Sunday, March 29, 2009

ಗುಣಕ್ಕೆ ಧರ್ಮವಾವುದಯ್ಯ?

"ಹೇಮಂತ್. ಇವತ್ತು ಬರ್ತಾ ಅನೂಪ್‌ನೂ ಕರೆದುಕೊಂಡು ಬಾ" ಓವನಿಂದ

ಪಾತ್ರೆ ತೆಗೆಯುತ್ತಾ ಹೇಳಿದರು ಸುಮಾ

"ಯಾಕಮ್ಮ?" ಹೇಮಂತ್‌ನ ಪ್ರಶ್ನೆ

ಹೇರ್ ಡ್ರೈಯರ್ ನಿಂದ ಒಣಗಿಸಿಕೊಳ್ಲುತ್ತಿದ್ದಂತೆ ನಿಲ್ಲಿಸಿದಳು ಶೈಲಾ.ಮುಖದ ಬಣ್ಣಬದಲಾಯಿತು

"ಎಲ್ಲಾ ಹೇಳಿಬಿಡೋಣ . ಅವನಿಂದ ಯಾವುದನ್ನೂ ಮುಚ್ಚಿಡೋದು ಬೇಡ" ಗಂಭೀರವಾಗಿ ಹೇಳಿದರು

"ಅಮ್ಮಾ ಹೇಳೋದೇನೂ ಬೇಡಮ್ಮಾ . ಆಮೇಲೆ ಅನೂಪ್ ಒಪ್ಪಲಿಲ್ಲಾ ಅಂದರೆ? " ಸಿರೀಶ್ ಆತಂಕ ಪಟ್ಟ್

"ಇಲ್ಲಾ ಹೇಮಂತ್. ಈ ವಿಚಾರಗಳಲ್ಲಿ ಸುಳ್ಳು ಹೇಳೋದು ಬೇಡ. ಮದುವೆಯ ನಂತರ ಗೊತ್ತಾದ್ರೆ ಕಷ್ಟ"

"ಅಮ್ಮಾ ಹೀಗೆ ಆಗ್ತಾ ಹೋದ್ರೆ ಶೈಲಾ ಮದುವೇನೆ ಆಗಲ್ಲ ಅನ್ನಿಸುತ್ತೆ . ನಾವು ಹೇಗಿದ್ರೂ ಆ ಊರಿನಿಂದ ಬಂದಿದೀವಿ. ಯಾರಿಗೆ ಹೇಗೆ ಗೊತ್ತಾಗುತ್ತೆ"

ಶೈಲಾ ಅಳಲಾರಂಭಿಸಿದಳು

ತನ್ನ ಗತಕಾಲ ನೆನಪಿಗೆ ಬಂತೇನೋ .

ಹೇಮಂತ್ ತಂಗಿಯನ್ನು ಎದೆಗೊರಗಿಸಿಕೊಂಡ.ಸೀರೀಶ್ ಅವಳ ತಲೆ ನೇವರಿಸಿದ

"ಶೈಲಾ . ಅಳಬೇಡ ಈ ಸಲ ನೋಡೋಣ ನಿನ್ನ ಮೆಚ್ಚಿರೋ ಹುಡುಗ ಅಲ್ವ್ ಆ ಅವನು ಒಪ್ಪಿಕೋತಾನೆ ಅಂತನ್ನಿಸ್ತಿದೆ" ಸಮಾಧಾನಿಸಿದ

"ಇಲ್ಲ ಅಣ್ಣ ನಂಗೆ ಮದುವೇನೆ ಬೇಡ. ಎಲ್ರೆದುರಿಗೂ ಸತ್ಯ ಹೇಳೋದು ಅವರು ಬೇಡ ಅನ್ನೋದು . ನಂಗೆ ಬೇಜಾರಾಗಿ ಹೋಗಿದೆ" ಮತ್ತಷ್ಟು ಜೋರಾಗಿ ಅಳುತ್ತ್ತಾ ಹೇಳಿದಳು

ಆದರೆ ಸುಮಾರ ನಿರ್ಧಾರ ಬಲವಾಗಿತ್ತು

"ಶೈಲಾ ಈ ವಿಷಯ ಬಹಳ ಸೂಕ್ಷ್ಮ .ಸತ್ಯ ಹೇಳೋದ್ರಲ್ಲಿ ತಪ್ಪೇನೂ ಇಲ್ಲ. "

"ಹೇಮಂತ್ ನೀನು ಸಂಜೆ ಕರ್ಕೊಂಡು ಬಾ"

"ಆಯ್ತಮ್ಮ"

ಶೈಲಾ ಕೆಲಸಕ್ಕೆ ಹೋಗಲಿಲ್ಲ.

ಮನದ ತುಂಬಾ ಹಿಂದಿನ ಅಸ್ಪಷ್ಟ ನೆನಪುಗಳು.

ಯಾವುದೂ ಸರಿಯಾಗಿ ಅರಿವಾಗುತ್ತಿರಲಿಲ್ಲ

ಆದರೆ ಅಮ್ಮ ಅವಳು ವಯಸಿಗೆ ಬಂದಾಗಲೇ ಎಲ್ಲವನ್ನೂ ವಿವರಿಸಿದ್ದರು
ಹಾಗಾಗಿಯೇ ಅವಳಿಗೆ ತಿಳಿಯಲು ಸಾಧ್ಯವಾಗಿದ್ದು

ಇತ್ತ ಸುಮಾ ಬಾಲ್ಕನಿಯಲ್ಲಿ ಕುಳಿತರು



ಹದಿನೇಳು ವರ್ಷದ ಹಿಂದಿನ ಆ ನೆನಪುಗಳು ಕಾಡತೊಡಗಿದವು



೧೯೯೨ ಜನವರಿ



ತಬಸ್ಸಮ್ ಮೂಲೆಯಲ್ಲಿ ಕುಳಿತು ಅಳುತ್ತಿದ್ದಳು. ಚಿಕ್ಕ ಮಗು ಇನ್ನೂ ಐದು ವರ್ಷವೂ ಪೂರ್ತಿಯಾಗಿಲ್ಲ. ಈಗಷ್ಟೆ ಹಾಕಿದ್ದ ಮಾಲೆಯಲ್ಲಿ ರವಿ ಫೋಟೋದಲ್ಲಿ ನಗುತ್ತಿದ್ದರು.ಇನ್ನೂ ದೀಪವೂ ಆರಿಲ್ಲ.

ಈ ಡಿಸೆಂಬರ್ ಆರು ಬಾಬ್ರಿ ಮಸೀದಿ ಉರುಳಿದ ದಿನ ಆದರೆ ಅದು ಕೇವಲ ಬಾಬ್ರಿ ಮಸೀದಿಯ ದ್ವಂಸವಾಗಿರಲಿಲ್ಲ . ಸುಮಾ ಹಾಗು ಅವಳಂತಹ ಎಷ್ಟೋ ಜನರ ಮಾಂಗಲ್ಯ, ತಬಸಮ್ ಹಾಗು ಅವಳಂತಹ ಎಷ್ಟೋ ಜನರ ತಂದೆ ತಾಯಿ, ಅಣ್ಣ ತಂಗಿ ತಮ್ಮ ,ಸುಖ ಶಾಂತಿ, ನೆಮ್ಮಧಿಗಳ ಸಮಾಧಿಯಾಗಿತ್ತು.

ಎಲ್ಲೋ ನಡೆದ ಪರಸ್ಪರ ಕಚ್ಚಾಟ ನೆಮ್ಮದಿಯಿಂದ ಬಾಳುತ್ತಿದ್ದ ಸುಮಾ ಹಾಗು ಅವಳ ಪಕ್ಕದ ಮನೆಯಲ್ಲಿಯೇ ಇದ್ದ ಪ್ರೀತಿ ಹಾಗುಇಸ್ಮಾಯಿಲ್ ರವರ ಬದುಕಿಗೆ ರಾಡಿ ಎಬ್ಬಿಸಿತು

ಸುಮಾ ಮನೆಯ ಪಕ್ಕದಲ್ಲಿಯೇ ಆ ಸಂಸಾರ ಬಂದಿತ್ತು ಒಂದು ಆರು ವರ್ಷಗಳಾಗಿದ್ದವೇನೋ .

ಅವರಿಬ್ಬರದು ಪ್ರೇಮ ವಿವಾಹ.

ಹಾಗಾಗಿ ಅವರ ಮನೆಗೆ ಎರೆಡೂ ಕಡೆಯಿಂದಲೂ ನೆಂಟರು ಬರುತ್ತಿರಲಿಲ್ಲ.

ಆದರು ಅವರಿಬ್ಬರದು ಆದರ್ಶ ದಾಂಪತ್ಯವೆನಿಸಿತ್ತು

ಸುಮಾಗೆ ಪ್ರೀತಿ ಬಹಳ ಮೆಚ್ಚಿನವಳಾಗಿದ್ದಳು.

ಪ್ರೀತಿಯ ಬಾಣಂತನವನ್ನು ಮಾಡಿದ್ದು ಸುಮಾಳೇ
ಸುಮಾಗೆ ಈಗಾಗಲೆ ಇಬ್ಬರು ಮಕ್ಕಳಿದ್ದರು. ರವಿಯ ಜೊತೆಯಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದರು
ಬದುಕಿಗೆ ಬೆಂಕಿ ಬಿದ್ದುದ್ದು ಆ ಡಿಸೆಂಬರ್ ನಲ್ಲಿಯೇ.
ಅಂದು ಬಾಬ್ರಿ ಮಸೀದಿ ಉರುಳಿಸಿದರೆಂಬ ಸುದ್ದಿ ಹಬ್ಬಿದ ಹಿಂದೆಯೇ
ಹಲವಾರು ಕೊಲೆಗಳು ನಡೆದವು
ಅದರಲ್ಲಿಯೇ ರವಿಯ ಮರಣವೂ ಆಗಿತ್ತು
ತಬಸ್ಸಮ್ ಅನ್ನು ಮನೆಯಲ್ಲಿ ಸುಮಾಳ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದ ಪ್ರೀತಿ ಹಾಗು ಇಸ್ಮಾಯಿಲ್ ಸಹಾ ದುರುಳರ ದಾಳಿಗೆ ಬಲಿಯಾದರು.
ಹೇಮಂತ್ ಹಾಗು ಸಿರೀಶ್‌ಗೆ ಸುಮಾ ಇದ್ದಳು. ಅವರ ಅಜ್ಜಿ ಇದ್ದರು ಆದರೆ ತಬಸ್ಸಮ್ ? ತಬಸ್ಸಮ್ ಅನಾಥಳಾಗಿದ್ದಳು/
ಎಲ್ಲಿ ಬಿಡುವುದು .
ಆ ಹದಿನೈದು ದಿನ ತಬಸ್ಸಮ್ ಸುಮಾ ಮನೆಯಲ್ಲಿಯೇ ಇದ್ದಳು. ತನ್ನ ಮಗನ ಮರಣ ಮುಸಲ್ಮಾನರಿಂದಲೇ ಆಯಿತೆಂಬ ದಳ್ಳುರಿಗೆ ಸುಮಾಳ ಅತ್ತೆ ಆ ಮಗುವನ್ನು ಪ್ರತಿ ದಿನ ಬೈಯ್ಯುತ್ತಿದ್ದರು. ಪುಟ್ಟ ಮಗು ಕಂಗಾಲಾಗಿ ಹೋಗಿತ್ತು
ಅಂದು ಮನೆಯಲ್ಲಿ ರಣರಂಗವೇ ಆಗಿತ್ತು
"ಸುಮಾ ಈ ಅನಿಷ್ಟಾನ ಎಲ್ಲಾದರೂ ಅನಾಥಾಶ್ರಮದಲ್ಲಿ ಬಿಟ್ಟು ಬಿಡು. ಸಾಕು ನೋಡಿಕೊಂಡಿದ್ದು"
ಸುಮಾಳ ಮನಸ್ಸು ವಿಹಲ್ವವಾಗಿತ್ತು
ಆ ಮಗುವನ್ನು ಹಾಗೆ ಬಿಟ್ಟು ಬಿಡಲು ಮನಸ್ಸು ಬರಲಿಲ್ಲ.ಸುಮಾ ಹೃದಯ ಗಟ್ಟಿ ಮಾಡಿಕೊಂಡು ನುಡಿದಳು
"ಅತ್ತೆ ತಬಸ್ಸಮ್ ‌ನ ನಾನು ದತ್ತು ತಗೋಳ್ನ ಅಂತಿದೀನಿ"

"ಅಯ್ಯೋ ! ನಿಂಗ್ಯಾಕೆ ಈ ಕೆಟ್ಟ ಬುದ್ದಿ ಬಂತು . ಮನೆ ಹಾಳು ಮಾಡಿದವರ ಮನೆ ಬೆಳಗೋಕೆ ಹೋಗ್ತೀದ್ದೀಯಲ್ಲಾ"
ಅತ್ತೆ ಕಿರುಚಿದರು
"ನಾನಿನ್ನು ಈ ಮನೆಲಿ ಒಂದರೆ ಘಳಿಗೇನೂ ಇರೋದಿಲ್ಲ . ನನ್ನ ಮಗನ ಜೊತೇನೆ ನಾನು ಹೋಗಿದ್ರೆ ಚೆನ್ನಾಗಿರ್ತಿತ್ತೇನೋ. "
ಅವರ ಗೊಣಗಾಟದ ನಡುವಲ್ಲಿಯೂ ಸುಮಾಳ ನಿರ್ಧಾರ ಅಚಲವಾಗಿತ್ತು.
"ಅತ್ತೆ ಹೋದವರು ಹೋದರು . ನನ್ನ ಮಕ್ಕಳಿಗೆ ತಾಯಿ ನಾನಿದ್ದೇನೆ. ಆದರೆ ಪಾಪ ಆ ತಬಸಮ್ಅಮ್ಮ ಅಪ್ಪ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿದೆಯಲ್ಲ ಅತ್ತೆ "
"ಹಾಗಂತ ಯಾವುದೋ ಧರ್ಮದೋಳನ್ನ ನಮ್ಮ ಮಗಳು ಅಂತ ಹೇಗೆ ಮಾಡಿಕೊಳ್ಳೋದಿಕ್ಕೆ ಆಗುತ್ತೆ? ಅದೂ ಮುಸ್ಲಿಂ.ನ?ಅವಳ ನೆಂಟರು ಬೇರೆ ಯಾರಾದರೂ ನೋಡಿಕೊಳ್ಳಲಿ ಬಿಡು. ನೀನೆ ನಿರ್ಧಾರ ಮಾಡು ನಾನಿರ್ಬೇಕು ಇಲ್ಲ ಅವಳಿರಬೇಕು."
ಅತ್ತೆ ಕಡೆ ನಿರ್ಧಾರ ಎನ್ನುವಂತೆ ಕಠಿಣವಾಗಿ ನುಡಿದು ಹೋಗಿದ್ದರು ಹೋಗಿದ್ದು ಮೈದುನನ ಮನೆಗೆ
ಅಂದೇ ಕಡೆ ಅವರು ಇತ್ತ ತಲೆ ಹಾಕಲಿಲ್ಲ
ಸುಮಾಳೂ ಅವರನ್ನು ಕರೆಯುವ ಗೋಜಿಗೆ ಹೋಗಲಿಲ್ಲ
ತಬಸ್ಸಮ್ ಶೈಲಾ ಆದಳು.
ಕಾನೂನಿನ ಪ್ರಕಾರ ಅವಳನ್ನು ದತ್ತು ಪಡೆದಳು
ಸುಮಾಳ ಮನೆಯವರಿಗೂ ಹಾಗು ಅತ್ತೆ ಮನೆಯವರಿಗೂ ಇರಿಸು ಮುರಿಸಾಯಿತು
ಎಲ್ಲರಿಂದಳೂ ಅಕ್ಶರಶ: ಬಹಿಷ್ಕ್ರುತಳಾದಳು. ಆದರೂ ಎದೆಗುಂದಲಿಲ್ಲ.
ಆದರೆ ಹೇಮಂತ್ ಹಾಗು ಸಿರೀಶ್ ಶೈಲಾಳನ್ನು ತಂಗಿಯಾಗಿ ಸ್ವೀಕರಿಸಿದ್ದು ಮಾತ್ರವಲ್ಲ ಅವಳ ಬಗ್ಗೆ ಅಪಾರ ಅಕ್ಕರೆಯನ್ನೂ ಹೊಂದಿದರು. ತಾವು ಹಿಂದೆ ಇದ್ದ ಊರಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸುಮಾಳ ಡಿಗ್ರಿ ಅವಳಿಗೆ ಕೆಲಸವನ್ನೂ ಕೊಡಿಸಿತ್ತು. ಬದುಕು ಸರಾಗವಾಗಿಯೇ ಸಾಗುತ್ತಿತ್ತು
ಆದರೆ ನಿಜವಾದ ತೊಂದರೆ ಈಗ ಆಗುತ್ತಿತ್ತು
ಶೈಲಾಳ ಮದುವೆಗೆ ಇದ್ದ ತೊಡಕೆಂದರೆ ಅವಳು ಹುಟ್ಟಿನಿಂದ ಮುಸ್ಲಿಂ ಎಂಬುದು. ಆಚಾರ ವಿಚಾರಗಳೆಲ್ಲವೂ ಹಿಂದೂ ಬ್ರಾಹ್ಮಣ ಮನೆತನದ್ದೇ ಕಲಿತದ್ದರಿಂದ ಅವಳ ಮದುವೆ ಎಂಬುದು ಗೊಂದಲಮಯವಾಗಿತ್ತು
ಒಂದೆರೆಡು ಸಂಬಂಧ ಕುದುರಿತಾದರೂ ಸುಮಾಳ ಹಿತ ಶತೃಗಳಿಂದ ಅವು ನಿಂತು ಹೋಯಿತು
ಕೆಲವರು ಒಪ್ಪಲಿಲ್ಲ.
ಆದ್ದರಿಂದ ಬೇರಾರದೋ ಕಡೆಯಿಂದ ಈ ವಿಷಯ ತಿಳಿಯುವ ಬದಲು ತಾನೇ ಈ ವಿಷಯ ಮೊದಲೇ ಹೇಳಿಬಿಡುವುದು ಒಳ್ಳೆಯದೆಂದು ಸುಮ ನಿರ್ಧರಿಸಿದ್ದರಿಂದ ಹೆಣ್ಣು ನೋಡಲು ಬರುವ ಮುನ್ನವೇ ವಿಷಯ ತಿಳಿದವರು ಹಿಂದೇಟು ಹಾಕುತ್ತಿದ್ದರು
ಹಾಗಾಗಿ ಕಂಕಣ ಬಲ ಎಂಬುದು ಅವಳಿಗೆ ಇನ್ನೂ ಕನಸಾಗಿತ್ತು
ಆದರೆ ಅನೂಪ್ ಹೇಮಂತನ ಸ್ನೇಹಿತ. ಶೈಲಾಳನ್ನ ಮೆಚ್ಚಿದ್ದ
ಇಂದು ಅವನು ಬರುವವನಿದ್ದ
ಸಾಯಂಕಾಲವಾಯ್ತು
ಹೇಮಂತನ ಜೊತೆ ಅನೂಪ್ ಬಂದ.
ಔಪಚಾರಿಕ ಮಾತುಕತೆಯಾದ ಮೇಲೆ ಸುಮ ಇದ್ದ ವಿಷಯವನ್ನು ತಿಳಿಸಿದರು
ಅನೂಪ್ ದಿಗ್ಭ್ರಾಂತನಾದರೂ ಸಾವರಿಸಿಕೊಂಡ
"ಆಂಟಿ ನಾನು ಮದುವೆಯಾಗಬೇಕಿರೋದು ಶೈಲಾನ. ಅವಳ ಜಾತಿ ಮತ ನಂಗೇನು ಮುಖ್ಯ ಅಲ್ಲ . ಆದರೂ ನನ್ನ ತಂದೆ ತಾಯಿಗೆ ವಿಷಯ ತಿಳಿಸಿ ಮುಂದುವರೀತೇನೆ. ಅವರೂ ನನ್ನ ಆಸೆಗೆ ಯಾವತ್ತು ಬೇಡ ಅಂದಿಲ್ಲ. "ಎಂದು ಹೇಳಿ ಹೊರಟ
ಅನೂಪನ ತಂದೆ ತಾಯಿ ಮದುವೆಗೆ ವಿಶಾಲ ಹೃದಯದವರು. ಮದುವೆಗೆ ಒಪ್ಪಿದರು. ಆದರೆ ಈ ವಿಷಯ ಬೇರಾರಿಗೂ ತಿಳಿಸಬಾರದಾಗಿ ಹೇಳಿದರು.
ಮದುವೆಯನ್ನ ವಿಧಿವತ್ತಾಗಿ ಹಿಂದೂ ಸಂಪ್ರದಾಯದಂತೆಯೇ ಮಾಡಿಕೊಡಬೇಕೆಂಬುದು ಅವರ ಶರತ್ತಾಗಿತ್ತು.
ಸುಮಾ ಕಂಗಾಲಾದರು
ಮದುವೆಗೆ ಕನ್ಯಾದಾನಕ್ಕೆ ಹಸೆಮಣೆಯ ಮೇಲೆ ಕೂರುವವರ್ಯಾರು?.ಅದೂ ಸಂಬಂಧದಲ್ಲೇ ಆಗಬೇಕು.
ಎರೆಡೂ ಕಡೆಯ ವಿರೋಧ ಕಟ್ಟಿಕೊಂಡದ್ದರಿಂದ ಯಾರೂ ಕೂರುವ ಹಾಗಿರಲಿಲ್ಲ.
ಆದರೂ ಸುಮಾ ಸ್ವಾಭಿಮಾನ ಬಿಟ್ಟು ಎಲ್ಲರನ್ನೂ ಕೇಳಿಕೊಂಡರು.
ಒಬ್ಬ ಮುಸ್ಲಿಂ ಹುಡುಗಿಯ ಕನ್ಯಾದಾನಕ್ಕೆ ಯಾರೂ ಒಪ್ಪಲಿಲ್ಲ.
ಕೊನೆಗೆ ಇದ್ದ ದಾರಿಯೊಂದೇ ಹೇಮಂತನ ಮದುವೆ ಮಾಡಿದ ನಂತರ
ಹೇಮಂತ್ ಹಾಗು ಹೇಮಂತನ ಹೆಂಡತಿಯನ್ನೇ ಕನ್ಯಾದಾನಕ್ಕೆ ಕೂರಿಸುವುದು.
ಹೇಮಂತನ ಮದುವೆ ತರಾತುರಿಯಲ್ಲಿ ನಡೆಯಿತು.
ಅವನ ಮದುವೆಗೆ ಹಸೆಮಣೆಯಲ್ಲಿ ಕೂತವರು ಅವನ ಚಿಕ್ಕಪ್ಪ
ಹೇಮಂತನ ಕಾಲೇಜ್ ಸಹಪಾಠಿ ರಮ್ಯಾ ಅವನ ಮಡದಿಯಾದಳು.
ಕೊನೆಗೂ ಶೈಲಾಳ ಮದುವೆ ಅನೂಪನ ಜೊತೆಯಲ್ಲಿ ಹಿಂದೂ ಧರ್ಮದ ವಿಧಿ ವಿಧಾನದೊಂದಿಗೆ ನಡೆಯಿತು. ಅಣ್ಣ ಅತ್ತಿಗೆ ಅವಳ ಪಾಲಿಗೆ ತಾಯಿ ತಂದೆಯಾದರು.
ಸುಮಾರ ಮನಸ್ಸು ಆನಂದದಲ್ಲಿ ತೇಲಾಡಿತು. ಗೆದ್ದೆನೆಂಬ ನಲಿವು ಅವರ ಕಣ್ಣಲ್ಲಿ ಕಾಣುತ್ತಿತ್ತು.

Tuesday, March 24, 2009

ಪ್ರತಿ ಮನದೊಳಗೊಂದು ಬೆಳಕು

"ಸಾರ್ ಇದೊಂದು ತಿಂಗಳು ಅಡ್ಜಸ್ಟ್ ಮಾಡಿಕೊಳ್ಳಿ ಹೇಗಾದರೂ ಮಾಡಿ ಬಾಡಿಗೆ ತಂದು ಹೊಂದಿಸ್ತೀನಿ. " ಆ ಹುಡುಗ ಗೋಗರೆಯುತ್ತಿದ್ದ.
ಆದ್ರೆ ಮನೆ ಮಾಲೀಕನದು ಕಲ್ಲೆದೆಯಾಗಿತ್ತು. ಆತ ಕ್ರೂರ ತನಕ್ಕೆ, ಕಟುಕತೆಗೆ ಉದಾಹರಣೆಯಾಗಿದ್ದ. ಆತನೆಂದರೆ ಜನ ದೂರ ಸರಿಯುತ್ತಿದ್ದರು.ಇಲ್ಲಿಯವರೆಗೆ ಒಂದಾದರೂ ಒಳ್ಳೆಯ ಕೆಲಸಮಾಡಿರಲಿಲ್ಲ. ಹಾಗಾಗಿಯೇ ಏನೋ ಇದ್ದೊಬ್ಬ ಮಗ ಹಾಳು ದುರಭ್ಯಾಸ ಕಲಿತು ಹಾಳಾಗಿದ್ದ. ಮಗಳು ಸಿರಿವಂತರ ಸೊಸೆಯಾಗಿದ್ದರೂ ನೆಮ್ಮದಿ ಇಲ್ಲದೆ ಆತ್ಮ ಹತ್ಯೆ ಮಾಡಿಕೊಂಡಿದ್ದಳು. ಆದರೂ ಆ ಮಾಲೀಕನಿಗೆ ಬುದ್ದಿ ಬಂದಿರಲಿಲ್ಲ

"ನೋಡಯ್ಯ ಈಗಾಗಲೇ ಎರೆಡು ತಿಂಗಳಾಗಿವೆ ಬಾಡಿಗೆ ಬೇಕೆ ಬೇಕು ಇಲ್ಲಾಂದ್ರೆ ಸಾಮಾನೆಲ್ಲಾ ಹೊರಗೆ ಹಾಕ್ತೀನಿ" ಆತನ ದರ್ಪದ ಮಾತಿಗೆ ಹುಡುಗ ಬೆದರಿದ
ಆತ ಇಂಜಿನಿಯರಿಂಗ್ ಮಾಡಿದ್ದ . ಹೋದವರ್ಷ ತಾನೆ ಓದು ಮುಗಿಸಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದ. ಚೆಂದದ ಮಾರ್ಕ್ಸ್‌ ಪಡೆದಿದ್ದರಿಂದ ಕೆಲ್ಸ ಸಿಗುವುದೇನೂ ಕಷ್ಟವಾಗಲಿಲ್ಲ. ಒಂದೆರೆಡು ತಿಂಗಳಾಗಿತ್ತೇನೋ ಎಲ್ಲೆಲ್ಲೂ ನಡೆಯುತ್ತಿರುವಂತೆ ಅವನ ಕಂಪೆನಿಯೂ ಬಾಗಿಲು ಜಡೆದು ಮನೆಗೆ ಕಳಿಸಿತು.
ಇನ್ನೊಂದೆರೆಡು ತಿಂಗಳಲ್ಲಿ ಮತ್ತೆ ಕರೆಸಿಕೊಳ್ಳುವುದಾಗಿ ವಾಗ್ವಾದವನ್ನು ನೀಡಿತ್ತು
ಆರ್ಥಿಕ ಸಂಕಷ್ರದಿನಗಳಲ್ಲಿ ಫ್ರೆಶರ್ ಎಂದು ಬಿರುದು ಹೊತ್ತ ಆತನಿಗೆ ಕೆಲಸ ಕೊಡಲು ಯಾವ ಕಂಪೆನಿಯೂ ಮುಂದೆ ಬರಲಿಲ್ಲ. apply apply o reply ಆಗಿ ಹೋಗಿತ್ತು. ಎರೆಡು ತಿಂಗಳಿಂದ ಬಾಡಿಗೆ ಬೇರೆ ಕೊಟ್ಟಿರಲಿಲ್ಲ . ಊರಿನಿಂದ ಬಡ ಅಮ್ಮ ಹಣ ಕಳುಹಿಸುವುದಕ್ಕೆ ಹರ ಸಾಹಸ ಪಡುತ್ತಿದ್ದಳು. ಊಟಕ್ಕೆ ತಿಂಡಿಗೆ ಪ್ರತಿಯೊಂದಕ್ಕೂ ಹಣ ಹೊಂದಿಸಲು ಕಷ್ಟ ಪಡುತ್ತಿದ್ದ.
"ಸಾರ್ ಹೇಗಾದರೂ ಮಾಡಿ ನಾಳೆ ಸಮಯ ಕೊಡಿ . ದುಡ್ಡು ಅರೇಂಜ್ ಮಾಡ್ತೀನಿ. "ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷಆಯಸ್ಸು ಎಂದು ಬೇಡಿಕೊಂಡ.
"ಹಾ ಆಗಲಿ. ನಾಳೆ ಸಂಜೆಯೊಳಗೆ ದುಡ್ಡು ಬೇಕು ನೋಡು" ಮಾಲೀಕ ಮೀಸೆ ತಿರುವಿಕೊಂಡು ಕಾರ್ ತೆಗೆದುಕೊಂಡು ಹೋದ
ಬದುಕಿದೆ ಎನ್ನುವಷ್ಟ್ರರಲ್ಲಿ ಹಾಲಿನ ಹೆಂಗಸು ಬಂದು ಜಗಳ ಮಾಡಿದಳು. ದಿನಸಿ ಅಂಗಡಿಯವನ ಗಲಾಟೆಯಂತೂ ಬೀದಿಗೆ ಬೀದಿಯೇ ನಿಂತು ನೋಡುತ್ತಿತ್ತು. ಎಲ್ಲರೂ ಒಂದೊಂದು ಗಡುವು ನೀಡಿ ಹೋದರು
ಆ ಹುಡುಗ ಬಹಳ ಧೈವ ಭಕ್ತಿಯುಳ್ಳವನು. ಮನೆಗ ಬಂದು ಬಾಗಿಲು ಹಾಕಿಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.ದೇವರ ಮುಂದೆ ಮಂಡಿಯೂರಿ ಪ್ರಾರ್ಥಿಸಿದ. ತನ್ನಾಳವನ್ನೆಲ್ಲಾ ದೇವರಲ್ಲಿ ನಿವೇದಿಸಿಕೊಂಡ. ತನ್ನ ಗುರಿಯನ್ನು ಹೇಳಿಕೊಂಡ. ಊರಿನಲ್ಲಿ ಕಷ್ಟ ಪಟ್ಟು ಅಮ್ಮ ನನ್ನನ್ನು ಓದಿಸಿದ್ದಾಳೆ.ಅವಳನ್ನು ಈ ಇಳಿವಯಸಿನಲ್ಲಾದರೂ ಸಂತಸವಿಡುವಂತೆ ಮಾಡಲಾಗಲಿಲ್ಲವಲ್ಲ ಎಂದು ಒದ್ದಾಡಿದ

ಫೋಟೋ ದಲ್ಲಿನ ದೇವರು ನಗುತ್ತಲೇ ಇದೆ ಅನ್ನಿಸಿತು. "ನೀನೂ ನನ್ನನ್ನು ಅವಹೇಳನ ಮಾಡುತ್ತೀಯಾ " ದೂರಿದ
"ಯಾವುದಾದರೂ ಪವಾಡ ಮಾಡು "ಎಂದು ಬೇಡಿಕೊಂಡ.
ಎಲ್ಲಾ ಸರಿ ಹೋದರೆ ಮುಂದಿನವಾರದ ಕಂಪನಿಯಲ್ಲಿ ಕೆಲಸ ಖಂಡಿತಾ ಸಿಗುತ್ತದೆ . ಅದಕ್ಕಾದರೂ ಓದಬೇಕು ಎಂದುಕೊಂಡು ಓದತೊಡಗಿದ
ಎಲ್ಲಕ್ಕೂ ದೇವರ ನಗುವೊಂದೇ ಉತ್ತರವಾಗಿತ್ತು .
ಇತ್ತ ಮನೆ ಮಾಲೀಕನ ಮನೆಯಲ್ಲಿ ಪವಾಡವೊಂದು ನಡೆಯಿತು.
ಬಾಡಿಗೆ ಮನೆಗಳನ್ನೆಲ್ಲಾ ಸುತ್ತುವ ಅಭ್ಯಾಸ ಆ ಮಾಲೀಕನಿಗೆ ಆ ಹುಡುಗನ ಮನೆಯನ್ನೂ ನೋಡಿಕೊಂಡು ಮನೆ ಮಾಲೀಕ ತನ್ನ ಮನೆಗೆ ಕಾಲಿಡುತ್ತಿದ್ದಂತೆ ಅದಾವುದೋ ಆತ್ಮವೋ ಅಂತಹ ಯಾವುದೋ ಶಕ್ತಿಯೋ ಉಜ್ವಲ ಬೆಳಕಿನಿಂದ ಹೊರಗೆ ಹೊರಟಿತು. ಮಾಲೀಕ ಕಣ್ಣುಜ್ಜಿಕೊಂಡು ನೋಡಿದ ಮತ್ತೇನು ಕಾಣಲಿಲ್ಲ. ಯಾವುದೋ ಭ್ರಮೆ ಏನೋ ಎಂದುಕೊಂಡು ಸುಮ್ಮನಾದ.
ಆ ಬೆಳಕಿನ ಗಮನ ಆ ಹುಡುಗನ ಮನೆಯತ್ತ ಹೊರಳಿತು
ಅವನ ಮನೆಗೆ ಕರೆಂಟ್ ಇರಲಿಲ್ಲ ನೆನ್ನೆ ತಾನೆ ವಿದ್ಯುತ್ ಕಂಪೆನಿಯವರು ಅವನ ಮನೆಯ ಕರೆಂಟ್ ಕನೆಕ್ಶನ್ ಕಿತ್ತಿದ್ದರು.
ಹುಣ್ನಿಮೆಯ ಚಂದ್ರನ ಬೆಳಕು ಧಾರಾಳವಾಗಿ ಹರಡಿತ್ತು ಪುಟ್ಟಮನೆಯ ತೆರೆದಿದ್ದ ಪುಟ್ಟ ಕಿಟಕಿಯ ಒಳಗೆ ಬೆಳಕು ಹರಡಿತ್ತು. ಆ ಬೆಳಕಿನಲ್ಲಿಯೇ ಆ ಹುಡುಗನ ಓದು ಸಾಗಿತ್ತು
ಅವನ ಕಷ್ಟ ಬೆಳಕಿಗೆ ನೋಡಲಾಗಲಿಲ್ಲ. ತನ್ನ ಬೆಳಕಾದರೂ ಅವನಿಗೆ ಬಳಕೆಯಾಗಬಾರದೇ ಅನ್ನಿಸಿತು. ಆದರದು ಸಾಧ್ಯವಾಗಲಿಲ್ಲ.
ಬೆಳಕು ಆ ಹುಡುಗನಿಗಾಗಿ ಮಿಡಿಯುತ್ತಿತ್ತು ತನ್ನಿಂದ ಆ ಹುಡುಗನಿಗೆ ಹೇಗೆ ಸಹಾಯಮಾಡಬಹುದು ಎಂದು ಯೋಚಿಸುತ್ತಿತ್ತು.
ಕೊಂಚ ಹೊತ್ತು ಅವನನ್ನೇ ದಿಟ್ಟಿಸುತ್ತಾ ಕುಳಿತ ಬೆಳಕು ಮತ್ತೆ ತನ್ನ ಮೂಲಕ್ಕೆ ಹಿಂದಿರುಗಿತು.
ರಾತ್ರಿಯಲ್ಲಿ ಮರಳಿದ ಬೆಳಕ ಕಂಡು ಮಾಲೀಕ ಬೆಪ್ಪಾದ . ನೋಡು ನೋಡುತ್ತಿದ್ದಂತೆ ಅದು ಮರೆಯಾಯ್ತು. ಏನಿದು ಎಂದು ಯೋಚಿಸುತ್ತಲೇ ಮಲಗಿದ

ಬೆಳಗಾಯಿತು.
ಕಿಟಕಿಯ ಬಳಿ ಓದುತ್ತಾ ಕುಳಿತಿದ್ದಂತೆ ನಿದ್ರಿಸಿದ್ದ ಹುಡುಗ ಕಣ್ಣ ಮೇಲೆ ಬಿದ್ದ ಸೂರ್ಯ ರಶ್ಮಿಯಿಂದ ಎಚ್ಚರವಾದ.ಆಗಲೆ ನಾಳೆ ಬಂದುಬಿಟ್ಟಿತೇ. ಮುಂದಿನದನ್ನು ನೆನದು ಭಯ ಪಟ್ತ
ಹುಡುಗ ಬ್ರಶ್ ಮಾಡಿಕೊಂಡು ಖುರ್ಚಿಯ ಮೇಲೆ ಕೂತಂತೆಯೇ ದೊಪ್ಪೆಂದು ಕಿಟಕಿಯಿಂದ ಏನೋ ಬಿದ್ದಂತಾಯ್ತು .
ಕಾಗದದ ಮುದ್ದೆ ಅದು
ಬೆದರುತ್ತಲೇ ಕಾಗದವನ್ನು ನಡುಗುವ ಕೈಗಳಿಂದ ಬಿಡಿಸಿದ.
ನಂಬಲಾಗಲಿಲ್ಲ
ಅದರಲ್ಲಿ ಹಣ
ಮಾಲೀಕನಿಗೆ , ಹಾಲಿನವನಿಗೆ, ದಿನಸಿಯವನಿಗೆ ಕೊಡಬೇಕಾದಷ್ಟು ಹಣ.
ಜೊತೆಯಲ್ಲೇ
"ಹೆದರಬೇಡ ಈ ಹಣ ನಿನಗಾಗಿಯೇ. ಬಳಸಿಕೋ" ಎಂಬ ಉಲ್ಲೇಖವಿರುವ ಪತ್ರ
ಹುಡುಗ ಕಕ್ಕಾಬಿಕ್ಕಿಯಾದ. ಸುತ್ತಾಮುತ್ತ ನೋಡಿದ ಬಾಗಿಲು ತೆಗೆದು ಹೊರಗೆ ನೋಡಿದ ಯಾರೂ ಕಾಣಲಿಲ್ಲ
ಈ ಕಾಣದ ಊರಿನಲ್ಲಿ ತನಗೆ ಯಾರು ಸಹಾಯ ಮಾಡುತ್ತಾರೆ?. ಇದು ಖಂಡಿತಾ ದೇವರ ವರವೆಂದೇ ಭಾವಿಸಿದ.
ಎಲ್ಲರಿಗೂ ಹಣದ ಬಾಕಿ ಕೊಟ್ಟ.
ನಿಷ್ಟೆ ಇಂದ ಸಂದರ್ಶನಕ್ಕಾಗಿ ಓದತೊಡಗಿದ. ಬೆಳಕು ಅವನಿಗೆ ಸಹಾಯ ಮಾಡಿ ಸಂತೋಷಗೊಂಡಿತ್ತು. ಮಾಲೀಕ ಹಾಗು ಅವನ ಮನೆಯವರೆಲ್ಲಾ ಹಣ ಎಲ್ಲಿ ಹೋಯಿತೆಂದು ತಲೆ ಕೆಡಿಸಿಕೊಳ್ಳಲಾರಂಭಿಸಿದರು.

ಸಹಜವಾಗಿಯೇ ಕೆಲಸಕ್ಕಾಗಿ ನಡೆದ ಟೆಸ್ಟ್ನಲ್ಲಿ ಆತ ಪಾಸಾದ. ಜೊತೆಗೆ ಎಲ್ಲಾ ರೌಂಡ್ಸ್‌ನಲ್ಲೂ ಗೆದ್ದ.
ನಾಳೆ ನಿಮ್ಮ ಒರಿಜಿನಲ್ಸ್ ಎಲ್ಲಾ ತನ್ನಿ ವೆರಿಫಿಕೇಶನ್ಸ್ ಇರುತ್ತದೆ " ಎಂದು ಕಂಪೆನಿಯ ಎಚ್ ಆರ್ ಹೇಳಿದ .
ಇತ್ತ ಆ ಹುಡುಗನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ನೀಳ ಜ್ವಾಲೆಯನ್ನುಗಳುತ್ತಾ ಮನೆಯ ವಸ್ತುಗಳನ್ನೆಲ್ಲಾ ಆಹುತಿ ತೆಗೆದುಕೊಳ್ಳಲಾರಂಭಿಸಿತು.
ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿದರು
ಎಲ್ಲರೂ ಬೊಬ್ಬೆ ಹೊಡೆಯಲಾರಂಭಿಸಿದರು. ತನ್ನ ಮನೆ ಸುಟ್ಟು ಹೋಗುತ್ತಿದೆಯೇ ಎಂದು ಮನೆ ಮಾಲೀಕ ಎದೆ ಎದೆ ಬಡಿದುಕೊಂಡು ಅಳಲಾರಂಭಿಸಿದ.
ಅಷ್ಟರಲ್ಲಿ ಆ ಹುಡುಗನೂ ಅಲ್ಲಿಗೆ ಬಂದವನೇ ಮನೆಗೆ ಹತ್ತಿದ್ದ ಬೆಂಕಿ ನೋಡಿದವನಿಗೆ ಎದೆಯೇ ಒಡೆದುಹೋದಂತಾಯ್ತು
ಮಾಲೀಕ ಆ ಹುಡುಗನಿಗೆ ಹಿಗ್ಗಾಮುಗ್ಗ ಬೈದ . ತನ್ನ ಮನೆ ಉರಿದುಹೋಗುತ್ತಿದೆ ಅದಕ್ಕೆ ನೀನೆ ಕಾರಣ ಎಂದು ಹೀಗಳೆದ
ಹುಡುಗನಿಗೋ ಅದಾವುದರ ಬಗ್ಗೆಯೂ ಅರಿವಿರಲಿಲ್ಲ
ತನ್ನ್ ಒರಿಜಿನಲ್ಸ್ ಅಲ್ಲಿ ಸಿಕ್ಕಿ ಹಾಕಿಕೊಂಡಿದೆ ಅದು ಸುಟ್ಟು ಹೋದರೆ ನಾಳೆಯ ತನ್ನ ಬದುಕಿನ ಮೇಲೆ ಗಮನ.
ಜೋರಾಗಿ ಚೀರುತ್ತಾ ಒಳ ನುಗ್ಗಿದ ಆದರೆ ಬೆಂಕಿಯ ಜ್ವಾಲೆಯ ಇವನನ್ನೂಮುತ್ತಿತು.
ಅಡುಗೆ ಮನೆಯ ಮೇಲಿನ ಅಟ್ಟದಲ್ಲಿ ಇಟ್ಟಿದ್ದ ಪೆಟ್ಟಿಗೆಯನ್ನ.
ಹೇಗೋ ಮಾಡಿ ಅಲ್ಲಿಗೆ ನುಗ್ಗಿದವನಿಗೆ ಬೆಂಕಿಯೊಂದು ಮುಖಕ್ಕೆ ತಾಗಿ ಪ್ರಜ್ನೆ ತಪ್ಪಿತು. ಅಲ್ಲೇ ನೆಲದ ಮೇಲೆ ಬಿದ್ದ.
ಬೀಳುವಾಗ ಅರಿವಿಲ್ಲದೆ ಅವನ ಕೈಗಳು ದೇವರಿಗೆ ಮುಗಿದಿದ್ದವು.
ಅಲ್ಲಿ ಮನೆ ಮಾಲೀಕನ ಪಕ್ಕದಲ್ಲಿ ಮತ್ತೊಮ್ಮೆ ಬೆಳಕುಕಾಣಿಸಿತು.
ಮಾಲೀಕ ಬೆರಗಾದ . ಬೆಂಕಿಯ ತೀಕ್ಷ್ಣತೆಗಿಂತಲೂ ಪ್ರಕಾಶವುಳ್ಳದ್ದು
ಬೆಳಕು ಅಡುಗೆ ಮನೆ ಕಿಟಕಿಯ ಬಳಿ ಧಾವಿಸಿತು. ಅರಿವಿಲ್ಲದೆ ಮಾಲೀಕ ಅದನ್ನು ಹಿಂಬಾಲಿಸಿದ.
ಬೆಳಕು ಹುಡುಗನ ದುಸ್ಥಿತಿಯನ್ನು ನೋಡಿ ಬೇಸರಗೊಂಡಿತು. ಮರುಕ ಪಟ್ಟಿತು
ಹುಡುಗನನ್ನು ಹೇಗಾದರೂ ಮಾಡಿ ಕಾಪಾಡಬೇಕೆಂದುಕೊಂಡಿತು.
ಮಾಲೀಕನೆಡೆಗೆ ನೋಡಿತು
ಮಾಲೀಕನೂ ಏನೂ ತಿಳಿಯದವನಂತೆ ಬೆಳಕನ್ನೇ ನೋಡುತ್ತಿದ್ದ
ಇದ್ದಕಿದ್ದಂತೆಯೇ ಬೆಳಕು ಮರೆಯಾಯಿತು
ಎಲ್ಲರೂ ಆಶ್ಚರ್ಯಗೊಂಡರು
ಮಾಲೀಕ ಅಡುಗೆ ಮನೆಯ ಕಿಟಕಿಯನ್ನು ಮುರಿದು ಹಾಕಿದ. ಆ ಬೆಂಕಿಯ ಜ್ವಾಲೆಯನ್ನೂ ಲೆಕ್ಕಿಸದೆ ಒಳಗೆ ನುಗ್ಗಿದ
ಒಳಗೆ ಬಿದ್ದಿದ್ದ ಹುಡುಗನನ್ನು ಕಿಟಕಿಯಿಂದಲೇ ಹೊರಗೆ ಹಾಕಿದ . ಹುಡುಗನಿಗೆ ಪ್ರಜ್ನೆ ಬಂತು
ತನ್ನನ್ನು ಬದುಕಿಸಿದ್ದು ದೇವರು ಎಂದುಕೊಂಡು ದೇವರಿಗೆ ನಮಸ್ಕರಿಸಿದ. ಆದರೆ ಅವನಿಗೆ ಒಡೆದು ಹೋದ ಕಿಟಕಿಯ ಮೂಲಕ ಅಡುಗೆ ಮನೆಯಲ್ಲಿ ಕಂಡಿದ್ದು ದೇವರಲ್ಲ ಆದರ್ ತನ್ನ ಪಾಲಿಗೆ ದೆವ್ವವಾಗಿದ್ದ ಮಾಲೀಕ .
"ಸಾರ್ ನನ್ನ ಮಾರ್ಕ್ಸ್ ಕಾರ್ಡ್ ಎಲ್ಲಾ " ಅಟ್ಟದ ಮ್ಮೇಲೆ ಕೈ ತೋರಿದ
ಮಾಲೀಕ ಸರ ಸರ ಹತ್ತಿ ಪೆಟ್ಟಿಗೆಯನ್ನು ತೆಗೆದು ಅದನ್ನೂ ಹೊರಗೆ ಹಾಕಿದ.
ನಂತರ ಅದೇ ಕಿಟಕಿಯ ಮೂಲಕ ಹೊರಗಡೆ ಬಂದ.
ಹುಡುಗನಿಗೆ ಅತ್ಯಾನಂದವಾಗಿತ್ತು.
ಮಾಲೀಕನನ್ನು ತಬ್ಬಿಕೊಂಡ
ಜೋರಾಗಿ ಅಳಲಾರಂಭಿಸಿದ
ಅವನು ಮನದಣಿಯೇ ಅತ್ತ ನಂತರ
"ಸಾರ್ ನೀವು ?" ಆ ಎರೆಡು ಪದಗಳಲ್ಲಿ ಸಾವಿರ ಪ್ರಶ್ನೆಗಳಿದ್ದವು.
ಮಾಲೀಕನ ಮೌನವೇ ಉತ್ತರವಾಯ್ತು. ಎಲ್ಲರ ನೋಟಗಳಲ್ಲಿಯೂ ಅಚ್ಚರಿ ಮೆಚ್ಚುಗೆಗಳಿದ್ದವು
ಹುಡುಗ ಬೇರೆ ಮನೆಗೆ ಹೋದ
ತನ್ನ ಮನೆಗೆ ಬಂದ ಮಾಲೀಕ ಬೆಳಕಿಗಾಗಿ ಹುಡುಕಿದ ಬೆಳಕು ಕಾಣಲಿಲ್ಲ. ಇಷ್ಟು ದಿನ ಆ ಬೆಳಕೇ ಅವನನ್ನು ಆ ಹುಡುಗನಿಗೆ ಸಹಾಯ ಮಾಡಲು ಪ್ರೇರೇಪಿಸಿದ್ದು. ಈಗೆಲ್ಲಿ ಹೋಯಿತು?
ಉಯ್ಯಾಲೆಯಲ್ಲಿ ಕುಳಿತು ಒಮ್ಮೆ ಕಣ್ಣು ಮುಚ್ಚಿದವನಿಗೆ ಬೆಳಕು ತನ್ನೊಳಗೇ ಇದ್ದುದ್ದು ಅರಿವಾಯ್ತು. ಎಲ್ಲಾ ಅರಿವಾದಂತೆ ಮೆಲು ಮಂದಹಾಸ ಮೂಡಿತು ಅವನ ತುಟಿಯಲ್ಲಿ ಅದು ಅವನದಲ್ಲ ಅವನ ಮನದಾಳದ ಬೆಳಕಿನಿಂದ.

ಪ್ರತಿ ಕಪ್ಪು ಮೋಡದಲ್ಲೂ ಒಂದು ಬೆಳ್ಳಿ ರೇಖೆ ಇರುತ್ತದೆ ಅಲ್ಲವೇ?

Sunday, March 15, 2009

ಕರ್ಣ ನಿನ್ನ ಹುಟ್ಟು, ಬದುಕು, ಸಾವು ಬರದಿರಲಿ ಮತ್ತೆ ಯಾರಿಗೂ

ಜಗಕೆಲ್ಲಾ ಬೆಳಕನೀಯುವ ದೇವಾದಿದೇವ
ನಿನ್ನ ತಂದೆ ಸೂರ್ಯದೇವ
ಜಗ ಮೆಚ್ಚುವ ವೀರರೈವರು
ನಿನ್ನ ಸಹೋದರರು ಪಾಂಡವರು
ಲೋಕ ಮಾತೆಯಾಗಿ ಪೋಜಿತೆ
ನಿನ್ನ ತಾಯಿ ಕುಂತಿ ಮಾತೆ
ಹರಿಯಂಶದಿ ಜನಿಸಿದ ತ್ರಿಲೋಕ ಗುರು
ನಿನ್ನ ಗುರು ಪರಶುರಾಮ
ಆದರೂ ಲೋಕದಲ್ಲಿ ಅತೀ ಗೋಳು
ನಿನ್ನ ಬಾಳದು ಕರ್ಣ

ಬಾಲೆಯೊಬ್ಬಳ ಕುತೂಹಲದ ಆಟಕೆ
ಪುತ್ರನೊಬ್ಬನ ಜನನ ಬೇಕಿತ್ತೆ?
ಅಪವಾದಕಂಜಿ ಎಸೆದದ್ದು
ಗಂಗೆಯಲ್ಲಿ ಅಲ್ಲ ನಿನ್ನ ಅಪಮಾನದ ಮಡಿಲಲ್ಲಿ

ಸೂತಪುತ್ರನೆಂದು ಕರೆಸಿಕೊಂಡರೂ
ಬಿಡದ ಛಲದಿಂ ಕಲಿತೆ ಕ್ಷತ್ರಿಯ ವಿದ್ಯೆಯ
ಪೊಳ್ಳಾನಾದರೂ ನುಡಿದು
ಗುರು ಪರಶುರಾಮರ ಬಳಿ
ಅಲ್ಲೂ ಕಾಡಿತೇ ನಿನ್ನ ವಿಧಿ,
ಗುರುವಿನ ಶಾಪಕ್ಕೆ ಸಿಲುಕಿಸಿ

ಬಾಳಲ್ಲಿ ನಿನ್ನವರೇ ನಿನ್ನ ಅರಿಗಳು
ನಿನ್ನವರ ವೈರಿ ನಿನಗಾದ ಪರಮಮಿತ್ರ
ನ್ಯಾಯವೋ ಅನ್ಯಾಯವೋ ಉಪ್ಪಿನ ಋಣ
ತೀರಿಸುವುದೊಂದೇ ಸರಿಯೆನಿಸಿತೇ ನಿನಗೆ?

ರಾಜ್ಯದಾಸೆ, ತಾಯ ಮಮತೆ, ಸಹೋದರ ಪ್ರೇಮ
ಯಾವುದೊಂದೂ ಗೆಲ್ಲಲಿಲ್ಲ ನಿನ್ನ ಸ್ವಾಮಿನಿಷ್ಟೆಯಾ

ಬೇಡಿದ್ದ ಕೊಡುವ ನಿನ್ನ ಉದಾರತೆಯೇ
ನಿನಗೆ ಮುಳುವಾಯ್ತೇ
ಹೆತ್ತ ತಾಯಿ ಕೂಡ ಬಳಿಗೆ ಬಂದದ್ದು
ತನ್ನ ಐವರ ಮಕ್ಕಳ ಜೀವದಾನಕ್ಕಾಗಿಯೇ?

ತೊಟ್ಟಬಾಣವ ಮರಳಿ ತೊಡದ
ಇಟ್ಟ ಗುರಿಯ ಬದಲಿಸಲಾರದ ನಿನ್ನ
ಆ ನಿಲುವು ಬರುವುದಾರಿಗೆ

ಕಪಟಿ ಕೃಷ್ಣನ ವಿಕಟ ನಾಟಕಕ್ಕೆ
ಸಿಲುಕಿದ ಗೊಂಬೆಯಾದೆ
ತೊಟ್ಟ ಬಾಣವ ತೊಡದೆ ಮತ್ತೆ
ಬಲಿಯಾದೆ ಮೋಸಜಾಲಕೆ

ಸಾಯುವ ಕ್ಷಣದಲ್ಲೂ ನೀ ಅಳಲಿಲ್ಲ
ನೀ ನಿನಗಾಗಿ, ನಿನ್ನ ನಿರ್ಭಾಗ್ಯಬಾಳಿಗಾಗಿ
ಮರುಗಿದೆ ನೀ ಪರಮ ಮಿತ್ರನ
ಸೋಲಿಗಾಗಿ, ಅವನ ಸಾವಿಗಾಗಿ

ಜಗವೆಲ್ಲಾ ನಿನ್ನ ಮೆಚ್ಚಿದರೂ, ಮರುಗಿದರೂ
ಬಯಸುವೊದೊಂದೆ ಕರ್ಣ
ನಿನ್ನ ಹುಟ್ಟು, ಬದುಕು, ಸಾವು
ಬರದಿರಲಿ ಮತ್ತೆ ಯಾರಿಗೂ

[ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅವನ ಅಂತ್ಯವನ್ನು ಓದುತ್ತಿದ್ದಂತೆ ಕಣ್ಣು ಅರಿವಿಲ್ಲದೇ ಒದ್ದೆಯಾಯ್ತು. ಅವನಿಗಾಗಿ ಒಂದು ನಮನ ]