Friday, December 17, 2010

ಹೀಗೆರೆಡು ಪ(ಪಾ)ತ್ರಗಳು

ಪ್ರೀತಿಯ ಸಂಜನಾಗೆ
ಸಂಜೂ ಇದು ನನ್ನ ಹತ್ತನೇ ಪತ್ರ ಒಂದಕ್ಕೂ ನಿನ್ನಿಂದ ಉತ್ತರ ಬಂದಿಲ್ಲ. ಹಾಗಾಗಿ ಆ ಎಲ್ಲಾ ಒಂಬತ್ತೂ ಪತ್ರಗಳನ್ನೂ ಒಟ್ಟಾಗಿ ಸೇರಿಸಿ ನನ್ನ ಹತ್ತನೇ ಪತ್ರ ಬರೆಯುತ್ತಿದ್ದೇನೆ. ನಿನ್ನಿಂದ ಪಾಸಿಟೀವ್ ಉತ್ತರ ಬರಲಿಲ್ಲವಾದಲ್ಲಿ ಇದು ನನ್ನ ಜೀವಮಾನದ ಕಡೆಯ ಪತ್ರವಾಗಿರುತ್ತದೆ
ದಂಗಾದೆಯಾ? ಹೌದು ಸಂಜೂ ನೀನು ನನ್ನ ಹೃದಯಕ್ಕೆ ಅಂತಹದೊಂದು ನಂಟನ್ನು ಬೆಳೆಸಿದ್ದೀಯ .
ನಾನು ನಿನ್ನನ್ನು ನೋಡಿದ್ದಾದರೂ ಯಾವತ್ತು?
ಇಂದಿಗೆ ಸರಿಯಾಗಿ ತಿಂಗಳ ಮುಂಚೆ.
ಆವತು ಯಾವುದೋ ಸಿನಿಮಾದ ಶೂಟಿಂಗ್ ಅಂತ ನೀನು ಬಂದಿದ್ದೆ . ಅದೇಕೋ ಚಿತ್ರದ ಹೀರೋಯಿನ್ ಸಂಪ್ರೀತಾ ನಂಗೆ ಹಿಡಿಸಲಿಲ್ಲ ಅವಳ ಮನೆ ಕೆಲಸದವಳಾಗಿ ಅವಳಿಂದ ಕೆನ್ನೆಗೆ ಹೊಡೆಸಿಕೊಳ್ಳುತ್ತಿದ್ದ ನೀನು ನಂಗೆ ಹಿಡಿಸಿಯೇಬಿಟ್ಟೆ
ಆಗಲೇ ನನ್ ಮನಸು ಹೇಳಿತು ನಂಗೆ ನೀನೆ ತಕ್ಕ ಜೋಡಿ
ಅಂದಿನಿಂದ ಇಂದಿನವರೆಗೆ ನಾನು ಪತ್ರಗಳನ್ನು, ಮೆಸೇಜುಗಳನ್ನು ಕಳಿಸ್ತಾನೇ ಇದ್ದೇನೆ . ಅಟ್ ಲೀಸ್ಟ್ ನಿಂಗೆ ನಾನು ಇಷ್ಟಾನಾ ಇಲ್ಲವಾ ಎಂಬ ಮಾತೂ ಇಲ್ಲ .
ಅಂದ ಹಾಗೆ ನಾನು ಶೇಖರ್ . ಗಾರ್ಮೆಂಟ್ಸ್‌ನಲ್ಲಿ ಸೂಪರ್ ವೈಸರ್ ಆಗಿದ್ದೀನಿ. ತಿಂಗಳಿಗೆ ಇಪ್ಪತ್ತು ಸಾವಿರದ ತನಕ ಸಂಬಳ . ಹೆಂಡತಿಯನ್ನು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಮಟ್ಟಿಗೆ ಸಂಪಾದನೆ ಇದೆ
ಇನ್ನೂ ನಿನ್ನ ಬಗ್ಗೆ ಏನು ಗೊತ್ತು ಎಂದು ಕೇಳಬೇಡ. ಎಲ್ಲವನ್ನೂ ಅರಿತಿದ್ದೇನೆ
ನೀನು ಮೂರು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಪಾತ್ರಕ್ಕಾಗಿ ಹೆಣಗಾಡುತ್ತಿದ್ದೀಯಾ
ಆಗೊಮ್ಮೆ ಈಗೊಮ್ಮೆ ನಾಯಕಿಯ ಮನೆ ಕೆಲಸದವಳೋ ಅಥವ ಸ್ನೇಹಿತೆಯೋ ಅಥವ ನಾಯಕಿ ನಾಯಕ ಮರ ಸುತ್ತುತ್ತಾ ಹಾಡುತ್ತಿದ್ದಾಗ ಲಾ ಲಾ ಲಾ ಎಂದು ಕುಣಿಯುವ ಹುಡುಗಿಯರ ಪೈಕಿ ಒಬ್ಬಳಾಗಿ ಪಾತ್ರ ಮಾಡುತ್ತಿದ್ದೀಯಾ
ಈ ಸಿನಿಮಾ ಇಂಡಸ್ಟ್ರಿಯಲ್ಲಿ ಏನೆಲ್ಲಾ ಕೊಳಕುಗಳಿವೆಯೋ ಅವುಗಳಲ್ಲೆಲ್ಲಾ ನೀನು ಮುಳುಗಿದ್ದೀಯಾ
ಆದರೆ ನೀನು ನನ್ನ ಪಾಲಿಗಂತೂ ಗಂಗೆಯ ಥರ . ಗಂಗೆ ಯಾವತ್ತಿದ್ದರೂ ಗಂಗೆಯೇ.
ನೀನು ಹೇಗೆ ಇದ್ದರೂ ನಾನು ನಿನ್ನಪ್ರೀತಿಸುವೆ.
ಇಷ್ಟೆಲ್ಲಾ ಆದಮೇಲೂ ನೀನು ನನ್ನನ್ನ ತಿರಸ್ಕರಿಸಿದರೆ ,
ನಾಳೆಯೇ ನನ್ನ ಹೆಣದ ದರ್ಶನ ಮಾಡಬೇಕಾಗುತ್ತದೆ. ನನ್ನ ಸಾವಿಗೆ ನೀನೆ ಕಾರಣಳಾಗುತ್ತೀಯಾ
ಯೋಚಿಸು.....

ನಿನ್ನವ ಶೇಖರ್

ಶೇಖರನೆಂಬ ಮುಟ್ಟಾಳನಿಗೆ
ಪ್ರೀತಿ ಪ್ರೇಮವೆಂಬ ಭಾವನೆಗಳ ಕಡಲಲ್ಲಿ ಈಜಾಡ್ತಾ ಇದ್ದೀಯಾ ಸರಿ. ಆದರೆ ಆ ಈಜಿಗೆ ಜೊತೆಯಾಗಿ ನನ್ನ ಯಾಕೆ ಕರೀತ್ತಿದ್ದೀಯ

ಸಿನಿಮಾಗಳಲ್ಲಿ ಪ್ರೀತಿ ಪ್ರೇಮವೆಂಬ ಭಾವನೆಗಳನ್ನು ಮಾರ್ತಾ ಮಾರ್ತಾ ನಾವೆಲ್ಲಾ ಆ ಭಾವನೆಗಳನ್ನು ಹತ್ತಿರಕ್ಕೂ ಸೇರಿಸಲ್ಲಾ ಯಾಕೆ ಗೊತ್ತಾ?
ನಾವು ಯಾವತ್ತಿದ್ದರೂ ಭಾವನೆಗಳನ್ನು ಮಾರಿ ಲಾಭಗಳಿಸೋರು ಅದರಿಂದ ಬರೋ ನೋವು ನಮಗೆ ಬೇಡ

ನಿನ್ನ ಒಂಬತ್ತೂ ಪತ್ರಗಳನ್ನ ನಾನು ಓದಿದ್ದೇನೆ . ಇಂತಹ ಸಾವಿರ ಪತ್ರಗಳು ನನ್ನ ಬಳಿ ಇವೆ

ಯಾಕೆಂದರೆ ನಾವು ಸಿನಿಮಾದವರು ಹತ್ತು ಜನಕ್ಕೆ ಗ್ಲಾಮರ್ ಹೆಸರಲ್ಲಿ ಮೈ ಕೈ ತೋರಿಸೋರು

ಸಿನಿಮಾದಲ್ಲಿ ಪ್ರೀತಿಗೋಸ್ಕರ ಸಾವನ್ನೇ ಎದುರಿಸುವವರು....................

ಇಂತಹವಳು ಸಿಕ್ಕರೆ ಯಾರಿಗೆ ಬೇಡ ಹೇಳು..............?

ನೀನು ಸತ್ತು ಹೋಗ್ತೀಯಾ ಅಂತ ನಾನು ನಿನಗೆ ಉತ್ತರ ಕೊಡ್ತಾ ಇಲ್ಲ

ಯಾಕೆಂದರೆ ನೀನು ಸತ್ತರೆ ನನಗೇನು ನಷ್ಟವೂ ಇಲ್ಲ ಬದುಕಿದ್ದರೆ ಲಾಭವೂ ಇಲ್ಲ

ಆದರೆ ನಿನ್ನನ್ನೇ ನಂಬಿಕೊಂಡಿರುವ ನಿನ್ನ ಕುಟುಂಬದ ಶಾಪ ನನ್ನನ್ನ ತಾಕದಿರಲಿ ಅಂತ ಪತ್ರ ಬರೆಯುತ್ತಿದ್ದೇನೆ

ನಿನಗೆ ನನ್ನ ಬಗ್ಗೆ ಗೊತ್ತಿರೋದು ಕೇವಲ ಸ್ವಲ್ಪವೇ ಕೇವಲ ಪುಸ್ತಕದ ಹೊರಕವಚ ನೋಡಿ ಪುಸ್ತಕದ ಕಥೆಯನ್ನೇ ಹೇಳುತ್ತೀನಿ ಎಂಬ ಹುಂಬಮನೋಭಾವದವನು ನೀನು

ಇನ್ನೂ ನನ್ನ ಬಗ್ಗೆ ತಿಳಿಯೋದು ತುಂಬಾ ಇದೆ

ಅದಕ್ಕೂಮೊದಲು ನೀನು ನನ್ನನ್ನೆ ಯಾಕೆ ಬಯಸಿದೆ ಅನ್ನೋದು

ತುಂಬಾ ಹುಡುಗರಿಗೆ ಸಿನಿಮಾದವರು ಎಂದರೆ ಏನೋ ಕುತೂಹಲ. ಸಿನಿಮಾದ ಹುಡುಗಿಯನ್ನು ಮದುವೆಯಾಗುತ್ತಿದ್ದೇವೆ ಎಂಬ ಸ್ವಯ್ಂ ತೃಪ್ತಿ . ನೀನು ನೀನು ಕೂಡ ಹಾಗೆಯೇ

ಆವತ್ತು ಶೂಟಿಂಗ್ ಇದ್ದ ದಿನ ನಿನಗೆ ಸಿನಿಮಾ ಹೀರೋಇನ್ ಸಂಪ್ರೀತಾ ಹಿಡಿಸಲಿಲ್ಲ ಅಂದೆ

ಯಾಕೆ ಹಿಡಿಸಲಿಲ್ಲ ? ಹಾಗಿಲ್ಲವಾದಲ್ಲಿ ಅವಳ ಹತ್ತಿರ ಆಟೋಗ್ರಾಫ್ ತೆಗೆದುಕೊಳ್ಳುವಾಗ ಮೇಡಮ್ ನಾನು ನಿಮ್ಮ ಅಭಿಮಾನಿ ಅನ್ನುತ್ತಿದ್ದಾಗ, ಅವಳ ಬಳಿಯೇ ಆಗಷ್ಟೇ ಅವಳಿಂದ ಕೆನ್ನೆಗೆ ಹೊಡೆಸಿಕೊಂಡ ಕೆಲಸದವಳ ಪಾತ್ರ ಮಾಡಿದ್ದ ನಾನು ಅಲ್ಲೇ ನಿಂತಿದ್ದಾಗ ನನ್ನತ್ತ ನಿನ್ನ ಕಣ್ಣೂ ಹಾಯಲಿಲ್ಲವೇಕೇ?

ನಿನ್ನ ಮಟ್ಟಕ್ಕೆ ಅವಳು ನಿಲುಕದ ನಕ್ಷತ್ರ. ಸಿನಿಮಾದವಳನ್ನೇ ಮದುವೆಯಾಗುತ್ತೇನೆ ಎಂಬ ನಿನ್ನ ಹಟಕ್ಕೆ ಕಂಡಿದ್ದು
ನಾನು, ಅಷ್ಟೇ .
ಅದನ್ನೇ ಪ್ರೀತಿ ಎಂದುಕೊಂಡಿದ್ದೀಯ ಸುಳ್ಳು ಕಣೋ ಬೆಪ್ಪ.
ನಾಳೇ ನಾನೇನಾದರೂ ದೊಡ್ಡ ಹೀರೋಯಿನ್ ಆದಲ್ಲಿ ...................................?
ಇದಕ್ಕೆ ಉತ್ತರ ಹೇಳು.
ಅಂದ ಹಾಗೆ ನನ್ನ ಬಗ್ಗೆ ಏನೇನೋ ಗೊತ್ತಿದೆ ಎಂದೆ
ಮಲಿನವಾಗದ ಗಂಗೆ ಎಂದೆ
ಇಲ್ಲ ಕಣೋ ನಾವುಗಳು ಸೈಡ್ ಆಕ್ಟ್ರೆಸ್ಗಳು ಗಂಗೆಯೂ ಅಲ್ಲ ಗೌರಿಯೂ ಅಲ್ಲ . ಆ ಪದಗಳೆಲ್ಲಾ ಏನಿದ್ದರೂ ಸಿನಿಮಾಪರದೆಯ ಮೇಲೆ
ಹಿಂದೆ ನಾವುಗಳು ಬ್ರಾಂದಿ ವಿಸ್ಕಿಗಳು.
ಮತ್ತೇರುವ ತನಕ ಕುಡಿಯುತ್ತಾರೆ
ನಂತರ ಕುಸಿಯುತ್ತಾರೆ ಮತ್ತೆ ಹೊಸ ವಿಸ್ಕಿಗಳಿಗೆ ಕಣ್ಣ್ ಹಾಕ್ತಾರೆ ಅಷ್ಟೇ
ನಾನು ಸಿನಿಮಾರಂಗಕ್ಕೆ ಬಂದಿದ್ದು ದೊಡ್ಡ ಹೀರೋಯಿನ್ ಆಗೋಕೇನೆ
ಆದರೆ ಆಗಿದ್ದು ಮಾತ್ರ ಸೈಡ್ ಆಕ್ಟ್ರೆಸ್
ನಿಂಗೆ ಗೊತ್ತಾ?
ನಾನು ಮೊನ್ನೆ ಮಾಡಿದ್ದ " ಅಮರ್" ಫಿಲಂ ನಲ್ಲಿ ಹೀರೋ ಜೊತೆ ಮರ ಸುತ್ತಿದಂತೆ ಅವನ ಮೇಲೆ ಬೀಳುವ ಕನಸು ಕಾಣುವ ಒಂದು ಪಾತ್ರದಲ್ಲಿ ನಟಿಸಿದ್ದೆನಲ್ಲಾ. ಆ ಫಿಲ್ಂ ಹೀರೋ ರಜತ್ ಕೇವಲ ಹತ್ತು ವರ್ಷದ ಹಿಂದೆ ನನ್ನ ತಂದೆಯ ಪಾತ್ರ ಮಾಡಿದ್ದ ನಾನು ಬೇಬಿ ಸಂಜನಾ ಆಗಿದ್ದೆ
ಈಗ ಅದೇ ಅವನ ಜೊತೆ ಮರ ಸುತ್ತುವ ಪಾತ್ರ.
ನಾಳೆ ಅವನಿಗೇನೇ ಅಕ್ಕನೋ, ಇಲ್ಲ ಅತ್ತಿಗೆಯೋ ನಾಡಿದ್ದು ಅಮ್ಮನಾಗಿ ಪಾತ್ರ ನಿರ್ವಹಿಸಬೇಕಾಗುತ್ತದೆ .
ಏಕೆಂದರೆ ನಮಗೆ ವಯಸಾಗಿರುತ್ತದಲ್ಲಾ?
ಅದಕ್ಕೆ ಹೇಳಿದ್ದು ನಾವು ಬ್ರಾಂದಿಗಳು ವಿಸ್ಕಿಗಳು ಅಂತ.
ನಾನು ಮಲಿನವಾಗಿದ್ದೇನೆ ಅಂತ ನಂಗೆ ಯಾವತ್ತೂ ಅನ್ನಿಸಿಯೇ ಇಲ್ಲ
ಯಾಕೆ ಹೇಳು?
ನೀರಲ್ಲಿಯೇ ಇರುವ ಮೀನಿಗೆ ನೀರು ಯಾವತ್ತೂ ಬೋರೆನಿಸೋದಿಲ್ಲ . ಆದರೆ ಒಂದು ನಿಮಿಷ ನೀರಿಲ್ಲದೇ ಇದ್ದಲ್ಲಿ ಉಸಿರಾಡಲಾಗುವುದಿಲ್ಲ.


ಮತ್ತೆ ಇದನ್ನೆಲ್ಲಾ ಬಿಟ್ಟು ನಾನು ನಿನ್ನ ಜೊತೆ ಬಂದುಬಿಟ್ಟೆ ಅಂತಂದುಕೋ

ಸ್ವಲ್ಪ ದಿನ ಚೆನ್ನಾಗಿರುತ್ತೆ ನಂತರ?
ನಂಗೆ ನೀನು ಬೋರಾಗಲಾರಂಭಿಸುತ್ತೀಯಾ. ಏಕೆಂದರೆ ನಿನ್ನ ಸಂಪಾದನೆ ನನಗೆ ಏನನ್ನೂ ಕೊಡಿಸುವುದಿಲ್ಲ.
ನೀನೋ ನನ್ನ ಹಿಂದಿನ ಕಥೆಗಳನ್ನೆಲ್ಲಾ ಎಳೆದುಕೊಂಡ ಬೈಯ್ಯಲಾರಂಭಿಸುತ್ತೀಯ, ಅನುಮಾನ ಪಡ್ತೀಯಾ
ನನಗೂ ನಿನ್ನ ಬಗ್ಗೆ ಅಸಹನೇ ನಿನಗೂ ನನ್ನ ಬಗ್ಗೆ ಬೇಜಾರು
ಕೊನೆಗೆ ಎರೆಡೇ ವರ್ಷದಲ್ಲಿ ನನ್ನ ದಾರಿ ನನದು ಅಂತ ಇಲ್ಲಿಗೆ ಮತ್ತೆ ಹಾರಿ ಬರುತ್ತೇನೆ
ಇಲ್ಲಿ ಪರಿಸ್ಥಿತಿ ಟೋಟಲಾಗಿ ಬದಲಾಗಿರುತ್ತದೆ
ಹೊಸ ಹೊಸ ಹುಡುಗಿಯರು ಬಂದು
ನನ್ನ ಫ್ರೆಶ್‌ನೆಸ್ ಹೋಗಿರುತ್ತದೆ ನನ್ನ ತಾಯಿ ಪಾತ್ರಕ್ಕೋ ಇಲ್ಲ ಅತ್ತೆಯ ಪಾತ್ರಕ್ಕೋ ಹಾಕುತ್ತಾರೆ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಇಷ್ತೇಲ್ಲಾ ಯಾಕೆ.
ಇನ್ನೂ ಯೌವ್ವನ ಇದೆ . ಅದರಿಂದಲೇ ಕೈ ತುಂಬಾಹಣವೂ ಬರ್ತಿದೆ. ಇದನ್ನೆಲ್ಲಾ ಬಿಟ್ಟು ನನಗಂತೂ ಬರಲು ಮನಸಿಲ್ಲ.

ಮದುವೆಯಾಗುವ ಕನಸಿದ್ದರೂ ಆ ಕನಸಿನಲ್ಲಿ ಬರುತ್ತಿರುವ ಮುಖವೇ ಬೇರೆ ಅದು ನೀನಲ್ಲ

ನಿನಗೆ ಸಂಪ್ರೀತಾ ಹೇಗೆ ನಿಲುಕದ ನಕ್ಷತ್ರವೋ ಹಾಗೆಯೇ ನನಗೆ ಮತ್ತೊಬ್ಬ ಹೀರೋ

ಈ ಹುಚ್ಚಾಟವನ್ನೆಲ್ಲಾ ಬಿಟ್ಟುಬಿಡು ಅಂತ ನಾನು ಕೇಳೋದಿಲ್ಲ ಯಾಕೆಂದರೆ ಯು ಆರ್ ನಥಿಂಗ್ ಟು ಮಿ

ಮತ್ತೆ ನನಗೆ ಲೆಟರ್ ಬರೆಯಬೇಡ . ನಾನು ಓದೋದಿಲ್ಲ
ಇದೇ ನನ್ನ ಮೊದಲ ಮತ್ತು ಕಡೆಯ ಪತ್ರ

ನಿನಗೆ ಯಾರೂ ಅಲ್ಲದ
ಸಂಜನಾ
















Saturday, October 30, 2010

ಅಕ್ವಿಶಿಸನ್- ಭಾವನೆಗಳ ಒತ್ತುವರಿ

"ರಿಯಲ್ಲಿ ಈ ನೈಸ್ ರೋಡ್ ಮಾಡಿರೋ ಖೇಣಿಗೆ ನೂರು ವಂದನೆ ಹೇಳಿದರೂ ಸಾಲದು ಏನಂತೀಯಾ?" ಶುಭಾಂಕ್ ಗುನಗಿದ.
ಅವನ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ . ಅವನಿಗೆ ಅದು ಬೇಕೂ ಇರಲಿಲ್ಲ
ಮತ್ತೆ ಮಾತಾಡಿದ
"ಇಂತಹ ಒಂದುಪ್ರಾಜೆಕ್ಟ್‌ಗೆ ಅಡ್ಡವಾಗಿ ನಿಂತ್ರಿದಲ್ಲ ಇವರೆಲ್ಲಾ . ಈಗ ನೋಡು ಮೈಸೂರು ಒಂದು ದೂರದ ಊರೇ ಅಲ್ಲ ಅನ್ನೋ ಹಾಗಿದೆ. ಸುಮ್ಮನೆ ಪ್ರಚಾರಕ್ಕೆ , ಎಲೆಕ್ಷನ್‌ಗೆ , ದುಡ್ಡಿಗೆ ನೂರಾರು ವೇಷಗಳು....." ಇನ್ನೂ ಮಾತಾಡುತ್ತಾನೆ ಇದ್ದ
ಹೌದಾ ಅಷ್ಟೇನಾ ಕಾರಣಗಳು. ಕಣ್ಣ ಮುಂದಿನ ದೃಶ್ಯಗಳು ಎಲ್ಲೋ ಹಾರಿತು. ಅವುಗಳಿಂದ ಬೋಳು ಹಣೆಯ ಅಮ್ಮನ ಮೋರೆ. ಕಣ್ಣಿಂದ ನೀರು ಜಿನುಗಿತು. ಸುಮ್ಮನಾದೆ . ಮನದಲ್ಲಿರುವ ಭಾವ ಪೂರ್ಣ ಮಾತುಗಳು ಶುಭಾಂಕ್‌ಗೆ ಹಿಡಿಸುವುದಿಲ್ಲ ಅಂತ ಗೊತ್ತಿತ್ತು.
"ಬಿ ಪ್ರಾಕ್ಟಿಕಲ್ ಯಾರ್ " ಎಂದನುವುದೇ ಅವನ ಸ್ವಭಾವ
ಹೌದು ವಾಸ್ತವವಾದಿಯಾಗಿರುವುದೇ ಎಷ್ಟೋ ಮೇಲು . ಭಾವನೆಗಳಿಗೆ ಈ ಪ್ರಪಂಚದಲ್ಲಿ ಬೆಲೆ ಎಲ್ಲಿರುತ್ತದೆ?

ಕಾರ್ ಮುಂದೆ ಹೋಗುತ್ತಾನೆ ಇತ್ತು ಹಾಗೆ ಶುಭಾಂಕನ ಮಾತುಗಳು ಚಟ ಪಟ ಎನ್ನುತ್ತಾ ಸಿಡಿಯುತ್ತಿದ್ದವು. ನನ್ನ ಆಲೋಚನೆಗಳು ಮಾತ್ರ ನಿಂತಲ್ಲಿಂದ ಮುಂದೆ ಬರುತ್ತಿರಲಿಲ್ಲ.

"ಮಮ್ಮಾ ಆ ಮನೆ ನೋಡು ಹೇಗೆ ಪಾಳು ಬಿದ್ದಿದೆ." ನಿಶು ತೋರಿಸಿದ . ಹೌದು ನನ್ನ ಕಣ್ನುಗಳೂ ಅದನ್ನೇ ಹುಡುಕುತ್ತಿದ್ದವು ಕಾತುರ ಎಲ್ಲಿ ಶುಭಾಂಕನ ಕೈ ಸ್ಟಿಯರಿಂಗ್ ಅನ್ನು ತಿರುಗಿಸುತ್ತದೋ ಎಂಬ ಆತಂಕ .
"ಶುಭಾಂಕ್ ನಾನ್ಹೇಳ್ತಾ ಇದ್ದನಲ್ಲ ಈ ನೈಸ್ ರೋಡಿನಲ್ಲಿ ನಮ್ಮದೂ ಒಂದುಮನೆ ಇತ್ತು ಅಂತ ಅದೇ ಸ್ವಲ್ಪ ನಿಲ್ಲಿಸು"
"ಓಹ್ ಹೌದಲ್ವಾ ಹೇಳಿದ್ದೆ ಯಾವಾಗ ಅಕ್ವೈರ್ ಮಾಡಿಕೊಂಡರು ಚೆನ್ನಾಗಿಯೇ ಕಟ್ಟಿದ್ದರು ಅನ್ಸುತ್ತೆ" . ಶುಭಾಂಕ್ ಕಾರ್ ನಿಲ್ಲಿಸಿದ .

ಮೇನ್ ರೋಡಿನಿಂದ ಸುಮಾರು ನೂರು ಮೀಟರ್ ದೂರದಲ್ಲಿತ್ತು
ಕಾಂಪೌಂಡ್ ಒಡೆದು ಹೋಗಿತ್ತು
ಮೊದಲನೇ ಪ್ಲ್ಹೋರ್‍ ಅರ್ಧ ಬಿದ್ದು ಹೋಗಿದೆ.
ಅದೇ ಮನೆಯಲ್ಲಿ ತಾನು ಆಟವಾಡಿದ್ದು. ಇಲ್ಲೇ ತನ್ನ ಓಡಾಟ .ಮೊದಲಿದ್ದ ಬಾಡಿಗೆ ಮನೆಯಲ್ಲಿ ನೀರಿಗೆ ಪರದಾಟ ಓನರ್ ನ ಕಾಟ ಸಹಿಸಿ ಸಹಿಸಿ ಅಪ್ಪ ಹಣ್ಣಾಗಿ ಹೋಗಿದ್ದರು. ತಾಳಲಾರದೆ ವಿ ಆರ್ ಎಸ್ ತೆಗೆದುಕೊಂಡು ಬೇಗೂರಿನ ಹೊರವಲಯದಲ್ಲಿ ಯಾವಾಗಲೋ ಕೊಂಡಿದ್ದ ಸೈಟನಲ್ಲಿ ಮನೆ ಕಟ್ಟಲಾರಂಭಿಸಿದರು.
ಅಂದು ಅಮ್ಮ ತನ್ನ ಕೊರಳಲ್ಲಿದ್ದ ಮಾಂಗಲ್ಯದ ಸರ ತೆಗೆದುಕೊಟ್ಟಿದ್ದರು." "ರೀ ನಮ್ಮದೇ ಒಂದು ಮನೆ ಆದರೆ ಎಷ್ಟು ಚೆನ್ನಾಗಿರುತ್ತೆ. ಆಮೇಲೆ ಚಿನ್ನ ಗಿನ್ನ ಎಲ್ಲಾ" ಮತ್ತೆ ಚಿನ್ನದ ಮಾಂಗಲ್ಯ ಅಮ್ಮನ ಕೊರಳಲ್ಲಿ ಕಾಣುವ ದಿನ ಬರಲೇ ಇಲ್ಲ

ಅಪ್ಪ ಮನೆ ಕಟ್ಟಿದ್ದರು . ಅದು ಬರೀ ಮನೆಯಾಗಿರಲಿಲ್ಲ.ತಮ್ಮ ಕುಟುಂಬದ ಭಾಗವೇ ಆಗಿ ಹೋಗಿತ್ತು . ಮನೆಯಲ್ಲಿ ಏನೋ ಸಂಭ್ರಮ . ಸ್ವಂತ ಮನೆಯ ಮೇಲೆ ಕೇವಲ ಹಕ್ಕೊಂದೇ ಅಲ್ಲ ಮಮತೆ ಪ್ರೀತಿ ,ವಾತ್ಸಲ್ಯ. ಅಮ್ಮನಂತೂ ಮನೆಗೆ ಎಷ್ಟೊಂದು ಅಲಂಕಾರ ಮಾಡುತ್ತಿದ್ದಳು.
ಮನೆಯ ಮುಂದೆ ತೋಟ. ತೋಟದ ಅಷ್ಟೂ ಗಿಡಕ್ಕೆಲ್ಲಾ ಭಾವಿಯಿಂದ ನೀರು ಸೇದಿ ಹಾಕುತ್ತಿದ್ದಳು. ದಣಿವೆಂಬುದೇ ಇರುತ್ತಿರಲಿಲ್ಲ ಅವಳಿಗೆ.
ಎರೆಡು ಫ್ಲೋರ್ ಮನೆಯಲ್ಲಿ ಆಟವೇ ಆಟ .ಕರೆಂಟ್ ಇರಲಿಲ್ಲ. ಆದರೂ ಆ ಚಿಮಣಿಯಲ್ಲಿಯೇ ಸಾಗಿದ ವಿದ್ಯಾಭ್ಯಾಸ . ಬಾವಿಯಲ್ಲಿ ಇಂಗದ ನೀರು. ನಿರ್ಜನ ಪ್ರದೇಶ. ಎಲ್ಲೋ ದೂರದಲ್ಲಿದ್ದ ಶಾಂತ ಆಂಟಿಯ ಮನೆ . ಅಪ್ಪನ ಲೂನಾದಲ್ಲಿ ತನ್ನ ಸ್ಕೂಲಿಗೆ ಪಯಣ.
ಹಾಗು ಹೀಗೂ ಆ ಏರಿಯಾಗೆ ಕರೆಂಟ್ ಲೈನ್ ಬಂದಿತ್ತು
ಮನೆಯಲ್ಲಿ ಕರೆಂಟ್ ಬಂದಿತ್ತು. ಎಸ್ ಎಸ್ ಎಲ್ ಸಿ ಓದುತ್ತಿದ್ದ ಮಗಳಿಗೆ ಅನುಕೂಲವಾಗಲೆಂದು ಅಪ್ಪ ಹಾಕಿಸಿದ್ದರು
ಆಗಲೇ ಸಿಡಿಲಿನಂತಹ ಸುದ್ದಿ
ಈ ಮನೆ ಸರಕಾರಿ ರಸ್ತೆಗೆ ಆಹುತಿಯಾಗುತ್ತಿತ್ತು.
ಅಪ್ಪ ಕುಸಿದಿದ್ದರು. ಅಮ್ಮನ ಅಳು ಕಣ್ಣಿಗೆ ಕಟ್ಟಿದಂತಿತ್ತು.
ಬೀದಿ ನಾಯಿಗಳನ್ನು ಅಟ್ಟುವಂತೆ ಅವರುಗಳು ಅಟ್ಟಿದ್ದರು ತಮ್ಮನ್ನು.
ಸ್ವಂತ ಮನೆ ಕಳೆದುಕೊಂಡ ದು:ಖದಲ್ಲಿ ಹಾಸಿಗೆ ಹಿಡಿದ ಅಪ್ಪ ಮತ್ತೆ ಮೇಲೇಳಲೇ ಇಲ್ಲ.
ಎಷ್ಟೋ ಜನ ದಿನಾ ಪ್ರತಿಭಟಿಸುತ್ತಿದ್ದರು.
ಅಮ್ಮ ಮಾತ್ರ ಕಲ್ಲಾಗಿಬಿಟ್ಟಳು
ಮಗಳನ್ನು ಓದಿಸಿ ಅವಳಿಗೆ ಮದುವೆ ಮಾಡುವವರೆಗೆ ಉಸಿರು ಬಿಗಿ ಹಿಡಿದ್ದಿದ್ದ ಜೀವ ಅಪ್ಪನನ್ನು ಅರಸಿ ಹೊರಟಿಯೇ ಬಿಟ್ಟಿತ್ತು.
"ಸ್ಮಿತಾ ನಾನು ಕೇಳಿದ್ದು ಯಾವಾಗ ಅಕ್ವಿಸಿಷನ್ ಆಗಿದ್ದು ಅಂತ ಯಾಕೆ ಮಾತಾಡ್ತಾ ಇಲ್ಲ?"ಶುಭಾಂಕ್ ಹಿಡಿದು ಆಡಿಸಿದ
ನೆನಪುಗಳ ಮೂಟೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮನಸು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ.
ದಣಿವಾಗಿ ಹೋಗಿದ್ದೆ
ಮನೆ ., ಹೆತ್ತವರು ,ನೆಂಟರು ಯಾವುದೂ ಇರದೆ ಪರದೇಶಕ್ಕೆ ಹೋಗಿ ಪರದೇಶಿಯಾಗಿ ಹೋಗಿಬಿಟ್ಟಿದ್ದೆ.
" ಸ್ಮಿತಾ ಆರ್ ಯು ಆಲ್ ರೈಟ್?" ಶುಭಾಂಕ್ ಪ್ರಶ್ನಿಸಿದ
"ಮಮ್ಮ ಆ ಮನೇನ ನೋಡೋಣ ಬಾಮ್ಮ" ನಿಶು ಕರೆಯುತ್ತಿದ್ದ

ನನಗೆ ನೋಡುವುದು ಬೇಕಿರಲಿಲ್ಲ. ಶುಭಾಂಕನ ಮುಂದೆ ಕುಸಿಯುವುದು ಬೇಕಿರಲಿಲ್ಲ. ಮತ್ತೊಮ್ಮೆ ಎಮೋಷನಲ್ ಫೂಲ್ ಆನ್ನಿಸಿಕೊಳ್ಳುವುದು ಬೇಕಿರಲಿಲ್ಲ

"ಶುಭಾಂಕ್ ನಾವು ಹೋಗೋಣ ಮುಹೂರ್ತಕ್ಕೆ ಲೇಟ್ ಆಗುತ್ತೆ. ನಿಶು ಈಗ ಬೇಡ ಇನ್ನೊಂದು ಸಲ ನೋಡೋಣ ಆಯ್ತಾ?"
ಶುಭಾಂಕ್ ಕಾರ್ ಸ್ಟಾರ್ಟ ಮಾಡಿದ

ಕಾರ್ ಮುಂದೆ ಹೋಗುತ್ತಿದ್ದಂತೆ ಅಪ್ಪನ ಮನೆ ಹಿಂದೆ ಹೋಗಲಾರಂಭಿಸಿತು.
ಇತ್ತ ಭಾವನೆಗಳನ್ನು ವಾಸ್ತವತೆ ಒತ್ತುವರಿ ಮಾಡಿಕೊಳ್ಳುತ್ತಿತ್ತು.













Monday, June 28, 2010

ಮಾಯವಾದ ಮುಖದ ಮೇಲಿನ ಕಲೆಗಳು

ಸುನಂದಾಗೆ ಇತ್ತೀಚಿಗೆ ಕನ್ನಡಿ ನೋಡಿಕೊಂಡಾಗೆಲ್ಲಾ ಸಂತೋಷ. ಇತ್ತೀಚಿಗೆ ಅವಳ ಮುಖದ ಮೇಲಿನ ಕಲೆಗಳು, ಕಾಣಲಾರದವಾಗಿದ್ದವು. "ರೀ ನನ್ನಮುಖದಲ್ಲಿ ಕಲೆಗಳೆಲ್ಲಾ ಕಡಿಮೆ ಆಗ್ತಾ ಇವೆ" ಖುಷಿ ಇಂದಲೇ ಹೇಳುತ್ತಿದ್ದಳು. "ಅಬ್ಬಾ ಆ ಕಲೆಗಳು ಎಷ್ಟು ದೊಡ್ಡ ದೊಡ್ಡದವಾಗಿದ್ದವು ಕನ್ನಡಿ ನೋಡೋಕೆ ಬೇಜಾರಾಗುತ್ತಿತ್ತು. ಈಗ ನೋಡಿ ಎಲ್ಲಾ ಕಡಿಮೆಯಾಗಿ ಎಷ್ಟು ಚೆನ್ನಾಗಿ ಕಾಣಿಸ್ತಾ ಇದ್ದೇನೆ. "
ಗಂಡ ಹೌದೆಂದು ತಲೆಯಾಡಿಸುತ್ತಿದ್ದ. ಪುಟ್ಟ ಮಗನನ್ನೂ ಕೇಳಿ ಖಾತ್ರಿ ಪಡಿಸಿಕೊಳ್ಳುತ್ತಿದ್ದಳು. ಆದರೆ ತಾನೇನೂ ಹಚ್ಚಿಕೊಳ್ಳದೆ ಕಡಿಮೆಯಾಗ್ತಿರೋದು ಹೇಗೆ ಎಂಬುದೇ ಅವಳಿಗೆ ಗೊತ್ತಾಗುತ್ತಿರಲಿಲ್ಲ . ಆದರೂ ತಾನು ಬರ ಬರುತ್ತಾ ಸುಂದರವಾಗಿ ಕಾಣುತ್ತಿರುವುದು ಅವಳಿಗೆ ಅರಿವಾಯ್ತು
ಹೌದು ಆ ಕಲೆಗಳು ಇದ್ದುದುರಿಂದಲೇ ಅವಳ ಮದುವೆ ನಿಧಾನಕ್ಕೆ ಆಯ್ತು. ತಂಗಿಯರ ಮದುವೆ ಎಲ್ಲಾ ಆದ ಮೇಲೆ ಕಷ್ಟ ಪಟ್ಟು ಹೆತ್ತವರು ರವಿಯನ್ನು ಹುಡುಕಿ ಕಟ್ಟಿದ್ದರು. ಈಗಾಗಲೇ ಅವಳಿಗೆ ೩೫ ವರ್ಷ. ಆ ಕಲೆಗಳೆಂದರೆ ನರಕ. ಕನ್ನಡಿ ನೋಡಲೇ ಹೆದರಿಕೊಳ್ಳುತ್ತಿದ್ದಳು. ಆ ಕಲೆ ಹೇಗಾದರೂ ಮಾಯವಾಗಬಾರದೆ ಎಂದುಎಷ್ಟು ಸಲ ಬೇಡಿಕೊಂಡಿದ್ದಳೋ. ಈಗ ಅದಾಗಿಯೇ ಕಡಿಮೆ ಆಗುತ್ತಿರುವುದು ಸಂತಸವನೀಯತೊಡಗಿತು
ಕಾಲ ಹಾಗೆ ಇರೋದಿಲ್ಲ
ಹಾಗೆಯೇ ಅವಳಿಗೆ ಕಣ್ಣು ಮಸುಕು ಮಸುಕಾಗುತ್ತಿದ್ದೆ ಎಂದನಿಸಿತು ಬಸ್ಸಿನ ನಂಬರ್ ದೂರದಿಂದ ಕಾಣಿಸುತ್ತಿಲ್ಲ ಎಂದನಿಸಲಾರಂಭಿಸಿತು.ಆಫೀಸಿನ ಕಡತಗಳು ಅಕ್ಷರಗಳು ನಾಟ್ಯ ಮಾಡಲಾರಂಭಿಸಿದಾಗ
ನಾರಾಯಣ ನೇತ್ರಾಲಯಕ್ಕೆ ಹೋಗಿ ಬಂದಳು. ಎರೆಡು ದಿನದಲ್ಲಿ ಕಣ್ಣಿಗೆ ಕನ್ನಡಕ ಬಂದಿತು
ಕನ್ನಡಕ ಧರಿಸಿ ಕನ್ನಡಿಯ ಮುಂದೆ ನಿಂತಳು.ಅರೆ ಕಲೆಗಳು ಮತ್ತೆ ಕಾಣಿಸಲಾರಂಭಿಸಿದವು. ಸತ್ಯ ತಲೆಗೆ ಹೊಳೆಯಿತು. ಕೂಡಲೇ ಕನ್ನಡಕ ಬಿಚ್ಚಿದಳು
ಈಗ ಸುನಂದ ಕನ್ನಡಿಯ ಮುಂದೆ ನಿಂತಾಗೆಲ್ಲಾ ಕನ್ನಡಕ ತೆಗೆದೇ ನಿಲ್ಲುತ್ತಾಳೆ . ತನ್ನ ಮುಖದ ಕಲೆಗಳು ಕಾಣಬಾರದೆಂದು