವುದೋ ಬ್ಯಾಗ್‌ಲ್ಲಿ ಹಾಕಿದೆ ಅಂದಳಲ್ಲ ಅದು ಸಿಗಬಹುದಾ"


"ಹೌದಲ್ವಾ . ಆದರೂ ಆ ಬಟ್ಟೇನೆಲ್ಲಾ ಅವಳು ತಂದಿರ್ತಾಳೆ ಅಂತ ಹೇಗೆ ಹೇಳೋದು"ಶಿವೂನ ದನಿಯಲ್ಲಿ ನಿರಾಸೆ ತುಂಬಿತ್ತು

"ಆದರೂ ಒಂದು ಸಲ ಕೇಳೋಣಾ ಶಿವು"

ಕಾರಿನಿಂದ ಇಳಿದು ಮರಿಯಮ್ಮನ ಮನೆಯತ್ತ ನಡೆದರು


ಮರಿಯಮ್ಮನ ಮುಖದಲ್ಲಿ ಅಸಂತೋಷ ಎದ್ದು ಕಾಣುತ್ತಿತ್ತು

"ಅಲ್ಲಾ ಆ ಬಟ್ಟೇನಲ್ಲಾ ನಾನ್ಯಾಕೆ ತರಲಿ . ಅದನ್ನಾ ಆ ಮನೇಲೇ ಬಿಟ್ಟು ಬಂದೆ ನಂದು ಒಂದಷ್ಟು ಸಾಮಾನು ಇತ್ತು ಅಲ್ಲಿ. ಮತ್ತೆ ಮತ್ತೆ ಬಂದು ತೊಂದರೆ ಕೊಡ್ಬೇಡಿ "



ಶಿವು ಹೇಳಿದ


"ಮರಿಯಮ್ಮ ನಾವೆಷ್ಟು ಸಲ ಬರ್ತೀವೋ ಆಗೆಲ್ಲಾ ನಿಂಗೆ ಮೂರು ಮೂರು ಸಾವಿರ ರೂಪಾಯಿ ಸಿಗುತ್ತೆ . ಈಗೇನ್ ಹೇಳ್ತೀಯಾ" ಅವಳನ್ನೆ ಅವಲೋಕಿಸಿದ


ಅವಳಿಗಾದ ಸಂತೋಷ ಗೊತ್ತಾಗುತ್ತಿತ್ತು



"ಹಂಗಿದ್ರೆ ಸರಿ. ಸ್ವಾತಿ ನಿಮ್ಮ ಊರಲ್ಲಿ ಒಂದು ಹುಣಿಸೇ ಹಣ್ಣಿನ ಮರ ಇತ್ತಲ್ಲಾ ಅದು ಈಗಿದೆಯಾ?"

ಸ್ವಾತಿಗೆ ತಲೆ ಕೆಟ್ಟಿತು


"ಮರಿಯಮ್ಮ ನಂಗೆ ಬೇಕಾಗಿರೋದೇನು , ನೀನೇನು ಹೇಳ್ತಾ ಇದ್ದೀಯಾ?"


"ಹಂಗಲ್ಲಾ ಆ ಹುಣಿಸೇ ಹಣ್ಣಿನ ಮರದ ಪಕ್ಕ ಒಂದು ಸಣ್ಣ ಮನೆ ಇತ್ತು. ಅದು ಯಾರೋ ಶಿವರಾಜ್ ಗೌಡ ಅನ್ನೋರ ಮನೆ . ನಾನು ಬಾಡಿಗೆಗೆ ತಗೊಂಡಿದ್ದು ಅವರನ್ನಕೇಳಿದರೆ ಆ ಬಟ್ಟೆ ವಿಷಯ ಗೊತ್ತಾಗುತ್ತೆ ಹಾಗೆ ನನ್ನ ಪಾತ್ರೆಗಳು ಸಿಗುತ್ತೇ"


ಸ್ವಾತಿ ನೆನಪಿಸಿಕೊಳ್ಳತೊಡಗಿದಳು.


ಅವಳಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಅಪ್ಪ ಶಿವರಾಜ್ ಗೌಡ ಎಂಬಾತನ ಜಮೀನನ್ನು ಕೊಂಡುಕೊಂಡಿದ್ದೇನೆ ಎಂದು ಹೇಳುತ್ತಿದ್ದರು.


" ಹೌದು ಈಗ ಅಲ್ಲಿ ಹುಣಿಸೇ ಮರ ಇಲ್ಲ ಅದನ್ನ ಕೆಡವಿ ಅಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಬಂದಿದೆ ಅದು ಅಪ್ಪಂದೇ "ಎಂದಂದವಳ ಮುಖವನ್ನು ನೋಡಿ ನಕ್ಕಳು ಮರಿಯಮ್ಮ


ಆ ನಗುವಿನ ಅರ್ಥ ಆಗಿ ಪೆಚ್ಚಾದಳು ಸ್ವಾತಿ. ಈಗ ರೆಡ್ಡಿಗಳು ಅವಳಪ್ಪ ಅಲ್ಲ ಎಂಬ ಗೂಢಾರ್ಥ ಅದು

"ಅದು ಇವರ ಮಾವಂದೇ" ಎಂದು ತಿದ್ದಿದಳು.


"ಹಾಗಿದ್ರೆ ಮಾವನ್ನೇ ಕೇಳೋಣ ನಡೀ" ಎಂದು ಹೇಳಿ ನಿಂತ ಶಿವು


ಮರಿಯಮ್ಮ ಅವನನ್ನೇ ನೋಡಿದಳು. ಹಣದ ಹಸಿವಿನವಳು

ಐನೂರರ ಆರು ನೋಟು ಕೊಟ್ಟ.


"ಆಗಾಗ ಬರ್ತಾ ಇರಿ" ಮರಿಯಮ್ಮ ಇಲ್ಲದ ಆತ್ಮೀಯತೆ ತೋರಿದಳು.


ಶಿವು ಸ್ವಾತಿ ಮನೆ ದಾರಿ ಹಿಡಿದರು


**********************


ರೆಡ್ಡಿಯವರು ತಲೆ ಕೆಡಿಸಿಕೊಂಡಿದ್ದರು. ಅಲ್ಲಾ ಸ್ವಾತಿ ತಲೆ ಕೆಡಿಸಿದ್ದಳು

"ಆ ಜಮೀನಿನಲ್ಲಿ ಒಂದು ಮನೆ ಇತ್ತಲ್ಲಾ ಆ ಮನೆ ಕೆಡವಿದಾಗ ಏನೇನು ಸಿಕ್ಕವು ಅಪ್ಪ ಅದೆಲ್ಲಾ ಎಲ್ಲಿವೆ" ಅವಳ ಪ್ರಶ್ನೆಗೆ ತಿಣುಕಾಡುತ್ತಿದ್ದರು


"ಸ್ವಾತಿ ಆ ಮನೆ ಹುಣಿಸೇ ಮರದ ಹತ್ರ ಇತ್ತು ಅಂತಾ ಎಲ್ಲಾ ದೆವ್ವದ ಮನೆ ಅಂತಿದ್ದರು. ಶಿವ್ರಾಜ್ ಗೌಡನೇ ಅದನ್ನ್ ಕೆಡವಿಸಿದ್ದ ನಾನು ಬರೀ ಹುಣಿಸೇಮರಾನ ಮಾತ್ರ ಕೆಡವಿಸಿದ್ದೆ" ರೆಡ್ಡಿಯವರು ತಮ್ಮ ತಲೆಯಲ್ಲಿದ್ದ ನೆನಪಿನ ಭಂಡಾರದಲ್ಲಿ ಆಯ್ದು ಕೊಟ್ಟರು.

"ಅಪ್ಪಾ ಆ ಶಿವ್ರಾಜ ಅಂಕಲ್ ಎಲ್ಲಿ ಸಿಗ್ತಾರೆ?"


"ಅವನು ಈಗ ...................."


"ಕೋರಮಂಗಲದಲ್ಲಿ ಮನೆ ಕೊಂಡ್ಕೊಂಡಿದಾನೆ ಅಂತ ಯಾರೋ ಹೇಳ್ತಿದ್ದ ಹಾಗಿತ್ತು"


"ಅಪ್ಪಾ ಪ್ಲೀಸ್ ನಂಗೆ ಅವರ ಅಡ್ರೆಸ್ ಬೇಕು "


"ಆಯ್ತಮ್ಮ ಸ್ವಾತಿ ಅಪ್ಪಾಂತ ಕರೀತಿಯ ಅಪ್ಪ ಅಮ್ಮನ್ನ ಹುಡುಕ್ತೀಯಾ . ಏನೋ ಮಾಡ್ಕೋ ಹೋಗು" ರೆಡ್ಡಿಯವರ ಕಣ್ಣಾಲಿಗಳು ತುಂಬಿದ್ದವು. ಮಗನ್ನ ಹುಡುಕಿಸುವ ಪ್ರಯತ್ನ ಅವರು ಮಾಡಿರಲಿಲ್ಲ . ಕಾಣದ ಮಗನಿಗಾಗಿ ಹಂಬಲಿಸುವುದಕ್ಕಿಂತ ಕಣ್ಮುಂದೆ ಇರುವ ಸ್ವಾತಿಯ ಸಂತೋಷವೇ ಅವರಿಗೆ ಸಾಕಾಗಿತ್ತು


"ಸ್ವಾತಿ " ಅಮ್ಮನ ದನಿ ಕೇಳಿತು ಮಮತೆ ತುಂಬಿತ್ತು ದನಿಯಲ್ಲಿ


ಐದು ದಿನಗಳಾಗಿದ್ದವು ಅಮ್ಮನ ಈ ದನಿ ಕೇಳಿ ಅವರತ್ತ ನೋಡಿದಳು

"ಸ್ವಾತಿ ಆವತ್ತು ಹೆತ್ತ ಕರುಳ ಸಂಕಟದಲ್ಲಿ ಏನೇನೋ ಅಂದುಬಿಟ್ಟೆ. ನೀನೆ ನನ್ಮಗಳು ಸ್ವಾತಿ. ಆ ಕಾಣದಿರೋ ಮಗಂಗೋಸ್ಕರ ನಾನು ನಿನ್ನ ಮನಸನ್ನ ತುಂಬಾ ನೋಯ್ಸಿಬಿಟ್ಟೆ. ನೀನ್ಯಾರನ್ನೂ ಹುಡುಕಬೇಡಾ ಕಣೆ. ನಾನೆ ನಿನ್ನಮ್ಮ ಸ್ವಾತಿ"

ಅವರ ಅಪ್ಪುಗೆಯಲ್ಲಿ ಕರಗಿದಳು. ಪಾರ್ವತಮ್ಮ ಅಂದು ಸಂಕಟದಲ್ಲಿ ಹಾಗೆಲ್ಲಾ ಮಾತಾಡಿದರೂ ಅವರ ಮನಸು ಸ್ವಾತಿಯನ್ನು ನೆನೆದು ಚುರುಕೆಂದ್ದಿತ್ತು. ಹೆತ್ತ ಮಗನೋ ಸಾಕಿದ ಮಗಳೋ ಎಂಬ ತಾಕಲಾಟದಲ್ಲಿ ಒಂಬತ್ತು ತಿಂಗಳ ನಂಟಿಗಿಂತ ಹತ್ತೊಂಬತ್ತು ವರ್ಷ್ದದ ಒಡನಾಟವೇ ಗೆದ್ದಿತ್ತು


"ಅಮ್ಮಾ ನಾನು ಯಾವತ್ತಿದ್ದರೂ ನಿಮ್ಮಿಬ್ಬರ ಮಗಳೇ ಆದರೆ ನಂಗೆ ನನ್ನ ನೆಲೇನ ಹುಡುಕಲೇಬೇಕು ಅಂತ ಮನಸಿಗೆ ಬಂದಿದೆ ಪ್ಲೀಸ್ ತಡೀಬೇಡಾಮ"

ಪಾರ್ವತಿ ಅವಳ ಕಣ್ಣೊರೆಸಿದರು.



ಅಂದು ತಾಯಿ ಮಗಳು ಜೊತೆಯಲ್ಲೇ ಮಲಗಿದರು. ರಾತ್ರಿ ಎಲ್ಲಾ ತನ್ನ ಅನ್ವೇಷಣೆ ಅದರ ಗುರಿಯ ಬಗ್ಗೆ ಮಾತಾಡುತ್ತಿದಳು ಸ್ವಾತಿ.


ಆ ದಿನ ಕಳೆಯಿತು. ಎರೆಡು ದಿನಗಳಾದವು



"ಸ್ವಾತಿ ಶಿವ್ರಾಜ್ ಗೌಡರ ಅಡ್ರೆಸ್ ಸಿಕ್ತು" ರೆಡ್ಡಿಯವರು ಕೂಗಿದರು ಲಾನ್‍ನಿಂದ

ಸ್ವಾತಿ ಒಂದೇ ಹೆಜ್ಜೆಗೆ ನುಗ್ಗಿ ಬಂದಳು.


ಅವರ ಅಡ್ರೆಸ್ ತೆಗೆದುಕೊಂಡು ಸ್ವಾತಿ ಹೊರಟಳು ಕೋರಮಂಗಲಕ್ಕೆ. ಜೊತೆಗೆ ಶಿವು .
ಡ್ರೈವ್ ಮಾಡುತ್ತಿದ್ದ ಶಿವುವನ್ನೆ ದಿಟ್ಟಿಸಿದಳು . ಏಳೆಂಟು ದಿನಗಳಾಗಿತ್ತು ಶಿವು ಕೆಲಸಕ್ಕೆ ಹೋಗಿ

"ಶಿವು ನಿಂಗೆ ರಜಾ ಸಿಕ್ತಾ ಇದ್ಯಾ?"

"ಇಲ್ಲಾ ಸ್ವಾತಿ ನಮ್ ಎಚ್ ಆರ್ ಮೂರ್ನಾಲ್ಕು ಮೇಲ್ ಹಾಕ್ತಿದ್ದಾನೆ ಬಡಕೋಳ್ಳಿ ಅಂತಾ ನಾನು ಸುಮ್ನಿದೀನಿ" ಡ್ರೈವ್ ಮಾಡುತ್ತಾ ರಸ್ತೆಯನ್ನೇ ನೋಡುತ್ತಿದ್ದ


"ನಾಳೆ ಕೆಲ್ಸದಿಂದ ತೆಗೆದು ಹಾಕಿದ್ರೆ?" ಆತಂಕದಿಂದ ಪ್ರಶ್ನಿದಳು

"ತೆಗೆದು ಹಾಕಲಿ ಕೆಲ್ಸ ನಂಗೆ ಇನ್ನೊಂದು ಸಿಗುತ್ತೆ . ಆದರೆ ನನ್ನ ಸ್ವಾತಿಗೆ ಸಂತೋಷ ಆದರೆ ಸಾಕು"

ಕಿರುನಗೆ ಮಿಂಚಿತು ಅವನ ಮುಖದಲ್ಲಿ

ತನಗಾಗಿ ಎಲ್ಲರೂ ಎಷ್ಟೊಂದು ಶ್ರಮ ವಹಿಸುತ್ತಾರೆ. ಶಿವೂ ಮೇಲೆ ಪ್ರೀತಿ ಮೂಡಿತು . ಅ

ಶಿವ್‌ರಾಜರ ಬಂಗಲೆ ದೊಡ್ಡದೇ ಆದರೂ ರೆಡ್ಡಿಯವರ ಬಂಗಲೇಯಷ್ಟೇನೂ ಇರಲಿಲ್ಲ

ಆಗಲೇ ಶಿವರಾಜರಿಗೆ ರೆಡ್ಡಿಯವರು ಫೋನ್ ಮಾಡಿ ಮಗಳು ಬರುವ ವಿಷಯ ತಿಳಿಸಿದ್ದರು. ಬಾಗಿಲು ತೆರೆದವರು ಗೌಡರ ಹೆಂಡತಿಯೇ. ಸ್ವಾಗತಿಸಿದರು


ರೆಡ್ಡಿಯವರ ಮಗಳಿಗೆ ಈ ಸ್ವಾಗತ. ಗೌಡರೂ ಬಂದರು


ಕಾಫಿ ಕುಡಿಯುತ್ತಾ ಮಾತಿಗೆ ಶುರು ಮಾಡಿದಳು


"ಅಂಕಲ್ ನಾನು ಹುಟ್ಟಿದ್ದು ನಿಮ್ಮ ಮನೇಲೇ ಅಂತೆ . ಆಗ ನಮ್ಮಜ್ಜಿ ಒಂದು ಬ್ಯಾಗ್ ಇಟ್ಟಿದ್ದರು ನನಗೆ ಅಂತ ಬಟ್ಟೆ ಜೊತೆ ಒಂದು ಇಂಪಾರ್ಟೆಂಟ್ ಡಾಕ್ಯುಮೆಂಟ್ಸ್ ಇಟ್ಟಿದ್ದರಂತೆ. ಆ ಬ್ಯಾಗ್ ನಿಮಗೇನಾದರೂ ಸಿಕ್ಕಿತ್ತಾ ತುಂಬಾ ಮುಖ್ಯಾ ಒಬ್ಬರ ಜೀವನಾನೆ ಅದರಲ್ಲಿದೆ" ಅಪ್ಪ ಹೇಳಿದ್ದರು ನಿಜ ವಿಷಯ ತಿಳಿಸಬೇಡ ಎಂದು


"ಅದೆಂಗೆ ಗೆಪ್ತಿ ಇಟ್ಟಿರಕಾಯ್ತದೆ. ಈಗಾಗ್ಲೆ ಈಟೋಂದು ವರ್ಸಾ ಆದ ಮ್ಯಾಕೆ"

ಗೌಡರು ಪೇಚಾಡಿದರು. ರೆಡ್ದಿಯವರ ಮಗಳು ಬಂದಿರೋದು ಅವರು ಕೇಳಿದ್ದನ್ನ ಕೊಟ್ಟರೆ ನಾಳೆಗೆ ತನಗೆ ಪ್ರಯೋಜನ ಅಲ್ಲವೇ? ಅವರ ಮನಸಲ್ಲಿ ಎಣಿಕೆ ಮಾಡುತ್ತಾ ಹೆಂಡತಿಯ ಕಡೆ ನೋಡಿದರು

ಅವರ ಹೆಂಡತಿ ಹೇಳಿದರು

" ಆಗಲೆ ಆ ನರ್ಸಮ್ಮ ಓಡೋದ್ ಮ್ಯಾಕೆ ಆ ಮನೆಗೆ ಯಾರೂ ಬರ್ಲಿಲ್ಲ. ಆ ಮನೆ ಹಾಳಿ ಬಾಡ್ಗೇನೋ ಕೊಟ್ಟಿರಲಿಲ್ಲ. ಹಂಗಾಗಿ ಒಂದಿಸಾ ನಾನೇ ಮನೆಗೆ ಓಗಿ ಅಲ್ಲಿಂದೆಲಾ ಬಾಚ್ಕೊಂಡು ಬಂದಿದ್ದೆ ಪಾತ್ರೇ ಸಾಮಾನು ಅಂತ ಒಂದಷ್ಟು ಇತ್ತು. ಹಂಗೆ ಬ್ಯಾಗೇನೂ ಇದ್ದಿದಂಗೆ ಗೆಪ್ತಿ ಇಲ್ಲ"

ಅವರು ನೆನಪು ಮಾಡಿಕೊಳ್ಳುತ್ತಿದ್ದರು

ಸ್ವಾತಿಯ ಮುಖ ನಿರಾಸೆ ಯಿಂದ ಬಾಡಿತ್ತು.

ಶಿವೂಗೆ ಹೋಗೋಣ ಎಂಬಂತೆ ಸನ್ನೆಮಾಡಿದಳು

"ಸರಿ ಅಂಕಲ್ ನಿಮ್ಗೇನಾದರೂ ಗೊತ್ತಾದರೆ ಹೇಳಿ " ಅವರಿಗೆ ಕೈ ಮುಗಿದು ಹೊರಬರಲಾರಂಭಿಸಿದರು

"ಇರವ್ವ ಸ್ವಾತಿ ಅದ್ರಾಗೆ ಒಂದು ಚೆಂದದ ಶಾಲು ಮತ್ತೆ ಮಗು ಬಟ್ಟೇ ಇತ್ತಾ " ಗೌಡತಿ ಕರೆದಾಗ ಸ್ವಾತಿಯ ಮುಖ ಸಂತಸದಿಂದ ಅರಳಿತು. ಹಿಂದೆ ತಿರುಗಿದಳು

"ಹಾ ಹೌದು ಆಂಟಿ . ನಿಮಗೆ ಸಿಕ್ಕಿತ್ತಾ?"



"ಔದವ್ವಾ ಈಗ ಗ್ನಾಪ್ನ ಬರ್ತಿದೆ, ಒಂದು ಬಿಳಿ ಬ್ಯಾಗಂತದ್ದು ಸಿಕ್ತು . ಪುಟ್ಟ ಮಗೂದು. ಅದನ್ನೇನು ಮಾಡೋದು ಅಂತ ನಮ್ಮ ಕೆಲ್ಸದಾಕೆಗೆ ಕೊಟ್ಟುಬಿಟ್ಟೆ.ಅವ್ಳೆಲ್ಲಿದಾಳೋ ಗೊತ್ತಿಲ್ಲ. "

ಸ್ವಾತಿಗೆ ನಿರಾಸೆಯಾಯ್ತು

"ಆದರೆ ಆ ಶಾಲು ಮಾತ್ರ ನನ್ನತ್ರಾನೆ ಇದೆ ಅನ್ಸುತ್ತೆ . ತುಂಬಾ ವೈನಾಗಿತ್ತು. ಮೆತ್ ಮೆತ್ತಗೆ ಅಂತಾದ್ದು ಈಗೆಲ್ಲೂ ಸಿಕ್ಕಲ್ಲ. ಅಂತೇಳಿ ನಾನೇ ಮಡಿಕೊಂಡಿದ್ದೆ "

"ಆಂಟಿ ಹುಡುಕುತ್ತೀರಾ ಪ್ಲೀಸ್"

" ಅಯ್ಯೋ ಬಿಡವ್ವಾ ಅಂತಾದಲ್ಲ ಅಂದ್ರೆ ಅದಕ್ಕಿಂತ ನೂರು ಪಟ್ಟು ಚೆನ್ನಾಗಿರೋದನ್ನ ಆರ್ಡ್ರ್ ಮಾಡಿ ಕೊಡಿಸ್ತಿನಿ. "

"ಇಲ್ಲಾ ಅಂಕಲ್ ನಂಗೆ ಅದೇ ಬೇಕು"

ಸ್ವಾತಿ ಮತ್ತೆ ಗೌಡತಿಯನ್ನೇ ನೋಡಿದಳು

ಏನನ್ನಿಸಿತೋ ಶಿವ್ರಾಜ್ ಗೌಡರು ಕೊಡು ಎಂದು ಸನ್ನೆ ಮಾಡಿದರು

ಗೌಡತಿ

ಆಳನ್ನ ಕರೆದು ಅಟ್ಟದ ಮೇಲಿನಿಂದ ದೊಡ್ಡ ಟ್ರಂಕನ್ನ ತೆಗೆಯಲು ಹೇಳಿದರು

ದೊಡ್ಡ ಟ್ರಂಕ್ ಅದು

ಎಲ್ಲಾ ಹಳೆಯದನ್ನೂ ತನ್ನ ಹೊಟ್ಟೆಯಲ್ಲಿಟ್ಟುಕೊಂಡಿತ್ತು


ಗೌಡತಿ ಒಂದೊಂದು ಸಾಮಾನನ್ನೂ ತೆಗೆದು ಏನನ್ನೋ ನೆನಪಿಸಿಕೊಳ್ಳುತ್ತಿದ್ದರು. ಅವರಿಗೆ ಅವರ ಗತ ಜೀವನದ ನೆನಪು .ಆದರೆ ಸ್ವಾತಿಗೆ ಅವಳ ಭೂತಕಾಲವೇ ಅವಳ ಭವಿಷ್ಯ್ದದ ನಿರ್ಣಾಯಕ ಕಾಲ.


ಕೊನೆಗೂ ಆ ಶಾಲ್ ತೆಗೆದರು

ಗುಲಾಬಿ ಬಣ್ಣದ ಶಾಲ್ ಮಗುವಿಗೆಂದೇ ಮಾಡಿಸಿದ್ದ ಹಾಗಿತ್ತು.

ನೋಡಿದೊಡನೆ ಎಂತಹವರಿಗೂ ಹಿಡಿಸುವಂತಹದ್ದು . ಮುದ್ದಾದದ್ದು

ಅದನ್ನು ಮುಟ್ಟಿದಳು ಅಪ್ಯಾಯ ಮಾನವಾಗಿ.

ಎಂತಹದ್ದೋ ಭಾವನೆ. ತನ್ನದೆನ್ನುವ ಭಾವನೆ. ತನ್ನವರು ಸಿಕ್ಕಿಯೇ ಬಿಟ್ಟರೆನ್ನುವಷ್ಟು ಸಂಭ್ರಮ

ಭಾವನೆಗಳ ಕಟ್ಟೆಯೊಡೆಯಿತು

ಅದನ್ನು ಕೈಗೆತ್ತಿಕೊಂಡು ಅಳಲಾರಂಭಿಸಿದಳು

"ಯಾಕವ್ವ ಏನಾಯ್ತು? " ಗೌಡರು ಗಾಬರಿಯಾದರು.

"ಏನಿಲ್ಲ ಅಂಕಲ್ " ಅವರಿಗೆ ಬದಲಿ ಹೇಳಿದ.

"ಈ ಶಾಲ್ ನಾವು ತಗೊಂಡು ಹೋಗ್ತೀವಿ ಅಂಕಲ್" ಶಿವೂನೆ ಮಾತಾಡಿದ.

"ಆಯ್ತಪ್ಪ ಧಾರಳವಾಗಿ. ಆದ್ರೆ ಆ ಹೆಣ್ಮಗ ಯಾಕಿಂಗೆ ಅಳ್ತಾ ಇದೆ"ಗೌಡರ ಕಾಳಜಿಗೆ ವಂದಿಸಿದ ಶಿವು ಸ್ವಾತಿಯನ್ನು ಸಮಾಧಾನ ಮಾಡುತ್ತಾ ಹೊರಗೆ ಕರೆದುಕೊಂಡು ಬಂದ.

ಕಾರಲ್ಲಿ ಕುಳಿತು ಆ ಶಾಲನ್ನೆ ದಿಟ್ಟಿಸುತ್ತಿದ್ದಳು ಸ್ವಾತಿ.

"ಶಿವು ನನ್ನ ನಿಜವಾದ ನೆಂಟ ಅಂದ್ರೆ ಇದೇ ಅಲ್ವಾ?"

"ಸ್ವಾತಿ ಇದು ಭಾವುಕತೆಗೆ ಸಮಯ ಅಲ್ಲಾ. ಆ ಶಾಲನ್ನ ಪೂರ್ತಿಯಾಗಿ ಬಿಚ್ಚು ನೋಡೋಣ" ಕಾರನ್ನು ನಿಲ್ಲಿಸಿ ನುಡಿದ
ಸ್ವಾತಿ ಶಾಲನ್ನು ಬಿಚ್ಚಿದಳು ದೊಡ್ಡದೇ .
ಎರಡನೇ ಮಡಿಕೆ ಬಿಚ್ಚಿದಳು.
ಯಾರೋ ನವಿಲಿನ ಚಿತ್ರ ಬಿಡಿಸಿದ್ದರು ಮುದ್ದು ಮುದ್ದಾಗಿತ್ತು. ಉಲ್ಲನ್ ನಿಂದ ಕುಸುರಿ ಮಾಡಿದ್ದಾಗಿದ್ದಿತ್ತು.
ಕೆಳಗೆ ಎಂತಹದ್ದೋ ಡಿಸೈನ್.
"ಇದೇನು ಡಿಸೈನ್ ಹೀಗಿದೆ ಸ್ವಾತಿ" ಶಿವು ಆ ಡಿಸೈನ್ ಮುಟ್ಟುತ್ತಾ ಕೇಳಿದ
"ಶಿವು ಇರು ಇರು ಇದು ಅಕ್ಷರ . ಹಾ ತಮಿಳು ಅಕ್ಷರ ಇದು " ಅವನ ಮಾತನ್ನು ತಡೆಯುತ್ತಾ ಕೂಗಿದಳು
"ತಮಿಳಾ ?" ಆಶ್ಚರ್ಯದಿಂದ ಅದನ್ನೇ ನೋಡುತ್ತಾ ಉದ್ಗರಿಸಿದವನ ಮನದಲ್ಲಿ ನೂರೆಂಟು ಪ್ರಶ್ನೆಗಳು .
ಸ್ವಾತಿಯ ಮನದಲ್ಲೂ ಆನಂದದ ಬುಗ್ಗೆಯ ಜೊತೆಗೆ ಎದೆಯಲ್ಲಿ ಕಂಪನವಾಯ್ತು
ಶಿವೂ ಪ್ರಶ್ನೆಗಳ ಬೊಕ್ಕೆಯಿಂದ ಒಂದನ್ನು ಆರಿಸಿ ಅವಳೆಡೆ ಎಸೆದ
"ಸ್ವಾತಿ ತಮಿಳಿನಲ್ಲಿ ಬರೆದಿರೋದು ಏನು ?"
ಸ್ವಾತಿ ತನ್ನನ್ನು ತಾನು ಪ್ರಶ್ನಿಸಿಕೊಂಡಳು
"ಹೌದು ಏನು?"
(ಮುಂದುವರೆಯುವುದು)

Tuesday, November 10, 2009

ಗಮ್ಯ ಹುಡುಕುತ್ತಾ ಭಾಗ ೨

"ನಂಗೆ ನನ್ನ ಮಗ ಬೇಕು" ಅಮ್ಮ ಜೋರಾಗಿ ಅಳುತ್ತಿದ್ದುದು ಕೇಳಿಸುತ್ತಿತ್ತು .ಮೂರು ದಿನವಾಗಿತ್ತು ಮರಿಯಮ್ಮನ ಭೇಟಿಯಾಗಿ. ಆಗಲೇ ಎಷ್ಟೊಂದು ಮಾತುಕಥೆಗಳು. ಊರಿನ ಜನಕ್ಕೆಲ್ಲಾ, ನೆಂಟರಿಗೆಲ್ಲಾ ವಿಷಯ ಗೊತ್ತಾಗಿತ್ತು. ಮೂರು ದಿನದಿಂದ ನಿದ್ದೆ ಇಲ್ಲದೆ ಒದ್ದಾಡುತ್ತಿದ್ದಳು . ಜೊತೆಗೆ ತಾನ್ಯಾರು ಎಂಬುದೂ ತಿಳಿಯದ ನತದೃಷ್ಟೆ ತಾನೆಂದು ಅಳುವುದಾಗಿತ್ತು. ಯಾವುದೋ ಯೋಚನೆಯಲ್ಲಿದ್ದ ಸ್ವಾತಿ ದಡಾರನೆ ಎದ್ದಳುತಾಯಿಯ ಮಾತು ಕೇಳಿ
ತಾನೆಲ್ಲಿದ್ದೇನೆ ಸುತ್ತಾ ನೋಡಿದಳು. ಅದು ಅವಳ ರೂಮ್. ಹಾ ತನ್ನ ರೂಮ್? ತನ್ನ ಮನೆ? ತನ್ನ ಅಮ್ಮ? ಯಾರು ಗೋಜಲಾಗತೊಡಗಿತು ಎದ್ದವಳಿಗೆ ಅಪ್ಪನ ದನಿ ಕೇಳಿಸಿ ನಿಧಾನವಾಗಿ ರೂಮಿನ ಬಾಗಿಲ ಬಳಿ ನಿಂತಳು.

"ಏಯ್ ನಿಂಗೇನಾಗಿದೆಯೇ ಬೋ**.ಇಷ್ಟು ದಿನಾ ಸ್ವಾತೀನಾ ನನ್ ಮಗಳೂ ಮಗಳೂ ಅಂತಾ ಮುದ್ದು ಮಾಡ್ತಿದ್ದೆ. ಈವಾಗ ನಿಂಗೆ ನಿನ್ನ ಮಗ ಬೇಕು ಅಂದ್ರೆ ಸಿಗ್ತಾನಾ?ಇಷ್ಟು ದಿನಾ ಸ್ವಾತಿನೆ ಮಗಳು ಅನ್ಕೊಂಡ ಹಾಗೆ ಇದ್ದು ಬಿಡೋಣ" ಅಪ್ಪನ ದನಿ

"ನಿಮ್ಗೊತ್ತಿಲ್ಲ ನಿಮ್ಮ ತಾಯಿ ನಾನು ಮತ್ತೆ ಇನ್ನೊಂದು ಮಗೂಗೆ ತಾಯಿ ಆಗಲ್ಲ ಅಂತ ಗೊತ್ತಾದಾಗ ಗಂಡು ಮಗ ಬೇಕು ಅಂತ ನನ್ನನ್ನ ಎಷ್ಟೊಂದು ಬೈತಾ ಇದ್ರು ಗೊತ್ತಾ. ನನ್ನ ಕಷ್ಟ ನಿಮಗೆ ಹೇಗೆ ಗೊತ್ತಾಗುತ್ತೆ. ನಮಗೆ ಒಬ್ಬ ಗಂಡು ಮಗ ಇದ್ದಾನೆ ಅಂದ್ರೆ ಹೇಗ್ರಿ ಬಿಟ್ಟಿರೋದು" ಪಾರ್ವತಮ್ಮನೂ ದನಿ ಏರಿಸಿದರು

"ಅದೆಂಗೆ ಇನ್ನೊಂದು ಮಗಾನ ನಿನ್ನ ಮಗು ಅನ್ಕೊಂಡು ಬೆಳೆಸ್ದೆ ನೀನು. ನಾವೂ ನಮ್ಮನೆ ಮಗೂನೆ ಅನ್ಕೊಂಡು ನಮ್ಮ ಶಿವೂಗೆ ಮದುವೆ ಮಾಡಿಕೊಡೋಣ ಅನ್ಕೊಂಡಿದ್ವಿ ಸಧ್ಯ ಮುಂಚೇನೆ ಗೊತ್ತಾಯ್ತಲ್ಲ" ಅದು ಶೀಲಾ ಅತ್ತೆ ದನಿ

ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು

"ಅಂದ್ರೆ ನೀನು ಏನುಹೇಳ್ತಾ ಇದ್ದೀಯಾ ಸ್ವಾತಿಗೆ ಶಿವು ಜೊತೆ ಮದುವೆ ಮಾಡಲ್ವಾ?" ಅಪ್ಪನ ಆತಂಕದ ದನಿ

"ಅದೆಂಗಾಯ್ತದೆ . ಹೆಂಗಿದ್ದರೂ ಅವಳು ನಿಮ್ಮಗಳಲ್ಲ.ನಿಮ್ಮಗ ಬಂದ್ಮೇಲೆ ಅವಳಿಗೆ ಯಾವ ಆಸ್ತಿ ಸಿಕ್ತೈತೆ.ಯಾವುದೋ ಅನಾಥ ಹೆಣ್ಣಿಗೆ ಮದುವೆ ಮಾಡಕಾಯ್ತದಾ?"

ಶ್ರೀಧರ್ ಮಾವನ ದನಿ

ಸ್ವಾತಿಯ ಕಣ್ಣಿಂದ ನೀರು ನುಗ್ಗಲಾರಂಭಿಸಿತು

"ಅಪ್ಪಾ ನೀನು ಹೀಗೆಲ್ಲಾ ಮಾತಾಡಬೇಡ . ನಾನು ಸ್ವಾತೀನ ಕ್ರಿಷ್ಣಾರೆಡ್ಡಿ ಮಗಳು ಅಂತ ಮದುವೆ ಆಗ್ತಾ ಇಲ್ಲ . ಅವಳು ನಂಗೆ ಹಿಡಿಸಿದಾಳೆ ಅವಳನ್ನೇ ಮದುವೆ ಆಗೋದು" ಶಿವೂನ ದನಿ ಎತ್ತರಿಸಿ ನುಡಿದ

ಸ್ವಲ್ಪ ಸಮಾಧಾನವಾಯ್ತು ಸ್ವಾತಿಗೆ

"ನಿಂಗೆ ಗೊತ್ತಾಗಲ್ಲ ಸುಮ್ನಿರೋ " ಶೀಲತ್ತೆ ಬೈದರು

ಶಿವು ತೆಪ್ಪಗಾದದ್ದು ತಿಳಿಯಿತು

"ಶೀಲು ನನ್ನ ಮಗ ಸಿಕ್ತಾನೆ ಅಂತಾ ಯಾವ ಗ್ಯಾರೆಂಟಿ . ಯಾವುದೋ ಗಡ್ಡದ ಸ್ವಾಮಿ ದುಡ್ಡು ಕೊಟ್ಟು ಮಗೂನಾ ಎತ್ಕೊಂಡ್ ಹೋದ ಅಂತಾ ಹೇಳಿದಳಲ್ಲಾ ಆ ***. ಅವನೇನು ಮಗೂನ ಬಾಳಿಸಿರ್ತಾನಾ? ಹಾಗೆ ಒಂದ್ ವೇಳೆ ನಮ್ಮಗ ಸಿಕ್ರೂ ಸ್ವಾತಿ ಹೆಸರಲ್ಲಿ ಆಸ್ತಿ ಇದ್ದೇ ಇರುತ್ತೆ. ಇಷ್ಟು ದಿನಾ ಸ್ವಾತಿನಾ ಅಷ್ಟೊಂದು ಮೆರೆಸಿ ಈಗ ಇದ್ದಕ್ಕಿದ್ದಂತೆ ಬೇಡ ಅಂದ್ರೆ ಹೇಗೆ ಒಂದು ಹೆಣ್ಣ್ ಕಣ್ಣಲ್ಲಿ ನೀರು ಹಾಕಿಸ್ಬೇಡ" ಅಪ್ಪನ ದನಿಯಲ್ಲಿ ಬೇಡಿಕೆ ಇತ್ತು

"ಸರಿ ಹಾಗಿದ್ರೆ ನಿನ್ನ ಮಗನ್ನ ಹುಡುಕಿಸಬಾರದು ಇಡೀ ಆಸ್ತಿ ಸ್ವಾತಿ ಹೆಸರಿಗೆ ಬರೀಬೇಕು . ಸ್ವಾತಿನ ದತ್ತು ತಗೋಬೇಕು " ಶ್ರೀಧರ ಮಾವನ ಅಣ್ಣ ಲಾಯರ್ raghu reddi ಹೇಳಿದ

"ಹೌದಣ್ಣಾ ಹಾಗಿದ್ರೆ ಮಾತ್ರ ನಮ್ಮ್ ಶಿವೂಗೆ ಮದುವೆ ಮಾಡಿಕೊಳ್ತೀವಿ. ಇಲ್ಲಾಂದ್ರೆ ಬೇರೆ ಯಾವ ಗಂಡಾದ್ರೂ ನೋಡು. ಗೊತ್ತಿದ್ದು ಗೊತ್ತಿದ್ದು ಹಾಳು ಬಾವಿಗೆ ಬೀಳೋಕೆ ಶಿವು ಏನು ಕುಂಟಾನ ಕುರುಡಾನಾ" ಶೀಲತ್ತೆ ಇಷ್ಟೊಂದು ಮಾತನಾಡಬಲ್ಲರೆಂದು ತಿಳಿದಿರಲಿಲ್ಲ

" ಶೀಲಾ ನಿಂಗ್ಯಾಕೆ ಇಂತಾ ಕೆಟ್ಟ ಬುದ್ದಿ ಬಂತು. ತಂದೆ ತಾಯಿಗೆ ಅವರ ಮಗನ್ನ ಹುಡುಕ ಬೇ ಡಾ ಅಂತ ದೂರ ಮಾಡ್ತೀಯಲ್ಲ ನೀನೂ ತಾಯಲ್ಲ್ವಾ. ಮಗಂಗೋಸ್ಕರ ನನ್ನಕರುಳು ಎಷ್ಟು ನರಳ್ತಿದೆ ಗೊತ್ತಾ. " ಪಾರ್ವತಿ ಅಳುತ್ತಾ ಹೇಳಿದರು

"ಆಯ್ತು ಶೀಲು. ನಮಗೊಬ್ಬಳು ಹೆಂಗಸು ಸಿಕ್ಕಳು ಅನ್ನೋದನ್ನೇ ಮರೆತುಬಿಡ್ತೀವಿ. ಇಲ್ಲಿವರೆಗೆ ಹೆಂಗಿದ್ವೋ ಹಾಗೆ ಇರೋಣ ಸ್ವಾತಿ ನನ್ನ ಮಗಳು ಅವಳ ಜೀವನ ಚೆನ್ನಾಗಿರಬೇಕು ಎಲ್ಲಾ ಆಸ್ತೀನೂ ಅವಳದ್ದೇ" ಕ್ರಿಶ್ಣಾರೆಡ್ಡಿ ದೃಡ ನಿರ್ಧಾರದಲ್ಲಿ ಹೇಳಿದರು

"ರೀ ನಂಗೆ ನನ್ನ ಮಗ ಬೇಕು. ಯಾರದ್ದೋ ಹೆಸರಿಗೆ ಆಸ್ತಿ ಯಾಕೆ ಬರೀಬೇಕು.ನನ್ನ ಮಗ ಬರಬೇಕು. ಸುಮ್ನೆ ಇರಿ " ತಾಯಿ ಪಾರ್ವತಿಯ ದನಿಯಲ್ಲೂ ಹಟದ ಛಾಯೆ

ಅವಕ್ಕಾದಳು ಸ್ವಾತಿ.ನೆನ್ನೆವರೆಗೆ ತಾನು ಈ ಮನೆ ಮಗಳು ಇಂದು ? ಯಾರೋ ಆಗಿಬಿಟ್ಟೆನಲ್ಲಾ.

"ಏಯ ಪಾರ್ವತಿ.ಅವಳು ಯಾರೋ ಹೇಗೆ ಆಗ್ತಾಳೆ ನಮ್ಮನೆ ಮಗಳು ಕಣೇ . ಇದನೆಲ್ಲಾ ಸ್ವಾತಿ ಕೇಳಿಸಿಕೊಂಡರೇ ***********" ಇನ್ನು ಏನು ಹೇಳುತ್ತಿದ್ದರೋ ಸ್ವಾತಿಯನ್ನು ನೋಡಿ ಮಾತು ನಿಂತಿತು

"ಸ್ವಾತಿ" ಅಪ್ಪ ದಂಗಾಗಿ ಕರೆದರು

"ನಿಮ್ಮನ್ನ ಅಪ್ಪ ಅಂತಾ ಕರೀಲಾ " ಸ್ವಾತಿಯ ಮಾತು ನಿಧಾನಕ್ಕೆ ಬಂದಿತು

"ಹೇಯ್ ಸ್ವಾತಿ ಇದೇನು ಹೊಸದು ನೀನ್ಯಾವತ್ತಿದ್ದರೂ ನಮ್ಮ ಮಗಳೇ. ಆ ಮುಂ*** ಹೇಳಿದ್ದೆಲ್ಲಾ ತಲೆಗೆ ಹಚ್ಕೋಬೇಡಾ ಬಾ ಇಲ್ಲಿ" ಕೃಷ್ಣಾರೆಡ್ಡಿಯವರ ಸ್ವರ ಅವರಿಗೆ ತಿಳಿಯದಂತೆ ಗದ್ಗದಿತವಾಗಿತ್ತು.

ಅಪ್ಪನ ಬಳಿ ಬಂದು ನಿಂತು ಅವರ ಎದೆಗೊರಗಿದಳು

ಅವಳ ಕಣ್ಣೀರು ಅವರ ಎದೆಯನ್ನು ತೋಯಿಸಲಾರಂಭಿಸಿತು.

"ಅಳ್ಬೇಡ ಸ್ವಾತಿ . ಛೀ ನೀನತ್ರೆ ನಮ್ಮನೆ ಲಕ್ಷ್ಮಿ ಅತ್ತ ಹಾಗೆ" ಅವಳ ತಲೆ ನೇವರಿಸಿದರು

ಸಮಾಧಾನಗೊಂಡಂತಾಗಿ ಅಲ್ಲಿಂದ ಮುಖವೆತ್ತಿ ತಾಯಿಯನ್ನು ನೋಡಿದಳು.

ಅವರ ಮುಖದಲ್ಲಿ ಅಸಮಾಧಾನದ ಛಾಯೆ ಕಾಣಿಸುತ್ತಿತ್ತು. ಅದರಲ್ಲಿ ಮೊದಲಿನ ಮಮತೆ ಕಾಣಲಿಲ್ಲ

ಅತ್ತೆ ಮಾವ ಭಾವರಹಿತವಾಗಿ ನೋಡುತ್ತಿದ್ದರು

ಶಿವು ಆತಂಕಗೊಂಡು ಸ್ವಾತಿಯತ್ತ ನೋಡುತ್ತಿದ್ದ.

ಸ್ವಾತಿ ಆಗಲೇ ನಿರ್ದಾರಮಾಡಿದ್ದಳು ತಾನು ಯಾರು ಎಂದು ತಿಳಿದುಕೊಳ್ಳಬೇಕು.ಮೂರುದಿನದಿಂದ ಮನೆಯಲ್ಲಿ ಇದೇ ಮಾತು ಕಥೆ. ಸ್ವಾತಿಯಂತೂ ಹೊರಗೇ ಬಂದಿರಲಿಲ್ಲ. ಅಲ್ಲಿನಮಾತು ಕಥೆಗಳನ್ನೆಲ್ಲಾ ಕೇಳಿ ಕೇಳಿ ಅವಳಿಗೆ ತನ್ನ ಬಗ್ಗೆ ತನ್ನ ಆ ಕಾಣದ ತಾಯಿ ತಂದೆಯ ಬಗ್ಗೆ ಜಿಗುಪ್ಸೆ ಹುಟ್ಟಿತ್ತು. ಹೇಗಾದರೂ ಮಾಡಿ ತನ್ನ ಗಮ್ಯ ತಿಳಿಯಬೇಕೆಂಬ ಛಲ ಹುಟ್ಟಿತ್ತು

"ಅಪ್ಪಾ ನಾನು ನನ್ನ ನಿಜವಾದ ಅಪ್ಪ ಅಮ್ಮ ಯಾರು ಅಂತ ತಿಳ್ಕೋಬೇಕು" ಸ್ವಾತಿಯ ದೃಡ ನಿರ್ಧಾರದ ದನಿ ಕೇಳಿ ಎಲ್ಲರೂ ಒಂದು ಕ್ಷಣ ಅಚ್ಚರಿಗೊಂಡರು

"ಸ್ವಾತಿ ಯಾಕಮ್ಮ ನಾವು ನಿಂಗೇನು ಕಡಿಮೆ ಮಾಡಿದ್ದೀವಿ. ನೀನು ಯಾರೇ ಆಗಿರು ಅದು ನಂಗೆ ಬೇಕಿಲ್ಲ. ನೀನು ನಮ್ಮನೆ ಮಗಳು . ಈ ಇಲ್ಲ ಸಲ್ಲದ ಹುಚ್ಚಾಟ ಬೇಡ" ಅಪ್ಪ ಮಾತ್ರ ಉತ್ತರಿಸಿದರು

"ಇಲ್ಲಾ ಅಪ್ಪಾ ನಾನು ಯಾರು ಅಂತ ನಂಗೆ ಗೊತ್ತಾಗಬೇಕಿದೆ. ನನ್ನನ್ನ ಯಾಕೆ ಬಿಟ್ಟು ಹೋದರು ನಾನೇನು ಅಪರಾಧ ಮಾಡಿದ್ದೆ.ನಿಮ್ಮ ಮಗನ್ನ ಯಾಕೆ ಕರೆದುಕೊಂಡು ಹೋದರು . ಹಾಗೆ ನಿಮ್ಮ ಮಗ ಎಲ್ಲಿದ್ದಾನೆ ಅಂತಾನೂ ತಿಳ್ಕೋಬೇಕಿದೆ" ಸ್ವಾತಿ ತನ್ನ ಅಂಗೈ ರೇಖೆ ನೋಡಿಕೊಂಡೇ ಉತ್ತರಿಸಿದಳು

"ಸ್ವಾತಿ ಅದೆಲ್ಲಾ ಬೇಡ . ನಮಗೆ ಅವನ್ನ ಹುಡೋಕೋ ದಾರಿ ಗೊತ್ತಿಲ್ಲ ಇನ್ನು ನೀನೇನು ಮಾಡ್ತೀಯಾ. ಎಲ್ಲಾ ಮರೆತು ನಮ್ಮನೇಲೇ ಇದ್ದುಬಿಡು.ಹೆಣ್ಣು ಹೆಂಗಸು ಎಲ್ಲಿ ಹೋಗ್ತೀಯಾ?"ಅಮ್ಮನ ಮಾತು.ಆದರೆ ಅದು ಮೂರನೇ ವ್ಯಕ್ತಿಗೆ ಹೇಳುತ್ತಿದ್ದ ಹಾಗಿತ್ತು.

"ಏನೆ ಆದರೂ ಇದು ನಿಮ್ಮ ಮನೆ ಅಮ್ಮ ನನ್ನ ಮನೆ ಆಗಲ್ಲ. ನಂಗೆ ನನ್ನದೇ ಆದ ನೆಲೆ ಬೇಕು. ನನ್ನ ಹೆತ್ತ ತಾಯಿ ತಂದೆ ಬೇಕು. ಇಲ್ಲೀವರೆಗೆ ನಾನು ನಿಮ್ಮ ಮಗಳೇ ಅಂತ ತಿಳಿದು ಪ್ರೀತಿಸುತ್ತಿದ್ದಿರಲ್ಲ ಅಂತ ಪ್ರೀತಿ ಬೇಕು . ಅದೇನೆ ಆಗಲಿ ಅದು ನಂಗೆ ಇಲ್ಲಿ ಇನ್ನು ಮುಂದೆ ಸಿಗಲ್ಲ" ಸ್ವಾತಿ ತಾಯಿಯ ಕಣ್ಣನ್ನು ದಿಟ್ಟಿಸುತ್ತಾ ಹೇಳಿದಳು.

ಪಾರ್ವತಮ್ಮ ಬದಲಿ ಹೇಳಲಿಲ್ಲ.

"ಸ್ವಾತಿ ನಿಂಗೆ ನನ್ನ ಮನೆ ಇದೆ ನಿನ್ನ ಗಂಡನಾಗುವವನ ಮನೆ ನಂಗೆ ಈ ಆಸ್ತಿ ಅಂತಸ್ತು ಇದೆಲ್ಲಾ ಬೇಡ. ಬಾ ನಾವೇ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಇರೋಣ ನಿನ್ನ ಸಾಕೋ ಅಷ್ಟು ಸಂಪಾದನೆ ನಂಗೆ ಇದೆ. "ಶಿವೂನ ದನಿ ಅವನತ್ತ ನೋಡಿ ನಕ್ಕಳು. ಎಷ್ಟು ಪ್ರೀತಿ ಅವನಿಗೆ ತನ್ನ ಮೇಲೆ

"ಏ ಶಿವು ಸುಮ್ನಿರೋ . ನೀನ್ಯಾಕೆ ಅವರ ವಿಷಯದಲ್ಲಿ ತಲೆ ಹಾಕ್ತೀಯಾ." ಶೀಲತ್ತೆ ಗದರಿದರು.

"ಅಮ್ಮಾ ನೀನು ಸುಮ್ನಿರು ಇದು ನನ್ನಜೀವನದಪ್ರಶ್ನೆ" ಶಿವೂ ಸಿಡುಕಿ ನುಡಿದ

"ಇಲ್ಲಾ ಶಿವು ನಿನ್ನ ನಂಟೂ ನನಗೆ ಸಿಕ್ಕಿದ್ದು ಕೃಷ್ಣಾರೆಡ್ಡಿಯವರ ಮಗಳು ಅನ್ನೋ ಕಾರಣಕ್ಕಾಗಿ. ಈಗ ಆ ಐಡೆಂಟಿಟೀನೆ ನಂಗೆ ಇಲ್ಲವಾದಾಗ ನಿನ್ನ ನಂಟಿಗೂ ಮೊದಲಿನ ಅಂಟು ಇರುತ್ತಾ? ಅಲ್ಲದೆ ನಂಗೆ ಮದುವೆಯಾಗೋ ಇರಾದೆ ಹೊರಟುಹೋಗಿದೆ ಮೊದಲು ನನ್ನನ್ನ ಹೀಗೆ ಬೇರೆ ಮನೆಯಲ್ಲಿ ಬಿಟ್ಟ ನನ್ನ ತಂದೆ ತಾಯಿಯನ್ನ ಹುಡುಕಬೇಕು . ದಯವಿಟ್ಟು ನನ್ನನ್ನ ಯಾರೂ ತಡೀಬೇಡಿ "

ಶಿವು ಏನೋ ಹೇಳಲು ಹೋದವನು ರೆಡ್ಡಿಯವರು ಮಾತನಾಡಿದ್ದಕ್ಕೆ ಸುಮ್ಮನಾದ

"ಸ್ವಾತಿ ಹಾಗಿದ್ರೆ ನಿನ್ನ ಮುಂದಿನ ನಡೆ ಏನು ಹೇಳು.ಎಲ್ಲರೂ ಸೇರಿ ನಿನ್ನಪ್ಪ ಅಪ್ಪನ್ನ ಅಮ್ಮನ್ನ ಹುಡುಕೋಣ. ಆದರೆ ಅವರು ಬದುಕಿದ್ದಾರೆ ಅನ್ನೋದಕ್ಕೆ ಏನು ಗ್ಯಾರೆಂಟಿ ಹೇಳು" ರೆಡ್ಡಿಯವರು ಕಣ್ಣೊರೆಸಿಕೊಳ್ಳುತ್ತಲೇ ನುಡಿದರು

"ಇಲ್ಲಾ ಅಪ್ಪ. ಅವರು ಬದುಕಿದಾರೆ ಅನ್ನೋ ಬೇಸ್ ಮೇಲೆ ಹುಡುಕ್ತೀನಿ . ಆದರೆ ಅವರನ್ನು ಹುಡುಕೋ ಕೆಲಸ ನಂಗೆ ಬಿಟ್ಟುಬಿಡಿ ನಂಗೆ ನಿಮ್ಮೆಲ್ಲರ ಹಾರೈಕೆಗಳಿದ್ದರೆ ಸಾಕು"

ಕೈ ಮುಗಿದು ಕುಸಿದು ಕುಳಿತಳು. ಕಣ್ಣಲ್ಲಿದ್ದ ನೀರು ಕಾಣದಿದ್ದರೆ ಸಾಕು ಎಂದು ತಲೆ ತಗ್ಗಿಸಿದ್ದಳು.

ಶಿವೂನ ತಂದೆ ತಾಯಿ ದೊಡ್ಡಪ್ಪ ಹೊರಡುತ್ತಿದ್ದರು. ಅವರನ್ನು ಬಿಟ್ಟು ಓಡಿ ಬಂದ ಶಿವು

"ಆಯ್ತು ಸ್ವಾತಿ ನಿನ್ನ ತಂದೆ ತಾಯಿ ಸಿಕ್ಕ ಮೇಲಾದರೂ ನನ್ನನ್ನ ಮದುವೆಯಾಗ್ತೀಯಲ್ಲಾ? " ಶಿವು ತನ್ನ ತಂದೆ ತಾಯಿಯರನ್ನು ಲೆಕ್ಕಿಸದೇ ಕೇಳಿದ.

ಅವನತ್ತ ನೋಡಿ ನಕ್ಕಳಷ್ಟೇ.

"ಸ್ವಾತಿ ನಿಂಗ್ಯಾವ ಸಹಾಯ ಬೇಕಾದರೂ ಈ ಶಿವು ಸದಾ ಸಿದ್ದ ಇರ್ತಾನೆ. ಅಂದ ಹಾಗೆ ನನ್ನ ನಿನ್ನ ಬಂಧ ಕೇವಲ ನನ್ನ ಮಾವ ನಿನ್ನಪ್ಪ್ಪ ಎಂಬುದರ ಮೇಲೆ ನಿಂತಿಲ್ಲ ಸ್ವಾತಿ. ನನ್ನದು ನಿನ್ನದು ಯಾವುದೋ ಜನ್ಮದ ಅಂಟು ಅದಕ್ಕೆ ನಂಟಿನ ಅವಶ್ಯಕತೆಯಿಲ್ಲ. ಇಂದಿನಿಂದ ನಿನ್ನ ಶೋಧದಲ್ಲಿ ಈ ಶಿವೂನೂ ಜೊತೆಗಾರನಾಗಿರ್ತಾನೆ"ಅವಳ ಕೈಗೆ ತನ್ನ ಕೈ ಕೂಡಿಸಿ ಬಿಗಿ ಮಾಡಿದ.

ಅದನ್ನು ತುಟಿಗೊತ್ತಿಕೊಂಡಳು ಸ್ವಾತಿ . ಶಿವು ನಿಧಾನವಾಗಿ ಕೈ ಬಿಡಿಸಿಕೊಂಡು ಹೊರಟ

ಎಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಹೊರಟ ಮೇಲೆ ತಲೆ ಎತ್ತಿದಳು

ಅಪ್ಪ ಇನ್ನೂ ಅಲ್ಲೇ ನಿಂತಿದ್ದಾರೆ

"ಸ್ವಾತಿ ನಿಮ್ಮ ತಂದೆ ಸಿಗೋವರೆಗೆ ನೀನು ನನ್ನ ಮಗಳಾಗಿರ್ತೀಯಾ ತಾಯಿ. "

ಸ್ವಾತಿ ಇಲ್ಲೀವರೆಗೆ ತಂದೆಯ ಈ ಸ್ಥಿತಿ ನೋಡಿರಲಿಲ್ಲ

"ಅಪ್ಪಾ " ಎಂದಷ್ಟೆ ಅಂದಳು

ಅವರ ಹೃದಯ ಮಿಡಿಯುತ್ತಿರುವುದು ತಿಳಿಯುತ್ತಿತ್ತು. ಆದರೆ ಅವರು ಅಸಹಾಯಕರು. ಕೈ ಚೆಲ್ಲಿ ಹೊರಟುಹೋದರು

ಸ್ವಾತಿಯ ಯೋಚನೆ ಶುರುವಾಯ್ತು

ತಾನೇನೋ ಆವೇಶದಲ್ಲಿ ಅಪ್ಪ ಅಮ್ಮನ್ನ ಹುಡುಕುವುದಾಗಿ ಹೇಳಿದೆ ಆದರೆ ಎಲ್ಲಿ ಅಂತ ಹುಡುಕುವುದು? ಕಾಲೇಜು ಬಿಟ್ಟರೆ ಮನೆ ಗೆಳತಿಯರು ಶಿವು ಇದಿಷ್ಟುಬಿಟ್ಟರೆ ತನ್ನ ಪ್ರಪಂಚ ಬೇರೇನಾಗಿತ್ತು ಇಷ್ಟು ದಿನ

ಮರಳುಗಾಡಿನಲ್ಲಿ ಕುರುಡನನ್ನ ಬಿಟ್ಟ ಹಾಗೆ ಆಗಿ ಹೋಗಿತ್ತು ಅವಳ ಸ್ಥಿತಿ. ಆದರೆ ಧೃತಿಗೆಡಬಾರದು . ತನ್ನನ್ನ ಇಂಥ ಸ್ಥಿತಿಗೆ ನೂಕಿದ ಆ ತಂದೆ ತಾಯಿಯನ್ನು ಹುಡುಕಲೇ ಬೇಕು. ರೂಮಿಗೆ ಬಂದಳು.

ಸಿಕ್ಕಪುಸ್ತಕ ಕೈಗೆ ತೆಗೆದುಕೊಂಡು ಏನೇನು ಮಾಡಬೇಕೆಂಬ ಟಿಪ್ಪಣಿ ಬರೆಯತೊಡಗಿದಳು

ಅದರಲ್ಲಿ ಮೊದಲನೆಯ ಹಂತವೇ ಮರಿಯಮ್ಮಳನ್ನು ಭೇಟಿಯಾಗುವುದು.

ಅದನ್ನು ವೃತ್ತಾಕಾರಿಸಿಕೊಂಡಳು

*********************************************************

ಮರಿಯಮ್ಮ್ಮ ಆಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು

ಸ್ಟೇಷನ್ನಿಂದ ಅವಳ ವಿಳಾಸವನ್ನು ಶಿವು ತರಿಸಿಕೊಟ್ಟ . ಶಿವಾಜಿನಗರದ ಆಸ್ಟಿನ್ ಟೌನ್‍ನಲ್ಲಿ ಅವಳ ಮನೆ

ಹುಡುಕುತ್ತಾ ಶಿವು ಜೊತೆಗೆ ಮರಿಯಮ್ಮನ ಮನೆಗೆ ಬಂದಳು

ಅವಳ ಮನೆಯೂ ದೊಡ್ಡದೇ. ಚೆನ್ನಾಗಿ ಹಣಮಾಡಿದ್ದಳೆಂಬುದು ಅದರಿಂದಲೇ ತಿಳಿಯುತ್ತಿತ್ತು

ಬೆಲ್ ಮಾಡಿದಾಗ ಬಾಗಿಲು ತೆರೆದವಳು ಮರಿಯಮ್ಮ. ಸ್ಟೇಷನ್ನಿನಲ್ಲಿ ನೋಡಿದ್ದಕ್ಕೂ ಈಗಲೂ ಭಾರಿ ವ್ಯತ್ಯಾಸ ಕಾಣುತ್ತಿತ್ತು.

ತುರುಬು ಎತ್ತಿ ಕಟ್ಟಿದ್ದಳು. ಜರಿ ಸೀರೆ ಉಟ್ತಿದ್ದಳು. ಸ್ಥಿತಿವಂತಳೆಂಬುದು ಗೊತ್ತಾಗುತ್ತಿತ್ತು.

ಇವರನ್ನು ನೋಡಿ ಅಚ್ಚರಿ ಆದಂತೆ ತೋರಲಿಲ್ಲ ಅವಳಿಗೆ

"ನೀನು ಆವತ್ತು ಸ್ಟೇಶನ್‍ಗೆ ಬಂದ್ ಹುಡ್ಗಿ ತಾನೇ " ಹೌದೆಂಬಂತೆ ತಲೆ ಆಡಿಸಿದಳು

"ಇವನು?" ಶಿವು ಕಡೆ ನೋಡುತ್ತಾ ಕೇಳಿದಳು ಒಂದು ಚೂರು ಗೌರವದ ಮಾತು ಇಲ್ಲ ಅವಳಲ್ಲಿ

"ಅವರು ನಮ್ಮ ಸೋದರಮಾವನ ಮಗ" ಸ್ವಾತಿಯೇ ಉತ್ತರಿಸಿದಳು

"ಸರಿ ಬನ್ನಿ ಇಬ್ಬರೂ ಒಳಗೆ"

ಒಳಗೆ ಬಂದವರಿಗೆ ಕೂರಲು ಹೇಳಿದಳು

ಸ್ವಾತಿ ಸುತ್ತಾಮುತ್ತ ನೋಡುತ್ತಿದ್ದಳು ಮನೆ ಒಪ್ಪ ಓರಣವಾಗಿತ್ತು

"ನನ್ನ ಮನೆ ನೋಡೋಕೆ ಬಂದ್ಯಾ ಇಲ್ಲಾ ನಿನ್ನ ಮನೆ ಯಾವುದು ಅಂತ ತಿಳ್ಕೊಳೋದಿಕ್ಕೆ ಬಂದ್ಯಾ"

ಮರಿಯಮ್ಮನ ಗಡಸು ನುಡಿ
ಸ್ವಾತಿ ಪೆಚ್ಚಾದಳು . ಸಹಾಯಕ್ಕಾಗಿ ಶಿವುನನ್ನು ನೋಡಿದಳು



"ಸಾರಿ ಮರಿಯಮ್ಮ . ನಮಗೆ ಸ್ವಾತಿ ಬಗ್ಗೆ ತುಂಬಾ ವಿಷ್ಯ ಬೇಕಾಗಿದೆ" ಶಿವೂನೆ ನುಡಿದ

"ನಂಗೇನು ಸಿಗುತ್ತೆ?" ಮರಿಯಮ್ಮನ ದನಿ ಅಬ್ಬಾ ಅವಳ ದಾಷ್ಟ್ತ್ಗಕ್ಕೆ ಬೆರಗಾದಳು. ಅಥವ ಕಾಲ ಅವಳನ್ನು ಹೀಗೆ ಮಾಡಿದೆಯೇ?

"ನಿಂಗೆ ಎಷ್ಟು ದುಡ್ದು ಬೇಕೋ ಅಷ್ಟು " ಶಿವುನೂ ಗತ್ತಾಗಿ ನುಡಿದ .

"ಸರಿ ನಿಮಗೇನು ವಿಷ್ಯ ಬೇಕಾಗಿದೆ ಕೇಳಿ"

ಸ್ವಾತಿ ನುಡಿದಳು ನಿಧಾನಕ್ಕೆ

"ಮರಿಯಮ್ಮ ನಾನು ಪಾರ್ವತಮ್ಮನ ಮಗಳಲ್ಲ ಅಂದರೆ ನಾನೆಲ್ಲಿಂದ ಬಂದೆ ನನ್ನನ್ನು ನಿಮಗೆ ಯಾರು ಕೊಟ್ಟರು?ನೀವ್ಯಾಕೆ ನನ್ನನ್ನ ಬದಲಾಯಿಸಿದಿರಿ"

ಮರಿಯಮ್ಮನ ಮೊಗದಲ್ಲಿ ನಗೆ


"ನಾನೇನೇ ಮಾಡಿದರೂ ಅದು ದುಡ್ಡಿಗೋಸ್ಕರ. ಇನ್ಮೇಲ್ ನಾನ್ಯಾಕೆ ಹಾಗ್ಮಾಡಿದೆ ಅಂತ ಕೇಳ್ಬೇಡ"

"ಆಯ್ತು ಮರಿಯಮ್ಮ ಅವಳು ಎಲ್ಲಿಂದ ಬಂದಳು ಯಾರು ಕೊಟ್ಟರು ಅದನ್ನು ಮಾತ್ರ ಹೇಳು ಸರೀನಾ" ಶಿವು ಹೇಳಿದ

ಮರಿಯಮ್ಮ ಕಣ್ಣು ಮುಚ್ಚಿದಳು. ಕಣ್ಣ ಮುಂದೆ ಗತ ಜೀವನ ಹಾದು ಹೋಯಿತು
*****************************

ಮರಿಯಮ್ಮ ಮಾಡಿಕೊಂಡಿದ್ದು ನರ್ಸಿಂಗ್ ತರಬೇತಿಯಾದರೂ ಆಸ್ಪತ್ರೆಯಲ್ಲಿ ಕೆಲ್ಸ ಮಾಡುವುದು ಅವಳಿಗೆ ಹಿಡಿಸಿರಲಿಲ್ಲ. ಮೊದಲಿಗೆ ಲಕ್ಶ್ಮಿಆಗಿದ್ದ ಅವಳು ಟೋನಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿ ಅವನಿಂದ ಒಂದೇ ವರ್ಷದಲ್ಲಿ ದೂರವಾಗಿದ್ದಳು.ಅವಳ ಐಶಾರಾಮದ ಬಯಕೆಗಳು ಅವಳನ್ನು ಎಂತೆಂತಹದೋ ಕೆಲಸ ಮಾಡಿಸುತಿತ್ತು. ಹಾಗೆ ಅವಳು ಬಂದು ನೆಲೆಸಿದ್ದು ಪಾರ್ವತಿಯ ಊರಲ್ಲಿ. ಆಗ ಆ ಊರು ಕಾಡಿನಂತಿತ್ತು. ಸರಿಯಾದ ಬಸ್ ಸೌಕರ್ಯವಾವುದೂ ಇರಲಿಲ್ಲ. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕಳ್ಳತನ ಆಗಾಗ ಸಿಕ್ಕರೆ ಯಾರದಾರೂ ಗಿರಾಕಿಗಳು ಇವುಗಳಿಂದ ಅವಳ ಜೀವನ ನಡೆಯುತ್ತಿತ್ತು. ಆಗಾಗ ಸೂಲಗಿತ್ತಿಯಾಗಿಯೂ ಮಾಡುತ್ತಿದ್ದುದರಿಂದ ಹಣವೂ ಸಿಗುತ್ತಿತ್ತು .ತನ್ನ ಕೆಲಸಗಳ ಬಗ್ಗೆ ಅವಳಿಗೆ ಕೊಂಚವೂ ಬೇಸರವಿರಲಿಲ್ಲ. ಹಾಗೆಯೇ ಅದೇ ಊರಿನಲ್ಲಿದ್ದ ಪಾರ್ವತಿಯ ಅತ್ತೆ ಪರಿಚಯವಾಗಿತ್ತು.

ಅಂದು ಪಾರ್ವತಿ ಹೆರಿಗೆ ನೋವು ಎಂದು ಬಂದಾಗ ರಾತ್ರಿಯಲ್ಲಿ ಬಂದಳಲ್ಲ ಎಂದು ಬೇಸರಿಸಿಕೊಂಡೇ ಬಾಗಿಲು ತೆರೆದಳು. ಪಾರ್ವತಿಯ ಸ್ಥಿತಿ ನೋಡಿ ಹೆರಿಗೆ ಮಾಡಲು ಒಪ್ಪಿಕೊಂಡಳು.

ಹೆರಿಗೆ ಆದ ಕೂಡಲೇ ಪಾರ್ವತಿ ಅರೆ ಪ್ರಜ್ನಾವಸ್ತೆಗೆ ಜಾರಿದಳು.ಇತ್ತ ಪಾರ್ವತಿಯ ಅತ್ತೆ ಹಾಗೆ ನೆಲದ ಮೇಲೆ ಮಲಗಿದ್ದರು

ಮಗುವನ್ನು ತೊಳೆಯಲೆಂದು ಹಿತ್ತಲಿಗೆ ಬಂದ ಮರಿಯಮ್ಮ ಅಲ್ಲಿ ನಿಂತಿದ್ದ ಆಜಾನು ಬಾಹು ಆಕೃತಿಯನ್ನು ನೋಡಿ ಬೆಚ್ಚಿದಳು.

"ಯಾರು? ಯಾರದು?"

"ನಿನ್ನ ಕೈನಲ್ಲಿ ಇರೋ ಮಗು ಗಂಡಾ ಹೆಣ್ಣಾ?" ಕಂಚಿನ ದನಿಯಲ್ಲಿ ಕೇಳಿ ಬಂತು

"ಗಂಡು ಮಗು . ಯಾಕೆ ನೀವ್ಯಾರು"

" ಯಾಕೆ ಏನು ಎತ್ತ . ನಾನ್ಯಾರು ಅನ್ನೋದೆಲ್ಲಾ ಬೇಡ. ಆ ಮಗೂನ ಕೊಡು" ಆಕಡೆಯಿಂದ ಗಂಭೀರದನಿಯಲ್ಲಿ ಕೇಳಿಬಂತು ಮಾತು

ಮರಿಯಮ್ಮ ಬೆದರಿ ಒಳಗೆ ಓಡಲು ಯತ್ನಿಸಿದಳು


ಅವಳ ಕೈಯನ್ನು ಗಟ್ಟಿಯಾಗಿ ಹಿಡಿದ ಆ ವ್ಯಕ್ತಿ


ಮಂದ ಬೆಳಕಲ್ಲಿ ಆತನ ಮುಖ ನಿಧಾನವಾಗಿ ಕಾಣತೊಡಗಿತು


ಉದ್ದದ ಗಡ್ಡ . ನೋಡಿದರೆ ಯಾವುದೋ ಸ್ವಾಮೀಜಿಯಂತೆ ಕಾಣುತ್ತಿದ್ದ. ಸೊಂಟಕ್ಕೆ ಬಟ್ಟೆಯೊಂದನ್ನು ಸುತ್ತಿದ್ದ . ಒಂದು ಕೈನಲ್ಲಿ ಏನೋ ಹಿಡಿದಿದ್ದ. ಅರೆ ಅದೊಂದು ಮಗು.


ಮರಿಯಮ್ಮ ಕಿಟಾರ್ ಎಂದು ಕಿರುಚುವುದರಲ್ಲಿದ್ದಳು


ಅಷ್ಟರಲ್ಲಿ ಅವಳ ಕಣ್ಣ ಮುಂದೆ ನೋಟಿನ ಕಂತೆ ಕಾಣಿಸಿತು, ಆ ಸ್ವಾಮೀಜಿ ಅದನ್ನು ಅವಳ ಕಣ್ಣ್ ಮುಂದೆ ಆಡಿಸಲಾರಂಭಿಸಿದ


ಮರಿಯಮ್ಮ ನಿಧಾನವಾಗಿ ಸುಮ್ಮನಾದಳು. ಕಣ್ಣ ಮುಂದೆ ನೋಟಿನ ಕಂತು ಕುಣಿಯುತ್ತಿತ್ತು


"ಈ ಮಗು ತಗೊಂಡು ಆ ಮಗು ಕೊಡು" ಆತ ನಿರ್ದೇಶಿಸಿದ


"ಯಾಕೆ " ಮರಿಯಮ್ಮ ಪ್ರಶ್ನಿಸಿದಳು


ಆತ ಮತ್ತೊಂದು ನೋಟಿನ ಕಂತೆ ತೆಗೆದ


ನೂರರ ನೋಟುಗಳು


ಮರಿಯಮ್ಮನ ಕಣ್ಣುಗಳು ಅರಳಿದವು


ಮಗುಅನ್ನು ಮುಂಚಾಚಿದಳು.


ಆತ ತನ್ನ ಬಲಗೈನಲ್ಲಿದ್ದ ಮಗುವನ್ನು ಕೊಟ್ಟ


ಮಕ್ಕಳುಗಳು ಅದಲು ಬದಲಾದವು . ಹಾಗೆ ಅವಳ ಕೈ ತುಂಬಾ ನೋಟುಗಳು .ನೋಡು ನೋಡುತ್ತಿದ್ದಂತೆ ಆತ ಕತ್ತಲಲ್ಲಿ ಕರಗಿದ


ತನ್ನ ಕೈನಲ್ಲಿದ್ದ ಮಗುವನ್ನು ನೋಡಿದಳು.ಬಲು ಮುದ್ದಾಗಿತ್ತು.

ಅದು ಹುಟ್ಟಿ ಒಂದೆರೆಡು ದಿನಗಳಾಗಿದ್ದಿರಬಹುದು. ಅದರಮೈ ಮೇಲಿದ್ದ ಬಟ್ಟೆ ಹಾಗು ಹೊದಿಕೆಗಳನ್ನು ಬಿಚ್ಚಿ ಒಂದು ಬ್ಯಾಗಿಗೆ ಹಾಕಿದಳು

ತೆಗೆದುಕೊಂಡು ಹೋಗಿ ಪಾರ್ವತಿಯ ಪಕ್ಕದಲ್ಲಿ ಮಲಗಿಸಿದಳು ತಾನಿಲ್ಲೇ ಇದ್ದರೆ ಈ ವಿಷ್ಯ ಯಾರಿಗಾದರೆ ಗೊತ್ತಾದರೆ ಅಪಾಯ ಎಂದು ಬಗೆದು ತನ್ನ ಬಟ್ಟೆ ಬರೆಗಳನ್ನು ಬ್ಯಾಗಿಗೆ ತುಂಬಿಕೊಂಡು ಹಣದ ಸಮೇತ ಹಿತ್ತಲ ಬಾಗಿಲಿನಿಂದ ಹೊರ ಬಂದಳ ಬಸ್ ನಿಲ್ದಾಣದ ಕಡೆಗೆ ಕಾಲು ದಾರಿಯಲ್ಲಿ ಹೊರಟಳು.


************************************************


ಮರಿಯಮ್ಮ ಕಣ್ಣು ತೆರೆದಳು


ಸ್ವಾತಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಯ್ತು. ರಹಸ್ಯ ಇನ್ನೂ ಕಗ್ಗಂಟಾಯ್ತು.


"ಆ ಸ್ವಾಮಿ ಯಾರು ಅಂತ ಗೊತ್ತಾ ನಿಮಗೆ?" ಕೇಳಿದಳು

"ಇಲ್ಲಾ "ಎನ್ನುವಂತೆ ತಲೆ ಆಡಿಸಿದಳು ಮರಿಯಮ್ಮ.

ತನ್ನ ಗಮ್ಯ ತಾನಂದುಕೊಂಡಷ್ಟು ಸುಲಭಾವಾಗಿ ಸಿಗುವುದಿಲ್ಲ ಎಂದನಿಸಿತು ಸ್ವಾತಿಗೆ

"ಅವನನ್ನ ಎಲ್ಲಾದರೂ ಮತ್ತೆ ನೋಡಿದ್ರಾ?" ಶಿವೂ ಮರಿಯಮ್ಮನನ್ನ ಕೇಳಿದ

"ಇಲ್ಲಾ ನಾನ್ ಮತ್ತೆ ಅವನನ್ನ ಮೀಟ್ ಮಾಡಲಿಲ್ಲ .ಅವನ್ನ ಹಿಂದೆ ಎಲ್ಲೂ ಈ ಪ್ರದೇಶದಲ್ಲಿ ನೋಡಿಲ್ಲಾ . ಅದೆಲ್ಲಿಂದಾ ಬಂದನೋ ಈ ಮಗೂನಾ ಅದೆಲ್ಲಿಂದಾ ತಂದನೋ .ಗೊತ್ತಿಲ್ಲ. ಒಂದಂತೂ ನಿಜ .ಈ ಪಾರ್ವತಮ್ಮ ನೋವು ಅಂತ ನಮ್ಮನೆಗೆ ಬಂದದ್ದನ್ನು ನೋಡಿದಾನೆ. ಅದಕ್ಕೆ ಹಿತ್ತಲ ಬಾಗಿಲಿನಿಂದ ಒಳಗೆ ಬಂದಿದಾನೆ"

ಸ್ವಾತಿಯ ಮನದಲ್ಲಿ ಮತ್ತೆ ಅಂಧಾಕಾರ ಮೂಡಿತು.

ಶಿವು ತನ್ನ ಪ್ಯಾಕೆಟ್ ನಿಂದ ಸಾವಿರದ ಮೂರು ನೋಟುಗಳನ್ನು ಕೊಟ್ಟ

ಮರಿಯಮ್ಮ್ಮ ಕಾಯುತ್ತಿದ್ದವಳಂತೆ ಕಿತ್ತುಕೊಂಡಳು.

"ಆಯ್ತು ಮರಿಯಮ್ಮ. ಮುಂದೇನಾದರೂ ಸಹಾಯ ಬೇಕಿದ್ದಲ್ಲಿ ಮತ್ತೆ ಬರ್ತೀವಿ"

ಅವಳಿಗೆ ಕೈ ಮುಗಿದೆ ಹೊರಬಂದರು

ಮುಂದೇನು ಮಾಡುವುದು?

ಪ್ರಶ್ನೆ ಬೃಹದಾಕಾರವಾಯ್ತು.

Monday, November 9, 2009

ಗಮ್ಯ ಹುಡುಕುತ್ತಾ ಭಾಗ ೧

"ಸ್ವಾತಿ ತುಂಬಾ ಮುದ್ದಾಗಿದ್ದೀಯಾ ಅದು ಹೇಗೆ ಇಂತಾ ಅಪ್ಪ ಅಮ್ಮನಿಗೆ ನೀನು ಹುಟ್ಟಿಬಿಟ್ಟೆ ?" ಈ ಪ್ರಶ್ನೆ ತುಂಬಾ ಕಾಮನ್ ಆಗಿದ್ದರಿಂದ ಅದು ಸ್ವಾತಿಗೆ ಹೊಸದೆನಿಸಲಿಲ್ಲ . ಸುಮ್ಮನೆ ನಕ್ಕಳು. ಅವರ ಸ್ಟಾಪ್ ಬಂತು ಇಳಿದು ಹೋದರು. ಯಾರು ಎಂದು ಅವಳಿಗೇನು ಗೊತ್ತು. ಅಪ್ಪನಿಗೆ ತಿಳಿದವರಿರಬೇಕು ಅಥವಾ ಅಮ್ಮನಿಗೂ . ಇದ್ದರೂ ಇರಬಹುದು ಊರಿಗೆ ಗೊತ್ತಿರುವವರು ಅಪ್ಪ ಅಮ್ಮ .ಎಂದುಕೊಂಡು ಸುಮ್ಮನಾದಳು
ಹೌದು ಸ್ವಾತಿಯ ಅಪ್ಪ ಕಪ್ಪು ಬಣ್ಣಕ್ಕೆ ಸಡ್ಡು ಹೊಡೆಯುವ ಬಣ್ಣ . ಅಮಾವಾಸ್ಯೆ ದಿನ ಅಪ್ಪ ಎಲ್ಲಿ ಕತ್ತಲೆಲ್ಲಿ ಎಂದು ಹುಡುಕಬೇಕಾದ ಪರಿಸ್ಥಿತಿ ಉಂಟಾಗುತ್ತದೆ
ಅವಳ ಅಮ್ಮನೇ ವಾಸಿ ಕೊಂಚ ಬೆಳ್ಳಗೆ ಇದ್ದಾರೆ. ಆದರೋ ಮೂಗೋ ಬಿ ಎಮ್ ಟಿ ಸಿ ಬಸ್ ಸೀದಾ ಬಂದು ಅಮ್ಮನ ಮೂಗಿನ ಮೇಲೆ ಹತ್ತಿ ಪಯಣಿಸಿತ್ತೇನೋ ಎಂಬಷ್ಟು ಸಪಾಟವಾಗಿದೆ. ತಕ್ಕಂತೆ ಪುಟ್ಟ ಪುಟ್ಟ ಕಣ್ಣುಗಳು. ನಾನೇ ಮುಂದೆ ಎಂದು ಬಾಗಿರುವ ಹಲ್ಲುಗಳು.
ಸ್ವಾತಿ ಸೌಂದರ್ಯಕ್ಕೆ ಮತ್ತೊಂದು ಪರ್ಯಾಯ ಹೆಸರು. ಹಾಗಾಗೇ ಮನೆಯಲ್ಲಿ ಅವಳು ತುಂಬಾ ಮುದ್ದು ಒಬ್ಬಳೇ ಮಗಳೆಂದು ಬಲು ಮುದ್ದಾಗಿ ಸಾಕಿದ್ದರು. ಶ್ರೀಮಂತ ಕುಟುಂಬಕ್ಕೆ ಸೇರಿದ ರೆಡ್ಡಿಗಳ ಮಗಳು . ಅಪ್ಪನ ದರ್ಪ ಅಮ್ಮನ ಜಂಭ ಧಾರಾಳವಾಗಿತ್ತು ಜೊತೆಗೆ ತುಂಟತನ ಸಾಕು ಸಾಕೆನ್ನುವಷ್ಟು.ಕಾಲೇಜಿನಲ್ಲಿ ತುಂಟಿ ಎಂಬ ಹೆಸರಿನ ಜೊತೆಯೇ ಜಾಣೆ ಎಂಬ ಬಿರುದು ಇತ್ತು ಇನ್ನೂ puc ರಿಸಲ್ಟ್ ಬಂದಿರಲಿಲ್ಲ.
ಆದರೂ ಸ್ವಾತಿಗೆ ಯಾವ ಆತಂಕವೂ ಇರಲಿಲ್ಲ ಅವಳು ಪರೀಕ್ಶೆಯಲ್ಲಿ ಮೊದಲ ಸ್ಥಾನ ಬಿಟ್ಟು ಕೆಳಗಿಳಿದ್ದಿಲ್ಲ ಅಥವ ಹಾಗೇನಾದರೂ ಆದರೂ ಅವಳಿಗೇನೂ ನಷ್ಟವಿಲ್ಲ. ಅವಳು ಓದಿ ಸಂಪಾದಿಸಬೇಕಾದ್ದು ಏನು ಇರಲಿಲ್ಲ
ಬಸ್ ಸ್ಟಾಪ್ ಬಂತು.ಬಸ್ ಇಂದ ಇಳಿಯುತ್ತಿದ್ದಂತೆ ಸುತ್ತಾ ಮುತ್ತಾ ಇದ್ದ ಕಣ್ಣುಗಳೆಲ್ಲಾ ಅವಳ ಮೇಲೆ ಹಾದವು . ಅವಳಿಗೂ ಗೊತ್ತು ಎಲ್ಲರೂ ಕಂಡಕ್ಟರ್ ಹಾಗು ಡ್ರೈವರ್ ಸೇರಿದಂತೆ ತನ್ನನ್ನೇ ನೋಡ್ತಾ ಇದ್ದಾರೆ ಅಂತ . ಅದೂ ಒಂಥರಾ ಪುಳಕವೇ
ಅವಳಿಗೆ ಅಮ್ಮ ಎಷ್ಟೋ ಸಲ ಹೇಳಿದ್ದಾರೆ "ಸ್ವಾತಿ ಸ್ಕೂಟಿ ಕಲಿತ್ಕೋ ಸುಮ್ನೆ ಬಸಲ್ಲಿ ಎಲ್ಲಾ ಜನರ ಕಣ್ಣು ಬೀಳುತ್ತೆ. " ಅಂತಾ ಅಪ್ಪಾ ಅಂತೂ ಒಂದು ಹೆಜ್ಜೆ ಮುಂದೆ "ಸ್ವಾತಿ ನೀನು ಕಾರಲ್ಲೇ ಹೋಗಿ ಬಾ "ಅಂತಾರೆ
ಆದರೂ ಅವಳಿಗೆ ಬಸ್ಸಲ್ಲೇ ಓಡಾಡೋ ಆಸೆ. ಸುತ್ತಾ ಇರೋ ಜನರನ್ನ ನೋಡೋ ಆಸೆ. ಅವರ ಕಣ್ಣಲ್ಲಿ ಏನಿದೆ ಅಂತ ತಿಳಿಯೋ ಆಸೆ. ಹಿಂದೆ ಬೀಳೋ ಪುಂಡರನ್ನ ಸಾಕು ಎನಿಸುವಷ್ಟು ಗೋಳು ಹಾಕಿಕೊಳ್ಳೋ ಆಸೆ. ಹಾಗೆ ಹಿಂದೆ ಬಿದ್ದ ಹುಡುಗರು ಅಪ್ಪನ ಕೋಪಕ್ಕೆ ಸಿಕ್ಕಿ ಕೈ ಕಾಲು ಮುರಿಸಿಕೊಂಡು ಇವಳನ್ನು ನೋಡಿದರೆ ಸಾಕು ದೂರದಿಂದಲೇ ಕೈ ಮುಗಿದು ಓಡಿ ಹೋಗುವುದನ್ನು ನೋಡಿ ನಗುವ ಆಸೆ
ಬಸ್ ಸ್ಟಾಪ್ ಪೂರ್ತಿ ಜನಗಳು ಇನ್ನೇನು ಯಾವ ಬಸ್ಸೂ ಬರೋದಿಲ್ವೇನೋ ಅನ್ನೊ ಹಾಗೆ ಜನ ಕುರಿ ಮಂದೆ ಥರಾ ನುಗ್ತಾ ಇದ್ದಾರೆ. ಆ ಬಸ್ ಡ್ರೈವರ್ರೋ ಇಡಿ ಜನರನ್ನೇ ತಾನೆ ಹೊತ್ತುಕೊಂಡು ಹೋಗ್ತೀನೇನೋ ಅನ್ನೋಹಾಗೆ ಬೈತಾ ಇದ್ದಾನೆ.
ಎಷ್ಟೆ ಮುಂದುವರೆದ್ರೂ ಈ ಕಂಡಕ್ಟರ್ಸ್‌ಗೆ ಮತ್ತೆ ಡ್ರೈವರ್ಸ್‌ಗೆ ಸಾಫ್ಟ್ ಸ್ಕಿಲ್ಸ್ ಹೇಳಿಕೊಡದಿದ್ದರೆ ಬಿ ಎಮ್ ಟಿಸಿ ಬಸ್ಸಾ ಅನ್ನೋ ರಾಗ ತಪ್ಪಲ್ಲ.
ನಗುತ್ತಾ ಮನೆಯತ್ತ ನಡೆದಳು ಭವ್ಯ ಬಂಗಲೆ ಅದು . ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ
"ಸ್ವಾತಿ ಇಲ್ಲಿ ಬಾ " ಅಪ್ಪ್ಪ ಸ್ವಿಮ್ಮಿಂಗ್ ಪೂಲ್ ಬಳಿಯಲ್ಲೇ ಕೂತಿದ್ದರು . ಹೋಗಿ ಕೂತಳು . ಇಲ್ಲಿ ಕೂತು ಮಾಡುವುದೇನು ? ಅತ್ತಿತ್ತ ನೋಡತೊಡಗಿದಳು. ಅಪ್ಪ ಅವಳನ್ನ ಕರೆದದ್ದನ್ನೇ ಮರೆತವರಂತೆ ಕಿವಿಗೆ ಮೊಬೈಲ್ ಅಂಟಿಸಿಕೊಂಡಿದ್ದರು.
ಜೋರು ದ್ವನಿಯಲ್ಲಿ ಮಾತು ನಡೆಯುತ್ತಿತ್ತು
"ಲೋ ಲೋಫರ್ ಏನೋ ಮಾಡ್ತಾ ಇದ್ಯಾ ಮೊದಲು ಅವನ್ ಮನೆ ಹೊಡುಕೋ . ಎಲ್ಲಿ ಸತ್ ಬಿದ್ದಿದಾನೆ . ಹಂಗೆ ಅವನ್ ಮನೇಲಿ ಯಾರ್ಯಾರಿದ್ದಾರೆ ಅಂತ ಡೀಟೇಲ್ಸ್ ತಗೋ. ಕಕ್ಕ್ಸಿಬಿಡ್ತೀನಿ. ಈ ಕ್ರಿಷ್ಣಾರೆಡ್ಡಿ ಅಂದ್ರೆ ಉಚ್ಚೊಯ್ಕೋಬೇಕು ಹಂಗ್ ಮಾಡ್ತೀನಿ" ಇದು ಸಾಮಾನ್ಯ ಮಾತುಕತೆ
ಸ್ವಾತಿಯ ಅಪ್ಪ ಫೈನಾಂಶಿಯರ್. ಜೊತೆಗೆ ಪೇಪರ್ ಏಜೆಂಟ್, ಕೇಬಲ್ ಲಾಬಿ. ರಿಯಲ್ ಎಸ್ಟೇಟ್ ಏಜೆಂಟ್. ರಿಂಗ್ ರಸ್ತೆಯಲ್ಲಿರೋ ಚೌಲ್ಟ್ರಿಯಲ್ಲಿ ನಾಲ್ಕು ಇವರದೇ. ಇವರಿರೋ ಊರಲ್ಲಿ ಅರ್ಧ ಭಾಗ ಇವರದ್ದೇ , ಆಸಾಮಿ ಕೈಗೆ ಕಾಲಿಗೆ ಕುತ್ತಿಗೆಗೆ ಅಂತ ಸುಮಾರು ಎರೆಡು ಕೇಜಿ ಚಿನ್ನ ಹಾಕಿಕೊಳ್ಳುತ್ತಿದ್ದ.
ಫೋನ್ ಕಿವಿಯಿಂದ ಕೆಳಗೆ ಬಂತು
ಅವರ ಮಾತು ನಿಲ್ಲುವುದೇ ಕಾಯುತ್ತಿದ್ದಳು "ಏನಪ್ಪ ?"
"ಸ್ವಾತಿ ಯಾವಾಗ ರಿಸಲ್ಟ್?" ಮತ್ತದೇ ಪ್ರಶ್ನೆ ಇದೇ ಪ್ರಶ್ನೆ ಪರೀಕ್ಷೆ ಆದಾಗಿನಿಂದ ಕೇಳಿ ಕೇಳಿ ಸ್ವಾತಿಗೂ ಬೇಸರವಾಗಿತ್ತು
"ಒಂದು ಸಾವಿರ ಸಲ ಕೇಳ್ತಾ ಇದ್ದೀಯಾಪ್ಪ ಬೇರೆ ಏನಾದರೂ ಕೇಳಪ್ಪ"
ಬೇಸರ ಮಾಡಿಕೊಂಡೇ ಉತ್ತರಿಸಿದಳು
"ಸಾರಿ ಸ್ವಾತಿ ಮುಂದಿನ ತಿಂಗಳಲ್ವೇ. ಸರಿಯಾಗಿ ಇಪ್ಪತ್ತು ದಿನಗಳಾದ ಮೇಲಲ್ಲವೇ?"
"ಹೂ ಹೌದು . ಏನ್ಮಾಡಬೇಕಂತ ಇದ್ದೀಯಾ" ಪೇಪರ್ ಓದ್ತಾನೇ ಕೇಳಿದರು . ಅವರಿಗೆ ಮಗಳನ್ನು ಓದಿಸಿ ಡಾಕ್ಟರ್ ಮಾಡಬೇಕಂತಿತ್ತು. ಆದರೆ ಅವಳೋ ಆರ್ಟ್ಸ್ ಬ್ರಾಂಚ್ ತೆಗೆದುಕೊಂಡಿದ್ದಳು. ಸ್ವಾತಿ ಏನು ಹೇಳಿಯಾಳು.
ಅತ್ತಿತ್ತ ನೋಡಿ "ಒಳಗೆ ಹೋಗಿ ಕಾಫಿ ಕುಡೀಬೇಕಂತ ಅನ್ಕೊಂಡಿದ್ದೇನೆ " ಹೇಳಿ ಒಳಗೋಡಿದಳು ಕ್ರಿಷ್ಣಾ ರೆಡ್ಡಿ ಬೆಪ್ಪಾಗಿ ನಗುತ್ತಾ ಸುಮ್ಮನಾದರು
ಅವಳು ರೂಮೊಳೊಗೆ ಹೋದ ತಕ್ಷಣ ಅಮ್ಮ " ಎಲ್ಲಾದರೂ ಹೊರಗಡೆ ಹೋಗಿ ಬಂದ ಮೇಲೆ ಕಾಲು ತೊಳ್ಕೋ ಅಂದ್ರೂ ಕೇಳಲ್ಲ ಯಾವ್ಯಾವ ಜನರು ಏನೇನು ಮಾಡ್ರಿರ್ತಾರೋ ." ಗೊಣಗುತ್ತಿದ್ದರು
ಪಾರ್ವತಮ್ಮ ಜನ ತಮಗೆ ಮಾಟ ಮಂತ್ರ ಮಾಡಿಸಿರುತ್ತಾರೆ ಎಂಬ ಭಯ ಅವಳ ಅಪ್ಪನಿಗೆ ಎಲ್ಲಿ ಯಾರ್ ಯಾವತ್ತು ಮಚ್ಚು ಲಾಂಗ್ ಹಿಡ್ಕೊಂಡು ಬರ್ತಾರೋ ಅಂತ ಭಯ. ಇಲ್ಲದೇ ಏನು ಅಂಥಾ ಪಾಪಗಳನ್ನು ಮಾಡಿರೋರು ಅವರು ಮನುಷ್ಯರನ್ನು ಕೊಚ್ಚುವುದು ಅವರಿಗೊಂದು ಥರಾ ಆಟವಾಗಿತ್ತು. ಇಡೀ ಊರಿಗೆ ರೌಡಿಯ ರೀತಿ ಅವರು .
ರೂಮಿನ ಕಿಟಕಿ ಇಂದ ಅಪ್ಪಾ ಫೋನಲ್ಲಿ ಮಾತಾಡ್ತ್ತಿದ್ದುದು ಕೇಳಿಸ್ತಿತ್ತು "ಏಯ್ ಆ ** ಮಗನಿಗೆ ಏನ್ ರೋಗಾಂತೆ ಇವತ್ತು ಸಂಜೆ ಒಳಗೆ ಅಸಲು ಬಡ್ದಿ ಸಮೇತ ದುಡ್ಡುಕೊಡ್ಲಿಲ್ಲಾಂದ್ರೆ ಅವನ ಹೆಂಡ್ತೀನ ಬಾಂಬೆಗೆ ಮಾರ್ಬಿಡ್ತೀನಂತ ಹೇಳು . ಏನ್ಕಂದ್ಕೊಂಡಿದಾನೆ ************" ಅಪ್ಪನ ಬಾಯಿಂದ ಕೆಟ್ಟ ಮಾತುಗಳೇ . ಕೇಳೋಕಾಗಲ್ಲಾ ಒಂದೆರೆಡು ಸಲಾ ಅಪ್ಪನ್ನ ಬೈದಿದ್ದಳು
ಅದಕ್ಕೆ ಅವರು "ನೋಡು ಸ್ವಾತಿ ಹಿಂಗೆಲ್ಲಾ ಬೈದೆ ಹೋದ್ರೆ ನನ್ನ ದುಡ್ಡು ವಾಪಾಸ್ ಬರೋಲ್ಲಾ. ಹೀಗೆಲ್ಲಾ ಇಲ್ದೆ ಹೋದ್ರೆ ನಮ್ಮ ಹಣಾ ಸ್ಮಶಾನಕ್ಕೋದ ಹೆಣ ಅಂತನ್ಕೊಂಡು ಸುಮ್ನಾಗಬೇಕಷ್ಟೆ"
"ಸ್ವಾತಿ ಬೋಂಡ ತಿಂತೀಯಂತೆ ಬಾರೆ" ಅಮ್ಮಾ ಒಳಗಿಂದ ಕೂಗಿದರು ಮುಖ ತೊಳೆದುಕೊಂಡು ಅಡಿಗೆ ಮನೆಗೆ ಹೋದಳು. ಬೋಂಡಾ ಸಿದ್ದವಾಗಿತ್ತು. ಮೆಲ್ಲತೊಡಗಿದಳು "ಸ್ವಾತಿ ಮುಂದಿನ ತಿಂಗಳಿಗೆ ನಿಂಗೆ ಹದಿನೆಂಟು ತುಂಬುತ್ತೆ" ಅಮ್ಮಾ ಬೋಂಡಾ ಕರಿಯುತ್ತಾ ಹೇಳಿದರು
"ಮುಂದಿನವರ್ಷ ಅದೇ ತಿಂಗಳಿಗೆ ಹತ್ತೊಂಬತ್ತೂ ತುಂಬುತ್ತೆ . ಮತ್ತೆ ಅದರ ಮುಂದಿನ ವರ್ಷ್ಗ ಇಪ್ಪತ್ತೂ ತುಂಬುತ್ತೆ." ಮಾತು ಮುಂದುವರಿಸಿದಳು ಕೀಟಲೆಯಿಂದ
"ಲೇ ತರ್ಲೇ ನಾನ್ ಹೇಳ್ತಾ ಇರೋದು ಕೇಳಿಸಿಕೋ. ಶೀಲತ್ತೆ ಫೋನ್ ಮಾಡಿದ್ರು ಯಾವಾಗ ನಮ್ಹುಡುಗೀನ ಮನೆಗೆ ಕಳ್ಸ್ತೀರಾ ಅಂತಾ ."
"ಕಳಿಸಿಬಿಡು ಯಾಕೆ ಅವರ ಹುಡುಗೀನ ಇಟ್ಕೊಂಡಿದೀಯಾ" ಗೊತ್ತು ಅವಳೇನು ಹೇಳ್ತಾ ಇದಾಳಂತ ಆದರೂ ಬಾಯೊಳಗಿದ್ದ ಬೋಂಡಾ ಜೊತೆಗೆ ಮಾತಾಡಿದಳು
"ಸ್ವಾತಿ ತುಂಬಾ ತರಲೆ ಆಗ್ತಾ ಇದೀಯಾ. ಮದುವೆ ಯಾವಾಗ ಇಟ್ಕೊಳೋಣ ಅಂತಾ ಕೇಳ್ತಾ ಇದ್ದಾರೆ" "ಅಯ್ಯೋ ಶೀಲತ್ತೆಗೆ ಮತ್ತೆ ಮದುವೇನಾ ಮತ್ತೆ ಶ್ರೀದ್ಜರ ಮಾವನ ಗತಿ" ಸ್ವಾತಿ ಉದ್ಗರಿಸಿದಳು
"ಸ್ವಾತಿ ನಿನ್ನನ್ನ ಏನ್ಮಾಡ್ತೀನಿ ಅಂತ ನೋಡು" ಅಮ್ಮ ಅಟ್ಟಿಸಿಕೊಂಡು ಬಂದರು ರೂಮಿಗೆ ಓಡಿ ಬಂದು ಬಾಗಿಲು ಹಾಕಿಕೊಂಡಳು . ಕೆನ್ನೆ ಕೆಂಪಗಾಗಿತ್ತು ಮದುವೆಯ ಮಾತಲ್ಲವೇ
ಅವಳು ಇನ್ನೇನು ಕೊಂಚ ದಿನಗಳಲ್ಲೇ ಮದುವೆ ಅಂತ ಅವಳಿಗೂ ಗೊತ್ತು. ಶಿವು ಅವಳಿಗೂ ಇಷ್ಟಾನೆ ಆದರೆ ಇಷ್ಟು ಬೇಗ ಮದುವೆ ಆಗೋಕೆ ಅವಳಿಗೂ ಇಷ್ಟ ಇಲ್ಲ ಆದರೆ ರೆಡ್ದಿ ಹೆಣ್ಣು ಮಕ್ಕಳಿಗೆ ಹದಿನೆಂಟು ಹತ್ತೊಂಬತ್ತು ತುಂಬ್ತಾ ಇದ್ದ ಹಾಗೆ ಮದುವೆ ಮಾಡಿಬಿಡುವ ಕಾರ್ಯಗಳೇ ಜಾಸ್ತಿ ಜೊತೆಗೆ ಅವರ ಬಿಸಿನೆಸ್ ಸಹಾ ಒಂದು ಥರಾ ಅಪಾಯಕಾರಿಯಾದ್ದರಿಂದ ವಯಸಿಗೆ ಬಂದ ಮಗಳು ಸೆರಗಲಿಟ್ಟ ಕೆಂಡ ಎಂಬ ಆತಂಕ.
ಸ್ವಾತಿ ಮುದ್ದು ಮುದ್ದು ಹುಡುಗಿ ಶಿವು ಸಹಾ ಸಾಫ್ಟವೇರ್ ಇಂಜಿನಿಯರ್. ಒಳ್ಳೆ ಕಂಪೆನಿಯಲ್ಲಿ ಕೆಲ್ಸಕ್ಕೆ ಇದ್ದ. ಇವಳನ್ನು ಕಂಡರೆ ಪ್ರಾಣ ಇವಳಿಗೂ ಅಷ್ಟೇ. ಮೊದಲಿಂದಲೂ ಅವನೇ ತನ್ನ ಜೋಡಿ ಎಂಬ ಅಭಿಮಾನ.
ಸ್ವಾತಿ ಕಾಲಲ್ಲಿ ಅದೃಷ್ಟವನ್ನೇ ಹೊತ್ತು ತಂದವಳು ಅವಳು ಹುಟ್ಟಿದ ಮೇಲೆಯೇ ಅವಳ ಅಪ್ಪನ ಹೊಲ ಗದ್ದೆಗಳು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳ ತೊಡಗಿ ಹಣದ ಹೊಳೆಯನ್ನೇ ಹರಿಸಿದವು. ಹಾಗಾಗಿ ಸ್ವಾತಿ ಅವರ ಪಾಲಿಗೆ ಕೇವಲ ಮಗಳಾಗಿರಲಿಲ್ಲ ಅದೃಷ್ಟ ದೇವತೆ ಆಗಿದ್ದಳು.
ಕಂಪ್ಯೂಟರ್ ಆನ್ ಮಾಡಿ ಶಿವು ಜೊತೆ ಚಾಟ್ ಮಾಡುತ್ತಿದ್ದ ಸ್ವಾತಿ ಅವನ ಸಾಲುಗಳನ್ನು ನೋಡಿ ಕೆಂಪುಕೆಂಪಾಗಿ ನಾಚುತ್ತಿದ್ದಳು.
ಹಾಗೆ ಕಿಟಕಿಯಿಂದ ನೋಡಿದವಳಿಗೆ ಶಾಕ್ ಪೋಲಿಸ್ ಕಾನ್‌ಸ್ಟೇಬಲ್ ಜೊತೆ ಅಪ್ಪ ಹೋಗುತ್ತಿದ್ದಾರೆ ಎಲ್ಲಿ ಏನಾಯ್ತೋ ಎಂಭ ಭಯದಿಂದ ಹೊರಗೆ ಓಡಿದಳು
ಅಪ್ಪ ಮಾತ್ರ ನಗುತ್ತಾ ಹೊರಟಿದ್ದರು ಜೊತೆಗೆ ಅಮ್ಮನೂ ಹೊರಟಿದ್ದಳು "ಅಪ್ಪಾ ? ?"ಕೂಗಿದಳು. ಕೂಗಿನಲ್ಲಿ ಪ್ರಶ್ನೆ ಇತ್ತು "ಏನಿಲ್ಲಾ ಸ್ವಾತಿ ಸ್ಟೇಷನ್‌ನಲ್ಲಿ ಅದ್ಯಾರೋ ನಿಮ್ಮ ತಾಯಿಯ ಹೆಸರು ಹೇಳಿದಾಳಂತೆ ಅದ್ಯಾರು ಅಂತ ನೋಡಿಕೊಂಡು ಬರೋಣ ಅಂತ"
"ಅಪ್ಪಾ ನಾನೂ ಬರ್ತೀನಿ ಪ್ಲೀಸ್" ಒಮ್ಮೆ ಹೊರಗೆ ಹೋದ
"ಸರಿ ಬರಲಿ ಬಿಡಿಸಾರ್ ಫ್ಯಾಮಿಲಿ ಟ್ರಿಪ್ ಆದಂಗೆ ಆಗುತ್ತೆ" ಪೇದೆ ಕಿಸಿದ "ಹೌದೌದು ನಿಮ್ಮ ಸ್ಟೇಷನ್ ದೊಡ್ಡ ತಾಜ್ ಮಹಲ್ ನಡ್ಯೋ ಮುಂದೆ ನೋಡ್ಕೊಂಡು"ಸ್ವಾತಿಯ ಅಪ್ಪ ಗದರಿದರು ಅವರ ದರ್ಪವೇ ಅಂತಹದ್ದು. ಎಲ್ಲರೂ ಕಾರನ್ನೇರಿದರು ಕಾರ್ ಪೋಲಿಸ್ ಸ್ಟೇಷನ್‌ನ ಮುಂದೆ ನಿಂತಿತು ಹೊರಗಡೆಯೇ ನಿಂತಿದ್ದ ಎಸ್ ಐ ಸ್ವಾಗತಿಸಿದ "ಬನ್ನಿ ಸಾರ್ . ಅದು ಈ ಹೆಂಗಸು ನಮಗೆ ಲೇಡಿ ಕರ್ಜನ್ ಹಾಸ್ಪಿಟಲ್ ಬಳಿ ಸಿಕ್ಕಳು. ಮಕ್ಕಳ ಕಳ್ಳಿ ಇವಳು" ಸ್ವಾತಿಯ ಅಪ್ಪ "ನಮ್ಮ ಮನೇಲಿ ಯಾವ ಮಕ್ಕಳೂ ಕಳೆದು ಹೋಗಿಲ್ಲ . ನಮ್ಮನ್ಯಾಕೆ ಕರೆಸಿದ್ರಿ?" ಅವರ ಧ್ವನಿಯಲ್ಲಿ ಬೇಸರ ಇತ್ತು "ಸಾರಿ ಸಾರ್ ನೀವೊಂದು ಸಲ ಆಕೆ ಹತ್ರ ಮಾತಾಡಿ ನಾನ್ಯಾಕೆ ಕರೆಸಿದೆ ಅಂತ ಗೊತ್ತಾಗುತ್ತೆ . ನಿಮ್ಮ ಮಗಳು ಇಲ್ಲೆ ಇರಲಿ" ಎಸ್ ಐ ಹೇಳಿದ ಸ್ವಾತಿ ಕೆರಳಿದಳು "ನಾನ್ಯಾಕೆ ಇಲ್ಲೆ ಇರಬೇಕು ನಾನೂ ಆ ಹೆಂಗಸನ್ನ ನೋಡಬೇಕು ನಾನ ನೂವ್ ಚೆಪ್ ನಾನಾ"ಒಮ್ಮೊಮೆ ತೆಲಗು ಬೇಡವೆಂದರೂ ನಾಲಿಗೆಗೂ ಬಂದುಬಿಡುತ್ತಿತ್ತು "ಬರಲಿ ಬಿಡ್ರಿ. ಅವಳೇನು ಬೇರೆಯವಳಾ?" ಸ್ವಾತಿಯ ಅಪ್ಪ "ಸಾರ್ ಆದರೆ ಇದು....." ಎಸ್ ಐ ತಡವರಿಸಿದ "ನೀನು ಬಾ ಸ್ವಾತಿ " ಅವನ ಮಾತನ್ನು ಗಮನಿಸದೆ ಅಪ್ಪ ಮುಂದುವರೆದರು ಸ್ವಾತಿ ಅವರನ್ನು ಹಿಂಬಾಲಿಸಿದಳು
ಶೆಲ್‌ನ ಒಳಗೆ ಆ ಹೆಣ್ಣು ಕೊತಿದ್ದಳು. ತಲೆ ತಗ್ಗಿಸಿದ್ದರಿಂದ ಮುಖ ಕಾಣಿಸಲಿಲ್ಲ. ಅವಳ ಕೈ ಮೇಲೆ ಬಾಸುಂಡಿಗಳು ಪೋಲಿಸರ ಆತಿಥ್ಯ ತಿಂದುದಕ್ಕೆ ಸಾಕ್ಷಿಯಾಗಿತ್ತು.
"ಏಯ್ ನೋಡು . ನೀನು ಹೇಳಿದ ಹಂಗೆ ಪಾರ್ವತಮ್ಮ ಬಂದಿದಾರೆ . ಬೊಗಳು. " ಪಕ್ಕದಲ್ಲೆ ನಿಂತಿದ್ದ ಲೇಡಿ ಕಾನ್‌ಸ್ಟೇಬಲ್ ಗದರಿದಳು.
ಆಕೆ ತಲೆ ಎತ್ತಿದಳು ಪಾರ್ವತಮ್ಮ ಅಂದರೆ ಸ್ವಾತಿಯ ಅಮ್ಮನಿಗೆ ಅವಳ ಗುರುತು ಹತ್ತಲಿಲ್ಲ.
ತುಂಬಾ ವಯಸಾಗಿತ್ತು. ಆ ಹೆಂಗಸಿಗೆ. ಕಣ್ಣುಗಳ ಸುತ್ತಾ ಕಪ್ಪು ವರ್ತುಲಗಳು.
"ಯಾರು? ನಾನು ನಿಂಗೆ ಗೊತ್ತಿದ್ದೀನಾ?" ಪಾರ್ವತಮ್ಮನ ದ್ವನಿಯಲ್ಲಿ ಅವರಿಗೆ ಗೊತ್ತಿಲ್ಲದ ಹಾಗೆ ನಡುಕ ಉಂಟಾಗಿತ್ತು ಆಕೆ ಎದ್ದು ನಿಂತಳು
" ನಾನ್ಯಾರು ಅಂತ ನಿಮಗೆ ನೆನಪಿರಬಹುದು. ನಾನು ನಿಮ್ಮ ಹೆರಿಗೆ ಮಾಡಿದವಳು" ಆಕೆ ಒಂದೊಂದಾಗಿ ಪದಗಳನ್ನು ಕಷ್ಟ ಪಟ್ಟು ಉರುಳಿಸಿದಳು. ಪಾರ್ವತಮ್ಮನಿಗೆ ಮಿಂಚು ಬಂದಂತಾಯ್ತು
ಆಗ ಹದಿನೆಂಟು ವರ್ಶ್ಹಗಳ ಮುಂಚೆ ಆಗಿನ್ನೂ ಅವರಿದ್ದ ಊರು ಕಾಡಿನಂತಿತ್ತು. ಸಿರಿವಂತಿಕೆಯೂ ಇರಲಿಲ್ಲ ತಾಯಿ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದ ಪಾರ್ವತಿಗೆ ಗಂಡನ ಅಮ್ಮ ಅಂದರೆ ಅವಳ ಅಜ್ಜಿ ಮಾತ್ರ ಇದ್ದರು. ಅವರಿಗೂ ವಯಸಾಗಿತ್ತು. ಆಗ ಪಾರ್ವತಿಯ ಗಂಡ ಕ್ರಿಷ್ಣಾರೆಡ್ಡಿ ಮಹಾ ಕುಡುಕ. ಒಮ್ಮೆ ಹೊರಗೆ ಹೋದರೆ ಮತ್ತೆ ಬರುವುದು ಎಂದೋ. ಅಂತಹ ಒಂದು ದಿನದಲ್ಲೇ ತುಂಬು ಗರ್ಭಿಣಿಯಾಗಿದ್ದ ಪಾರ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅಲ್ಲಿಂದ ಸಿಟಿಗೆ ಬರಬೇಕಾಗಿತ್ತು. ಹೇಗೋ ಪಕ್ಕದ ಮನೆಯಲ್ಲಿದ್ದ ಆಟೋಗೆ ಹೇಳಿ ಅದರಲ್ಲಿ ಬರುತ್ತಿದ್ದಂತೆ ನೋವು ಹೆಚ್ಚಾಗತೊಡಗಿತು. ಅವಳ ಹೆರಿಗೆ ಈಗಲೆ ಆಗಬಹುದೆಂದು ಅನಿಸಿ ದಾರಿಯಲ್ಲಿ ಗೊತ್ತಿದ್ದ ಮನೆಯೊಂದರ ಬಾಗಿಲು ಬಡಿದರು.
ಆ ಮನೆಯ ಹೆಂಗಸು ಮರಿಯಮ್ಮ ಒಬ್ಬ ಸೂಲಗಿತ್ತಿಯಾದ ಕಾರಣ ಒಂದು ಘಂಟೆಯಲ್ಲಿ ಸುಸ್ಸೂತ್ರವಾಗಿ ಹೆರಿಗೆ ಮುಗಿಸಿದ್ದಳು. ಆದರೆ ಪಾರ್ವತಿಗೆ ಎಚ್ಚರವಾಗುವ ವೇಳೆಗೆ ಆ ಹೆಂಗಸು ಇರಲಿಲ್ಲ.ದೇವರೆ ಅವಳ ರೂಪದಲ್ಲಿ ಬಂದು ತನ್ನ ಹೆರಿಗೆ ಮಾಡಿಸಿದ್ದಾರೆಂದು ಧನ್ಯಳಾಗಿದ್ದಳು ಪಾರ್ವತಿ. ಆಗ ಹುಟ್ಟಿದವಳೇ ಸ್ವಾತಿ. ಆ ಹೆಂಗಸು ಇವಳೇ ಇರಬಹುದೆ ಎಂದನಿಸಿತು ಪಾರ್ವತಮ್ಮನಿಗೆ ನೆನಪು ಮಾಡಿಕೊಂಡು ಕೇಳಿದರು "ನೀನು ಮರಿಯಮ್ಮ ಅಲ್ವಾ?"
"ಹೌದೆನ್ನುವಂತೆ ತಲೆ ಆಡಿಸಿದಳು
"ಅಯ್ಯೋ ದೇವರಂಗ್ ಬಂದು ನನ್ನ ಪ್ರಾಣ ಉಳಿಸಿದೆ ತಾಯಿ ನೀನು . ಎಲ್ಲ್ ಹೊರಟೋದೆ ನೀನು ಆಮೇಲೆ?" ಪಾರ್ವತಮ್ಮ ನುಡಿಯುತ್ತಿದ್ದಂತೆ ಆ ಹೆಣ್ಣಿನ ಮುಖದಲ್ಲಿ ಒಂದು ನಗೆ ಹಾದು ಹೋಯ್ತು.
"ಮೇಡಮ್ ಇವಳು ಎಂಥಾ ಕೆಲ್ಸ ಮಾಡಿದಾಳೆ ಅಂತಾ ಗೊತ್ತಿಲ್ಲಾ ನಿಮಗೆ " ಎಸ್ ಐ ಹೇಳುತ್ತಿದ್ದಂತೆ
"ಶ್" ಎಂದು ತಡೆದರು ಕ್ರಿಷ್ನಾರೆಡ್ಡಿ "ಅವಳು ಹೇಳಲಿ ಬಿಡಿ"
ಸ್ವಾತಿಯ ಹೃದಯ ಹೊಡೆದುಕೊಳ್ಳಲಾರಂಭಿಸಿತು. ಆಕೆ ಯಾವುದೋ ಭೂಕಂಪವನ್ನು ಸೃಷ್ಟಿಸಬಹುದು ಎಂದೇ ಅನಿಸತೊಡಗಿತು.
ನಿಟ್ಟ ನೋಟದಿಂದ ಮರಿಯಮ್ಮನನ್ನೆ ನೋಡಲಾರಂಭಿಸಿದರು ಎಲ್ಲರೂ "ಆವತ್ತು ನಿಮಗೆ ಹುಟ್ಟಿದ್ದು ಗಂಡುಮಗು"
ಆಕೆ ಬಾಯಿ ಬಿಟ್ಟಳು ನೋಟ ಮತ್ತೆಲ್ಲೋ ಇತ್ತು
ದೊಡ್ಡದೊಂದು ಬಾಂಬ್ ಹಾಕಿದಂತೆ ಎಲ್ಲರೂ ಸ್ತಬ್ದರಾದರು. ಕ್ಷಣಕಾಲ ಮೌನವಾವರಿಸಿತು. ಮರಿಯಮ್ಮ ಆಗಬಹುದಾದ ಪರಿಣಾಮಗಳನ್ನು ಊಹಿಸುತ್ತಾ ಹಿಂದೆ ಸರಿಯುತ್ತಿದ್ದಂತೆ
ಕೂಡಲೇ ಚೇತರಿಸಿಕೊಂಡ ಕ್ರಿಷ್ಣಾರೆಡ್ಡಿ "ಏಯ್ ಏನೆ ಬೊಗಳ್ತಿದ್ದೀಯಾ . ಇವತ್ತು ನಿನ್ನ ಗತಿ ನೆಟ್ಟಗಿಲ್ಲ ಅನ್ಸುತ್ತೆ ಅದಕ್ಕೆ ನನ್ನಕೈನಲ್ಲಿ ಸಿಕ್ಕಿಹಾಕೊಂಡಿದ್ದೀಯಾ ಸುಳ್ಳು, ಸುಳ್ಳ್ಯ್ ಹೇಳ್ತೀಯಾ ಸೀರೆ ಬಿಚ್ಚಿ ಹೊಡೀತೀನಿ ನಿಂಗೆ ನೋಡು ನಾನು .ರಂಡೆ " ಮರಿಯಮ್ಮನ ಕೂದಲನ್ನು ಹಿಡಿದು ಜಗ್ಗಿದರು.
ಆಕೆ ನೋವಿನಿಂದ ಚೀರಿದಳು "ಸಾರ್ ಪ್ಲೀಸ್ ಸಾರ್ ಬಿಟ್ಟು ಬಿಡಿ ಇದು ಸ್ಟೇಶನ್" ಎಸ್ ಐ ಬೇಡಿಕೊಂಡ.
ಕ್ರಿಷ್ಣಾರೆಡ್ಡಿಯ ಕೈ ಸಡಿಲವಾಯ್ತು ಸ್ವಾತಿಯ ಎದೆಯ ಕಂಪನ ಜೋರಾಗಿತ್ತು.ಇದು ಯಾರ ವಿಷಯ ಹೇಳುತ್ತಾ ಇದ್ದಾಳೆ. ಅರ್ಥವಾಗಲಿಲ್ಲ
ಪಾರ್ವತಿ ತೀರ ತೆಳ್ಳಗಿದನ ಸ್ವರದಲ್ಲಿ " ನಂಗೆ ಹುಟ್ಟಿದ್ದು ಈ ಹೆಣ್ಣು ಮಗೂನೆ .ಸುಳ್ಳಾಡಬೇಡ. "ಸ್ವಾತಿಯನ್ನ ತೋರಿಸಿ ನುಡಿದರು ಪಾರ್ವತಮ್ಮ.
"ಮೇಡಮ್ ಅವಳು ಹೇಳ್ತಿರೋದು ನಿಜಾ ಮೇಡಮ್ ಈ ನಿಜಾನಾ ನಾವೆ ಹೊರಡಿಸಿದಿವಿ ಅವಳ ಬಾಯಿಂದಾ" ಎಸ್ ಐ ಹೇಳಿದಾಗ ಎಲ್ಲರೂ ಅವನತ್ತ ನೋಡಿದರು. "ಇವಳ ಕೆಲ್ಸಾನೆ ಆಗ ತಾನೆ ಹುಟ್ಟಿದ ಮಗೂನ ಕದ್ದುಕೊಂಡು ಹೋಗಿ ಮಾರೋದು . ಇಲ್ಲೀ ತನಕ ಸುಮಾರು ಗಂಡು ಮಕ್ಕಳನ್ನು ಮಾರಿದ್ದಾಳೆ . ಹಾಗೆ ಮಾರ್ತಿದ್ದ ಹಾಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಳು. ಸಕ್ಕತಾಗಿ ಚಚ್ಚಿದ ಮೇಲೆ ಒಬ್ಬೊಬ್ಬರ ಹೆಸರನ್ನೇ ಹೇಳ್ತಿದ್ದಳು ಹಂಗೆ ನಿಮ್ಮ ಹೆಸರೂ ಹೇಳಿದಳು. ಅದಕ್ಕೆ ನಿಮ್ಮನ್ನ ಕರೆಸಿದ್ದು. "

ಸ್ವಾತಿಯ ಉಸಿರು ನಿಂತಂತಾಯ್ತು ಮಾತಾಡಲು ಬಾಯಿ ಬರಲಿಲ್ಲ

ಮರಿಯಮ್ಮ ಮುಂದುವರೆಸಿದಳು "ನಾನ್ಹೇಳ್ತಾ ಇರೋದು ಏಸು ಆಣೆಗೂ ನಿಜಾ. ಈ ಮಗು ನಿಮ್ಮ ಮಗು ಅಲ್ಲಾ. ನಿಮ್ಮ ಮಗು ಒಂದು ಗಂಡು ಮಗು . ಆ ಮಗು ಮುಖ ನೋಡಿದ್ರೆ ಗೊತ್ತಾಗುವುದಿಲ್ಲವಾ ನಿಮ್ಮ ಮಗಳು ಆಗೋಕೆ ಸಾಧ್ಯಾನಾ?" ಎಲ್ಲರೂ ಸ್ವಾತಿಯತ್ತ ನೋಡಿದರು. ಸ್ವಾತಿಗೆ ಏನು ಮಾಡುವುದೆಂದು ತೋಚಲಿಲ್ಲ. ಪೆಚ್ಚು ಪೆಚ್ಚಾಗಿ ನೋಡಿದಳು.

"ನೀನೇಳ್ತಾ ಇರೋದ್ ನಿಜ ಅಂದ್ರೂ ಮತ್ತೆ ಆ ಗಂಡು ಮಗೂ ಎಲ್ಲಿ " ಕ್ರಿಷ್ಣಾರೆಡ್ಡಿ ಕರ್ಕಶವಾಗಿ ಕೇಳಿದರು
ಉತ್ತರಕ್ಕಾಗಿ ಎಲ್ಲರೂ ಮರಿಯಮ್ಮನನ್ನು ನೋಡಿದರು.
ಅವಳು ತಲೆ ತಗ್ಗಿಸಿದಳು
"ಬೊಗಳೇ ಬೇಗ ನನ್ನ ಮಗೂನ ಏನ್ ಮಾಡ್ದೆ" ಪಾರ್ವತಮ್ಮ ಕಿರುಚಿದರು
ಸ್ವಾತಿ ಪಕ್ಕನೆ ತಾಯಿಯನ್ನು ನೋಡಿದಳು. ಅಮ್ಮನ ಕಣ್ಣಲ್ಲಿ ಕಾತುರತೆ.
ಇಲ್ಲಿಯವರೆಗೆ ತನ್ನ ಮಗಳು ಅಂತಿದ್ದ ಅಮ್ಮನಿಗೆ ತನ್ನ ಮಗನ ಬಗ್ಗೆ ತಿಳಿಯಲು ಎಷ್ಟು ಕುತೂಹಲ ತವಕ. ಆಗಲೆ ಮಗನ ಬಗ್ಗೆ ವ್ಯಾಮೋಹ ಬಂದಿತೇ ? ಇನ್ನು ತನ್ನ ಮೇಲಿಟ್ಟ ಪ್ರೀತಿ ಕೇವಲ ಸಂಬಂಧ ಮಾತ್ರದಿಂದಲೇ ಬಂದಿತೇ
ಹಾಗಿದ್ದಲ್ಲಿ ತಾನು ಯಾರು? ತನ್ನ ಅಪ್ಪ ಅಮ್ಮ ಯಾರು? ಇಲ್ಲಿಯವರೆಗೆ ತನ್ನ ಮನೆಯಲ್ಲದ ಮನೆಯಲ್ಲಿ ಬದುಕಿದೆನೇ ನಾನು? ತನ್ನ ಗಮ್ಯ ಯಾವುದು . ಇಲ್ಲಿಯವರೆಗಿನ ಅಪ್ಪ ಅಮ್ಮ ತನ್ನವರಲ್ಲ
ಮುಂದೇನು ಮಾಡುವುದು? ಅವಳ ತಲೆಯಲ್ಲಿ ಪ್ರಶ್ನೆಗಳು ತಾಂಡವವಾಡತೊಡಗಿದವು
ಎಳೆಯ ಮನಸು ಕಮರತೊಡಗಿತು.
ಭಾವನೆಗಳ ತಾಕಲಾಟ ತಾಳದಂತೆ ಅವಳ ತಲೆ ಸಿಡಿದುಹೋಗುವಂತಾಯ್ತು ಅಮ್ಮಾ ಎಂದು ತಲೆ ಹಿಡಿದವಳೇ ಕೆಳಗೆ ಕುಸಿದಳು
ಸ್ವಾತಿ ಎನ್ನುತ್ತಾ ಎಲ್ಲರೂ ಅವಳತ್ತ ಓಡಿದರು.
(ಮುಂದುವರೆಯುವುದು)