Friday, September 6, 2013

ಭಾನುಮತಿ

"ಅರಮನೆ  ಇನ್ನು ನಮ್ಮದಲ್ಲ ತಾಯಿ ಹೊರಡಬೇಕು  ಎಂದ ಸೋಮಿಕನ ಮೊಗ ನೋಡಿದೆ . ಕರುಣೆಯೋ ಆತಂಕವೋ ದುಗುಡವೋ ,ಅಥವಾ ನೆಲೆ ಇಲ್ಲದ ನನ್ನನ್ನೂ ನೋಡಿಕೊಳ್ಳಬೇಕೆ ಎಂಬ  ಪ್ರಶ್ನೆಯೋ ಕಾಣುತಿತ್ತು . "
"ಮಹಾರಾಜರು  ಕೊನೆಯ ಘಳಿಗೆಯವರೆಗೂ ಹೋರಾಡಿದರು ಮಹಾರಾಣಿ . ಆದರೆ ಯುದ್ದಕ್ಕೆ ವಿರುದ್ದ  ನೀತಿಯನ್ನ  ಬಳಸಿ  ಅವರನ್ನ ಮೋಸದಿಂದ ಕೊಂದರಂತೆ " ಹೇಳುವಾಗ, ದನಿ ಮೆತ್ತಗಾಗಿತ್ತು .
"ಮಹಾಭಾರತದ  ಈ ಹದಿನೆಂಟು ದಿನಗಳಲ್ಲಿ ಮೋಸವಿಲ್ಲದೆ ನಡೆದ ಯುದ್ದದ ದಿನ ನೆನಪಿದೆಯೇ ಸೋಮಿಕ?" ಅವನನ್ನ ಪ್ರಶ್ನಿಸಿದೆ . ಆತ  ಉತ್ತರಿಸಲಿಲ್ಲ .
ಮೋಸದಿಂದ ಶುರುವಾದ ದಳ್ಳುರಿ ಮೋಸದೊಡನೆಯೇ ಅಂತ್ಯವಾಗಿತ್ತು . ಪತಿ ಸತ್ತನೆಂಬ ನೋವು ನನ್ನನ್ನು ಸುಡುತ್ತಿರಲಿಲ್ಲ . ಮಗನನ್ನು ಕಳೆದುಕೊಂಡೆ ನೋವೆ ಆಗುತ್ತಿಲ್ಲ  . ಮೈದುನ , ಅಳಿಯ  ಎಲ್ಲರೂ  ಇಡೀ ಕುರುವಂಶವೇ ನಾಮಾವಷೇಶವಾಗಿತ್ತು . ಆದರೂ ಕಣ್ಣಲ್ಲಿ ನೀರು ಬರುತ್ತಿಲ್ಲ . ಬರುವುದಾದರೂ ಹೇಗೆ . ಇಡೀ ನಾಟಕದ ಉದ್ದಕ್ಕೂ ಬೇಡವೆಂದು ಎಷ್ಟು ಹೇಳಿದರೂ  ಸ್ವಪ್ರತಿಷ್ಠೆಗಳೇ ಪ್ರಾಮುಖ್ಯತೆ ಪಡೆದು. ಹೆಂಗಳೆಯರ ಕಣ್ಣೀರಿಗೆ ಬೆಲೆಯೇ ಇಲ್ಲದಂತಾಗಿ .....................  ಅಷ್ಟಕ್ಕೂ ಹೆಣ್ಣಿನ ಮಾತಿಗೆ ಬೆಲೆ ಎಲ್ಲಿದೆ ಮದುವೆಯಿಂದ ಹಿಡಿದು ಆವಳ  ಸಾವಿನವರೆಗೂ ಅವಳ ನಿರ್ಧಾರ  ಆವಳದೆಲ್ಲಿ  ಆಗಿರುತ್ತದೆ?
ಅಷ್ಟಕ್ಕೂ  ಅಂದು ಸ್ವಯಂವರಕ್ಕೆ ಬಂದವರಲ್ಲಿ ಮನಸನ್ನ ಗೆದ್ದಿದ್ದು ಅವನು.. ಕರ್ಣ . ಸ್ವಾಮಿನಿಷ್ಟೆಗೆ ಮತ್ತೊಂದು ಹೆಸರು  ಕರ್ಣ ...  ಅವನಿಗೂ ನನ್ನ ಮೇಲೆ ಮನಸಿದ್ದಿದ್ದು ಸ್ಪಷ್ಟವಾಗಿತ್ತು. ಆದರೂ  ಪ್ರಾಣ ಮಿತ್ರ ಅದಾಗಲೇ  ದ್ರೌಪದಿಯನ್ನು ಗೆಲ್ಲಲಾಗದ ಅಪಮಾನದಿಂದ ಕುದಿಯುತ್ತಿದ್ದನಾದ್ದರಿಂದ  ನನ್ನನ್ನು ಗೆದ್ದು  ಸ್ವಾಮಿಗೆ ಅರ್ಪಿಸಿದ. ಅಂದೆ ನನ್ನ ಮಿತಿ ಅರ್ಥವಾಗಿತ್ತು
ದುರ್ಯೋದನ ನ ಪಟ್ಟ ಮಹಿಷಿ ಯಾಗಿ ಕಾಲಿಟ್ಟ ದಿನವೇ ನೂರಾರು ವಿಷಯಗಳು . ಕುರುಡು ಮಾವ , ಕಣ್ಣಿದ್ದೂ ಗಂಡನಿಗೆ ಕಣ್ಣಾಗದೇ ಬಟ್ಟೆ ಕಟ್ಟಿಕೊಂಡ ಗಾಂಧಾರಿ.
ಮೊದಲಿನಿಂದಲೂ ದ್ವೇಷದ ಭಾವನೇಯೇ ..ಎಷ್ಟು ಸಲ  ಹೇಳಿದ್ದೆ . ಬೇಡ ಅಸೂಯೆ, ದ್ವೇಷ ಸ್ವ ಪ್ರತಿಷ್ಟೆ ಇವುಗಳ ಅಂತ್ಯ ಅವಸಾನದಲ್ಲೇ ಎಂದು
ಕೇಳಲಿಲ್ಲ
ಕರ್ಣನಿಗೂ ಸೆರಗೊಡ್ಡಿ ಬೇಡಿದ್ದೆ. ನಿನ್ನ ಮಿತ್ರನಿಗೆ ಬುದ್ದಿ ಹೇಳೆಂದು
ಆತನೊಬ್ಬ ಕೆಲಸಕ್ಕೆ ಬಾರದ ಒಳ್ಳೇತನದ ಮಿತ್ರ.
ಒಂದೊಳ್ಳೇ ಕೆಲಸಕ್ಕೆ ಒಬ್ಬರೂ  ಕೈ ಚಾಚುವುದಿಲ್ಲ. ಆದರೆ ಕೆಟ್ಟ ಕೆಲಸಕ್ಕೆ ಹಲವಾರು ಮನಸುಗಳು ಜೊತೆಗೂಡುತ್ತವೆ
ಹಾಗೆಯೇ ಆಯ್ತು. ಕೋತಿ ಹೆಂಡ ಕುಡಿದಂತೆ ಆಡತೊಡಗಿದರು ಇವರು.
ಇವರ ತಾಳಕ್ಕೆ ತಕ್ಕಂತೆ ಜೊತೆಗಾರರು
ಅಂದು ದ್ಯೂತದ ದಿನ ಬೇಡಿದ್ದೆ. "ಬೇಡ ದಯವಿಟ್ಟು ನಿಲ್ಲಿಸಿ
ನಿಮ್ಮ ಕಿಚ್ಚು ಪಾಂಡವರ ಮೇಲಿರಲಿ . ಆ ಸಾಧ್ವಿ ದ್ರೌಪದಿಯ  ಮೇಲೇಕೆ" ಎಂದು .  ಕೇಳಲಿಲ್ಲ. ಸೀರೆ ಕಿತ್ತೆಸೆದರು... ಕಿತ್ತೆಸೆದದ್ದು ಬರೀ ಸೀರೆಯನ್ನಲ್ಲ ಹೆಣ್ತನದ  ತಾಳ್ಮೆಯ ಸೆರಗನ್ನು.

ತುಂಬಿದ ಸಭೆಯಲ್ಲಿ  ಆದ ಅವಮಾನವನ್ನು ಹೇಗೆ ತಾನೇ ಮರೆತಾಳು . ಮೊದಲೇ ಅಗ್ನಿ ಶಿಖೆ ...  ಬಂದವಳು ಇಡೀ ಕುರುವಂಶವನ್ನೇ ನಿರ್ನಾಮ ಮಾಡಿದಳು . ಮೊತ್ತ ಮೊದಲಿಗೆ ಹೆಣ್ಣೊಬ್ಬಳು ಸೊಲ್ಲೆತ್ತಬಹುದೆಂದು  ಲೋಕಕ್ಕ್ಕೆ  ತಿಳಿಸಿಕೊಟ್ಟವಳು .

ಎಲ್ಲಾ ಮುಗಿಯಿತು ಅವಳ ಐವರೂ ಪತಿಯಂದಿರು ಉಳಿದರು ಆದರೆ ಮಕ್ಕಳನ್ನೂ ಕಳೆದುಕೊಂಡಳು ನನ್ನಂತೆಯೇ . ಕೊನೆಗೆ ಏನು ಸಾಧಿಸಿದಂತಾಯ್ತು . ರಕ್ತದ ಹೊಳೆಯಲ್ಲಿ ಮತ್ತೆ  ಇರಬೇಕೇ?
ಕುಂತಿ ಹೇಳಿದಳು " ಭಾನುಮತಿ ನೀನು ನನ್ನ ಸೊಸೆಯೇ ಇಲ್ಲೇ ಇರು " ಎಂದು.  ಹಂಗಿನರಮನೆ ಬೇಕೆ ?
ಲಕ್ಷ್ಮಣ ನ ಮಡದಿ ಇನ್ನೂ ಚಿಕ್ಕ ವಯಸ್ಸು ಪಾಪ " ಅತ್ತೆ ನಮ್ಮ ಊರಿಗೆ ಬಂದು ಬಿಡಿ " ಎಂದಳು.
ಅದೂ ಹಂಗಿನರಮನೆಯೇ . ಇನ್ನೂ ತವರು ಯಾರಿದ್ದಾರೆ ಅಲ್ಲಿ ತನ್ನವರೆನ್ನುವವವರು.  ಯಾರೂ ಇಲ್ಲದೆಡೆ ಹೋಗಿಬಿಡೋಣವೆನಿಸುತ್ತಿದೆ . ವಾನ ಪ್ರಸ್ತ್ಯ ವೇ ಪ್ರಾಶಸ್ತ್ಯ .
ಎದ್ದೆ . ಸೋಮಿಕನಿಗೆ ಕೊರಳಲಿ ಉದ್ದ ಹಾರವೊಂದನ್ನು ಕೊಟ್ಟು ನಡೆದೆ .. ಕಾಡಿನತ್ತ  ....
(ಭಾನುಮತಿ ಆಗಾಗ ಕಾಡುತ್ತಾಳೆ ನನ್ನ್ನ ಅವಳ ಅಂತರಂಗ ನಿರೂಪಿಸುವ  ಸಣ್ಣ ಪ್ರಯತ್ನ

Monday, July 1, 2013

ಲೋಪ ಮುದ್ರೆ ..........................ಕಾವೇರಿಯಾಗಿ


"ಲೋಪ ಮುದ್ರೆ ಬಂದೆಯಾ ?"
ಅಗಸ್ತ್ಯನ ದನಿಗೆ ಎಚ್ಚೆತ್ತೆ.. ಈಗಷ್ಟೇ ಊಟ ಬಡಿಸಿ , ಆತ ಊಟ ಮುಗಿಸಿ ಹೊರಗೆ ಹೋದ .. ವಿಶ್ರಮಿಸಲೆಂದು  ಚಾಪೆಯ ಮೇಲೆ ಪವಡಿಸಿದವಳಿಗೆ  ಅಸಾಧ್ಯ ನಿದ್ದೆ .ಕೊಂಚ ಕ್ಷಣಗಳಾಗಿರಬೇಕು . ಆಗಲೇ ಮತ್ತೆ ಬಂದನಲ್ಲ
ಒಂದರೆ ಘಳಿಗೆ ನನ್ನ ಬಿಟ್ಟಿರಲಾರ ಈತ. ಎಲ್ಲಿ ಹೋದರಲ್ಲಿ ಆತನ ಜೊತೆ ನಾನಿರಲೇಬೇಕು ಅದೇನು ಪ್ರೀತಿಯೋ, ಮೋಹವೋ, ಮತ್ತಾರೂ ಮೋಹಿಸಬಾರದೆಂಬ ಜಾಗರೂಕತೆಯೋ ಗೊತ್ತಿಲ್ಲ
ಜನರೆಲ್ಲಾ ನನ್ನನ್ನು ಅಗಸ್ತ್ಯನ ಕಮಂಡಲದಲ್ಲಿ ಬಂಧಿಯಾದವಳೆಂದು ತಮಾಷೆ ಮಾಡುತ್ತಾರೆ. ಹಾಗೆಯೇ ನೀರಾಗಿಯೇ ಬಿಡುತ್ತೆನೋ ಏನೋ. ನನ್ನದೆಂಬ ಆಸೆ ಇಲ್ಲ. ಆತ ಕೂರೆಂದರೆ ಕೂರುವುದು, ನಿಲ್ಲೆಂದ ಕಡೆ ನಿಲ್ಲುವುದು. ಒಟ್ಟಿನಲ್ಲಿ ಸೇರಿದ ಪಾತ್ರೆಯ ರೂಪಕ್ಕೆ ತಕ್ಕಂತೆ ಬದಲಾಗುವ ನೀರಿಗೂ ನನಗೂ ವ್ಯತ್ಯಾಸವಿಲ್ಲದಂತಾಗಿದೆ ...

ಈ ದಕ್ಷಿಣ ಭಾಗಕ್ಕೆ ನಾನು ಬಂದು ಸೇರಿದುದು ಒಂದು ನಿಗೂಢ ರಹಸ್ಯವೇ ಸರಿ

ಸ್ವಯಂ ಈಶ್ವರ ಮತ್ತ್ ಗಂಗಾಮಾತೆ ನನ್ನ ತಂದೆ ತಾಯಿ . ಅವರಿಂದ ನನ್ನ ದತ್ತು ಪಡೆದು ಬಂದವ ಈ ಅಗಸ್ತ್ಯ. ಈ ದಕ್ಷಿಣ ಭಾಗದಲ್ಲಿ ನೀರು ಇಲ್ಲದೆ ನದಿಯೂ ಇಲ್ಲದೆ ವ್ಯವಸಾಯವಿಲ್ಲದೆ ದನಕರುಗಳು, ಜನರು ಸಾಯುತ್ತಿದ್ದರಂತೆ . ಉತ್ತರದಲ್ಲಿ ಯಥೇಚ್ಚವಾಗಿ ನೀರಿದ್ದುದರಿಂದ ಅಲ್ಲಿಂದ ಬಂದ ಹೆಣ್ಣೊಬ್ಬಳು ಇಲ್ಲಿನ ನೀರಿಗೆ ಹಾರವಾದರೆ ನದಿ ನೀರು ಉಕ್ಕಿ ಹರಿಯುತ್ತದೆ ಎಂಬ ಕಾರಣಕ್ಕಾಗಿ ಈ ಅಗಸ್ಯ್ತ ತನ್ನನ್ನು ಅಲ್ಲಿಂದ ದತ್ತು ಪಡೆದದ್ದು. ಆಗಿನ್ನೂ ಪುಟ್ಟ ಕಂದಮ್ಮಳಾಗಿದ್ದ ನನ್ನನ್ನು ತಂದೆಯಂತೆ ಬೆಳೆಸುತ್ತಿದ್ದವನು ಯಾವಾಗ ಯೌವ್ವನ ಕಾಲಿಟ್ಟಿತೋ ಅಂದಿನಿಂದ ಪ್ರೇಮಿಸತೊಡಗಿದ. ಅದೂ ಹುಚ್ಚು ಪ್ರೀತಿ. ನನ್ನನ್ನ ಇಲ್ಲಿ ಕರೆತಂದ ಕಾರಣವನ್ನೆ ಮರೆತುಬಿಟ್ಟ.  ಸದಾ ನನ್ನನ್ನ ಜೊತೆಯೇ ಕರೆದುಕೊಂಡು ಹೋಗುತ್ತಿದ್ದ.. ಕೆಲವೊಮ್ಮೆ ಅವನ ಉತ್ತರೀಯಕ್ಕೆ ನನ್ನ ಸೆರಗನ್ನ ಗಂಟು ಹಾಕಿ ಕಾಯುತ್ತಿದ್ದ. ಮದುವೆಯ ದಿನವಿನ್ನೂ  ಕೂಡಿ ಬಂದಿರಲಿಲ್ಲವಂತೆ. ಆದ್ದರಿಂದ ನನ್ನ ಕೌಮಾರ್ಯ ಹಾಗೆಯೇ ಇತ್ತು. ಅದು ಈ ಮುಪ್ಪಡರಿದ ಮುನಿವರ್ಯನಿಗೇ ಮುಡಿಪು ಎಂದಾಗಿತ್ತು

"ಮುದ್ರಾ  ವನವಿಹಾರಕ್ಕೆ ಹೋಗೋಣಾ ಬಾ" ಕಟ್ಟಿದ ಹಸುವಂತೆ ಅವನ ಹಿಂದೆ ಹೊರಟೆ.. ಗಮಿಸುತಿದ್ದಂತೆ ಮತ್ತೆ ಯೋಚನೆಗಳು ಧಾಳಿ ಇಡಲಾರಂಭಿಸುತ್ತಿದ್ದವು

ನಿಜ ಊಟ ತಿಂಡಿಗೆ ಅಥವ ವಿಹಾರಕ್ಕೆ ಕೊರತೆ ಏನಿಲ್ಲ ಇವನೊಡನೆ . ಆದರೂ ಮನುಷ್ಯನಾದವನಿಗೆ ಬೇಕಾದ ಯಶ್ಚಿಕತ್ ಸ್ವಾತಂತ್ರ್ಯ ಸಿಗದ ಬಾಳೂ ಒಂದು ಬಾಳೇ?

ಒಂದು  ಹೆಜ್ಜೆ ನಡೆಯಬೇಕಾದರೂ ಇವನಾಣತಿ ಬೇಕು, ಇಲ್ಲವಾದಲ್ಲಿ ಮುನಿ ಶಾಪದ ಬೀತಿ

"ಸುತ್ತಲೂ ಅರಳಿದ ಹೂಗಳು, ಹಸಿರು ಕಾಡು, ವನದೇವತೆಯಂತೆ ಜೊತೆಯಲ್ಲಿ ನೀನು.ನನ್ನ ಭಾಗ್ಯವೇ ಭಾಗ್ಯ"

ಮುನಿವರ್ಯ ಗುನುಗುತ್ತಿದ್ದ. ಅದು ಕೇಳಿದರೂ ಕೇಳದಂತೆ ನಡೆಯುತ್ತಿದ್ದೆ..

ನದಿಯೊಂದು ಹರಿಯುತ್ತಿತ್ತು.. ಶಾಂತವಾಗಿ ತನಗಿಷ್ಟ ಬಂದೆಡೆ .. ಯಾರನ್ನೂ ಕೇಳದೆ , ಯಾರನ್ನೂ ಲೆಕ್ಕಿಸದೇ ತನ್ನಷ್ಟಕ್ಕೆ ತಾನು ಹರಿಯುತಿದೆ..

"ಇಲ್ಲೇ ಇರು ಮುದ್ರಾ ಇಲ್ಲಿಂದ ಕದಲಬೇಡ. ನಾನು  ಒಂದಷ್ಟು ಹೂವನ್ನು ಆರಿಸಿ ತರುತ್ತೇನೆ ನಿನ್ನ ಈ ನೀಳ ಕೇಶರಾಶಿಗಾಗಿ, ಈ ಕಮಂಡಲ ನಿನ್ನಬಳಿಯೇ ಇರಲಿ"

ಅಗಸ್ತ್ಯ ಅಲ್ಲಿಂದ ಹೊರಟ.. ಅವನ ಬೆನ್ನನ್ನೆ ದಿಟ್ಟಿಸುತ್ತಾ  ಹಾಗೆ  ನದಿಯದಂಡೆಯಲ್ಲಿ ಕೂತೆ

ಚಿಟ್ಟೆಯೊಂದು ಹಾರುತ್ತಿತ್ತು.. ಹೂವಿಂದ ಹೂವಿಗೆ. ತನಗೆ ಬೇಕಾದಂತೆ ಅತ್ತಿತ್ತ ಆಟವಾಡುತ್ತಾ..

ಜಿಂಕೆ ಮರಿಯೊಂದು ಚಂಗನೆಗರಿ ಓಡಿತ್ತು ತನ್ನವರ ಕೂಡಿಕೊಳ್ಳುವ ಹಂಬಲದಲ್ಲಿ

ನಾ ಮಾತ್ರ ಹೀಗೆಯೇ  ಕಲ್ಲಾಗಿ............

ಮುನಿವರ್ಯನ ಕಮಂಡಲ ಕೈ ತಾಗಿ ಯಾವ ಮಾಯದಲ್ಲೋ ಕೆಳಗೆ ಬಿತ್ತು...

ದುಡದುಡನೆಂದು ಸದ್ದು ಮಾಡುತ್ತಾ ಹೋಗುತ್ತಿದ್ದುದ್ದನ್ನು ಹಿಡಿಯಬೇಕು . ಇಲ್ಲವಾದಲ್ಲಿ ಮುನಿಗೆ ಕೋಪ ಬಂದು ಬೈದಾನು ಎಂದುಕೊಳ್ಳುತ್ತಲೇ ಓಡಿದೆ. ಅದೂ ಓಡುತ್ತಿತ್ತು ನನ್ನೊಡನೆ ಹಮ್ಮಿಗೆ ಬೀಳುವಂತೆ. ಥೇಟ್ ಮುನಿವರ್ಯನಂತೆಯೇ ಜಂಭದಿಂದ.

ಹಾಗೆ ಓಡುತ್ತಿದ್ದವಳ ತಡೆದು ನಿಲ್ಲಿಸಿದ್ದು ಆಜಾನುಬಾಹು ಆ ತರುಣನ ನೆರಳು.

ತೀರ ಸನಿಹದಲ್ಲಿ ನಿಂತವನ ಬಿಸಿಯುಸಿರು ನನ್ನ ತಾಗುತ್ತಿದ್ದಂತೆಯೇ ಮೈ ಮರೆಯುವಂತಾಯ್ತು.
ಮೊಗ ಬಿಸಿಯಾಯ್ತು ಹಾಗೆ ಒಮ್ಮೆ ಉಸಿರೆಳೆದುಕೊಂಡೆ. ಆತನ ಕಂಗಳನ್ನು ಎದುರಿಸದಾದೆ. ಸುಮ್ಮನೆ ತಲೆ ತಗ್ಗಿಸಿನಿಂತವಳ ಕೈ ಹಿಡಿದಾಗ ಮೈ ಜುಮ್ಮೆಂದು ಮತ್ತೂ ಭೂ ಮುಖಿಯಾದೆ. ಕೊಂಚ ಕಾಲವಾಯ್ತೇನೋ
ಅಷ್ಗ್ತೆ

"ಜಾರಿಣಿ" ಅಬ್ಬರದ ದನಿಗೆ ಬೆಚ್ಚಿಬಿದ್ದೆ

ಆ ಯುವಕನೂ ಬೆದರಿದನೆಂದೆನಿಸುತ್ತದೆ. ಮುನಿವರ್ಯರೆಂದರೆ ಸಾಮಾನ್ಯವೇ?

ಶಾಪಕ್ಕೆ ಬೆದರಿ ಆತ ಅಲ್ಲಿಂದ ಕಾಲು ಕಿತ್ತ.

ಉಳಿದವಳು ನಾನು ಮತ್ತು ಅಗಸ್ತ್ಯ

"ಚಂಚಲತೆಗೆ ಮತ್ತೊಂದು ಹೆಸರೇ ಹೆಣ್ಣೆಂದು ನೀನು ಇಂದು ನಿರೂಪಿಸಿದೆ. ಮೊದಲೇ  ನಿರ್ಧರಿಸಿದಂತೆ ನಿನ್ನನ್ನ ಕೆರೆಗೆ ಹಾರವಾಗಿ ಮಾಡಿರಬೇಕಿತ್ತು.. ಇನ್ನೊಬ್ಬನಲ್ಲಿ ಅನುರಕ್ತೆಯಾದ ನೀನು ನನಗೆ ಬೇಡ ಈಗಲೇ ಇದೇ ನದಿಗೆ ಬಿದ್ದು ಸಾಯಿ"

ನನಗೂ ಅದೇ ಬೇಕಿತ್ತು
ಬೇಸತ್ತಿದ್ದೆ.
ಸಾಯುವುದಕ್ಕೂ ಸ್ವಾತಂತ್ರ್ಯವಿಲ್ಲ
ಬದುಕಿಗೂ
ಈ ಬದುಕಿಗೆ ವಿದಾಯ

ಮತ್ತುಚ್ಚರಿಸಲಿಲ್ಲ
ಸುಮ್ಮನೇ ನೀರಿನತ್ತ ನಡೆದೆ... ನೀರಲಿ ಲೀನವಾಗಲಾರಂಭಿಸಿದೆ

ಅಗಸ್ತ್ಯ ಅಬ್ಬರಿಸಿ ನುಡಿಯುತ್ತಿದ್ದ
"ಈ ನದಿ ಕಾವೇರಿ ಎಂದು ಹೆಸರು ಪಡೆಯಲಿ, ನಿನ್ನ ಹೆಸರೂ ಕೂಡ ಇದಕ್ಕೆ ಬೇಡ ... ಕಾವೇರಿ....................................."

ಕಾವೇರಿ ಎಂದುಚ್ಚರಿಸುತ್ತಾ  ನಾ ಮುಂದೆ ನಡೆಯತೊಡಗಿದೆ

ಆಬ್ಬರಿಸಿ ಬರುತ್ತಿತ್ತು ನದಿಯ ನೀರು ಮುಂದೆ ಮುಂದೆ

ಕಾಲು, ಹೊಟ್ಟೆ, ಎದೆಯನ್ನೆಲ್ಲಾ ತಡವಿ ಮುದ್ದಿಸುತ್ತಾ ನನ್ನ ಸೆಳೆದುಕೊಳ್ಳಲಾರಂಭಿಸಿತು

ಕಾವೇರಿಯಾಗತೊಡಗಿದೆ ನಾನೂ
ಅದೇ ನೀರಿನಂತೆ ನಾನೂ
 ಹರಿಯಬೇಕು... ಹರಿಯುತ್ತಲೇ ಇರಬೇಕು

ಶ್ವಾಸ ಕಟ್ಟತೊಡಗಿತು ಕಣ್ ಮುಚ್ಚಲಾರಂಭಿಸಿದೆ
ಲೋಪಮುದ್ರೆ ಕಾವೇರಿಯಾಗಿ ಪರಿವರ್ತಿತಳಾಗತೊಡಗಿದಳು ...ಬಯಸಿದ ಸ್ವಾತಂತ್ರದೊಂದಿಗೆ
ನೀರಿನಲ್ಲಿ ವಿಲೀನವಾದಳು






Sunday, May 5, 2013

ನಾ ಮಾತುಗಾತಿಯಲ್ಲ ನೀ ಮಾತು ಕಲಿಸಲಿಲ್ಲ


ನಾ ಮಾತುಗಾತಿಯಲ್ಲ ನೀ ಮಾತು ಕಲಿಸಲಿಲ್ಲ 
ಆದರೂ ನಿನ್ನೊಡನೆ ನನ್ನ ಮಾತು ನಿಲ್ಲುವುದೇ ಇಲ್ಲ  

ನಾ ಕನಸುಗಾತಿಯಲ್ಲ , ನೀ ಕನಸಲ್ಲಿ ಬರುವುದಿಲ್ಲ 
ಆದರೂ ನನ್ನ ಕನಸು ನಿನ್ನ ಬಿಟ್ಟು ಮುಂದೆ  ಸಾಗುವುದೇ ಇಲ್ಲ 

ನಾ ಪ್ರೀತಿಗಾಗಿ ಅಲ್ಲ, ನೀ ನನ್ನ ಪ್ರೀತಿಸಲೇ ಇಲ್ಲ 
ಆದರೂ ಈ ಮನ ನಿನಪ್ರೀತಿಗಾಗಿ ಮಿಡಿಯುತಿದೆಯಲ್ಲ  

ನಾ ಅಳುವವಳಲ್ಲ , ನೀ ನನ್ನ  ಅಳಿಸಲೇ ಇಲ್ಲ 
ಆದರೂ ನಿನಗಾಗಿ ನಾನತ್ತ ಇರುಳಿಗೆ ಲೆಕ್ಕವೇ ಇಲ್ಲ  

ನಾ ನಿನಗೇನೂ  ಅಲ್ಲ , ನೀ ನನಗಾಗಿ ಅಲ್ಲ 
ಆದರೂ ಜೀವವಿದು ನಿನಗಾಗಿ ಕಾದಿದೆಯಲ್ಲ