Saturday, October 30, 2010

ಅಕ್ವಿಶಿಸನ್- ಭಾವನೆಗಳ ಒತ್ತುವರಿ

"ರಿಯಲ್ಲಿ ಈ ನೈಸ್ ರೋಡ್ ಮಾಡಿರೋ ಖೇಣಿಗೆ ನೂರು ವಂದನೆ ಹೇಳಿದರೂ ಸಾಲದು ಏನಂತೀಯಾ?" ಶುಭಾಂಕ್ ಗುನಗಿದ.
ಅವನ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ . ಅವನಿಗೆ ಅದು ಬೇಕೂ ಇರಲಿಲ್ಲ
ಮತ್ತೆ ಮಾತಾಡಿದ
"ಇಂತಹ ಒಂದುಪ್ರಾಜೆಕ್ಟ್‌ಗೆ ಅಡ್ಡವಾಗಿ ನಿಂತ್ರಿದಲ್ಲ ಇವರೆಲ್ಲಾ . ಈಗ ನೋಡು ಮೈಸೂರು ಒಂದು ದೂರದ ಊರೇ ಅಲ್ಲ ಅನ್ನೋ ಹಾಗಿದೆ. ಸುಮ್ಮನೆ ಪ್ರಚಾರಕ್ಕೆ , ಎಲೆಕ್ಷನ್‌ಗೆ , ದುಡ್ಡಿಗೆ ನೂರಾರು ವೇಷಗಳು....." ಇನ್ನೂ ಮಾತಾಡುತ್ತಾನೆ ಇದ್ದ
ಹೌದಾ ಅಷ್ಟೇನಾ ಕಾರಣಗಳು. ಕಣ್ಣ ಮುಂದಿನ ದೃಶ್ಯಗಳು ಎಲ್ಲೋ ಹಾರಿತು. ಅವುಗಳಿಂದ ಬೋಳು ಹಣೆಯ ಅಮ್ಮನ ಮೋರೆ. ಕಣ್ಣಿಂದ ನೀರು ಜಿನುಗಿತು. ಸುಮ್ಮನಾದೆ . ಮನದಲ್ಲಿರುವ ಭಾವ ಪೂರ್ಣ ಮಾತುಗಳು ಶುಭಾಂಕ್‌ಗೆ ಹಿಡಿಸುವುದಿಲ್ಲ ಅಂತ ಗೊತ್ತಿತ್ತು.
"ಬಿ ಪ್ರಾಕ್ಟಿಕಲ್ ಯಾರ್ " ಎಂದನುವುದೇ ಅವನ ಸ್ವಭಾವ
ಹೌದು ವಾಸ್ತವವಾದಿಯಾಗಿರುವುದೇ ಎಷ್ಟೋ ಮೇಲು . ಭಾವನೆಗಳಿಗೆ ಈ ಪ್ರಪಂಚದಲ್ಲಿ ಬೆಲೆ ಎಲ್ಲಿರುತ್ತದೆ?

ಕಾರ್ ಮುಂದೆ ಹೋಗುತ್ತಾನೆ ಇತ್ತು ಹಾಗೆ ಶುಭಾಂಕನ ಮಾತುಗಳು ಚಟ ಪಟ ಎನ್ನುತ್ತಾ ಸಿಡಿಯುತ್ತಿದ್ದವು. ನನ್ನ ಆಲೋಚನೆಗಳು ಮಾತ್ರ ನಿಂತಲ್ಲಿಂದ ಮುಂದೆ ಬರುತ್ತಿರಲಿಲ್ಲ.

"ಮಮ್ಮಾ ಆ ಮನೆ ನೋಡು ಹೇಗೆ ಪಾಳು ಬಿದ್ದಿದೆ." ನಿಶು ತೋರಿಸಿದ . ಹೌದು ನನ್ನ ಕಣ್ನುಗಳೂ ಅದನ್ನೇ ಹುಡುಕುತ್ತಿದ್ದವು ಕಾತುರ ಎಲ್ಲಿ ಶುಭಾಂಕನ ಕೈ ಸ್ಟಿಯರಿಂಗ್ ಅನ್ನು ತಿರುಗಿಸುತ್ತದೋ ಎಂಬ ಆತಂಕ .
"ಶುಭಾಂಕ್ ನಾನ್ಹೇಳ್ತಾ ಇದ್ದನಲ್ಲ ಈ ನೈಸ್ ರೋಡಿನಲ್ಲಿ ನಮ್ಮದೂ ಒಂದುಮನೆ ಇತ್ತು ಅಂತ ಅದೇ ಸ್ವಲ್ಪ ನಿಲ್ಲಿಸು"
"ಓಹ್ ಹೌದಲ್ವಾ ಹೇಳಿದ್ದೆ ಯಾವಾಗ ಅಕ್ವೈರ್ ಮಾಡಿಕೊಂಡರು ಚೆನ್ನಾಗಿಯೇ ಕಟ್ಟಿದ್ದರು ಅನ್ಸುತ್ತೆ" . ಶುಭಾಂಕ್ ಕಾರ್ ನಿಲ್ಲಿಸಿದ .

ಮೇನ್ ರೋಡಿನಿಂದ ಸುಮಾರು ನೂರು ಮೀಟರ್ ದೂರದಲ್ಲಿತ್ತು
ಕಾಂಪೌಂಡ್ ಒಡೆದು ಹೋಗಿತ್ತು
ಮೊದಲನೇ ಪ್ಲ್ಹೋರ್‍ ಅರ್ಧ ಬಿದ್ದು ಹೋಗಿದೆ.
ಅದೇ ಮನೆಯಲ್ಲಿ ತಾನು ಆಟವಾಡಿದ್ದು. ಇಲ್ಲೇ ತನ್ನ ಓಡಾಟ .ಮೊದಲಿದ್ದ ಬಾಡಿಗೆ ಮನೆಯಲ್ಲಿ ನೀರಿಗೆ ಪರದಾಟ ಓನರ್ ನ ಕಾಟ ಸಹಿಸಿ ಸಹಿಸಿ ಅಪ್ಪ ಹಣ್ಣಾಗಿ ಹೋಗಿದ್ದರು. ತಾಳಲಾರದೆ ವಿ ಆರ್ ಎಸ್ ತೆಗೆದುಕೊಂಡು ಬೇಗೂರಿನ ಹೊರವಲಯದಲ್ಲಿ ಯಾವಾಗಲೋ ಕೊಂಡಿದ್ದ ಸೈಟನಲ್ಲಿ ಮನೆ ಕಟ್ಟಲಾರಂಭಿಸಿದರು.
ಅಂದು ಅಮ್ಮ ತನ್ನ ಕೊರಳಲ್ಲಿದ್ದ ಮಾಂಗಲ್ಯದ ಸರ ತೆಗೆದುಕೊಟ್ಟಿದ್ದರು." "ರೀ ನಮ್ಮದೇ ಒಂದು ಮನೆ ಆದರೆ ಎಷ್ಟು ಚೆನ್ನಾಗಿರುತ್ತೆ. ಆಮೇಲೆ ಚಿನ್ನ ಗಿನ್ನ ಎಲ್ಲಾ" ಮತ್ತೆ ಚಿನ್ನದ ಮಾಂಗಲ್ಯ ಅಮ್ಮನ ಕೊರಳಲ್ಲಿ ಕಾಣುವ ದಿನ ಬರಲೇ ಇಲ್ಲ

ಅಪ್ಪ ಮನೆ ಕಟ್ಟಿದ್ದರು . ಅದು ಬರೀ ಮನೆಯಾಗಿರಲಿಲ್ಲ.ತಮ್ಮ ಕುಟುಂಬದ ಭಾಗವೇ ಆಗಿ ಹೋಗಿತ್ತು . ಮನೆಯಲ್ಲಿ ಏನೋ ಸಂಭ್ರಮ . ಸ್ವಂತ ಮನೆಯ ಮೇಲೆ ಕೇವಲ ಹಕ್ಕೊಂದೇ ಅಲ್ಲ ಮಮತೆ ಪ್ರೀತಿ ,ವಾತ್ಸಲ್ಯ. ಅಮ್ಮನಂತೂ ಮನೆಗೆ ಎಷ್ಟೊಂದು ಅಲಂಕಾರ ಮಾಡುತ್ತಿದ್ದಳು.
ಮನೆಯ ಮುಂದೆ ತೋಟ. ತೋಟದ ಅಷ್ಟೂ ಗಿಡಕ್ಕೆಲ್ಲಾ ಭಾವಿಯಿಂದ ನೀರು ಸೇದಿ ಹಾಕುತ್ತಿದ್ದಳು. ದಣಿವೆಂಬುದೇ ಇರುತ್ತಿರಲಿಲ್ಲ ಅವಳಿಗೆ.
ಎರೆಡು ಫ್ಲೋರ್ ಮನೆಯಲ್ಲಿ ಆಟವೇ ಆಟ .ಕರೆಂಟ್ ಇರಲಿಲ್ಲ. ಆದರೂ ಆ ಚಿಮಣಿಯಲ್ಲಿಯೇ ಸಾಗಿದ ವಿದ್ಯಾಭ್ಯಾಸ . ಬಾವಿಯಲ್ಲಿ ಇಂಗದ ನೀರು. ನಿರ್ಜನ ಪ್ರದೇಶ. ಎಲ್ಲೋ ದೂರದಲ್ಲಿದ್ದ ಶಾಂತ ಆಂಟಿಯ ಮನೆ . ಅಪ್ಪನ ಲೂನಾದಲ್ಲಿ ತನ್ನ ಸ್ಕೂಲಿಗೆ ಪಯಣ.
ಹಾಗು ಹೀಗೂ ಆ ಏರಿಯಾಗೆ ಕರೆಂಟ್ ಲೈನ್ ಬಂದಿತ್ತು
ಮನೆಯಲ್ಲಿ ಕರೆಂಟ್ ಬಂದಿತ್ತು. ಎಸ್ ಎಸ್ ಎಲ್ ಸಿ ಓದುತ್ತಿದ್ದ ಮಗಳಿಗೆ ಅನುಕೂಲವಾಗಲೆಂದು ಅಪ್ಪ ಹಾಕಿಸಿದ್ದರು
ಆಗಲೇ ಸಿಡಿಲಿನಂತಹ ಸುದ್ದಿ
ಈ ಮನೆ ಸರಕಾರಿ ರಸ್ತೆಗೆ ಆಹುತಿಯಾಗುತ್ತಿತ್ತು.
ಅಪ್ಪ ಕುಸಿದಿದ್ದರು. ಅಮ್ಮನ ಅಳು ಕಣ್ಣಿಗೆ ಕಟ್ಟಿದಂತಿತ್ತು.
ಬೀದಿ ನಾಯಿಗಳನ್ನು ಅಟ್ಟುವಂತೆ ಅವರುಗಳು ಅಟ್ಟಿದ್ದರು ತಮ್ಮನ್ನು.
ಸ್ವಂತ ಮನೆ ಕಳೆದುಕೊಂಡ ದು:ಖದಲ್ಲಿ ಹಾಸಿಗೆ ಹಿಡಿದ ಅಪ್ಪ ಮತ್ತೆ ಮೇಲೇಳಲೇ ಇಲ್ಲ.
ಎಷ್ಟೋ ಜನ ದಿನಾ ಪ್ರತಿಭಟಿಸುತ್ತಿದ್ದರು.
ಅಮ್ಮ ಮಾತ್ರ ಕಲ್ಲಾಗಿಬಿಟ್ಟಳು
ಮಗಳನ್ನು ಓದಿಸಿ ಅವಳಿಗೆ ಮದುವೆ ಮಾಡುವವರೆಗೆ ಉಸಿರು ಬಿಗಿ ಹಿಡಿದ್ದಿದ್ದ ಜೀವ ಅಪ್ಪನನ್ನು ಅರಸಿ ಹೊರಟಿಯೇ ಬಿಟ್ಟಿತ್ತು.
"ಸ್ಮಿತಾ ನಾನು ಕೇಳಿದ್ದು ಯಾವಾಗ ಅಕ್ವಿಸಿಷನ್ ಆಗಿದ್ದು ಅಂತ ಯಾಕೆ ಮಾತಾಡ್ತಾ ಇಲ್ಲ?"ಶುಭಾಂಕ್ ಹಿಡಿದು ಆಡಿಸಿದ
ನೆನಪುಗಳ ಮೂಟೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮನಸು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ.
ದಣಿವಾಗಿ ಹೋಗಿದ್ದೆ
ಮನೆ ., ಹೆತ್ತವರು ,ನೆಂಟರು ಯಾವುದೂ ಇರದೆ ಪರದೇಶಕ್ಕೆ ಹೋಗಿ ಪರದೇಶಿಯಾಗಿ ಹೋಗಿಬಿಟ್ಟಿದ್ದೆ.
" ಸ್ಮಿತಾ ಆರ್ ಯು ಆಲ್ ರೈಟ್?" ಶುಭಾಂಕ್ ಪ್ರಶ್ನಿಸಿದ
"ಮಮ್ಮ ಆ ಮನೇನ ನೋಡೋಣ ಬಾಮ್ಮ" ನಿಶು ಕರೆಯುತ್ತಿದ್ದ

ನನಗೆ ನೋಡುವುದು ಬೇಕಿರಲಿಲ್ಲ. ಶುಭಾಂಕನ ಮುಂದೆ ಕುಸಿಯುವುದು ಬೇಕಿರಲಿಲ್ಲ. ಮತ್ತೊಮ್ಮೆ ಎಮೋಷನಲ್ ಫೂಲ್ ಆನ್ನಿಸಿಕೊಳ್ಳುವುದು ಬೇಕಿರಲಿಲ್ಲ

"ಶುಭಾಂಕ್ ನಾವು ಹೋಗೋಣ ಮುಹೂರ್ತಕ್ಕೆ ಲೇಟ್ ಆಗುತ್ತೆ. ನಿಶು ಈಗ ಬೇಡ ಇನ್ನೊಂದು ಸಲ ನೋಡೋಣ ಆಯ್ತಾ?"
ಶುಭಾಂಕ್ ಕಾರ್ ಸ್ಟಾರ್ಟ ಮಾಡಿದ

ಕಾರ್ ಮುಂದೆ ಹೋಗುತ್ತಿದ್ದಂತೆ ಅಪ್ಪನ ಮನೆ ಹಿಂದೆ ಹೋಗಲಾರಂಭಿಸಿತು.
ಇತ್ತ ಭಾವನೆಗಳನ್ನು ವಾಸ್ತವತೆ ಒತ್ತುವರಿ ಮಾಡಿಕೊಳ್ಳುತ್ತಿತ್ತು.













Monday, June 28, 2010

ಮಾಯವಾದ ಮುಖದ ಮೇಲಿನ ಕಲೆಗಳು

ಸುನಂದಾಗೆ ಇತ್ತೀಚಿಗೆ ಕನ್ನಡಿ ನೋಡಿಕೊಂಡಾಗೆಲ್ಲಾ ಸಂತೋಷ. ಇತ್ತೀಚಿಗೆ ಅವಳ ಮುಖದ ಮೇಲಿನ ಕಲೆಗಳು, ಕಾಣಲಾರದವಾಗಿದ್ದವು. "ರೀ ನನ್ನಮುಖದಲ್ಲಿ ಕಲೆಗಳೆಲ್ಲಾ ಕಡಿಮೆ ಆಗ್ತಾ ಇವೆ" ಖುಷಿ ಇಂದಲೇ ಹೇಳುತ್ತಿದ್ದಳು. "ಅಬ್ಬಾ ಆ ಕಲೆಗಳು ಎಷ್ಟು ದೊಡ್ಡ ದೊಡ್ಡದವಾಗಿದ್ದವು ಕನ್ನಡಿ ನೋಡೋಕೆ ಬೇಜಾರಾಗುತ್ತಿತ್ತು. ಈಗ ನೋಡಿ ಎಲ್ಲಾ ಕಡಿಮೆಯಾಗಿ ಎಷ್ಟು ಚೆನ್ನಾಗಿ ಕಾಣಿಸ್ತಾ ಇದ್ದೇನೆ. "
ಗಂಡ ಹೌದೆಂದು ತಲೆಯಾಡಿಸುತ್ತಿದ್ದ. ಪುಟ್ಟ ಮಗನನ್ನೂ ಕೇಳಿ ಖಾತ್ರಿ ಪಡಿಸಿಕೊಳ್ಳುತ್ತಿದ್ದಳು. ಆದರೆ ತಾನೇನೂ ಹಚ್ಚಿಕೊಳ್ಳದೆ ಕಡಿಮೆಯಾಗ್ತಿರೋದು ಹೇಗೆ ಎಂಬುದೇ ಅವಳಿಗೆ ಗೊತ್ತಾಗುತ್ತಿರಲಿಲ್ಲ . ಆದರೂ ತಾನು ಬರ ಬರುತ್ತಾ ಸುಂದರವಾಗಿ ಕಾಣುತ್ತಿರುವುದು ಅವಳಿಗೆ ಅರಿವಾಯ್ತು
ಹೌದು ಆ ಕಲೆಗಳು ಇದ್ದುದುರಿಂದಲೇ ಅವಳ ಮದುವೆ ನಿಧಾನಕ್ಕೆ ಆಯ್ತು. ತಂಗಿಯರ ಮದುವೆ ಎಲ್ಲಾ ಆದ ಮೇಲೆ ಕಷ್ಟ ಪಟ್ಟು ಹೆತ್ತವರು ರವಿಯನ್ನು ಹುಡುಕಿ ಕಟ್ಟಿದ್ದರು. ಈಗಾಗಲೇ ಅವಳಿಗೆ ೩೫ ವರ್ಷ. ಆ ಕಲೆಗಳೆಂದರೆ ನರಕ. ಕನ್ನಡಿ ನೋಡಲೇ ಹೆದರಿಕೊಳ್ಳುತ್ತಿದ್ದಳು. ಆ ಕಲೆ ಹೇಗಾದರೂ ಮಾಯವಾಗಬಾರದೆ ಎಂದುಎಷ್ಟು ಸಲ ಬೇಡಿಕೊಂಡಿದ್ದಳೋ. ಈಗ ಅದಾಗಿಯೇ ಕಡಿಮೆ ಆಗುತ್ತಿರುವುದು ಸಂತಸವನೀಯತೊಡಗಿತು
ಕಾಲ ಹಾಗೆ ಇರೋದಿಲ್ಲ
ಹಾಗೆಯೇ ಅವಳಿಗೆ ಕಣ್ಣು ಮಸುಕು ಮಸುಕಾಗುತ್ತಿದ್ದೆ ಎಂದನಿಸಿತು ಬಸ್ಸಿನ ನಂಬರ್ ದೂರದಿಂದ ಕಾಣಿಸುತ್ತಿಲ್ಲ ಎಂದನಿಸಲಾರಂಭಿಸಿತು.ಆಫೀಸಿನ ಕಡತಗಳು ಅಕ್ಷರಗಳು ನಾಟ್ಯ ಮಾಡಲಾರಂಭಿಸಿದಾಗ
ನಾರಾಯಣ ನೇತ್ರಾಲಯಕ್ಕೆ ಹೋಗಿ ಬಂದಳು. ಎರೆಡು ದಿನದಲ್ಲಿ ಕಣ್ಣಿಗೆ ಕನ್ನಡಕ ಬಂದಿತು
ಕನ್ನಡಕ ಧರಿಸಿ ಕನ್ನಡಿಯ ಮುಂದೆ ನಿಂತಳು.ಅರೆ ಕಲೆಗಳು ಮತ್ತೆ ಕಾಣಿಸಲಾರಂಭಿಸಿದವು. ಸತ್ಯ ತಲೆಗೆ ಹೊಳೆಯಿತು. ಕೂಡಲೇ ಕನ್ನಡಕ ಬಿಚ್ಚಿದಳು
ಈಗ ಸುನಂದ ಕನ್ನಡಿಯ ಮುಂದೆ ನಿಂತಾಗೆಲ್ಲಾ ಕನ್ನಡಕ ತೆಗೆದೇ ನಿಲ್ಲುತ್ತಾಳೆ . ತನ್ನ ಮುಖದ ಕಲೆಗಳು ಕಾಣಬಾರದೆಂದು

Monday, May 24, 2010

ಪ್ರೇಮವೊಂದು ಹುಚ್ಚು ಹೊಳೆ-ಉತ್ತರ ಭಾಗ

ರಾಜೀವನ ಮನಸ್ಸು ಡೋಲಾಯಮಾನವಾಗಿತ್ತು. ಅಬ್ಬಾ ಈ ಐದು ವರ್ಷಗಳಲ್ಲಿ ಏನೇನಾಗಿ ಹೋಯಿತು?ಹರೀಶನೇನೋ ಜೈಲಿಗೆ ಹೋದ. ಜೀವಾವಧಿ ಶಿಕ್ಷೆ ಆಯ್ತು . ಆತ ಏನು ಮಾಡಿದರೂ ಜೈಲಿನಿಂದ ಹೊರಬರದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದೂ ಆಯ್ತು.
ಆರು ತಿಂಗಳಲ್ಲಿ ಮದುವೆ ಆಗುತ್ತೇನೆಂದ ಸ್ಮಿತ ಮದುವೆಯ ಮಾತೆತ್ತಿದರೆ ಮಾತು ಮುಂದುವರೆಸುವುದಿಲ್ಲ ಇನ್ನೂ ಗೆಲ್ಲುವ ಕುದುರೆಯೇ ಆದ್ದರಿಂದ ರಾಜೀವನೂ ಬಲವಂತ ಮಾಡಲು ಹೋಗುತ್ತಿರಲಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಮಿತಾಗೆ ಎದುರು ನಿಲ್ಲುವವರು ಯಾರೂ ಇರಲಿಲ್ಲ. ಆರು ವರ್ಷಗಳಿಂದ ಸತತವಾಗಿ ನಂ ೧ ಸ್ಥಾನದಲ್ಲಿಯೇ ಮುಂದುವರೆದಿದ್ದಳು. ಕೈ ತುಂಬಾ ಹಣ ಕಣ್ಣು ಕುಕ್ಕುವ ರೂಪ, ಹದಿನೆಂಟರಂತೇ ಇರುವ ಅದೇ ಪ್ರಾಯ, ಅವಳ ಕಣ್ಣನ್ನುನೆತ್ತಿಯ ಮೇಲೆ ಇಟ್ಟಿದ್ದವು. ಒಮ್ಮೊಮ್ಮೆ ತಾನು ಕಡೇಗಣಿಸಲ್ಪಡುತ್ತಿದ್ದೇನೆಯೇ ಎಂದೂ ಯೋಚಿಸುತ್ತಿದ್ದ ರಾಜೀವ.

ಆದರೂ ಸ್ಮಿತಾಳೇ ತನ್ನ ಜೀವ ಎಂದೇನೂ ಅವನೇನು ಅಂದುಕೊಂಡಿರಲಿಲ್ಲ. ಅಂತಹ ಪ್ರೀತಿಯೂ ಅವಳ ಮೇಲಿರಲಿಲ್ಲ

ಇದ್ದುದ್ದೆಲ್ಲಾ ಕೇವಲ ಎಷ್ಟು ಸವಿದರೂ ಮತ್ತಷ್ಟು ಸವಿಯಬೇಕೆನಿಸುವ ಅವಳ ದೇಹದ ಮೇಲಿನ ದಾಹ, ಹಾಗು ಅಮರ ಪಾಲ್ ನ ನೂರಾರು ಕೋಟಿ ರೂಗಳ ಆಸ್ತಿ ಅಷ್ಟೇ .

ಯಾವುದಾದರೂ ಸಮಯ ನೋಡಿ ಅಟ್ ಲೀಸ್ಟ್ ಅರ್ಧದಷ್ಟು ಆಸ್ತಿಯನ್ನ್ನಾದರೂ ತನ್ನ ಹೆಸರಿಗೆ ಮಾಡಿಕೊಂಡರೆ ಸಾಕು ಅದಕ್ಕೆ ಕಾಯುತ್ತಿದ್ದ ಆದರೆ ಅವಳೋ ತನ್ನ ನೆರಳನ್ನೂ ನಂಬದವಳು. ಇನ್ನೂ ರಾಜೀವನನ್ನು ನಂಬುತ್ತಾಳೆಯೇ. ಅದಕ್ಕೆ ಆಸ್ಪದವೇ ಕೊಡುತ್ತಿರಲಿಲ್ಲ.

ಆಗಿನಿಂದಲೂ ರಾಜೀವ ಪಿ ಎ ಆಗಿದ್ದಷ್ಟೇ ಅವನ ಭಾಗ್ಯ. ಅವಳ ಕೆಲಸ ಮಾಡಿ ಮಾಡಿ ಬಳಲಿದ್ದ. ಆಗಲೇ ಅನ್ನಿಸಿದ್ದು ತನಗೊಬ್ಬ ಅಸಿಸ್ಟೆಂಟ್ ಬೇಕೆಂದು. ಆದರೆ ಬರುವವರು ನಂಬಿಕಸ್ತರಾಗಿರಬೇಕು . ಮುಗ್ದರಾಗಿರಬೇಕು. ತಮ್ಮಷ್ಟಕ್ಕೆ ತಾವು ಇರಬೇಕು. ಹೆಚ್ಚು ಓದಿರಬಾರದು .ಇಂಗ್ಲೀಷ ಮತ್ತು ಕಂಪ್ಯೂಟರ್ ಗೊತ್ತಿದ್ದರೆ ಸಾಕು. ಬಡವರಾಗಿರಬೇಕು. ಅಂತಹವರು ಯಾರಿದ್ದಾರೆ ?



ಗೌರಿ ನೆನಪಾಯ್ತು. ಹೌದು ಗೌರಿ ಅಂತಹವಳೇ . ಅವಳ ಪರಿಚಯವಾಗಿದ್ದೂ ಆಕಸ್ಮಿಕವೇ. ಅಂದು ಸ್ಮಿತಾಳ ಅನಾಥೆ ಚಿತ್ರದ ಶೂಟಿಂಗ್ ಇದ್ದುದ್ದು ರಾಜಾಜಿ ನಗರದ ಅಬಲಾಶ್ರಮದಲ್ಲಿ . ಅಲ್ಲಿಯೇ ಆ ಹದಿನೆಂಟರ ಹುಡುಗಿಯ ಪರಿಚಯವಾಗಿತ್ತು. ಗೌರಿ ಅಪ್ಪ ಅಮ್ಮ ಯಾರೆಂದು ಗೊತ್ತಿರದ ಪಾಪದ ಹುಡುಗಿ. ಸಾಧಾರಣ ರೂಪಿನವಳು ನೋಡಿದರೆ ಮುಗ್ದೆ ಎಂದು ತಿಳಿಯುತಿತ್ತು. ಮೊದಲು ಬಳ್ಳಾರಿಯ ಆಶ್ರಮದಲ್ಲಿ ಇದ್ದವಳು ಹದಿನೆಂಟು ವಯಸಾದ ಮೇಲೆ ಅವರೇ ಇಲ್ಲಿ ಅವಳನ್ನು ಕಳಿಸಿದ್ದರು ಅಶ್ರಮಕ್ಕೆ ಬಂದು ಒಂದು ತಿಂಗಳಾಗಿತ್ತಷ್ಟೇ. ಎಲ್ಲಾದರೂಕೆಲಸ ಇದ್ದರೆ ಹೇಳಿ ಎಂದು ಅತ್ತುಕೊಂಡಿದ್ದಳು. ಸಿನಿಮಾದಲ್ಲಿ ಸೈಡ್ ಆಕ್ಟ್ ಮಾಡ್ತೀಯ ಎಂದು ಕೇಳಿದ್ದಳು ಸ್ಮಿತಾ. ಇಲ್ಲ ಎಂದು ತಲೆ ಆಡಿಸಿದ್ದಳು . ತನ್ನ ಈ ರೂಪಿಗೆ ಸಿನಿಮಾ ಸರಿಯಾದ ಫೀಲ್ಡ್ ಅಲ್ಲ ಎಂದಿದ್ದಳು. ಪಿ ಯು ಸಿ ಮಾಡಿದ್ದಾಳೆ .ಜೊತೆಗೆ ಇಂಗ್ಲೀಷ್ ಜ್ನಾನವೂ ಇತ್ತು. ಕಂಪ್ಯೂಟರ್ ಮಾತ್ರ ಹೇಳಿಕೊಟ್ಟರೆ ಆಗುತ್ತದೆ

ಇದಾಗಿ ಎರೆಡು ವರ್ಷಗಳೇ ಕಳೆದಿವೆ . ಅವಳೇನು ಅಲ್ಲೇ ಇದ್ದಾಳ ಇಲ್ಲವಾ ಅದು ಗೊತ್ತಿಲ್ಲ . ಆಫೀಸಿನಿಂದ ಅಬಲಾಶ್ರಮಕ್ಕೆ ಕಾಲ್ ಮಾಡಲು ಹೇಳಿದ.

ಎರೆಡೇ ನಿಮಿಷದಲ್ಲಿ ಉತ್ತರ ಬಂತು

ಗೌರಿ ಯಾವುದ್ ಕಂಪೆನಿಯಲ್ಲಿ ಕೆಲ್ಸ ಮಾಡುತ್ತಿದ್ದಾಳೆ. ಅಬಲಾಶ್ರಮದಲ್ಲಿ ಇಲ್ಲ.

ಆ ಕಂಪನಿಯ ಫೋನ್ ನಂ ತೆಗೆದುಕೊಂಡು ಅವಳನ್ನು ಸಂಪರ್ಕಿಸಿದರು.

ಕೊನೆಗೂ ಗೌರಿ ಬಂದಳು . ಅದೇ ಸಾಧಾರಣ ರೂಪ ಅದೇ ಮುಗ್ಧತೆ , ಅದೇ ಮಾತು. ಬೆಂಗಳೂರಿನ ಬೆಡಗು ಅವಳನ್ನು ಎಳ್ಳಷ್ಟೂ ಬದಲಾಯಿಸಿರಲಿಲ್ಲ. ಮೇಕ್ ಅಪ್ ಇಲ್ಲದ ಮುಖ . ರಾಜೀವನಿಗೂ ಅದೇ ಬೇಕಾಗಿತ್ತು. ಹಾಗಿದ್ದಲ್ಲಿ ತಮ್ಮೆಲ್ಲಾ ವಿಷಯಗಳಿಗೂ ತಲೆಹಾಕುವುದಿಲ್ಲ

ರಾಜೀವನ ಅಸಿಸ್ಟೆಂಟ್ ಆಗಿರಲು ಒಪ್ಪಿದಳು. ಸ್ಮಿತಾ ಕೂಡ ಈ ಎಣ್ಣೆಗೆಂಪಿನ ಸಾಧಾರಣ ಹುಡುಗಿಯನ್ನು ಯಾವುದೇ ಮಾತ್ಸರ್ಯವಿಲ್ಲದೇ ಒಪ್ಪಿದಳು.

ಗೌರಿ ನಿಜಕ್ಕೂ ಮೌನ ಗೌರಿಯೇ ತಾನಾಯ್ತು ತನ್ನ ಕೆಲಸವಾಯ್ತು. ಎಲ್ಲರ ಜೀವನದಲ್ಲೂ ಇದ್ದಂತೆ ಅವಳ ಜೀವನಕ್ಕೂ ಒಂದು ಗುರಿ ಇತ್ತು . ಬೇರೆಡೆ ಕೆಲಸ ಮಾಡಿ ತಾನಂದುಕೊಂಡದ್ದನ್ನು ಪಡೆಯಲಾಗುವುದಿಲ್ಲ ಎಂದು ತಿಳಿದಿತ್ತು. ಇಲ್ಲಿ ಕೈ ತುಂಬಾ ಸಂಬಳ . ತನ್ನಾಸೆ ಇಲ್ಲಿ ಖಂಡಿತಾ ಈಡೇರುತ್ತದೆ ಎಂಬ ನಂಬಿಕೆ ಬಂತು .ಜೊತೆಗೆ ಪ್ರತ್ಯೇಕ ಕೋಣೆ . ಊಟ ಉಪಚಾರ ಎಲ್ಲಾ ಸ್ಮಿತಾ ಮನೆಯಲ್ಲೇ.
ಗೌರಿಯ ಕೆಲಸ ಸ್ಮಿತಾಳ ದಿನಚರಿಯನ್ನು ಸಿದ್ದಗೊಳಿಸುವುದು. ಅವಳ ಮಿಂಚಂಚೆಗೆ ಉತ್ತರಿಸುವುದು. ಲೆಟರ್ ಕರೆಸ್ಪಾಂಡೆನ್ಸ್ ಮಾಡುವುದು. ಜೊತೆಗೆ ಸ್ಮಿತಾ ಹೊಸತೊಂದು ಬಿಸಿನೆಸ್ ಆರಂಭಿಸಿದ್ದಳು . ಅದರ ಮೇಲುಸ್ತುವಾರಿ ನೋಡಿಕೊಳ್ಳುವುದು.
ರಾಜೀವನಿಗೆ ಈಗ ಪ್ರಯಾಸ ಕಡಿಮೆಯಾಗಿತ್ತು. ಎಲ್ಲಾ ಕೆಲಸಗಳನ್ನೂಗೌರಿ ಒಂದಿನಿತೂ ಬೇಸರಿಸಿಕೊಳ್ಳದೇ ಮಾಡುತ್ತಿದ್ದಳು. ಹುಡುಗಿಯರು ಇಷ್ಟು ಸಾಫ್ಟ್ ,ಟ್ರೆಡಿಷನಲ್ , ಗಂಭೀರವಾಗಿರುತ್ತಾರ ? ಎಂದು ಅಚ್ಚರಿ ಪಡುತ್ತಿದ್ದ. ಸ್ಮಿತಾಳೂ ಗೌರಿಯನ್ನ ರೇಗಿಸುತ್ತಿದ್ದಳು
"ಗೌರಿ ಸ್ವಲ್ಪವಾದರೂ ಚೇಂಜ್ ಇರಬೇಕು . ಹೀಗಿದ್ದಲ್ಲಿ ಮುಂದೆ ಯಾರೇ ನಿನ್ನನ್ನ ಮದುವೆ ಆಗ್ತಾರೆ? "
"ಮೇಡಮ್ ನನಗೆ ಅಂತ ಯಾರನ್ನೋ ಭಗವಂತ ಸೃಷ್ಟಿ ಮಾಡಿರುತ್ತಾನೆ ಸಮಯ ಬಂದಾಗ ಅವನೇ ನನ್ನ ಮುಂದೆ ಬರ್ತಾನೆ.ನನ್ನನ್ನ ಹೇಗಿದ್ದೀನೋ ಹಾಗೆ ಒಪ್ಪಿಕೊಳ್ಳೋ ಅಂತಹ ಗಂಡು "ಮುಗ್ದ ಉತ್ತರ
"ಅಕಸ್ಮಾತ್ ಯಾರೂ ಬರಲಿಲ್ಲಾಂದರೆ"ಸ್ಮಿತಾ ನಗುತ್ತಿದ್ದಳು
"ನನ್ನ ಹಣೇಲಿ ಮದುವೆ ಅನ್ನೋ ಪದ ಇಲ್ಲಾ ಅನ್ಕೋತೀನಿ" ಬೇಜಾರಾಗುತ್ತಿತ್ತೇನೋ ಗೌರಿ ಎದ್ದು ಹೋಗಿಬಿಡುತ್ತಿದ್ದಳು.
ಹೀಗೆ ದಿನಗಳು ಕಳೆಯುತ್ತಿದ್ದವು
ಅರಿವಿಲ್ಲದೆ ಸ್ಮಿತಾಗೆ ಗೌರಿ ತುಂಬಾ ಹತ್ತಿರದವಳಾಗಿದ್ದಳು. ರಾಜೀವನಿಗೂ ಸಹಾ . ಗೌರಿ ಅವಕಾಶ ಕೊಟ್ಟರೆ ಗೌರಿಯನ್ನ ವಶಪಡಿಸಿಕೊಳ್ಳಲು ರಾಜೀವನೂ ತಯಾರಿದ್ದ. ಆದರೆ ಗೌರಿಯೇ ಅಂತಹವಳು ಬೆಂಕಿ ಚೆಂಡಿನಂತಹವಳು. ರಾಜೀವನಷ್ಟೆ ಅಲ್ಲಾ ಎಲ್ಲಾ ಗಂಡಸರನ್ನೂ ಮೂರು ಅಡಿ ದೂರದಲ್ಲೇ ಇರಿಸಿ ಮಾತಾಡುತ್ತಿದ್ದಳು. ಅಲ್ಲದೇ ಗೌರಿ ಸ್ಮಿತಾಗೆ ತುಂಬಾ ಬೇಕಾದವಳಾದ್ದರಿಂದ ರಾಜೀವನೂ ಹೆದರುತ್ತಿದ್ದ.

ಇಂತಹ ಗೌರಿಯ ಜೀವನವನ್ನೇ ಬದಲಾಯಿಸುವಂತಹ ಘಟನೆ ನಡೆಯುತ್ತದೆ ಎಂದೂ ರಾಜೀವನೇಕೆ ಗೌರಿಯೂ ಊಹಿಸಿರಲಿಲ್ಲ.
(ಮುಂದುವರೆಯುತ್ತದೆ)
[ ಎಲ್ಲೋ ಒಂದು ಕಡೆ ಪ್ರೇಮವೊಂದು ಹುಚ್ಚು ಹೊಳೆ ಅಪೂರ್ಣ ಎನಿಸಿದ್ದರಿಂದ ಅದನ್ನ ಮುಂದುವರೆಸುತಿದ್ದೇನೆ. ’ಗಮ್ಯ’ಕ್ಕೂ ಅಂತ್ಯ ಕಾಣಿಸಬೇಕೆಂದಿದ್ದೇನೆ. ಎಲ್ಲಕ್ಕೂ ಸಮಯದ ತೊಂದರೆ. ಓದುಗರು ದಯವಿಟ್ಟು ಸಹಿಸಿಕೊಳ್ಳಿ-ರೂಪ)