Friday, April 1, 2011

ಅಷ್ಟಕ್ಕೂ ಈ ಹಿರಿಯ ಜೀವಗಳು ನಮ್ಮನ್ನು ಕೇಳುವುದಾದರೂ ಏನು

ನೆನ್ನೆ ಬೆಳಗ್ಗೆ ಬನ್ನೇರುಘಟ್ಟದ ರಸ್ತೆಯಲ್ಲಿರುವ ಜ್ನಾನಾಶ್ರಮಕ್ಕೆ ಭೇಟಿ ನೀಡಿದ್ದೆ. ನಮ್ಮ ದೂರದ ನೆಂಟರೊಬ್ಬರು(ದೊಡ್ಡತ್ತೆ ಆಗಬೇಕು ವರಸೆಯಲ್ಲಿ) ಅಲ್ಲಿನ ವೃದ್ದಾಶ್ರಮದಲ್ಲಿ ಇದ್ದಾರೆ.
ಮಕ್ಕಳಿಲ್ಲದ ಅವರು ಜೀವನದ ಈ ಸಂಧ್ಯಾ ಕಾಲದಲ್ಲಿ ಒಡಹುಟ್ಟಿದ ಯಾರೊಡನೆಯೂ ಇರಲಾಗದೆ ಇಲ್ಲಿ ಬಂದು ಸೇರಿದ್ದಾರೆ. ಸುಮಾರು ಎಂಬತ್ತು ಜನ ವೃದ್ದರಿದ್ದಾರೆ ಅಲ್ಲಿ
ಅಲ್ಲಿ ಇಳಿಯುತ್ತಿದ್ದಂತೆ ಮೊತ್ತ ಮೊದಲು ನಾನು ಗಮನಿಸಿದ್ದು ಯಾರೋ ಬಂದರೆಂಬ ಸಂಬ್ರಮ ಅಲ್ಲಿನ ಎಲ್ಲಾ ಹಿರಿಯ ಜೀವಿಗಳ ಮೊಗದಲ್ಲಿ ಎದ್ದು ಕಾಣುತ್ತಿತ್ತು
ತಮ್ಮವರ್ಯಾರಾದರೂ ಬಂದರೇನೋ ಎಂದೂ ಇಣುಕಿ ನೋಡಿದವರೂ ಸಹಾ.
ಹಾಗೆಯೇ ನಮ್ಮ ದೂಡ್ಡತ್ತೆ ಇರುವ ರೂಮಿಗೆ ಬಂದೊಡನೆ ಸುತ್ತ ಮುತ್ತಲ್ಲಿದ್ದ ವೃದ್ದರೆಲ್ಲರೂ ಬಂದು ಸುತ್ತುವರೆದರು
ಯಾರು, ಏನು , ಎತ್ತ ಹೀಗೆ ಅನೇಕ ಪ್ರಶ್ನೆಗಳಿಗೆ ನಮ್ಮ ದೊಡ್ಡತ್ತೆ ಉತ್ತರಿಸುತ್ತಿದ್ದರು
ಎಲ್ಲಾ ಸೌಕರ್ಯಗಳಿದ್ದೂ ಆ ಹಿರಿಯ ಜೀವಿಗಳ ಮುಖದಲ್ಲಿದ್ದ ಏನೋ ಕೊರತೆ ನನ್ನನ್ನು ಕಾಡಿತು.
ಹಾಗೆ ಪಕ್ಕದ ರೂಮಿನ ವೃದ್ದ ದಂಪತಿಗಳನ್ನು ಮಾತನಾಡಿಸಿದೆ

ಇಂದಿನ ದಾವಂತ ಯುಗದಲ್ಲಿ ತಾವಿದ್ದರೆಮಕ್ಕಳಿಗೆ ತೊಂದರೆಯಾಗಬಹುದೆಂಬ ಯೋಚನೆಯಲ್ಲಿ ಈ ದಂಪತಿಗಳು ಇಲ್ಲಿ ಬಂದು ವಾಸವಾಗಿದ್ದಾರೆ. ಬಂದು ಮೂರು ವರ್ಷವಾಯಿತಂತೆ
ಸೇರಿಸಲೆಂದು ಬಂದು ಹೋದ ಮಗ ಇತ್ತ ಕಡೆ ತಲೆ ಹಾಕಿಲ್ಲವಂತೆ. ಇವರಿಗೆ ಪೆನ್ಶನ್ ಬರುವುದರಿಂದ ಹಣಕ್ಕೆ ಯಾವ ತೊಂದರೆಯೂಇಲ್ಲ
ಆದ್ರೆ ಅಷ್ಟು ಕಷ್ಟ ಪಟ್ಟು ಬೆಳಿಸಿದ ಮಗ ಬರಲಿಲ್ಲವಲ್ಲ ಎಂಬುದು ದೊಡ್ಡ ಕೊರತೆ.ಫೋನ್ ಮಾಡಿದರೆ ಬಿಸಿ ಇದ್ದೇನೆ ಆಮೇಲೆ ಮಾಡು ಅನ್ನುತ್ತಾನಂತೆ. ನಿಮಗೆ ಹಣ ಬೇಕಾದರೆ ಕಳಿಸುತ್ತೇನೆ ಎನ್ನುತ್ತಾನೆ.ನಮಗೆ ಬೇಕಿರುವುದು ಹಣವಲ್ಲ ಅವನ ಕಾಳಜಿ ಎಂದು ಅತ್ತುಕೊಂಡರು.
ಅವರ ರೂಮಿನಪಕ್ಕದಲ್ಲಿಯೇ ಮತ್ತೊಂದು ರೂಮಿನಲ್ಲಿನ ವೃದ್ದೆ ಯಾರೊಂದಿಗೂ ಮಾತನಾಡುವುದಿಲ್ಲ.ಇವರೇ ಹೇಳಿದರು.
ಗಂಡ ಸತ್ತು ಹೋದನಂತರ ಮಗಳನ್ನು ತುಂಬಾ ಕಕ್ಕುಲಾತಿಯಿಂದ ಬೆಳೆಸಿದರಂತೆ. ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದಾರಂತೆ. ಕೊನೆಗೆ ಮಗಳು ಇಲ್ಲಿ ಬಿಟ್ಟು ಹೋದಳಂತೆ.ಹಣಕ್ಕೆ ತೊಂದರೆ ಆದರೂ ಹೇಗೋ ನಡೆಸುತ್ತಿದ್ದಾರೆ
ಮೂರು ಜನ ಗಂಡು ಮಕ್ಕಳಿದ್ದೂ ವಿಧುರ ತಂದೆಯನ್ನು ನೋಡಿಕೊಳ್ಳಲಾಗದೆ ಇಲ್ಲಿ ಬಿಟ್ಟು ಹೋದವರು.
ಅಪ್ಪನನ್ನು ಹೊರೆ ಎಂದು ಜರೆದವರು.ಒಂದೇ ಎರೇಡೆ ಎಷ್ಟೊಂದು ಕಥೆಗಳು


ಜೀವಕ್ಕೆ ಜೀವ ಕೊಟ್ಟು ಬೆಳೆಸುತ್ತೇವೆ. ಆದರೆ ಕೊನೆಗೆ ಸಾಯುವಾಗ ಜೀವಕ್ಕೆ ಒಂದು ತೊಟ್ಟೂ ನೀರು ಕೊಡುವುದಿಲ್ಲ ಎಂದ ಆ ಹಿರಿಯ ತಾಯಿಯ ನುಡಿ ಇನ್ನೂ ಕಿವಿಯಲ್ಲಿಯೇ ಹಾಗೆಯೇ ಇದೆ

ನಮ್ಮ ಕೈ ಕಾಲು ಚೆನ್ನಾಗಿ ಆಡುವ ತನಕ ಮಕ್ಕಳು , ನಂತರ ಯಾರೋ ಬೇರೆಯವರು ಎಂದರು ಮತ್ತೊಬ್ಬರು


ಎಲ್ಲಕ್ಕೂ ಆಘಾತವಾದ ವಿಷಯಗಳೆಂದರೆ ಮೇಲೆ ನೋಡಿದವರ ಮಕ್ಕಳೆಲ್ಲರೂ ಒಳ್ಳೆಯ ಹುದ್ದೆಯಲ್ಲಿರುವವರು, ಮಗ ಸೊಸೆ, ಮಗಳು ಅಳಿಯ
ಎಲ್ಲರೂ ದುಡಿಯುವವರೇ.
ಹಾಗೂ ಮತ್ತೊಂದು ಅರಿವಾದುದು ಈ ತಂದೆತಾಯಿಗಳು ಅವರ ಮೊಮ್ಮಕ್ಕಳನು ನೋಡಿಕೊಂಡು ಮನೆ ವಾರ್ತೆ ಗಮನಿಸಿಕೊಂಡು ಇದ್ದಷ್ಟೂ ದಿನವೂ ಅವರಿಗೆ ಅವರವರ ಮಕ್ಕಳ ಮನೆಯಲ್ಲಿ ಸ್ಥಾನ ಸಿಕ್ಕಿದೆ. ಯಾವುದೋ ಅಪಘಾತಕ್ಕೆ ಸಿಲುಕಿ, ಅಥವ ಅನಾರೋಗ್ಯಕ್ಕೆ ಸಿಲುಕಿ ಹಾಸಿಗೆ ಹಿಡಿದ ಮೇಲೆ ಹೆತ್ತವರೇ ಹೊರೆಯಾಗಿದ್ದಾರೆ. ನಂತರ ಅವರ ಸ್ಥಾನ ಇಲ್ಲಿಗೆ ಬಂದಿದೆ.


ಏಕೆ ಹೀಗೆ ಈ ಓಲ್ಡ್ ಏಜ್ ಹೋಮ್‍ಗಳು ಬಂದು ಯಾರಿಗೆ ಅನುಕೂಲ ಮಾಡಿಕೊಟ್ಟಿದೆ. ವೃದ್ದಾಶ್ರಮದಲ್ಲಿ ನೆಮ್ಮಧಿಯಾಗಿರುತ್ತೇವೆ ಎಂದುಕೊಳ್ಳುವ ಮಾತು ನಿಜಕ್ಕೂ ಸುಳ್ಳು . ಹೆತ್ತ ಮಕ್ಕಳನ್ನು ಜವಾಬ್ದಾರಿ ಮುಕ್ತರನ್ನಾಗಿ ಮಾಡುತ್ತದೆ ನಿಜ ಆದರೆ ಆ ಮಕ್ಕಳ ಪ್ರೀತಿ ಕೊಡಲಾಗುತ್ತದೆಯೇ ಇವುಗಳಿಂದ?
ಅಲ್ಲಿ ಇರುವವರಾದರೂ ನೆಮ್ಮದಿ ಇಂದ ಇದ್ದಾರೆಯೇ?

ಸದಾ ತಮ್ಮವರ್ಯಾರಾದರೋ ಬರುತ್ತಾರೇನೋ ಎಂಬ ನಿರೀಕ್ಶೆ. ಹೆತ್ತ ಮಗ ಮಗಳನ್ನು ಬಿಟ್ಟಿರಬೇಕಾದ ಪರಿಸ್ಥಿತಿ
ನಿಮಿಷ ನಿಮಿಷಕ್ಕೂ ಕಾಡುವ ನೆನಪುಗಳು, , ತಮ್ಮವರಿಂದಲೇ ದೂರಿಕರಿಸಿಕೊಂಡ ನೋವು ಸದಾ ಹಿಂಸಿಸುತ್ತವೆ.

ಅಷ್ಟಕ್ಕೂ ಈ ಹಿರಿಯ ಜೀವಗಳು ನಮ್ಮನ್ನು ಕೇಳುವುದಾದರೂ ಏನು
ಒಂದೆರೆಡು ಹೊತ್ತು ಊಟ, ಪ್ರೀತಿ, ಕೊಂಚ ಕಾಳಜಿ, ವಯೋ ಸಹಜ ಸಿಟ್ಟಿನ ಮಾತುಗಳಿಗೆ ಸಮಾಧಾನದ ಉತ್ತರ
ಇಷ್ಟನ್ನೂ ಕೊಡಲಾರದಷ್ಟೂ ಜಿಪುಣರಾಗುತ್ತಿದ್ದಾರೆಯೇ ಇಂದಿನ ಮಕ್ಕಳುಗಳು.

ನಾನು ಅಲ್ಲಿಗೆ ಭೇಟಿ ಕೊಟ್ಟ ಸಮಯದಲ್ಲಿ ಗಮನಿಸಿದ ಮತ್ತೊಂದು ಅಂಶವೆಂದರೆ ನನ್ನನ್ನು ಪ್ರೀತಿಯಿಂದ ಮಾತನಾಡಿಸಿದ್ದು. ಯಾವುದೋ ಕಾಲದಿಂದ ಪರಿಚಯವಿರುವಂತೆ ಮಾತನಾಡಿದರು. ಅವರುಗಳ ಕಣ್ಣಲ್ಲಿ ಏನೋ ಸಮಾಧಾನ. ಒಂದು ರೀತಿಯ ಆನಂದ. ಕೆಲವೆರೆಡು ಹಿರಿಯರು ನನಗೆ ಅರಿಶಿನ ಕುಂಕುಮವನ್ನೂ ಕೊಟ್ಟರು.
ನನಗಂತೂ ಕಣ್ಣಲ್ಲಿ ನೀರು ಬಂತು

ಇಂತಹ ಸಮಯದಲ್ಲಿ ಅವರಿಗೆ ನಮ್ಮಿಂದ ಏನಾದರೂ ಸಂತೋಷ ಕೊಡಲಿಕ್ಕಾಗುತ್ತದೆಯೇ ಎಂದು ಯೋಚಿಸಿದೆ
ಆಗಲೇ ನಮ್ಮ ಮಗಳ ಹುಟ್ಟು ಹಬ್ಬ ಹಾಗು ಮತ್ತೊಂದು ಯಾವುದಾದರೂ ಹಬ್ಬವನ್ನು ಅವರೊಂದಿಗೆ ಆಚರಿಸಿದರೆ ಆ ಹಿರಿಯಮನಸುಗಳಿಗೆ ಆನಂದವಾದರೂ ಆದೀತು ಎಂದನಿಸಿತು. ಅದನ್ನು ಕಾರ್ಯಗತಗೊಳಿಸಬೇಕಷ್ಟೆ.



ಇಂತಹ ಪರಿಸ್ಥಿತಿ ನಮಗೆ ಬರಬಾರದೆಂದರೆ, ನಮ್ಮ ಹಿರಿಯರನ್ನು ನಮ್ಮ ಮಕ್ಕಳ ಮುಂದೆ ಹೀಗಳೆಯಬಾರದು, ಸಾಧ್ಯವಿದ್ದಷ್ಟೂ ಸಂತೋಷವನ್ನು ಕೊಡಬೇಕೆ ಹೊರತು ನೋವನ್ನು ಹಂಚಬಾರದು.
ಹೌದು ಕೆಲಸದ ಒತ್ತಡವಂತೂ ಇದ್ದೇ ಇರುತ್ತದೆ. ಆದರೆ ಅದನ್ನು ಮೀರಿದ ಒತ್ತಡವಿದ್ದಾಗಲೂ ನಮ್ಮನ್ನು ಪ್ರೀತಿಯಿಂದ ನೋಡಿಕೊಂಡವರಲ್ಲವೇ ಅವರು. ಅವರು ನಮಗೆ ಕೊಟ್ಟ ಪ್ರೀತಿಯ ಒಂದಂಶವನ್ನಾದರೂನಾವು ಕೊಡಬೇಕು.ನಾವು ಬಿತ್ತಿದಂತೆ ಬೆಳೆ ಎಂಬುದನ್ನುನೆನಪಿಟ್ಟು ಕೊಂಡರೆ ಓಲ್ಡ್ ಏಜ್ ಹೋಮ್‌ಗಳ ಸಂಖ್ಸ್ಯೆ ಕಡಿಮೆ ಆಗಬಹುದು
ಏನಿದ್ದರೂ ಅವರ ವರ್ತಮಾನ ನಮ್ಮಭವಿಷ್ಯವಾಗಬಾರದಷ್ಟೇ?

Wednesday, March 23, 2011

ಕ್ಷಮಿಸು ನಾ ರಾಧೆಯಲ್ಲ ಭಾಗ ೨

ಅಂದು ಮತ್ತೆ ಕಿರಣ್ ಬಂದ ."ಪ್ರಿಯಾ" ಮೊತ್ತ ಮೊದಲ ಬಾರಿಗೆ ನನ್ನ ಹೆಸರನ್ನು ಕರೆದಾಗ ಮೈಯಲ್ಲಿ ಎನೋ ಅರಿಯದ ಪುಳಕ. ಅಭಿ ಮೊದಲ ರಾತ್ರಿ ಹತ್ತಿರ ಬಂದಾಗಲೂ ಹೀಗಾಗಿರಲಿಲ್ಲವೇನೋ "ಸಾರಿ ನಾನು ತುಂಬಾ ದಿನ ಹೀಗೆ ನಿರೀಕ್ಷೆ ಇಟ್ಟುಕೊಂಡು ಇರೋಕೆ ಆಗ್ತಾ ಇಲ್ಲ, ನಾನು ಹೇಳುತ್ತಿರೋದು ಮಾಡುತ್ತಿರೋದು ತಪ್ಪು ಅಂತ ನನಗೂ ಗೊತ್ತು . ಆದರೂ ಒಂದು ಮಾತನ್ನು ನಿಮ್ಮ ಹತ್ತಿರ ಕೇಳಲೇಬೇಕು ಅಂತ ನಿರ್ಧಾರ ಮಾಡಿದ್ದೇನೆ"
ನನಗೆ ಗೊತ್ತಿತ್ತು ಅವನು ಏನು ಕೇಳುತ್ತಾನೆಂದು ಆದರೆ ನಾನು ಅದಕ್ಕೆ ಮಾನಸಿಕವಾಗಿ ಸಿದ್ದಳಿರಲಿಲ್ಲ . ಹೇಗಾದರೂ ತಪ್ಪಿಸಿಕೊಳ್ಳಬೇಕಿತ್ತು. "ಕಿರಣ್ ನನಗೆ ಇವತ್ತು ಮನಸು ಸರಿ ಇಲ್ಲ . ಮಾತಿಗಿಂತ ಏಕಾಂತವೇ ಲೇಸಾಗಿದೆ . ಇಂದು ನಾನು ಯಾವ ಮಾತಿಗೂ ಬರೋದಿಲ್ಲ. ಲೀವ್ ಮಿ ಅಲೋನ್ ಪ್ಲೀಸ್"
ಕಿರಣ್ ಸಪ್ಪೆ ಮುಖ ಮಾಡಿಕೊಂಡು ಹೊರಟು ಹೋದ .
ಮನದಲ್ಲಿ ಏನೋ ನೋವು.ತನಗೂ ಅವನಿಗೂ ಯಾವರೀತಿಯಲ್ಲಿ ಸಮ?ವಯಸ್ಸಿನಲ್ಲಿ ಹುದ್ದೆಯಲ್ಲಿ ಎಲ್ಲಾ ರೀತಿಯಿಂದಲೂ ಆತ ಇನೂ ಚಿಗುರು ನಾನೋ ಬಲಿತ ಮರ.
ಚಿಗುರಿಗೆ ಮರ ಆಸರೆಯಾಗಬಲ್ಲುದೆ ಹೊರತು ಮರಕ್ಕೆ ಚಿಗುರು ಎಲ್ಲಿಯ ಆಸರೆ.ಆದರೇನು ಮನಸ್ಸು ಮರ್ಕಟ , ವಿವೇಕದ ಮಾತನ್ನು ಆಲಿಸಲು ಒಪ್ಪುತ್ತಿಲ್ಲ.
ವಿವೇಕ ಹಾಗು ಆಸೆಯ ಮಧ್ಯೆ ಯಾವತ್ತಿಗೂ ಆಸೆಗೆ ಜಯ ಹಾಗೆಯೇ ನನಗೂ ಆಗುತ್ತೇನೋ . ?
ಮುಂದೊಂದೆರೆಡು ದಿನ ಅವನನ್ನು ಭೇಟಿಯಾಗುವ ಅವಕಾಶ ತಪ್ಪಿಸಿಕೊಂಡೆ
ಆದರೂ ಅವನನ್ನು ನೋಡಬೇಕೆಂಬ ಆಸೆ ಬಲವಾಗಿಯೇ ಇತ್ತು.ಅದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ
ರಾತ್ರಿಗಳಲ್ಲಿ ಅಭಿಯಿಂದ ದೂರ ಉಳಿಯಲಾರಂಭಿಸಿದೆ.
ಅಭಿಗೂ ಅಂತಹ ಅನುಮಾನ ಬರಲಿಲ್ಲ.
ಇಂತಹ ಇಕ್ಕಟ್ಟಿನ ಸಂಧರ್ಭದಲ್ಲೆ ಜರ್ಮನಿಯ ಪ್ರಾಜೆಕ್ಟ್ ಒಂದಕ್ಕೆ ನನ್ನ ಮೂರು ತಿಂಗಳ ಸಮಯ ಬೇಕಿತ್ತು.
ಇಂತಹದೊಂದು ಅವಕಾಶಕ್ಕೆ ನಾನು ಕಾಯುತ್ತಿದ್ದೆ. ನಾನು ನಿರ್ಧರಿಸಬೇಕಿತ್ತು. ಅದಕ್ಕೆ ಎಲ್ಲರಿಂಡ ದೂರವಾಗಿ ಇರುವುದು ಬಹು ಮುಖ್ಯವಾಗಿತ್ತು.
ಚಿದುವನ್ನು ನೋಡಿಕೊಳ್ಳಲು ತಾಯಿಯನ್ನು ಬರಹೇಳಿದೆ.
ಅಭಿ ಖುಶಿಯಾಗಿಯೇ ಕಳಿಸಲು ಒಪ್ಪಿದ.
ಬೇಸರವಾಗಿದ್ದು ಮಾತ್ರ ಕಿರಣ್‌ಗೆ
"ಪ್ರಿಯಾ ನಾನು ನನ್ನಮನಸಿನ ಮಾತು ಹೇಳೋಕೆ ನೀವು ಸಮಯವನ್ನೇ ಕೊಡಲಿಲ್ಲ ಈಗ ಮೂರು ತಿಂಗಳು ನೀವಿಲ್ಲದೆ ನಾನು ಹೇಗಿರಲಿ?"
ನಾನು ಮೌನವಾಗಿದ್ದೆ. ನನಗೆ ಗೊತ್ತು ನನ್ನ ಪ್ರತಿಯೊಂದು ಮಾತು ಬಹಳ ಎಚ್ಚರಿಕೆಯಿಂದ ಆಡಬೇಕಿದೆ. ನನ್ನ ಮಾತು ಅವನಲ್ಲಿ ಯಾವ ಆಸೆಯನ್ನೂ ಉಂಟು ಮಾಡಬಾರದು .
ಈಗ ನಾನು ಎಲ್ಲರಿಂದ ದೂರದಲ್ಲಿ ಬಹುದೂರದಲ್ಲಿದ್ದೇನೆ
ನನ್ನ ಭವಿಷ್ಯದ ಹೆದ್ದಾರಿಯನ್ನು ಹುಡುಕುತ್ತಿದ್ದೇನೆ
ಬಂದು ಎರೆಡು ದಿನಗಳಾಗಿದ್ದವು
ಕಿರಣ್ ಎರೆಡು ಸಲ್ ಫೋನ್ ಮಾಡಿದ್ದ. ಜೀವನದಲ್ಲಿ ಏನೋ ಕಳೆದುಕೊಂಡಿದ್ದೇನೆ ಅನ್ನಿಸುತ್ತಿದೆ ಎಂದು ಮರುಗಿದ್ದ
ಅಭಿಯ ಮೈಲ್ ಮಾತ್ರ ಬಂದಿತ್ತು. ಮನೆಯ ವಾರ್ತೆಗಳ ಬಗ್ಗೆ ಕೊರೆದಿದ್ದ. ತನ್ನ ಕೆಲಸ ಹಾಗು ಮನೆಯ ಮಧ್ಯೆ ಸಮಯವೇ ಇಲ್ಲದಂತಾಗಿದೆ ಎಂದಿದ್ದ.
ನನ್ನ ಕೆಲಸವೂ ಸಾಗುತ್ತಿತ್ತು
ಕಿರಣನ ಇಲ್ಲದಿರುವಿಕೆ ಮೊದಮೊದಲು ಕಾಡತೊಡಗಿತು .
ಅವನ ನೆನಪು ಹಿಂಸಿಸಿತು. ನಂತರ ಮೂರು ದಿನಕ್ಕೆ ಮರೆಯಲಾರಂಭಿಸಿದೆ.
ಚಿದು ಬಳಿಯಲ್ಲಿ ಇಲ್ಲದಿರುವುದು ಹೃದಯಕ್ಕೆ ನೋವುಂಟಾಗತೊಡಗಿತು
ಅವನ ಅಮ್ಮ ಎಂಬ ಮಾತು ತಂಟೆ, ಚೇಷ್ಟೇ ನೆನಪಾಗತೊಡಗಿದವು
ನಾಲ್ಕನೆಯದಿನಕ್ಕೆ
ಅಭಿ ಫೋನ್ ಮಾಡಿದ್ದ
"ಪ್ರಿಯಾ ನೀನಿಲ್ಲ ಅಂದ್ರೆ ಎಷ್ಟು ಬೇಜಾರಾಗುತ್ತೆ ಅಂತ ನಂಗೆ ಈಗ ಗೊತ್ತಾಗ್ತಿದೆ. ನಿನ್ನ ಇಂಪಾರ್ಟೆನ್ಸ್ ನಂಗೆ ಈಗ ತುಂಬಾ ಗೊತ್ತಾಗ್ತಿದೆ. ಯಾವಾಗ ಮೂರು ತಿಂಗಳು ಕಳೆಯುತ್ತೋ ಅನ್ನಿಸ್ತಿದೆ"
ಚಿದೂ ಫೋನ್‍ನಲ್ಲೆ ಅಳಲಾರಂಭಿಸಿದ. ನನಗೂ ಅಳು ಉಕ್ಕಿತು.
ಚಿದು ಹುಟ್ಟಿದ ದಿನದ ನೆನಪಾಯ್ತು.
ಬೆನ್ನ ಹಿಂದೆಯೇ ನನ್ನ ಅಭಿಯ ದಾಂಪತ್ಯ ಜೀವನದ ಸುಖೀ ಕ್ಷಣಗಳು ಅರಿವಿಗೆ ಬರಲಾರಂಭಿಸಿದವು.
ಕಿರಣ್ ಮತ್ತೆ ಮೈಲ್ ಮಾಡಿದ
"ಪ್ರಿಯಾ ಐ ಅಮ್ ಬಿಕಮಿಂಗ್ ಮ್ಯಾಡ್. ಯಾವಾಗ ನೋಡ್ತೀನೋ ಅಂತ ಅಗಿದೆ, ನಾನು ನಿಮ್ಮ ಹತ್ತಿರ ತುಂಬಾ ಅಂದ್ರೆ ತುಂಬಾ ಮಾತಾಡಬೇಕಿದೆ. ಅದೆಲ್ಲಾ ಹೇಳದೆ ಎಲ್ಲಿ ಸತ್ತು ಹೋಗ್ತೀನೊ ಅಂತನ್ನಿಸ್ತಿದೆ"ಅವಲತ್ತುಕೊಂಡ
ರಿಪ್ಲೈ ಮಾಡಲಿಲ್ಲ ಈ ಸಲ.
ಹೀಗೆ ಮೂರು ಸಲವಾದ ನಂತರ ಕಿರಣ್ ಮತ್ತೆ ಮೈಲ್ ಮಾಡಲಿಲ್ಲ. ಮಾಡಿದರೂ ಕೆಲಸದ ವಿಷಯಕ್ಕೆ ಮಾತ್ರ ಮಾಡಿದ್ದಷ್ಟೆ.
ಎರೆಡು ತಿಂಗಳು ಕಳೆಯಿತು.
ಮನಸ್ಸು ಸದೃಡವಾಗಿತ್ತು
ರಾಧೆ ಏಕೆ ಕೃಷ್ಣನ ಮಡದಿಯಾಗಲಿಲ್ಲ ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡಿತ್ತು .ಆದರೆ ಅದಕ್ಕೆ ಉತ್ತರ ಇತ್ತೀಚಿಗೆ ಹೊಳೆಯಲಾರಂಭಿಸಿತು.
ನನಗೆ ಬೇಕಿದ್ದುದ್ದು ನನಗಾಗಿ ಬೇಡುವ ಜೀವ ನಾನಿಲ್ಲದೆ ಬದುಕೇಇಲ್ಲ ಎನ್ನುವ ಮನಸ್ಸು ಅದು ನನ್ನ ಅಭಿಯದೇ ಆಗಿತ್ತು.
ಸಂಸಾರದ ಜವಾಬ್ದಾರಿಯ ಕಾರಣದಿಂದ ಒಬ್ಬರಿಗೊಬ್ಬರು ಅಪರಿಚಿತರಂತೆ ಇದ್ದರೂ ಜೀವನದಲ್ಲಿ ಇಬ್ಬರಿಗೂ ಇಬ್ಬರೂ ಬೇಕಿದ್ದರು
ಆದರೆ ಅದು ನನಗೆ ಕಾಣದೇ ಹೋಯ್ತು. ಕಿರಣನ ಆಕರ್ಷಣೆ ಆ ಅಗತ್ಯವನ್ನು ಮರೆಮಾಚಿತ್ತು.
ಅಭಿಯ ಸಾಂಗತ್ಯದ ಕೊರತೆ ಕಾಡಿದಷ್ಟು ಕಿರಣ್‍ನ ನೆನಪು ಕಾಡಲಿಲ್ಲ.
ಪ್ರಾಜೆಕ್ಟ್ ಯಶಸ್ವಿಯಾಗಿ ಮುಗಿಯಿತು.
ನನ್ನ ಭವಿಷ್ಯದ ಹೆದ್ದಾರಿಯೂ ಸ್ಪಷ್ಟವಾಯ್ತು.
ಮೂರುತಿಂಗಳ ಸುಧೀರ್ಘ ಅವಧಿಯ ನಂತರ ನಾನು ಮನೆಗೆ ಹೋಗಿದ್ದಕ್ಕೆ ಮನೆಯಲ್ಲಿ ಸಂತಸ , ಸಂಭ್ರಮ, ಅಭಿಯಂತೂ "ಇನ್ನೊಮ್ಮೆ ಈ ತರಹ ದೂರ ಕಳಿಸಿದರೆ ಕೆಲಸವೇ ಬೇಡ . ನಂಗೆ ನೀನಿರದೆ ಇರಕಾಗಲ್ಲ. " ಎಂದು ಬೈದ.
ಚಿದೂವಂತೂ ನನ್ನ ಸೆರಗನು ಕಟ್ಟಿಕೊಂಡೆ ಓಡಾಡುತ್ತಿದ್ದ .
ಮೊದಲಬಾರಿಗೆ ನನ್ನ ಅವಶ್ಯಕತೆ, ಜವಾಬ್ದಾರಿ, ಸ್ಥಾನ ಅರ್ಥವಾಯ್ತು. ಇದನ್ನು ಬಿಟ್ಟು ಪ್ರೇಮವೆಂಬ ಮಾಯಾಜಿಂಕೆಯ ಹಿಂದೆ ಓಡುತ್ತಿದ್ದೆನಲ್ಲ ನಾನೆಂಥಾ ಫೂಲ್ ಛೆ.
ಆಫೀಸಿಗೆ ಬಂದೆ .
ಕಿರಣ್‍ನ್ ಕಣ್ಣಲ್ಲಿ ಕಾತುರ, ಸಂತೋಷ ಎಲ್ಲವೂ ಇದ್ದವು.
"ಪ್ರಿಯಾ ಕೊನೆಗೂ ಬಂದಿರಲ್ಲ . ನಿಮ್ಮ್ಮ ಹತ್ತಿರ ತುಂಬಾ ಮಾತಾಡಬೇಕಿದೆ"
ನಾನು ಈ ಸಲ ತಲೆ ಕಣ್ಣನ್ನೇ ದಿಟ್ಟಿಸುತ್ತಾ ನುಡಿದೆ
"ನಿಮ್ಮನ್ನ ಇಲ್ಲಿಂದ ಜಯನಗರ ಬ್ರಾಂಚ್‌ಗೆ ಹಾಕಿದಾರೆ ಅಲ್ಲಿ ನಿಮ್ಮ ಅವಶ್ಯಕತೆ ಇದೆ."
"ಹಾಕಿದ್ದಾರೊ ಅಥವಾ ಹಾಕಿಸಿದ್ದಾರೋ ಪ್ರಿಯಾ "
"ಪ್ಲೀಸ್ ಕಾಲ್ ಮಿ ಮೇಡಮ್. ನಾನು ನಿಮಗಿಂತ ಹತ್ತು ವರ್ಷ ದೊಡ್ಡವಳು . ಮತ್ತೆ ನಿಮಗಿಂತ ಸೀನಿಯರ್. ನೆನಪಿರಲಿ"
"ಮೇಡಮ್ ನನ್ನ ಮನಸಿನ ಮಾತು ?"
"ಕಿರಣ್ ಇದು ಆಫೀಸ್ ನಾನು ನಿಮ್ಮ ಹೆಡ್, ನೀವು ನನ್ನ ಸಬ್ ಆರ್ಡಿನೇಟ್. ಆ ವಿಷ್ಯವಾಗಿ ಏನೊ ಬೇಕಾದರೂ ಮಾತಾಡಲೂ ನಾನು ರೆಡಿ. ಅದಿಲ್ಲವಾದರೆ ನಾನು ನಿಮ್ಮ ಮನಸಿನ ಮಾತಿಗೆ ಸಿಗಲು ಸರಿಯಾದ ವ್ಯಕ್ತಿ ಅಲ್ಲ."
ತಲೆ ತಗ್ಗಿಸಿಕೊಂಡು ಹೋಗುತ್ತಿದ್ದವನನ್ನೆ ನೋಡುತ್ತಾ ಮನಸ್ಸು ಹೇಳಿತು
"ಕ್ಷಮಿಸು ನಾ ರಾಧೆಯಲ್ಲ ಅಗುವುದೂ ಇಲ್ಲ"


( ಈ ಕತೆ ಈಗಾಗಲೆ ಪಬ್ಲಿಶ್ ಮಾಡಿದ್ದರೂ ಏಕೋ ಮತ್ತೊಮ್ಮೆ ಹಾಕಬೇಕೆಂದಿನಿಸ್ತಿತು. ಹಾಗಾಗಿ ಮತ್ತೆ ಬ್ಲಾಗಲ್ಲಿ ಹಾಕಿದ್ದೇನೆ)

ಕ್ಷಮಿಸು ನಾ ರಾಧೆಯಲ್ಲ ಭಾಗ ೧

"ಪ್ರಿಯಾ ಇವತ್ತಿನಿಂದ ನಿಮ್ಮ ಡಿವಿಸನ್‌ಗೆ ಹೊಸ ಮೆಂಬರ್ . " ಶ್ರೀನಾಥ್ ಪರಿಚಯಿಸಿದಾಗ ಕಂಪ್ಯೂಟರ್ ಪರದೆಯಿಂದ ತಲೆ ಎತ್ತಿದವಳಿಗೆ ಹಸನ್ಮುಖಿಯಾದ ಆ ಯುವಕ ಕಾಣಿಸಿದ. ಎಲ್ಲೋ ನೋಡಿದಂತಿದೆ ಎನಿಸಿತಾದರೂ as a Division head ಏನನ್ನೂ ತೋರದೆ ಹಲೊ ಎಂದು ಕೈ ನೀಡಿದೆ ಆತನೂ ತನ್ನ ಹೆಸರನ್ನೂ ಕಿರಣ್ ಎಂದು ಪರಿಚಯಿಸಿಕೊಂಡ ಕ್ಯಾಂಪಸ್ ಇಂಟರ್ವ್ಯೂ ನಲ್ಲಿ ಸೆಲೆಕ್ಟ್ ಆಗಿದ್ದ ಪ್ರತಿಭಾನ್ವಿತ ಯುವಕ ಆತ ಎಂದೂ ತಿಳಿಯಿತು . ಹೆಡ್ ಆಫೀಸ್‍ನಲ್ಲಿ ಟ್ರೈನಿಂಗ್ ಯಶಸ್ವಿಯಾಗಿ ಮುಗಿಸಿ ಇಂದಿನಿಂದ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು.
ಆತನ ಮುಖದಲ್ಲಿ ಗಲಿಬಿಲಿ ಗಾಬರಿ ಎದ್ದು ಕಾಣುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ನೆನೆಪಿಗೆ ಬಂದಿತು . ಇಂದು ಬೆಳಗ್ಗೆ ಕಾರ್ ಡ್ರೈವ್ ಮಾಡುವಾಗ ಬೈಕ್‌ನಲ್ಲಿ ಸಿಕ್ಕ ಯುವಕ ಈತನೇ ಅಲ್ಲವೇ? ಒಮ್ಮೆ ಕಣ್ಣು ಹೊಡೆದು ಸಿಳ್ಳೆ ಹಾಕಿ , ಬ್ಯೂಟಿಫುಲ್ ಎಂದು ಉಸುರಿ ಮಿಂಚಿನಂತೆ ಮಾಯವಾಗಿದ್ದ.
ಮನಸಿನಲ್ಲೇ ಈಡಿಯಟ್ ಎಂದು ಬೈದುಕೊಂಡೆ
ಮದುವೆಯಾಗಿ ಒಂದು ಮಗುವಿನ ತಾಯಿ ತಾನು ತನಗೆ ಇನ್ನೂ ಇಪ್ಪತ್ತು ಮೂರರ ಈ ಫೋರ ಲೈನ್ ಹಾಕುವುದೇ. ಬೆಳಗ್ಗೆ ಸಿಡಿಮಿಡಿಗೊಂಡಿದ್ದ ಮನಸಿಗೆ ಈಗ ಅವನನ್ನು ನೋಡಿ ಇನ್ನಷ್ಟು ಕೋಪ ಬಂದಿತು.
ಅವನಿಗೊಬ್ಬ ಮೆಂಟಾರ್‍ ಅನ್ನು ನೇಮಿಸಿದೆ. ಕಲಾ ಹೋದ ವರ್ಷ ತಾನೆ ಸೇರಿದ್ದಳು ಬಲು ಚುರುಕು ಅವಳು ಮಾಡಬೇಕಾದ ಕೆಲಸವನ್ನೆಲ್ಲಾ ಹೇಳಿ ಕ್ಯಾಬಿನ್‌ಗೆ ಆಗಮಿಸಿದೆ. ಕೆಲಸದಲ್ಲಿ ತನ್ಮಯಳಾದೆ
"ಮೇಡಮ್ " ಕೆಲಸಕ್ಕೆ ಭಂಗ ಬಂದಿತು ತಲೆ ಎತ್ತಿದೆ ಕಿರಣ್ ಬಂದು ನಿಂತಿದ್ದ
ಮೇಡಮ್ ಐಯಾಮ್ ಸಾರಿ ಫಾರ್ ವಾಟ್ ಹ್ಯಾಪೆನ್ಡ್ ಇನ್ ದ ಮಾರ್ನಿಂಗ್" ತಲೆ ಕೆಳಗೆ ಹಾಕಿ ಜೋಲು ಮೋರೆ ಮಾಡಿಕೊಂಡು ಉತ್ತರಿಸಿದ.
ಬೈಯ್ಯಬೇಕೆಂದವಳಿಗೆ ಏಕೊ ಮಾತುಗಳೇ ಬರಲಿಲ್ಲ . ಆತನ ಮುಖ ಲಕ್ಷಣವೇ ಹಾಗಿತ್ತೇನೂ ತಿಳಿಯಲಿಲ್ಲ.
" ಪರವಾಗಿಲ್ಲ ಬಿಡಿ . ನಿಮ್ಮ ವಯಸಿನಲ್ಲಿ ಇದೆಲ್ಲಾ ಕಾಮನ್. ಇನ್ನು ಚಿಕ್ಕ ವಯಸ್ಸು ಹಾಗೆ ಆಡಬೇಕನ್ನಿಸುತ್ತೆ . ಆದರೆ ನನ್ನ ಜಾಗದಲ್ಲಿ ಬೇರಾರಾದರೂ ಇದ್ದರೆ ಖಂಡಿತಾ ಪ್ರಾಬ್ಲಮ್ ಆಗ್ತಿತ್ತು."
"ಇಲ್ಲ ಮೇಡಮ್ ನೀವು ದೊಡ್ಡ ವೇದಾಂತಿ ಥರ ಮಾತಾಡ್ತಾ ಇದೀರಲ್ಲ ನಿಮಗೇನು ತುಂಬಾ ವಯಸ್ಸಾಗಿದೆಯಲ್ಲ. ಇಷ್ಟು ಚಿಕ್ಕ ವಯಸಿನಲ್ಲಿ ಇಡೀ ಡಿವಿಸನ್ ಹೆಡ್ ಆಗಿದೀರಾ ಅಂದ್ರೆ ರಿಯಲ್ಲಿ ಗ್ರೇಟ್ "
"ನಿಮಗ್ಯಾರು ಹೇಳಿದ್ರು ನಂಗೆ ಚಿಕ್ಕ ವಯಸ್ಸು ಅಂತ. ಅಲ್ರೆಡಿ ಐಯಮ್ 32 ಇಯರ್ಸ್ ಒಲ್ಡ್ ಯು ನೊ?" ಮಾತು ಹಳಿ ತಪ್ಪಿತು ಅನ್ನಿಸಿತು. ಆದರೆ ಜಾರಿಯಾಗಿತ್ತು ಮಾತು.
" 32 ಮತ್ತೆ ನೀವು . ಮೇಡಮ್ ಐ ಕಾಂಟ್ ಬಿಲೀವ್ ಇಟ್, ನೀವು ಸುಳ್ಳು ಹೇಳಿ ನನ್ನ ಅವಾಯ್ಡ್ ಮಾಡ್ತಾ ಇದೀರಾ" ಆತ ಉದ್ಗರಿಸಿದವನ ಮುಖದಲ್ಲಿ ಏನೂ ಒಂಥರಾ ಆಕರ್ಷಣೆ ಎನಿಸಿತು.
"ನಾನು ನಿಮಗ್ಯಾಕೆ ಸುಳ್ಳು ಹೇಳಲಿ. ಅಂಡ್ ವೈ ಶುಡ್ ಐ ಅವಾಯ್ಡ್ ಯು?"
ಕಾಫೀ ಟೈಮ್ ಆದದ್ದರಿಂದ ನಗುತ್ತಾ ಹೊರಗೆ ಬಂದೆ.
ಹೀಗೆ ಶುರುವಾದ ನಮ್ಮ ಸ್ನೇಹ ನಮ್ಮನ್ನು ಹತ್ತಿರ ತಂತು
ಕಿರಣ್‌ನ ನಗು ಆತನ ಮಾತು ಮಿಂಚಿನಂತಹ ನಡೆ ನನ್ನನ್ನು ಮೋಡಿ ಮಾಡಿತ್ತು
ದಿನೇ ದಿನೇ ಆತ ನನ್ನನ್ನು ಹೊಗಳುವುದು ಹೆಚ್ಚಾಗುತಿತ್ತು. ಮದುವೆಯಾಗಿ ಇಷ್ಟು ದಿನವಾದರೊ ಅಭಿ ಒಮ್ಮೆಯೂ ನನ್ನ ಬಗ್ಗೆ ಇಂತಹ ಮೆಚ್ಚುಗೆಯ ಮಾತಾಡಿರಲಿಲ್ಲ.
ಪ್ರಾಜೆಕ್ಟ್ ಅದೂ ಇದೂ ಅಂತ ಟೂರ್‌ನಲ್ಲೇ ಇರುತ್ತಿದ್ದ ಆತ ಬಸವಳಿದಿರುತ್ತಿದ್ದ . ನಾನು ಮನೆಗೆ ರಾತ್ರಿ ೧೦ಕ್ಕೆ ಹೋದರೆ ಆತ ನಿದ್ರಿಸಿರುತ್ತಿದ್ದ . ಬೆಳಗ್ಗೆ ನಾನು ಏಳುವ ವೇಳೆಗೆ ಕೆಲಸಕ್ಕೆ ಹೊರಟಿರುತಿದ್ದ. ನಮ್ಮಿಬ್ಬರ ಮಾತುಗಳು, ಭೇಟಿಗಳು , ಮಿಲನಎಲ್ಲವೂ ಕೇವಲ ಶನಿವಾರ ಅಥವ ಭಾನುವಾರ ಅದೂ ನಮ್ಮಿಬ್ಬರಿಗೂ ಕೆಲಸದ ಒತ್ತಡ ಇಲ್ಲದಾಗ. ಬೇರೆ ದಿನ ಮೈಲ್ನಲ್ಲಿ ತಪ್ಪಿದರೆ ಮೊಬೈಲ್ ನಲ್ಲಿ ಮಾತಾಡಿಕೊಂಡು ತೃಪ್ತಿಯಾಗುತ್ತಿದ್ದೆವು
ಚಿದೂ ನಾನು ಹೋಗುವ ವೇಳೆಗಾಗಲೆ ಕೆಲಸದಾಳು ಸರಸ್ವತಿಯ ಬಳಿಯಲ್ಲೇ ಜೋಗುಳ ಹಾಡಿಸಿಕೊಂಡು ಮಲಗಿರುತ್ತಿದ್ದ.
ಅಮ್ಮನ ನೆನಪೂ ಅವನಿಗಾಗುತಿರಲಿಲ್ಲವೇನೂ.
ಇಂತಹ ಸಂಧರ್ಭದಲ್ಲಿ ನನಗೆ ಕಿರಣ್ ಹೆಚ್ಚು ಆಪ್ತನಾಗುತ್ತಿದ್ದ.
ಆತ ನನಗಷ್ಟೆ ಅಲ್ಲ ಆಫೀಸಿನ ಎಲ್ಲರಿಗೂ ಅಚ್ಚು ಮೆಚ್ಚಿನವನಾಗುತ್ತಿದ್ದ .ಆದರೆ ನನ್ನೊಡನೆ ಮಾತಾಡುವಾಗ ಅವನ ಕಣ್ಣಲ್ಲಿ ಕಾಣುತಿದ್ದ ಒಲವನ್ನು ಗ್ರಹಿಸಲಾರದಷ್ಟು ಅಪ್ರಬುದ್ದಳೇನಾಗಿರಲಿಲ್ಲ ನಾನು.
ನಾನು ಅವನಿಗೆ ಅಪ್ರೈಸಲ್ ವಿಷಯದಲ್ಲಾಗಲಿ ಕೆಲಸದ ವಿಚಾರದಲ್ಲಾಗಲಿ ಹೆಚ್ಚಿನ ಸಹಾಯ ಮಾಡಲಾರಂಭಿಸಿದೆ.
ಜೊತೆ ಜೊತೆಗೆ ನನಗೇನೂ ಭಯವಾಗತೊಡಗಿತು . ನಾನು ತಪ್ಪು ಮಾಡುತ್ತಿಲ್ಲವಷ್ಟೆ? ನನ್ನ ಅವನ ಸ್ನೇಹ ಬರೀ ಸ್ನೇಹ ವಾಗದೆ ಇನ್ನೇನೋ ಆಗಬಹುದೆಂಬ ಅಂಜಿಕೆ ಅದು.
ತಿಂಗಳಾರು ಕಳೆಯಿತು.
ಕಿರಣ್ ನನ್ನನ್ನು ನೋಡದಿದ್ದರೆ ಚಡಪಡಿಸುತ್ತಿದ್ದ ಅದನ್ನು ಮಾತಿನಲ್ಲೂ ವ್ಯಕ್ತ ಮಾಡುತ್ತಿದ್ದ
ಒಮ್ಮೆ ಜ್ವರ ಬಂದು ಮಲಗಿದಾಗ ದಿನಕ್ಕೊಮ್ಮೆಯಾದರೂ ಮನೆಗೆ ಬಂದು ಹೋಗುತ್ತಿದ್ದ. ಚಿದುವನ್ನು ಸ್ನೇಹ ಪೂರ್ವಕವಾಗಿ ಮಾತಾಡಿಸುತ್ತಿದ್ದ.
ಅಭಿಗೆ ನಾನು ಅನ್ಯಾಯ ಮಾಡ್ತಾ ಇದೀನಾ ? ಇದು ತಪ್ಪಲ್ಲವಾ. ಮನಸಿನ ಕೂಗು
ಮನಸ್ಸು ಆತ್ಮೀಯರನ್ನು ಬಯಸುತ್ತಿದೆ ಅಷ್ಟೆ . ಇನ್ನೇನೂ ಅಲ್ಲ ನಾನೆ ಸಮಾಧಾನ ಮಾಡಿಕೊಂಡೆ.
ಕಿರಣ್ ಅಂದು ಅವನ ಮನಸ್ಸನ್ನು ಬಿಚ್ಚಿದ "ಮೇಡಮ್ ನಾನು ತುಂಬಾ ಹುಡುಗೀರ್‍ಅನ್ನು ನೋಡಿದೀನಿ . ಆದರೆ ನಿಮ್ಮಂತಹ ವಿಶೇಷವಾದವರನ್ನು ಕಂಡಿರಲಿಲ್ಲ. ನಿಮಗೇನಾದರೂ ಸೆಕಂಡ್ ಆಪ್ಷನ್ ಇದ್ದರೆ ಅದು ನಾನೆ ಆಗಿರಬೇಕಂತ ನನ್ನ ಆಸೆ"
ನಾನು ಏನೂ ಹೇಳಿರಲಿಲ್ಲ ಸುಮ್ಮನೆ ನೆಲ ನೋಡಿದೆ
ಆತ ಉತ್ತೇಜಿತನಾದನೋ ಏನೋ ಅವನ ನನ್ನ ಒಡನಾಟ ಹೆಚ್ಚಾಗತೊಡಗಿತು.

ಕಿರಣನ ನನ್ನ ಮೇಲಿನ ಪ್ರೀತಿ ಕೇವಲ ದೈಹಿಕ ಆಕರ್ಷಣೆಯಾಗಿದ್ದರೆ ಏನು ಗತಿ?
ಅದಕ್ಕೆ ಯಾವ ಆಧಾರವೂ ಸಿಗಲಿಲ್ಲ ಇಂದಿನವರೆಗೆ ಕಿರಣ ತನ್ನ ಬಳಿ ಒಮ್ಮೆಯೂ ಕೆಟ್ಟದಾಗಿ ನಡೆದಿರಲಿಲ್ಲ .
ಅಭಿಯ ಜೋತು ಬಿದ್ದ, ಕಳೆಯಾಗಲಿ ಒಲವಾಗಲಿ ಇರದ ಆ ಮೊಗವೆಲ್ಲಿ? ಸ್ನೇಹ ತುಂಬಿದ ನಡೆ, ಒಲವು ತುಂಬಿದ ಕಂಗಳು, ಎಂಥಹವರನ್ನೂ ಅರಳಿಸಬಲ್ಲಂಥ ಆ ನಗೆ ತುಂಬಿರುವ ಕಿರಣನೆಲ್ಲಿ?
ಅಭಿ ನನ್ನ ಸಾಮೀಪ್ಯವನ್ನೂ ಗ್ರಹಿಸದವನ ಹಾಗೆ ನಿರ್ಜೀವ ಮನುಷ್ಯ, ಆದರೆ ಕಿರಣ ನನ್ನಿರುವಿಕೆಯಿಂದಲೇ ಇಡಿ ಪ್ರಪಂಚವನ್ನು ಗೆಲ್ಲುತ್ತೇನೆಂಬ ಹುಮ್ಮಸ್ಸು ತುಂಬಿರುವ ವ್ಯಕ್ತಿ. ನಿರ್ಜೀವ ವ್ಯಕ್ತಿಯಲ್ಲೂ ಚೈತನ್ಯ ತುಂಬುವಂತಹ ವ್ಯಕಿತ್ವ

ನಾನು ನಿರ್ಧಾರ ಮಾಡಬೇಕಿತ್ತು, ಒಲವೋ ಅಥವ ಸಂಸಾರವೋ
(ಮುಂದುವರೆಯುವುದು)