Tuesday, March 24, 2009

ಪ್ರತಿ ಮನದೊಳಗೊಂದು ಬೆಳಕು

"ಸಾರ್ ಇದೊಂದು ತಿಂಗಳು ಅಡ್ಜಸ್ಟ್ ಮಾಡಿಕೊಳ್ಳಿ ಹೇಗಾದರೂ ಮಾಡಿ ಬಾಡಿಗೆ ತಂದು ಹೊಂದಿಸ್ತೀನಿ. " ಆ ಹುಡುಗ ಗೋಗರೆಯುತ್ತಿದ್ದ.
ಆದ್ರೆ ಮನೆ ಮಾಲೀಕನದು ಕಲ್ಲೆದೆಯಾಗಿತ್ತು. ಆತ ಕ್ರೂರ ತನಕ್ಕೆ, ಕಟುಕತೆಗೆ ಉದಾಹರಣೆಯಾಗಿದ್ದ. ಆತನೆಂದರೆ ಜನ ದೂರ ಸರಿಯುತ್ತಿದ್ದರು.ಇಲ್ಲಿಯವರೆಗೆ ಒಂದಾದರೂ ಒಳ್ಳೆಯ ಕೆಲಸಮಾಡಿರಲಿಲ್ಲ. ಹಾಗಾಗಿಯೇ ಏನೋ ಇದ್ದೊಬ್ಬ ಮಗ ಹಾಳು ದುರಭ್ಯಾಸ ಕಲಿತು ಹಾಳಾಗಿದ್ದ. ಮಗಳು ಸಿರಿವಂತರ ಸೊಸೆಯಾಗಿದ್ದರೂ ನೆಮ್ಮದಿ ಇಲ್ಲದೆ ಆತ್ಮ ಹತ್ಯೆ ಮಾಡಿಕೊಂಡಿದ್ದಳು. ಆದರೂ ಆ ಮಾಲೀಕನಿಗೆ ಬುದ್ದಿ ಬಂದಿರಲಿಲ್ಲ

"ನೋಡಯ್ಯ ಈಗಾಗಲೇ ಎರೆಡು ತಿಂಗಳಾಗಿವೆ ಬಾಡಿಗೆ ಬೇಕೆ ಬೇಕು ಇಲ್ಲಾಂದ್ರೆ ಸಾಮಾನೆಲ್ಲಾ ಹೊರಗೆ ಹಾಕ್ತೀನಿ" ಆತನ ದರ್ಪದ ಮಾತಿಗೆ ಹುಡುಗ ಬೆದರಿದ
ಆತ ಇಂಜಿನಿಯರಿಂಗ್ ಮಾಡಿದ್ದ . ಹೋದವರ್ಷ ತಾನೆ ಓದು ಮುಗಿಸಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದ. ಚೆಂದದ ಮಾರ್ಕ್ಸ್‌ ಪಡೆದಿದ್ದರಿಂದ ಕೆಲ್ಸ ಸಿಗುವುದೇನೂ ಕಷ್ಟವಾಗಲಿಲ್ಲ. ಒಂದೆರೆಡು ತಿಂಗಳಾಗಿತ್ತೇನೋ ಎಲ್ಲೆಲ್ಲೂ ನಡೆಯುತ್ತಿರುವಂತೆ ಅವನ ಕಂಪೆನಿಯೂ ಬಾಗಿಲು ಜಡೆದು ಮನೆಗೆ ಕಳಿಸಿತು.
ಇನ್ನೊಂದೆರೆಡು ತಿಂಗಳಲ್ಲಿ ಮತ್ತೆ ಕರೆಸಿಕೊಳ್ಳುವುದಾಗಿ ವಾಗ್ವಾದವನ್ನು ನೀಡಿತ್ತು
ಆರ್ಥಿಕ ಸಂಕಷ್ರದಿನಗಳಲ್ಲಿ ಫ್ರೆಶರ್ ಎಂದು ಬಿರುದು ಹೊತ್ತ ಆತನಿಗೆ ಕೆಲಸ ಕೊಡಲು ಯಾವ ಕಂಪೆನಿಯೂ ಮುಂದೆ ಬರಲಿಲ್ಲ. apply apply o reply ಆಗಿ ಹೋಗಿತ್ತು. ಎರೆಡು ತಿಂಗಳಿಂದ ಬಾಡಿಗೆ ಬೇರೆ ಕೊಟ್ಟಿರಲಿಲ್ಲ . ಊರಿನಿಂದ ಬಡ ಅಮ್ಮ ಹಣ ಕಳುಹಿಸುವುದಕ್ಕೆ ಹರ ಸಾಹಸ ಪಡುತ್ತಿದ್ದಳು. ಊಟಕ್ಕೆ ತಿಂಡಿಗೆ ಪ್ರತಿಯೊಂದಕ್ಕೂ ಹಣ ಹೊಂದಿಸಲು ಕಷ್ಟ ಪಡುತ್ತಿದ್ದ.
"ಸಾರ್ ಹೇಗಾದರೂ ಮಾಡಿ ನಾಳೆ ಸಮಯ ಕೊಡಿ . ದುಡ್ಡು ಅರೇಂಜ್ ಮಾಡ್ತೀನಿ. "ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷಆಯಸ್ಸು ಎಂದು ಬೇಡಿಕೊಂಡ.
"ಹಾ ಆಗಲಿ. ನಾಳೆ ಸಂಜೆಯೊಳಗೆ ದುಡ್ಡು ಬೇಕು ನೋಡು" ಮಾಲೀಕ ಮೀಸೆ ತಿರುವಿಕೊಂಡು ಕಾರ್ ತೆಗೆದುಕೊಂಡು ಹೋದ
ಬದುಕಿದೆ ಎನ್ನುವಷ್ಟ್ರರಲ್ಲಿ ಹಾಲಿನ ಹೆಂಗಸು ಬಂದು ಜಗಳ ಮಾಡಿದಳು. ದಿನಸಿ ಅಂಗಡಿಯವನ ಗಲಾಟೆಯಂತೂ ಬೀದಿಗೆ ಬೀದಿಯೇ ನಿಂತು ನೋಡುತ್ತಿತ್ತು. ಎಲ್ಲರೂ ಒಂದೊಂದು ಗಡುವು ನೀಡಿ ಹೋದರು
ಆ ಹುಡುಗ ಬಹಳ ಧೈವ ಭಕ್ತಿಯುಳ್ಳವನು. ಮನೆಗ ಬಂದು ಬಾಗಿಲು ಹಾಕಿಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.ದೇವರ ಮುಂದೆ ಮಂಡಿಯೂರಿ ಪ್ರಾರ್ಥಿಸಿದ. ತನ್ನಾಳವನ್ನೆಲ್ಲಾ ದೇವರಲ್ಲಿ ನಿವೇದಿಸಿಕೊಂಡ. ತನ್ನ ಗುರಿಯನ್ನು ಹೇಳಿಕೊಂಡ. ಊರಿನಲ್ಲಿ ಕಷ್ಟ ಪಟ್ಟು ಅಮ್ಮ ನನ್ನನ್ನು ಓದಿಸಿದ್ದಾಳೆ.ಅವಳನ್ನು ಈ ಇಳಿವಯಸಿನಲ್ಲಾದರೂ ಸಂತಸವಿಡುವಂತೆ ಮಾಡಲಾಗಲಿಲ್ಲವಲ್ಲ ಎಂದು ಒದ್ದಾಡಿದ

ಫೋಟೋ ದಲ್ಲಿನ ದೇವರು ನಗುತ್ತಲೇ ಇದೆ ಅನ್ನಿಸಿತು. "ನೀನೂ ನನ್ನನ್ನು ಅವಹೇಳನ ಮಾಡುತ್ತೀಯಾ " ದೂರಿದ
"ಯಾವುದಾದರೂ ಪವಾಡ ಮಾಡು "ಎಂದು ಬೇಡಿಕೊಂಡ.
ಎಲ್ಲಾ ಸರಿ ಹೋದರೆ ಮುಂದಿನವಾರದ ಕಂಪನಿಯಲ್ಲಿ ಕೆಲಸ ಖಂಡಿತಾ ಸಿಗುತ್ತದೆ . ಅದಕ್ಕಾದರೂ ಓದಬೇಕು ಎಂದುಕೊಂಡು ಓದತೊಡಗಿದ
ಎಲ್ಲಕ್ಕೂ ದೇವರ ನಗುವೊಂದೇ ಉತ್ತರವಾಗಿತ್ತು .
ಇತ್ತ ಮನೆ ಮಾಲೀಕನ ಮನೆಯಲ್ಲಿ ಪವಾಡವೊಂದು ನಡೆಯಿತು.
ಬಾಡಿಗೆ ಮನೆಗಳನ್ನೆಲ್ಲಾ ಸುತ್ತುವ ಅಭ್ಯಾಸ ಆ ಮಾಲೀಕನಿಗೆ ಆ ಹುಡುಗನ ಮನೆಯನ್ನೂ ನೋಡಿಕೊಂಡು ಮನೆ ಮಾಲೀಕ ತನ್ನ ಮನೆಗೆ ಕಾಲಿಡುತ್ತಿದ್ದಂತೆ ಅದಾವುದೋ ಆತ್ಮವೋ ಅಂತಹ ಯಾವುದೋ ಶಕ್ತಿಯೋ ಉಜ್ವಲ ಬೆಳಕಿನಿಂದ ಹೊರಗೆ ಹೊರಟಿತು. ಮಾಲೀಕ ಕಣ್ಣುಜ್ಜಿಕೊಂಡು ನೋಡಿದ ಮತ್ತೇನು ಕಾಣಲಿಲ್ಲ. ಯಾವುದೋ ಭ್ರಮೆ ಏನೋ ಎಂದುಕೊಂಡು ಸುಮ್ಮನಾದ.
ಆ ಬೆಳಕಿನ ಗಮನ ಆ ಹುಡುಗನ ಮನೆಯತ್ತ ಹೊರಳಿತು
ಅವನ ಮನೆಗೆ ಕರೆಂಟ್ ಇರಲಿಲ್ಲ ನೆನ್ನೆ ತಾನೆ ವಿದ್ಯುತ್ ಕಂಪೆನಿಯವರು ಅವನ ಮನೆಯ ಕರೆಂಟ್ ಕನೆಕ್ಶನ್ ಕಿತ್ತಿದ್ದರು.
ಹುಣ್ನಿಮೆಯ ಚಂದ್ರನ ಬೆಳಕು ಧಾರಾಳವಾಗಿ ಹರಡಿತ್ತು ಪುಟ್ಟಮನೆಯ ತೆರೆದಿದ್ದ ಪುಟ್ಟ ಕಿಟಕಿಯ ಒಳಗೆ ಬೆಳಕು ಹರಡಿತ್ತು. ಆ ಬೆಳಕಿನಲ್ಲಿಯೇ ಆ ಹುಡುಗನ ಓದು ಸಾಗಿತ್ತು
ಅವನ ಕಷ್ಟ ಬೆಳಕಿಗೆ ನೋಡಲಾಗಲಿಲ್ಲ. ತನ್ನ ಬೆಳಕಾದರೂ ಅವನಿಗೆ ಬಳಕೆಯಾಗಬಾರದೇ ಅನ್ನಿಸಿತು. ಆದರದು ಸಾಧ್ಯವಾಗಲಿಲ್ಲ.
ಬೆಳಕು ಆ ಹುಡುಗನಿಗಾಗಿ ಮಿಡಿಯುತ್ತಿತ್ತು ತನ್ನಿಂದ ಆ ಹುಡುಗನಿಗೆ ಹೇಗೆ ಸಹಾಯಮಾಡಬಹುದು ಎಂದು ಯೋಚಿಸುತ್ತಿತ್ತು.
ಕೊಂಚ ಹೊತ್ತು ಅವನನ್ನೇ ದಿಟ್ಟಿಸುತ್ತಾ ಕುಳಿತ ಬೆಳಕು ಮತ್ತೆ ತನ್ನ ಮೂಲಕ್ಕೆ ಹಿಂದಿರುಗಿತು.
ರಾತ್ರಿಯಲ್ಲಿ ಮರಳಿದ ಬೆಳಕ ಕಂಡು ಮಾಲೀಕ ಬೆಪ್ಪಾದ . ನೋಡು ನೋಡುತ್ತಿದ್ದಂತೆ ಅದು ಮರೆಯಾಯ್ತು. ಏನಿದು ಎಂದು ಯೋಚಿಸುತ್ತಲೇ ಮಲಗಿದ

ಬೆಳಗಾಯಿತು.
ಕಿಟಕಿಯ ಬಳಿ ಓದುತ್ತಾ ಕುಳಿತಿದ್ದಂತೆ ನಿದ್ರಿಸಿದ್ದ ಹುಡುಗ ಕಣ್ಣ ಮೇಲೆ ಬಿದ್ದ ಸೂರ್ಯ ರಶ್ಮಿಯಿಂದ ಎಚ್ಚರವಾದ.ಆಗಲೆ ನಾಳೆ ಬಂದುಬಿಟ್ಟಿತೇ. ಮುಂದಿನದನ್ನು ನೆನದು ಭಯ ಪಟ್ತ
ಹುಡುಗ ಬ್ರಶ್ ಮಾಡಿಕೊಂಡು ಖುರ್ಚಿಯ ಮೇಲೆ ಕೂತಂತೆಯೇ ದೊಪ್ಪೆಂದು ಕಿಟಕಿಯಿಂದ ಏನೋ ಬಿದ್ದಂತಾಯ್ತು .
ಕಾಗದದ ಮುದ್ದೆ ಅದು
ಬೆದರುತ್ತಲೇ ಕಾಗದವನ್ನು ನಡುಗುವ ಕೈಗಳಿಂದ ಬಿಡಿಸಿದ.
ನಂಬಲಾಗಲಿಲ್ಲ
ಅದರಲ್ಲಿ ಹಣ
ಮಾಲೀಕನಿಗೆ , ಹಾಲಿನವನಿಗೆ, ದಿನಸಿಯವನಿಗೆ ಕೊಡಬೇಕಾದಷ್ಟು ಹಣ.
ಜೊತೆಯಲ್ಲೇ
"ಹೆದರಬೇಡ ಈ ಹಣ ನಿನಗಾಗಿಯೇ. ಬಳಸಿಕೋ" ಎಂಬ ಉಲ್ಲೇಖವಿರುವ ಪತ್ರ
ಹುಡುಗ ಕಕ್ಕಾಬಿಕ್ಕಿಯಾದ. ಸುತ್ತಾಮುತ್ತ ನೋಡಿದ ಬಾಗಿಲು ತೆಗೆದು ಹೊರಗೆ ನೋಡಿದ ಯಾರೂ ಕಾಣಲಿಲ್ಲ
ಈ ಕಾಣದ ಊರಿನಲ್ಲಿ ತನಗೆ ಯಾರು ಸಹಾಯ ಮಾಡುತ್ತಾರೆ?. ಇದು ಖಂಡಿತಾ ದೇವರ ವರವೆಂದೇ ಭಾವಿಸಿದ.
ಎಲ್ಲರಿಗೂ ಹಣದ ಬಾಕಿ ಕೊಟ್ಟ.
ನಿಷ್ಟೆ ಇಂದ ಸಂದರ್ಶನಕ್ಕಾಗಿ ಓದತೊಡಗಿದ. ಬೆಳಕು ಅವನಿಗೆ ಸಹಾಯ ಮಾಡಿ ಸಂತೋಷಗೊಂಡಿತ್ತು. ಮಾಲೀಕ ಹಾಗು ಅವನ ಮನೆಯವರೆಲ್ಲಾ ಹಣ ಎಲ್ಲಿ ಹೋಯಿತೆಂದು ತಲೆ ಕೆಡಿಸಿಕೊಳ್ಳಲಾರಂಭಿಸಿದರು.

ಸಹಜವಾಗಿಯೇ ಕೆಲಸಕ್ಕಾಗಿ ನಡೆದ ಟೆಸ್ಟ್ನಲ್ಲಿ ಆತ ಪಾಸಾದ. ಜೊತೆಗೆ ಎಲ್ಲಾ ರೌಂಡ್ಸ್‌ನಲ್ಲೂ ಗೆದ್ದ.
ನಾಳೆ ನಿಮ್ಮ ಒರಿಜಿನಲ್ಸ್ ಎಲ್ಲಾ ತನ್ನಿ ವೆರಿಫಿಕೇಶನ್ಸ್ ಇರುತ್ತದೆ " ಎಂದು ಕಂಪೆನಿಯ ಎಚ್ ಆರ್ ಹೇಳಿದ .
ಇತ್ತ ಆ ಹುಡುಗನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ನೀಳ ಜ್ವಾಲೆಯನ್ನುಗಳುತ್ತಾ ಮನೆಯ ವಸ್ತುಗಳನ್ನೆಲ್ಲಾ ಆಹುತಿ ತೆಗೆದುಕೊಳ್ಳಲಾರಂಭಿಸಿತು.
ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿದರು
ಎಲ್ಲರೂ ಬೊಬ್ಬೆ ಹೊಡೆಯಲಾರಂಭಿಸಿದರು. ತನ್ನ ಮನೆ ಸುಟ್ಟು ಹೋಗುತ್ತಿದೆಯೇ ಎಂದು ಮನೆ ಮಾಲೀಕ ಎದೆ ಎದೆ ಬಡಿದುಕೊಂಡು ಅಳಲಾರಂಭಿಸಿದ.
ಅಷ್ಟರಲ್ಲಿ ಆ ಹುಡುಗನೂ ಅಲ್ಲಿಗೆ ಬಂದವನೇ ಮನೆಗೆ ಹತ್ತಿದ್ದ ಬೆಂಕಿ ನೋಡಿದವನಿಗೆ ಎದೆಯೇ ಒಡೆದುಹೋದಂತಾಯ್ತು
ಮಾಲೀಕ ಆ ಹುಡುಗನಿಗೆ ಹಿಗ್ಗಾಮುಗ್ಗ ಬೈದ . ತನ್ನ ಮನೆ ಉರಿದುಹೋಗುತ್ತಿದೆ ಅದಕ್ಕೆ ನೀನೆ ಕಾರಣ ಎಂದು ಹೀಗಳೆದ
ಹುಡುಗನಿಗೋ ಅದಾವುದರ ಬಗ್ಗೆಯೂ ಅರಿವಿರಲಿಲ್ಲ
ತನ್ನ್ ಒರಿಜಿನಲ್ಸ್ ಅಲ್ಲಿ ಸಿಕ್ಕಿ ಹಾಕಿಕೊಂಡಿದೆ ಅದು ಸುಟ್ಟು ಹೋದರೆ ನಾಳೆಯ ತನ್ನ ಬದುಕಿನ ಮೇಲೆ ಗಮನ.
ಜೋರಾಗಿ ಚೀರುತ್ತಾ ಒಳ ನುಗ್ಗಿದ ಆದರೆ ಬೆಂಕಿಯ ಜ್ವಾಲೆಯ ಇವನನ್ನೂಮುತ್ತಿತು.
ಅಡುಗೆ ಮನೆಯ ಮೇಲಿನ ಅಟ್ಟದಲ್ಲಿ ಇಟ್ಟಿದ್ದ ಪೆಟ್ಟಿಗೆಯನ್ನ.
ಹೇಗೋ ಮಾಡಿ ಅಲ್ಲಿಗೆ ನುಗ್ಗಿದವನಿಗೆ ಬೆಂಕಿಯೊಂದು ಮುಖಕ್ಕೆ ತಾಗಿ ಪ್ರಜ್ನೆ ತಪ್ಪಿತು. ಅಲ್ಲೇ ನೆಲದ ಮೇಲೆ ಬಿದ್ದ.
ಬೀಳುವಾಗ ಅರಿವಿಲ್ಲದೆ ಅವನ ಕೈಗಳು ದೇವರಿಗೆ ಮುಗಿದಿದ್ದವು.
ಅಲ್ಲಿ ಮನೆ ಮಾಲೀಕನ ಪಕ್ಕದಲ್ಲಿ ಮತ್ತೊಮ್ಮೆ ಬೆಳಕುಕಾಣಿಸಿತು.
ಮಾಲೀಕ ಬೆರಗಾದ . ಬೆಂಕಿಯ ತೀಕ್ಷ್ಣತೆಗಿಂತಲೂ ಪ್ರಕಾಶವುಳ್ಳದ್ದು
ಬೆಳಕು ಅಡುಗೆ ಮನೆ ಕಿಟಕಿಯ ಬಳಿ ಧಾವಿಸಿತು. ಅರಿವಿಲ್ಲದೆ ಮಾಲೀಕ ಅದನ್ನು ಹಿಂಬಾಲಿಸಿದ.
ಬೆಳಕು ಹುಡುಗನ ದುಸ್ಥಿತಿಯನ್ನು ನೋಡಿ ಬೇಸರಗೊಂಡಿತು. ಮರುಕ ಪಟ್ಟಿತು
ಹುಡುಗನನ್ನು ಹೇಗಾದರೂ ಮಾಡಿ ಕಾಪಾಡಬೇಕೆಂದುಕೊಂಡಿತು.
ಮಾಲೀಕನೆಡೆಗೆ ನೋಡಿತು
ಮಾಲೀಕನೂ ಏನೂ ತಿಳಿಯದವನಂತೆ ಬೆಳಕನ್ನೇ ನೋಡುತ್ತಿದ್ದ
ಇದ್ದಕಿದ್ದಂತೆಯೇ ಬೆಳಕು ಮರೆಯಾಯಿತು
ಎಲ್ಲರೂ ಆಶ್ಚರ್ಯಗೊಂಡರು
ಮಾಲೀಕ ಅಡುಗೆ ಮನೆಯ ಕಿಟಕಿಯನ್ನು ಮುರಿದು ಹಾಕಿದ. ಆ ಬೆಂಕಿಯ ಜ್ವಾಲೆಯನ್ನೂ ಲೆಕ್ಕಿಸದೆ ಒಳಗೆ ನುಗ್ಗಿದ
ಒಳಗೆ ಬಿದ್ದಿದ್ದ ಹುಡುಗನನ್ನು ಕಿಟಕಿಯಿಂದಲೇ ಹೊರಗೆ ಹಾಕಿದ . ಹುಡುಗನಿಗೆ ಪ್ರಜ್ನೆ ಬಂತು
ತನ್ನನ್ನು ಬದುಕಿಸಿದ್ದು ದೇವರು ಎಂದುಕೊಂಡು ದೇವರಿಗೆ ನಮಸ್ಕರಿಸಿದ. ಆದರೆ ಅವನಿಗೆ ಒಡೆದು ಹೋದ ಕಿಟಕಿಯ ಮೂಲಕ ಅಡುಗೆ ಮನೆಯಲ್ಲಿ ಕಂಡಿದ್ದು ದೇವರಲ್ಲ ಆದರ್ ತನ್ನ ಪಾಲಿಗೆ ದೆವ್ವವಾಗಿದ್ದ ಮಾಲೀಕ .
"ಸಾರ್ ನನ್ನ ಮಾರ್ಕ್ಸ್ ಕಾರ್ಡ್ ಎಲ್ಲಾ " ಅಟ್ಟದ ಮ್ಮೇಲೆ ಕೈ ತೋರಿದ
ಮಾಲೀಕ ಸರ ಸರ ಹತ್ತಿ ಪೆಟ್ಟಿಗೆಯನ್ನು ತೆಗೆದು ಅದನ್ನೂ ಹೊರಗೆ ಹಾಕಿದ.
ನಂತರ ಅದೇ ಕಿಟಕಿಯ ಮೂಲಕ ಹೊರಗಡೆ ಬಂದ.
ಹುಡುಗನಿಗೆ ಅತ್ಯಾನಂದವಾಗಿತ್ತು.
ಮಾಲೀಕನನ್ನು ತಬ್ಬಿಕೊಂಡ
ಜೋರಾಗಿ ಅಳಲಾರಂಭಿಸಿದ
ಅವನು ಮನದಣಿಯೇ ಅತ್ತ ನಂತರ
"ಸಾರ್ ನೀವು ?" ಆ ಎರೆಡು ಪದಗಳಲ್ಲಿ ಸಾವಿರ ಪ್ರಶ್ನೆಗಳಿದ್ದವು.
ಮಾಲೀಕನ ಮೌನವೇ ಉತ್ತರವಾಯ್ತು. ಎಲ್ಲರ ನೋಟಗಳಲ್ಲಿಯೂ ಅಚ್ಚರಿ ಮೆಚ್ಚುಗೆಗಳಿದ್ದವು
ಹುಡುಗ ಬೇರೆ ಮನೆಗೆ ಹೋದ
ತನ್ನ ಮನೆಗೆ ಬಂದ ಮಾಲೀಕ ಬೆಳಕಿಗಾಗಿ ಹುಡುಕಿದ ಬೆಳಕು ಕಾಣಲಿಲ್ಲ. ಇಷ್ಟು ದಿನ ಆ ಬೆಳಕೇ ಅವನನ್ನು ಆ ಹುಡುಗನಿಗೆ ಸಹಾಯ ಮಾಡಲು ಪ್ರೇರೇಪಿಸಿದ್ದು. ಈಗೆಲ್ಲಿ ಹೋಯಿತು?
ಉಯ್ಯಾಲೆಯಲ್ಲಿ ಕುಳಿತು ಒಮ್ಮೆ ಕಣ್ಣು ಮುಚ್ಚಿದವನಿಗೆ ಬೆಳಕು ತನ್ನೊಳಗೇ ಇದ್ದುದ್ದು ಅರಿವಾಯ್ತು. ಎಲ್ಲಾ ಅರಿವಾದಂತೆ ಮೆಲು ಮಂದಹಾಸ ಮೂಡಿತು ಅವನ ತುಟಿಯಲ್ಲಿ ಅದು ಅವನದಲ್ಲ ಅವನ ಮನದಾಳದ ಬೆಳಕಿನಿಂದ.

ಪ್ರತಿ ಕಪ್ಪು ಮೋಡದಲ್ಲೂ ಒಂದು ಬೆಳ್ಳಿ ರೇಖೆ ಇರುತ್ತದೆ ಅಲ್ಲವೇ?