Saturday, March 7, 2009

ಜಾಣೆಯಾಗಿರು ನನ್ನ ಮಲ್ಲಿಗೆ

ಅಮ್ಮಾ ಬಾಯ್ ಹೆಗಲ ಮೇಲೆ ಬ್ಯಾಗ್ ತಗುಲಿಸಿಕೊಂಡು ಸ್ಕೂಲಿಗೆ ಹೊರಟಳು ಮಗಳು. ನೋಡಿದರೆ ದೃಷ್ಟಿಯಾಗುವ ಹಾಗೆ ಇದ್ದಾಳೆ.ಇಷ್ಟೊಂದು ಅಲಂಕಾರ ಬೇಡ ಕಣೆ ಎಂದರೆ ಕೇಳೋದಿಲ್ಲ. ಇನ್ನೂ ಎಂಟನೆ ತರಗತಿಯ ಮೆಟ್ಟಿಲು ಹತ್ತುತ್ತಿರುವ ಮಗಳು ನನ್ನ ಎತ್ತರಕ್ಕೂ ಬೆಳೆದಿದ್ದಾಳೆ ಅವರಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ. ಮಹಿಯ ನೆನಪಾಗಿ ಕಣ್ಣಾಲಿಯಲ್ಲಿ ನೀರು ತುಂಬಿತು. ಸೆರಗಲ್ಲಿ ಕಣ್ಣೊರೆಸಿಕೊಂಡು ಮೆಟ್ಟಿಲು ಏರುತ್ತಿದ್ದಂತೆ"ಶ್ವೇತಾ ಇವತ್ತು ಏಕಾದಶಿ. ನಂಗೇಂತ ಏನೂ ಮಾಡಬೇಡ" ಎಂದರು ಅತ್ತೆ. ಆಯ್ತು ಅತ್ತೆ . ಹೆಸರಿಗೆ ಅತ್ತೆ ಎಂದು ಕರೆದರೂ ತಾಯಿಯ ವಾತ್ಸಲ್ಯದ ಧಾರೆ ಎರೆಯುತ್ತಿದ್ದಾರೆ. ಸ್ವಲ್ಪ ಹಳೇ ಕಾಲದವರಾದ್ದರಿಂದ ಮಡಿ ಮೈಲಿಗೆ ಅಂತ ನೋಡ್ತಾರೆ ಆಗಾಗ ಸಿಡುಕು ಇದ್ದುದ್ದೇ.ತವರಲ್ಲಿ ಅಮ್ಮ ಇಲ್ಲ ಕಣ್ಮುಚ್ಚಿಕೊಂಡು ಈಗಾಗಾಲೆ ಹತ್ತು ವರ್ಷಗಳಾಗಿವೆ. ಆಗಿನ್ನೂ ಸ್ಮಿತ ಕೇವಲ ಐದುವರ್ಷಗಳಾಗಿತ್ತು. ಅದಾಗಿ ಮೂರು ತಿಂಗಳೂ ಆಗಿರಲಿಲಲ್ಆಗಲೆ ಮಹಿ ರಸ್ತೆ ಅಪಘಾತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಾಗ ದಿಕ್ಕು ತೋಚದಂತಾಗಿತ್ತುತನ್ನಂತೆ ಅತ್ತೆಯೂ ಚಿಕ್ಕ ವಯಸ್ಸಿನಲ್ಲಿ ವಿಧವೆಯಾಗಿದ್ದರೂ ಧೈರ್ಯ ತುಂಬಿದರು. ಎಂತಹ ಹಳೇ ಕಾಲದವರಾಗಿದ್ದರೂ ಮತ್ತೊಂದು ಮದುವೆಗೆ ಒತ್ತಾಯಿಸಿದರು. ಆದರೆ ಮಹಿಯ ನನಪು, ಸ್ಮಿತಾಳ ಬಾಳಿನ ಪ್ರಶ್ನೆಗೆ ಹೆದರಿ ಮರು ಮದುವೆಗೆ ಧೈರ್ಯ ತೋರಲಿಲ್ಲಅಂದಿನಿಂದ ಮನೆ ಮಹಿಳಾ ಸಾಮ್ರಾಜ್ಯವಾಗಿದೆ. ಬದುಕಲು ಮಹಿಯ ತಂದೆ ಮಾಡಿಟ್ಟ ಆಸ್ತಿ ಬಹಳವಿದೆಸ್ವಂತ ಮನೆ, ಜೊತೆಗೆ ಹತ್ತು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದುದ್ದರಿಂದ ಬಾಳೊಂದು ಕಷ್ಟ ಅನ್ನಿಸಲಿಲ್ಲ. ಸ್ಮಿತಾಗೆ ತಂದೆಯ ಕೊರತೆ ಕಾಣಬಾರದು ಎಂದು ಅತಿಮುದ್ದಿನಿಂದಲೇ ಬೆಳೆಸಿದ್ದೆ. ಜನರೇಶನ್ ಗ್ಯಾಪ್ ಎನ್ನುವುದು ಇಲ್ಲಿ ಮನೆ ಮಾಡುತ್ತಿತ್ತು ಅವಳಿಗೂ ಅವಳ ಅಜ್ಜಿಗೂ ಎಲ್ಲಕ್ಕೂ ಜಗಳ
ಅತ್ತೆಗೆ ಒಂದಷ್ಟು ಹಣ್ಣು ಬಿಡಿಸಿಕೊಟ್ಟೆ. ಹಣ್ಣು ಮೆಲ್ಲುತ್ತಾ ಹೇಳಿದರು"ಶ್ವೇತಾ ಏನೆ ಹೇಳು ಸ್ಮಿತಾಗೆ ಸ್ವಲ್ಪ ಬುದ್ದಿ ಹೇಳು. ನಂಜೊತೆ ಜಗಳ ತುಂಬಾ ಆಡ್ತಾಳೆ. ಇಲ್ಲೀವರೆಗೆ ಚಿಕ್ಕೋಳು ಅನ್ಕೊಂಡು ಸುಮ್ಮನಿದ್ದೆ ಈಗಾ ಇನ್ನೇನುಒಂದೆರೆಡು ದಿನದಲ್ಲಿ ಮೈನೆರೀತಾಳೆ. ಕಾಲ ಬಹಳ ಕೆಟ್ಟದು . ತುಂಬಾ ಚೆಲ್ ಚೆಲ್ಲಾಗಿ ಆಡ್ಬೇಡಾ ಅನ್ನು. ಸ್ವಲ್ಪಾನೂ ಶಿಸ್ತಿಲ್ಲ ಮನೆಗೆ ಒಂದು ಗಂಡು ದಿಕ್ಕಿಲ್ಲ ಅಂದ್ರೆ ಹೀಗೆ ಆಗೋದು""ಹೋಗ್ಲಿ ಬಿಡಿ ಅತ್ತೆ ಇನ್ನೂ ಚಿಕ್ಕ ವಯಸ್ಸು" ಹಾಗಂತ ಹೇಳಿದರೂ ಮನಸ್ಸು ಅತ್ತೆ ಹೇಳಿದ್ದು ನಿಜ ಎನ್ನುವಂತಿತ್ತು"ಏನ್ ಚಿಕ್ಕವಯಸ್ಸು. ಈ ವಯಸ್ಸಿಗೆ ನಂಗೆ ಮದುವೆ ಆಗಿ ನಿನ್ನ ಗಂಡ ಹುಟ್ಟಿದ್ದ." ನಗು ಬಂದಿತು. ಸ್ಮಿತಾಗೆ ಮದುವೆ ಎನ್ನೋ ಕಲ್ಪನೆ ಮೂಡಿಯೇ
"ಸರಿ ಅತ್ತೆ ನಾನವಳಿಗೆ ಬುದ್ದಿ ಹೇಳ್ತೀನಿ . ನೀವು ಆರಾಮಾವಾಗಿ ಮಲಗಿ" ಅವರು ಚಾಪೆಯಮೇಲೆ ಮಲಗಿದರು. ಅವರು ಯಾವಾಗಲೂ ಹಾಗೆಯೇ ಹಾಸಿಗೆ, ಮಂಚದ ಮೇಲೆ ಮಲಗಿದವರೇ ಅಲ್ಲ . ಮೊದಲು ಹೇಗಿದ್ದರೋ ಗೊತ್ತಿಲ್ಲ. ನಾನು ಈ ಮನೆಗೆ ಬಂದ ಮೇಲೆ ಅವರು ಮಂಚ ಮುಟ್ಟಿದ್ದು ಕಂಡಿಲ್ಲ.
ಇವತ್ತು ಕೆಲಸದ ನಿಂಗಿ ಬಂದಿರಲಿಲ್ಲ. ನಾನೆ ಕಸ ಗುಡಿಸಿಕೊಂಡು ಸ್ಮಿತಾ ರೂಮಿಗೆ ಬಂದೆ. ಅಬ್ಬಾಬ್ಬ ಎಷ್ಟೊಂದು ಹರಡಿದ್ದಾಳೆ
ರೂಮಿನ ತುಂಬಾ ಹೀರೋಗಳ ಪೋಸ್ಟರ್‌ಗಳು ಕಂಪ್ಯೂಟರ್ ಆನಲ್ಲಿಯೇ ಇದೆ. ಆಫ ಸಹಾ ಮಾಡಿಲ್ಲ. ನೆಟ್ ಕನೆಕ್ಟ್ ಮಾಡಿಯೇ ಇದೆ. ಸುಮ್ನೆ ಬಿಲ್ ಜಾಸ್ತಿ ಆಗುತ್ತೆ.
ಸಿಸ್ಟಮ್ ಆಫ್ ಮಾಡಿದೆ, ಪೋಸ್ಟರ್ ಗಳನ್ನು ಎತ್ತಿಟ್ಟೆ . ನೆನ್ನೆ ಒಗೆದ ಬಟ್ಟೆಗಳನ್ನು ಮಡಚಿ ತಂದಿಟ್ಟಿದ್ದೆ. ಇನ್ನೂ ಅಲ್ಮಾರದಲ್ಲಿ ಇಟ್ಟುಕೊಂಡೂ ಇಲ್ಲ.
ಏನ್ ಹುಡ್ಗೀನೋ ಯಾವಾಗ ಜವಾಬ್ದಾರಿ ಕಲಿತುಕೊಳ್ಳುತ್ತೋ.
ಬೈದುಕೊಂಡು ಬಟ್ಟೇನ ಅವಳ ಅಲ್ಮಾರಾದಲ್ಲಿ ಇಡುತ್ತಿದ್ದಂತೆ
ಅದು ಕಣ್ನಿಗೆ ಕಂಡಿತು.
ದಿಗ್ಭ್ರಮೆಯಾಯ್ತು
ವಿಸ್ಪರ್ ಇಲ್ಲಿಗೆ ಹೇಗೆ ಬಂತು
ಅಂದರೆ ಇದನ್ನುಉಪಯೋಗಿಸ್ತಾ ಇದಾಳಾ .
ಅವಳು ಯಾವಾಗಿಂದ
ತಲೆ ಧಿಮ್ಮೆಂದಿತು
ತಾಯಿಯಾಗಿ ನನಗೆ ತಿಳಿಯಬೇಕಿದ್ದ ವಿಷಯ ಹೇಗೆ ಮುಚ್ಚಿಟ್ಟಿದ್ದಾಳೆ
ಅತ್ತೆಗೆ ಹೇಳಿದರೆ ಸುಮ್ಮ್ನನಿರ್ತಾರಾ? ಮಡಿ ಮಡಿ ಎಂದು ಅಡಿಗಡಿಗೆ ಹಾರಾಡುವ ಅತ್ತೆಗೆ ಆಘಾತವಾಗುವುದಿಲ್ಲವೇ
ನನ್ನ ಕಂದ ದೊಡ್ಡವಳಾಗಿದ್ದಾಳೆ ಅದು ನನಗೆ ಗೊತ್ತಿಲ್ಲ. ಅರಿವಿಲ್ಲದೆ ಕಣ್ಣಲ್ಲಿ ನೀರು ತುಂಬಿತು
ಹಾಗೆ ಮಂಚದ ಮೇಲೆ ಕುಕ್ಕರಿಸಿದೆ.
"ಆಂಟಿ ಶ್ವೇತಾಗೆ ಏನೋ ಆಯ್ತಂತೆ. " ಪಕ್ಕದ ಮನೆ ಪ್ರಗತಿ ತನ್ನ ತಾಯಿಯ ಬಳಿ ಹೇಳುತ್ತಿದ್ದಳು. ಅಮ್ಮನ ಬಳಿ ಹೇಳಲಾರದೆ ಪ್ರಗತಿಯ ಬಳಿ ಹೇಳಿದೆ.
ಬೆಳಗಿನಿಂದಲೇ ಏನೋ ಹೊಟ್ಟೆ ನೋವು ಕಸಿವಿಸಿ, ತಲೆ ಸುತ್ತಿದಂತಾಗುತ್ತಿತ್ತು.
ನಂತರ ತನಗೇನೋ ಆಗಿದೆ ಎಂಬ ಭಾವನೆ ಬಲಿಯತೊಡಗಿತು.
"ಏ ಶ್ವೇತಾ ನಿನ್ನ ಬಟ್ಟೆ ಮೇಲೆ ಏನೆ ಅದು ಕಲೆ" ಪ್ರಗತಿ ಹೇಳಿದಾಗಲೆ ಅದು ಗೊತ್ತಾದುದು
ಕೂಡಲೆ ಪ್ರಗತಿಯ ಕಿವಿಯಲ್ಲಿ ಹೇಳಿದೆ
ಅದನ್ನೇ ಪ್ರಗತಿ ಶ್ವೇತಾಳ ತಾಯಿಯ ಹತ್ತಿರ ಹೇಳಿದಳು
"ಹೌದೇನೆ? " ಸಂಭ್ರಮದಿಂದ ಕೇಳಿದರು ತಾಯಿ
ನಂಗೇನೋ ಆಗಿ ಹೋಗಿದೆ ಎಂಬ ಆತಂಕದಿಂದಲೆ ತಲೆ ಆಡಿಸಿದೆ
ಅಮ್ಮ ಸ್ನಾನ ಮಾಡಲು ಹೇಳಿದರು
ನಂತರ ಮೂರು ದಿನ ಅಮ್ಮನ ರೂಮಿನಲ್ಲಿ ಒಂದು ಕಡೆ ಕೂರಲು ಹೇಳಿದರು. ಅಪ್ಪನ ಕಣ್ಣಲ್ಲೂ ನನ್ನ ಬಗ್ಗೆ ಏನೋ ಒಲವು.
ತಿನ್ನಲು ಎಳ್ಲಿನ ಉಂಡೆ, ಕೊಬ್ಬರಿ , ತುಪ್ಪ ಹೀಗೆ ಚೆನ್ನಾಗಿ ತಿಂದಿದ್ದಾಯಿತು
ಅಮ್ಮ ನನಗೆ ಮೊದಲ ಬಾರಿ ಲಂಗ ದಾವಣಿ ಕೊಡಿಸಿದಳು. ಅಪ್ಪ ಹೊಸ ಬಟ್ಟೆ ಕೊಡಿಸಿದ. ಇದೆಲ್ಲಾ ತಿಳಿಯದ ತಮ್ಮ ತಂಗಿಯರಿಗೆ ಮಾತ್ರ ಕುತೂಹಲ
"ಏ ಯಾಕೆ ನಿಂಗೆ ಮಾತ ಎಲ್ಲಾ ಕೊಡಿಸ್ತಿದಾರೆ"
ಆವತ್ತು ಸಂಜೆ
ಅಮ್ಮ ನನ್ನನ್ನು ಲಂಗ ದಾವಣಿ ಉಡಲು ಹೇಳಿ, ಅಲಂಕಾರ ಮಾಡಿ ಕಣ್ತುಂಬಾ ನೋಡಿ ನಲಿದಳು ಆರತಿ ಎತ್ತಿದಳು
"ಶ್ವೇತಾ ಇವತ್ತಿನಿಂದ ನಿನ್ನಲ್ಲಿ ಹೆಣ್ತನ ಬಂದಿದೆ, ಮುಂದೆ ಜಾಗೃತಿಯಾಗಿರು. ಎಲೆ ಮುಳ್ಳಿನ ಮೇಲೆ ಬಿದ್ರೂ ಮುಳ್ಳು ಎಲೆ ಮೇಲೆ ಬಿದ್ರೂ ನಾಶ ಎಲೆಯದೇ ಆಗುತ್ತದೆ. ಅದನ್ನ ನೆನಪಿಟ್ಕೋ"
ಅಮ್ಮನ ಆ ಮಾತು ಮನಸಿಗೆ ಚೆನ್ನಾಗಿ ನಾಟಿತ್ತು
ಹಾಗೆ ಮಗಳನ್ನು ಅಲಂಕಾರ ಮಾಡಿ ಅವಳಿಗೆ ಬುದ್ದಿ ಮಾತನ್ನು ಹೇಳೋಣ ಎನ್ನುವ ಆಸೆಯೂ ಇತ್ತು.
ಆದರೆ ಇವಳು ?
ಹೀಗ್ಯಾಕೆ ಮಾಡಿದಳು
ಅತ್ತೆಗೆ ಹೇಳಿ ಮನಸನ್ನು ಕದಡಲು ಮನಸ್ಸು ಬರಲಿಲ್ಲ
ಸಂಜೆಯಾಯಿತು
ಸ್ಮಿತಾ ಎಂದಿನಂತೆ ಮನೆಗೆ ಬಂದಳು
ಅವಳ ಮುಖದಲ್ಲಿ ಹೆಣ್ತನವನ್ನು ಹುಡುಕತೊಡಗಿದೆ. ಕಾಣಲಿಲ್ಲ
"ಅಮ್ಮಾ ಏನು ಹಾಗೆ ನೋಡ್ತಿದೀಯಾ. ಕಾಫಿ ಕೊಡು, ಸಮೀರ್ ಬರ್ತ್ ಡೇ ಇದೆ ಗಿಫ್ಟ್ ತಗೋಬೇಕು, ದುಡ್ಡು ಕೊಡು" ಸ್ಮಿತಾ ಹೇಳುತ್ತಿದ್ದಳು
"ಯಾರೆ ಅದು ಸಮೀರ ನಿಂಗ್ಯಾಕೆ ಅವನ ಉಸಾಬರಿ ಈ ಸಂಜೇ ಮೇಲೆ ಎಲ್ಲಿಗೆ ಹೋಗ್ತೀಯಾ" ಅತ್ತೆ ಅವರ ರೂಮಿನಿಂದ ಕಿರುಚುತ್ತಿದ್ದರು
"ಅಜ್ಜಿ ನೀನು ಸುಮ್ನೆ ಇರು ನಾನೇನು ರಾತ್ರಿ ಅಲ್ಲೇ ಇರ್ತೇನೆ ಅಂದ್ನಾ ಫಂಕ್ಷನ್ ಅಟೆಂಡ್ ಮಾಡಿ ಬರ್ತೀನಿ ಅದ್ಯಾಕೆ ಅಷ್ಟೊಂದು ಕಿರುಚ್ತೀಯಾ" ಅಜ್ಜಿಗಿಂತ ಜಾಸ್ತಿ ಬಾಯಿ ಮಾಡಿದಳು
"ಏ ಸ್ಮಿತಾ ಒಳಗೆ ಬಾರೆ" ಅವಳ ರೂಮಿಗೆ ಕರೆದುಕೊಂಡು ಹೋದೆ
"ಏನೆ ಇದು" ವಿಸ್ಪರ್ ಪ್ಯಾಕೆಟ್ ಅವಳ ಮುಂದೆ ಹಿಡಿದೆ
"ಅಮ್ಮ ಅಷ್ಟೂ ಗೊತ್ತಿಲ್ವಾ. ನಿಂಗೆ ಅದು ವಿಸ್ಪರ್"
"ಅದು ಸರಿ ಯಾವಾಗಿಂದ . ನಂಗ್ಯಾಕೆ ಹೇಳಿಲ್ಲಾ" ಪಿಸುದನಿಯಲ್ಲಿಯೇ ಮಾತಾಡಿದೆ
"ಯಾವಾಗಿಂದ ಮೋಸ್ಟ್ಲಿ ಎರೆಡು ತಿಂಗಳಿಂಗ ಇರ್ಬೇಕು. ನಿಂಗ್ಯಾಕೆ ಹೇಳ್ಬೇಕು? ಇದೇನು ಪಿ ಎಚ್ ಡಿ ಅವಾರ್ಡಾ ಹೇಳೋಕೆ. ಇದು ತೀರಾ ಪರ್ಸನಲ್ ಅಮ್ಮ"
" ನೋಡು ಸ್ಮಿತಾ ಇದರಲ್ಲಿ ನಿಂಗೆ ಗೊತ್ತಿಲ್ಲದೆ ಇರೋ ಕೆಲವೊಂದು ವಿಷಯ ಇರುತ್ತೆ . ಅದನ್ನೆಲ್ಲಾ ನಾನು ನಿಂಗೆ ಹೇಳಿಕೊಡ್ವೇಕು"
"ಅಯ್ಯೋ ಅಮ್ಮಾ ಯಾವ ಕಾಲದಲ್ಲಿ ಇದ್ದೀಯಾ. ಇದೆಲ್ಲಾ ಇಂಟರ್ನೆಟ್ ನಲ್ಲಿ ನೋಡಿದ್ರೆ ಸಿಗುತ್ತೆ. ಸಿನಿಮಾದಲ್ಲಿ ತಿಳಿಯುತ್ತೆ. ನಿಮಗೂ ಎಷ್ಟೊಂದು ವಿಷ್ಯ ಗೊತ್ತ್ತಿರಲ್ಲ ಅದೆಲ್ಲಾ ನಮಗೆ ಗೊತ್ತಿರುತ್ತೆ ಗೊತ್ತಾ" ಸರಳವಾಗಿ ನುಡಿದು ಕಂಪ್ಯೂಟರ್ ಆನ್ ಮಾಡಿದಳು.
ನಾನು ಮುದ್ದು ಮಾಡಿದ್ದರ ಪರಿಣಾಮವೋ ಅಥವ ಆಧುನಿಕ ತಂತ್ರಜ್ನಾನದ ಫಲವೋ ಅಂತೂ ನನಗೇನೂ ಗೊತ್ತಿಲ್ಲ ಎಂದು ಸರಾಗವಾಗಿ ಹೇಳುವಷ್ಟರ ಮಟ್ಟಿಗೆ ಬಂದಿದೆ
ಇನ್ನು ಸೋತೆ ಅನ್ನಿಸಿತು ಆದರು ತಾಯಿ ಎಂಬ ಕರ್ತವ್ಯಕ್ಕೆ ಅಮ್ಮ ಹೇಳಿದ ಮಾತುಗಳನ್ನು ಹೇಳಲಾರಂಭಿಸಿದೆ
"ಅಮ್ಮಾ ನಂಗೇನು ಹೇಳ್ಬೇಡಾ ಅಮ್ಮ ಬಿದ್ರೂ ಎಲೆಗೆ ಏನೂ ಆಗದೆ ಇರೋ ಹಾಗೆ ಸೇಫ್ ಗಾರ್ಡ್ ಮಾಡ್ಕೊಂಡ್ರಾಯ್ತು ,ಈಗ ದಯವಿಟ್ಟು ಬಿಟ್ಟು ಬಿಡು ನಂಗೆ ಅಸೈನ್ ಮೆಂಟ್ ಇದೆ" ಕೈ ಮುಗಿದಳು
ಅವಳ ಮಾತಿನ ಅರ್ಥ ತಿಳಿಯಲು ಕೆಲವು ನಿಮಿಷಗಳು ಬೇಕಾಯ್ತು, ದಂಗಾದೆ. ಕೈ ಮಾಡಬಹುದು ಆದರೆ ಮಾಡಲಿಲ್ಲ.
"ಸ್ಮಿತಾ ನೋಡು ಅಪ್ಪ ಇಲ್ಲ ಅಂತ ಮುದ್ದಾಗಿ ಸಾಕೀದೀನಿ ಅದನ್ನ ದುರುಪಯೋಗಿಸ್ಕೋಬೇಡ. ನಿನ್ನ ಹೆಜ್ಜೆ ನೀನೇ ಇಡು ಆದ್ರೆ ಬಿದ್ರೆ ನಾನು ಹೊಣೆ ಅಲ್ಲ, ಹೆಜ್ಜೆ ಇಡ್ವಾಗ ಹಳ್ಳ ಕೊಳ್ಳ ನೋಡಿಕೊಂಡು ಇಡು"
"ಆಯ್ತಮ್ಮ ಈಗ ದುಡ್ಡು ಕೊಡ್ತೀಯಾ ಇಲ್ವಾ ಸಮೀರ್‌ಗೆ ಗಿಫ್ಟ್ ತಗೋಬೇಕು" ಗೋಗರೆದಳು
ಇಲ್ಲ ಸ್ಮಿತಾ ಇನ್ನೊಂದೆರೆಡು ದಿನ ಎಲ್ಲಿಯೂ ಹೋಗ್ಬೇಡಾ ನೀನು
"ಅಮ್ಮ ಈಗ ನಾನು ಪಿರಿಯಡ್ಸ್‌ನಲ್ಲಿ ಇಲ್ಲ , ನಾನು ಮೆಚ್ಯೂರ್ ಆಗೇ ಎರೆಡು ತಿಂಗಳಾಗಿವೆ . ಇವಾಗ ರಿಸ್ಟಿಕ್ಷನ್ ಮಾಡಿದರೆ ಏನು ಉಪಯೋಗ. ಸುಮ್ನೆ ಸಂಪ್ರದಾಯಾಂತ ಮೂಲೇಲಿಕೂತ್ಕೊಳೋದು ಆರತಿ ಎತ್ತೋದು. ಸೀರೆ ಉಟ್ಕೋಳೋದು ಯಾಕೆ ಅಂತ ನಾನೆ ಹೇಳಲಿಲ್ಲ ಅಮ್ಮ ಅದು ಬಿಟ್ರೆ ನಿಂಗೆ ಹೇಳ್ಬಾರದು ಅನ್ನೋ ಉದ್ದೇಶ್ ಇರಲಿಲ್ಲಾಮ್ಮ"
ಬಂದು ನನ್ನ ತಬ್ಬಿಕೊಂಡಳು
ಅವಳ ಹಣೆಗೆ ಮುತ್ತಿಟ್ಟು ತಲೆ ನೇವರಿಸಿದೆ.
"ಆದ್ರೆ ಅಜ್ಜಿಗೆ ಹೇಗೆ ಹೇಳೋದು?"
"ಯಾಕೆ ಹೇಳ್ಬೇಕು. ಸುಮ್ನಿದ್ದುಬಿಡೋಣ"
"ಅದು ಸರಿ ಅಲ್ಲ ನಾನೆ ಸಮಯ ನೋಡಿ ಹೇಳಿಬಿಡ್ತೀನಿ"
"ನಾನಿಲ್ಲದಾಗ ಹೇಳಮ್ಮ . ಈಗ ನಂಗೆ ಹೊರಗಡೆ ಹೋಗೋಕೆ ಪರ್ಮಿಷನ್ ಮತ್ತೆ ಕಾಸು ಎರೆಡೂ ಕೊಡು" ಅವಳ ಗೋಗರೆತ ನೋಡಲಾರದೆ ಹಣ ಕೊಟ್ಟೆ
"ಬೇಗ ಬಾ ಸ್ಮಿತಾ"
"ಆಯ್ತಮ್ಮ" ಅಲಂಕರಿಸಿಕೊಂಡು ಹೊರಟಳು
ಅವಳು ಹೋದತ್ತಲೇ ನೋಡುತ್ತಿದ್ದೆ
"ಶ್ವೇತಾ " ದೇವರ ಮನೆಯ ಹತ್ತಿರದಿಂದ ಕೂಗಿದರು ಅತ್ತೆ
"ಹೇಳಿ ಅತ್ತೆ"
"ನಂಗೆಲ್ಲಾ ವಿಷಯ ಗೊತ್ತಾಯ್ತು, ಎಲ್ಲಾನೂ ಕೇಳಿಸ್ಕಿಕೊಂಡೆ"
ನಾನು ಅಪರಾಧಿಯಂತೆ ಕೆಳಗೆ ನೋಡಿದೆ
"ಅತ್ತೆ ಅದೂ ಅವಳಿಗೆ ತಿಳಿದಿಲ್ಲ" ಸಮರ್ಥಿಸಲು ನೋಡಿದೆ
"ಅವಳನ್ನು ವಹಿಸ್ಕೊಂಡು ಮಾತಾಡ್ವೇಡ ನೀನು" ಅವರ ಕಣ್ಣಲ್ಲಿ ಹೆಪ್ಪುಗಟ್ಟಿದ್ದ ನೋವನ್ನು ಗ್ರಹಿಸಬಲ್ಲೆನಾಗಿದ್ದೆ. ಅವರ ಆಚಾರ ವಿಚಾರಗಳನ್ನೆಲ್ಲ ಒಮ್ಮೆಗೆ ಗಾಳಿಗೆ ತೂರಿದ್ದಳು ಮೊಮ್ಮಗಳು
"ಸರಿ ಆಗಿದ್ದು ಆಗಿ ಹೋಯ್ತು ಮನೆಲಿ ಒಂದು ಪುಣ್ಯಾವರ್ತನೆ ಮಾಡೋಣ, ಅವಳಿಗೆ ಹೊಸ ಬಟ್ಟೆ ಹೊಲಿಸು, ಮುಂದಿನವಾರ ಆರತಿ ಎತ್ತೋಣ" ಅತ್ತೆ ಒಪ್ಪಿಕೊಂಡಿದ್ದರು ಆದರೂ ತಮ್ಮ ಆದರ್ಶಗಳನ್ನು ಬಿಡಲಾರದಾಗಿದ್ದರು
ಅವರ ಮಾತಿಗೆ ಒಪ್ಪಿದೆ
ಮಗಳ ಬಳಿಯಲ್ಲಿ ಈ ವಿಷಯ ಹೇಳುವ ಬಗೆಯನ್ನು ಲೆಕ್ಕಾಚಾರ ಹಾಕಲಾರಂಬಿಸಿದೆ
(ಮುಂದುವರಿಯುತ್ತದೆ)

Friday, February 27, 2009

ವಿದಾಯ-೨

ಮಗಳನ್ನು ಮೊದಲ ರಾತ್ರಿಯ ಕೋಣೆಗೆ ಕಳಿಸಿ ಮಂಚದ ಮೇಲೆ ಉರುಳಿದಳು ಪ್ರಮೀಳಾ. ನಾಳೆಯ ವಿದಾಯಕ್ಕೆ ಸಿದ್ದತೆಗಳನ್ನುಮಾಡುತ್ತಿದ್ದಂತೆ ಹಳೆಯ ನೆನಪುಗಳ ಮರ ಚಿಗುರತೊಡಗಿತು.

ಪ್ರಮೀಳಾ ಹಾಗು ಶ್ರೀನಿವಾಸ್‌ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾದರು ಮನೆಯಲ್ಲಿಯೂ ಅಂತಹ ವಿರೋಧವೇನು ಇರಲಿಲ್ಲ . ಏಕೆಂದರೆ ಪ್ರಮೀಳಾಗೆ ಹದಿನೆಂಟರ ಹರೆಯದಲ್ಲಿಯೇ p w d ಯಲ್ಲಿ ಕೆಲಸ ಸಿಕ್ಕಿತ್ತು. ಅವಳ ಸಂಬಳವೂ ಆಗ ಜೋರಾಗಿಯೇ ಇತ್ತು . ಹಾಗೆ ಶ್ರೀನಿವಾಸ್ ಸಹಾ ಕೆ.ಇ.ಬಿ ನಲ್ಲಿ ಕೆಲಸ ಮಾಡುತ್ತಿದ್ದ. ಕಾಲೇಜುದಿನಗಳಿಂದಲೆ ಒಬ್ಬರೊನೊಬರು ಪ್ರೀತಿಸುತ್ತಿದ್ದರು.

ಮೆಚ್ಚಿದ ಮಡದಿ, ನೆಚ್ಚಿನ ಸ್ವಂತ ಮನೆ , ಕಿರಿಯ ಮಗನಾದ್ದರಿಂದ ಶ್ರೀನಿವಾಸ್‌ಗೆ ಯಾವ ಜವಾಬ್ದಾರಿಯೂ ಇರಲಿಲ್ಲ , ಅಕ್ಕನ ಮದುವೆ ಆಗಿ ಹೋಗಿತ್ತು. ಅವನ ಅಪ್ಪ ಅಮ್ಮ ಹಳ್ಳಿಯಲ್ಲೇ ವಾಸವಾಗಿದ್ದರು. ಹಾಗಾಗಿ ಪ್ರಮೀಳಾಗೆ ಯಾವ ತೊಂದರೆಯೂ ಇರಲಿಲ್ಲ

ಸಂತಸ ಪುಟಿದೇಳುತ್ತಿತ್ತು ಮನೆಯಲ್ಲಿ, ಜೊತೆಗೆ ಪ್ರೀತಿ ಹುಟ್ಟಿದಾಗಂತೂ ಇನ್ನೂ ಆನಂದ. ಪ್ರಮೀಳಾ ತಾಯಿ ಮನೆಯಲ್ಲಿಯೇ ಇದ್ದು ಪ್ರೀತಿಯನ್ನು ನೋಡಿಕೊಳ್ಳುತ್ತಿದ್ದರು


ಒಟ್ಟಿನಲ್ಲಿ ಸುಖೀ ದಾಂಪತ್ಯಕ್ಕೆ ಇನ್ನೊಂದು ಹೆಸರೇ ಪ್ರಮೀಳಾ ಹಾಗು ಶ್ರೀನಿವಾಸ್ ಎನ್ನುವಂತೆ ನಡೆದಿತ್ತು . ಈ ನಡುವೆ ಪ್ರಮೀಳಾಳ ತಾಯಿ ಅಪಘಾತಕ್ಕೆ ಈಡಾದರು

ವರ್ಷದಲ್ಲಿ ಮಗುವಾದರೂ ಅದರ ಲಾಲನೆ ಪಾಲನೆ ಅವಳ ತಾಯಿ ನೋಡಿಕೊಳ್ಳುತ್ತಿದ್ದುದರಿಂದ ಪ್ರಮೀಳಾಗೆ ಆ ಕಷ್ಟ ಗೊತ್ತಿರಲಿಲ್ಲ. ಕೆಲಸ ಬಿಡಲು ಪ್ರಮೀಳಾ ಸಿದ್ದಳಿರಲಿಲ್ಲ .ಮನೆ ಕೆಲಸ , ಮಗು, ಸರ್ಕಾರಿ ನೌಕರಿ ಇವುಗಳ ನಡುವಿನಲ್ಲಿ ಹಣ್ಣಾಗುತ್ತಿದ್ದಳು.

ತಾನೂ ದುಡಿಯುತ್ತೇನೆ ಎಂಬ ಅಹಂ ಪ್ರಮೀಳಾಳ ಮನದಲ್ಲಿ ಮನೆ ಮಾಡಿದ್ದರಿಂದ ಸಂಸಾರ ಹೋರಾಟವಾಯ್ತು. ಆ ಕಾಲದಲ್ಲಿ ಹೆಚ್ಚಿರದಿದ್ದ ಪ್ಲೇ ಹೋಮ್‌ಗಳನ್ನು ಹುಡುಕಿದ್ದಕ್ಕೆ ಸಿಕ್ಕಿದ್ದು ದೂರದಲ್ಲೆಲ್ಲೋ ಇದ್ದ ಒಂದು ಶಿಶುವಿಹಾರ. ಬೆಳಗ್ಗೆ ಎದ್ದು ಅಡಿಗೆ ಮಾಡಿ ಮಗುವನ್ನು ರೆಡಿ ಮಾಡಿ ಶ್ರೀನಿವಾಸನಿಗೂ ಮಾಡಿ ಕೊಟ್ಟಿ ಕಳಿಸಿ, ಪ್ರೀತಿಯನ್ನು ಶಿಶುವಿಹಾರಕ್ಕೆ ಬಿಟ್ಟು ಬರುವುದರಲ್ಲಿ ಸುಸ್ತಾಗಿರುತ್ತಿದ್ದಳು

ನಂತರ ಸಣ್ಣಗೆ ಕಿರಿ ಕಿರಿ ಶುರುವಾಯಿತು. ಮಗುವನ್ನು ನೋಡಿಕೊಳ್ಳಲು ಶ್ರೀನಿವಾಸ್ ಸಿದ್ದನಿರಲಿಲ್ಲ . . ಕೆಲಸದವರು ಬಂದರೂ ಮೂರು ದಿನ ನಿಲ್ಲುತ್ತಿರಲಿಲ್ಲ. ಎಲ್ಲಕ್ಕೂ ಪ್ರಮೀಳಾ ಹೆಣಗಲಾರಂಭಿಸಿದಳು. ಶ್ರೀನಿವಾಸ್ ಸ್ವಭಾವತ: ಒಳ್ಳೆಯವನಾದರೂ ಅದೇನೋ ಗಂಡೆಂಬ ಅಹಂ ಜೊತೆಗೆ ನೌಕರಿಯಲ್ಲಿ ಪ್ರಮೋಶನ್ ಸಹಾ ಸಿಕ್ಕು ಅದರ ಮದವೂ ಏರಿದ್ದರಿಂದ ಪ್ರಮೀಳಾಗೆ ಸಹಾಯ ಮಾಡುವ ಮನಸ್ಸು ಬರಲಿಲ್ಲ

ಸಣ್ಣ ಸಣ್ಣದಕ್ಕೆಲ್ಲಾ ಸಿಡುಕಲು ಪ್ರಾರಂಭಿಸಿದಳು. ಶ್ರೀನಿವಾಸ್ ಸಹಾ ನೌಕರಿಯಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ಅವಳಿಗೂ ಮೀರಿ ಕೋಪಗೊಳ್ಳುತ್ತಿದ್ದ, ಮನೆಯಲ್ಲಿ ಶಾಂತಿ ಎನ್ನುವ ಪದ ಮಾಯವಾಯ್ತು.

ಮನೆಗೆ ಬಂದರೆ ಹೆಂಡತಿಯ ಕದನ , ಮಗುವಿನ ರಗಳೆ , ಶ್ರೀನಿವಾಸ್‌ಗೆ ಬೇಜಾರಾಗಿ ಹೋಯ್ತು, ನಿಧಾನವಾಗಿ ಮನೆಯಲ್ಲಿ ಇರುವ ಸಮಯ ಕಡಿಮೆ ಮಾಡಲಾರಂಭಿಸಿದ. ಇದು ಪ್ರಮೀಳಾಗೂ ತಿಳಿಯಿತು. ಆಕೆ ಇನ್ನೂ ಚಂಡಿಯಾದಳು.

ತನಗಾಗಿ ಒಂದಷ್ಟೂ ಪರಿತಪಿಸದ ಶ್ರೀನಿವಾಸ್ ಅವಳ ಪಾಲಿಗೆ ಉಗುಳಲಾಗದ ಬಿಸಿ ತುಪ್ಪವಾಗಿದ್ದ.

ತಾನು ಮಾತ್ರ ದಿನವೆಲ್ಲಾ ದುಡಿದು ಬಂದು ಮನೆಗೆ ಬಂದು ಮಗುವನ್ನು ನೋಡಿಕೊಳ್ಳಬೇಕೇಕೆ ಎಂಬ ಅನಿಸಿಕೆ ಬಂತು.

ಇದಕ್ಕಾಗಿ ಪ್ರಮೀಳಾ ಮಾಡಿದ ಉಪಾಯ ಅಂದಿನ ಆ ಕರಾಳಾ ದಿನ ಪ್ರಮೀಳಾಗೆ ಇನ್ನೂ ನೆನಪಿದೆ.

"ರೀ ಇವತ್ತು ನಂಗೆ ಸ್ವಲ್ಪ ಕೆಲಸ ಜಾಸ್ತಿ ಇದೆ ಬರುವುದು ಲೇಟ್ ಆಗಬಹುದು , ಮಗುವನ್ನು ಕರ್ಕೊಂಡುಬಂದುಬಿಡಿ" ತಲೆ ಬಾಚಿಕೊಳ್ಳುತ್ತಾ ನುಡಿದಿದ್ದಳು

"ನೋಡೋಣ ಆಗಲ್ಲಾ ಅನ್ನಿಸುತ್ತೆ . ಮೀಟಿಂಗ್ ಇದೆ ರಾತ್ರಿಯವರೆಗೂ ಆಗಬಹುದುನೀನೆ ಕರ್ಕೊಂಡು ಬಾ ಮಗು ಹೆಚ್ಚಾ ಕೆಲಸ ಹೆಚ್ಚ ನಿಂಗೆ" ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಪ್ರತಿನುಡಿದ್ದಿದ್ದ

ಪ್ರಮೀಳಾ ಕೆರಳಿದಳು

"ಯಾಕೆ ನಿಮಗೂ ಅದೇ ಪ್ರಶ್ನೆ ಕೇಳಬಹುದಲ್ವಾ . ಇಷ್ಟು ದಿನ ಆಯ್ತು ಒಮ್ಮೆಯಾದ್ರೂ ಮಗೂನ ಕರ್ಕೊಂಡು ಹೋಗೋದು , ಬರೋದು ಮಾಡಿದ್ದೀರಾ. ನೀವಿವತ್ತು ಕರ್ಕೊಂಡು ಬರ್ಲೇ ಬೇಕು"

ಪ್ರೀತಿಯ ಕೈ ಹಿಡಿದುಕೊಂಡು ದಡ ದಡ ಹೊರಗಡೆ ನಡೆಯುತ್ತಾ ನುಡಿದಳು

ಪ್ರೀತಿಯನ್ನು ಪ್ಲೇ ಹೋಮ್‌ಗೆ ಬಿಟ್ಟು ಆಫೀಸಿಗೆ ಬಂದಳು . ಕೆಲಸ ಎಂದಿಗಿಂತ ಸ್ವಲ್ಪ ಬೇಗನೇ ಆಯಿತಾದರೂ ಶ್ರೀನಿವಾಸ ಇವತ್ತಾದರೂ ಮಗುವನ್ನು ಕರೆದುಕೊಂಡು ಬರಲಿ ಎಂದು ಗೆಳತಿ ಜ್ಯೋತಿಯ ಮಗಳ ಹುಟ್ಟಿದ ಹಬ್ಬಕ್ಕೆ ಹೊರಟು ನಿಂತಳು. ಫೋನ್ ಮಾಡೋಣ ಎಂದುಕೊಂಡರೂ ಮಾಡಿದರೆ ಪ್ರೀತಿಯನ್ನು ಕರೆದುಕೊಂಡು ಬರುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾನೆ ಎಂದೆನಿಸಿ ಮಾಡಲಿಲ್ಲ




ಸಮಾರಂಭ ಮುಗಿಸಿ ರಾತ್ರಿ ಎಂಟು ವರೆ ಘಂಟೆಗೆ ಮನೆಗೆ ಬಂದಳು ಪ್ರಮೀಳಾ
ಮನೆಗೆ ಬೀಗ ಹಾಕಿತ್ತು. ಇದೇನು ಎಲ್ಲಿಗೆ ಹೋದ ಜೊತೆಗೆ ಪ್ರೀತಿನ ಕರೆದುಕೊಂಡು ಬಂದರಾ ಇಲ್ಲವಾ? ಗೊತ್ತಾಗದೆ ಹೋಯ್ತು
ಪಕ್ಕದ ಮನೆಯಿಂದ ಗಂಡನ ಕಛೇರಿಗೆ ಫೋನ್ ಮಾಡಿದಳು.
"ಅವರು ಮೀಟಿಂಗ್‍ನಲ್ಲಿದ್ದಾರೆ ಮೇಡಮ್ ಈಗ ಕರೆಯೋಕೆ ಆಗಲ್ಲ" ಎಂದು ಟೆಲಿ ಆಪರೇಟರ್ ಹೇಳಿದ
ಅಂದರೆ ಮಗಳನ್ನು ಇನ್ನೂ ಕರೆತಂದಿಲ್ಲ
ಹೃದಯ ಮಗಳಿಗಾಗಿ ಡವಡವ ಎನ್ನಲಾರಂಭಿಸಿತು.
ಈ ರಾತ್ರಿಯಲ್ಲಿ ಮಗಳು ಅಲ್ಲಿ ಒಬ್ಬಳೇ ಏನು ಮಾಡುತ್ತಿರುತ್ತಳೋ ಎಂಬ ಆತಂಕದಿಂದಲೇ ಆ ಒಂಬತ್ತು ಘಂಟೆ ರಾತ್ರಿಯಲ್ಲೇ ಮಗುವನ್ನು ಕರೆತರಲು ಹೋದಳು.
ಶಿಶುವಿಹಾರ ಮುಚ್ಚಿದ್ದರು. ಹತ್ತಿರದಲ್ಲಿ ಯಾವ ಅಂಗಡಿಯೂ ಇರದೆ ಯಾರಿಗೂ ಫೋನ್ ಸಹಾ ಮಾಡಲಾಗಲಿಲ್ಲ. ಆ ಶಿಶು ವಿಹಾರದ ಪಕ್ಕದ ಮನೆಯೊಂದರಲ್ಲಿ ವಿಚಾರಿಸಿದಳು. ಒಬ್ಬವಯಸ್ಸಾದ ಹೆಂಗಸೊಬ್ಬಳು ಬಂದರು
"ಇಲ್ಲಿ ನನ್ನ ಮಗು ಬಿಟ್ಟಿದ್ದೆ . ಈಗ ಬಾಗಿಲು ಹಾಕಿದ್ದಾರೆ "ಎಂದು ತನ್ನ ಪರಿಚಯ ಮಾಡಿಕೊಂಡಳು
ಅವಳು ಒಮ್ಮೆ ಪ್ರಮೀಳಾಳನ್ನು ಮೇಲಿನಿಂದ ಕೆಳಗಿನವರೆಗೂ ನೋಡಿ
" ಬಹಳ ಹೊತ್ತಿನಿಂದ ಯಾರೂ ಬರದೆ ಇದ್ದುದ್ದರಿಂದ ಮಗುವನ್ನು ಮೇಡಮ್ ಮನೆಗೆ ಕರೆದುಕೊಂಡು ಹೋಗಿದ್ದಾರೆ ಅವರು ನಿಮ್ಮ ಆಫೀಸಿಗೆ ಫೋನ್ ಮಾಡಿದಾಗ ನೀವು ಆಗಲೆ ಆಫೀಸ್ ಬಿಟ್ಟಿದ್ದೀರಾ ಎಂದರು , ನಿಮ್ಮ ಯಜಮಾನರಿಗೆ ಫೋನ್ ಮಾಡಿದಾಗ ಅವರು ಸಿಗಲಿಲ್ಲವಂತೆ, ನಾಳೆ ಬಂದು ಮಗುವನ್ನು ಕರ್ಕೊಂಡು ಹೋಗಿ, ಮಗು ತುಂಬಾ ಅಳ್ತಾ ಇತ್ತು. ಅಲ್ಲಮ್ಮ ಮಗುವಿನ ಮೇಲೆ ಸ್ವಲ್ಪವಾದ್ರೂ ಕಾಳಜಿ ಬೇಡ್ವೇ, ದುಡ್ಡು ಇವತ್ತಲ್ಲ ನಾಳೆ ಬರುತ್ತೆ , ಮಗು ಹೋದ್ರೆ ಸಿಗುತ್ತಾ . ಏನಾಗಿದ್ಯೋ ಈಗಿನ ಕಾಲದ ಜನರಿಗೆ" ಆಕೆ ಬಡಬಡಿಸಿದಳು
ಅವರ ಮನೆಗೆ ಫೋನ್ ಮಾಡಬೇಕಿತ್ತು.ನಂಬರ್ ಇದೆ ಆದ್ರೆ ನಮ್ಮ ಮನೆಲಿ ಫೋನ್ ಇಲ್ಲ ಬೇರೆ ಕಡೆಯಿಂದ ಫೋನ್ ಮಾಡಿ " ನಂಬರ್ ತೆಗೆದುಕೊಂಡು ಮತ್ತದೇ ಆಟೋದಲ್ಲಿ ಮನೆಗೆ ಬಂದಳು

ಮನಸ್ಸು ಕುದ್ದು ಹೋಯಿತು. ಅಳುತ್ತಳುತ್ತಲೇ ಮನೆಗೆ ಬಂದಳು

ಅಷ್ತ್ರಲ್ಲಿ ಆಗಲೆ ಶ್ರೀನಿವಾಸ್ ಮನೆಗೆ ಬಂದಿದ್ದ

ಆಟೋದಿಂದ ಇಳಿದು ದುಡ್ಡು ಕೊಟ್ಟು ಬಂದಳು ಪ್ರಮೀಳಾ . ಬಾಗಿಲು ಬಡಿದಳು

"ಪ್ರೀತಿ ಎಲ್ಲಿ" ಬಾಗಿಲು ತೆರೆಯುತ್ತಲೇ ಕೇಳಿದ
’ನಾನು ಹೇಳಿರ್ಲಿಲ್ವಾ ಬರೋದು ಲೇಟ್ ಆಗುತ್ತೆ. ಪ್ರೀತಿನ ಕರೆದುಕೊಂಡು ಬನ್ನಿ ಅಂತ, ಮಗಳಿಗಿಂತ ಮೀಟಿಂಗ್ ಹೆಚ್ಚಾಯ್ತಲ್ಲ ನಿಮಗೆ" ಕಣ್ಣೀರ ನಡುವೆ ಆಕ್ರೋಶದಿಂದಲೇ ಹೇಳಿದಳು
"ನೀನು ಬರೋದು ಲೇಟ್ ಯಾಕೆ ಆಯ್ತು" ಪ್ರಶ್ನಿಸಿದ
"ಕೆಲಸ ಜಾಸ್ತಿ ಇತ್ತು" ಸುಳ್ಳು ಹೇಳಲು ಭಯವಾದರೂ ದಿಟ್ಟವಾಗಿಯೇ ನುಡಿದಳು
"ಸುಳ್ಳು ಹೇಳ್ಬೇಡ ನಾನು ಸಂಜೆ ಐದು ಘಂಟೆಗೆ ನಿಮ್ಮ ಆಫೀಸಿಗೆ ಫೋನ್ ಮಾಡಿದ್ದೆ, ನೀನು ನಾಲ್ಕು ಘಂಟೆಗೆ ಹೋಗಿದ್ದೀಯ ಎಂದು ಗೊತ್ತಾಯ್ತು,ಎಲ್ಲಿಗೆ ಹೋಗಿದ್ದೆ"
ಪ್ರಮಿಳಾ ಸಿಕ್ಕಿಹಾಕಿಕೊಂಡಿದ್ದಳು
ಮಾತಾಡಲಿಲ್ಲ.
"ನೋಡು ಪ್ರಮೀಳಾ , ನಿನ್ನ ನಡತೆ ಮೇಲೆ ಗೌರವ ಇದೆ ನನಗೆ ಅದನ್ನ ಹಾಳು ಮಾಡೋ ಅಂತ ಕೆಲಸಮಾಡ್ಬೇಡ"
"ಅಂದ್ರೆ ನನ್ನಮೇಲೆ ನಿಮಗೆ ಅನುಮಾನಾನ"
ಹೀಗೆ ಮಾತು ಜೋರಾಯ್ತು
ಎತ್ತೆತ್ತಲೋ ಹರಿದು ಬಂತು ಮಾತುಗಳು
ಇಬ್ಬರ ನಡತೆಗಳೂ ಮಾತಿಗೆ ಸಿಕ್ಕವು
ಹದಗೆಟ್ಟಿದ್ದ ಸಂಬಂಧವನ್ನು ಹಿಡಿದಿರಿಸುವುದರಲ್ಲಿ ಯಾವ ಆಸಕ್ತಿಯೂ ಉಳಿಯಲಿಲ್ಲ ಇಬ್ಬರಿಗೂ
ಮಾರನೆಯದಿನ ಮಗುವನ್ನು ಕರೆದುಕೊಂಡು ಬಂದಳು.
ದಾಂಪತ್ಯಕ್ಕೆ ಒಂದು ಕೊನೆ ಹಾಡಬೇಕಾಗಿದ್ದರಿಂದ ಇಬ್ಬರೂ ಮನೆಯಲ್ಲಿಯೇ ಉಳಿದಿದ್ದರು
ಆದರೆ ತಮ್ಮಿಬ್ಬರ ನಡುವಿನಲ್ಲಿ ಪ್ರೀತಿಯ ಬದುಕು ಹಾಳಾಗುವುದು ಇಬ್ಬರಿಗೂ ಇಷ್ಟವಿರಲಿಲ್ಲ.
ಇನ್ನೂ ಡೈವೋರ್ಸ್ ಎಂಬ ಪದ ಅಷ್ಟಾಗಿ ಬಳಕೆಯಲ್ಲಿಲ್ಲದ ಕಾಲ ಅದು.
ಇಷ್ತವಿದ್ದರೆ ಮದುವೆಯಾಗದೆ ಜೊತೆ ಇರಬಹುದಾದದ್ದು ಈ ಕಾಲ ಆದರೆ ಇಷ್ಟವಿಲ್ಲದಿದ್ದರೂ ಮದುವೆಯಾದ ಮೇಲೆ ಜೊತೆ ಬಾಳಲೇ ಬೇಕಿತ್ತು
ಪ್ರೀತಿಯ ಮದುವೆಯವರೆಗೂ ಜೊತೆಗೆ ಇರುವುದು. ಮದುವೆಯಾದ ನಂತರದ ದಿನದಲ್ಲಿ ಇಬ್ಬರೂ ಬೇರೆಯಾಗುವುದೆಂದು ನಿರ್ಧರಿಸಿದರು.
ಈ ಗುಟ್ಟು ಅಲ್ಲಿಯವರೆಗೂ ಗುಟ್ಟಾಗಿಯೇ ಇಡಬೇಕೆಂದೂ ನಿಶ್ಚಯವಾಯ್ತು
ಅಂದಿನಿಂದ ಅವರು ದಂಪತಿಗಳಂತೆ ಹೊರ ಜಗತ್ತಿಗೆ ಕಂಡರೂ ಒಳಗೆ ಅಪರಿಚಿತರಂತೆ ಇರಲಾರಂಭಿಸಿದರು
ಹಾಗಿರುವುದು ಬಹಳ ಕಷ್ಟವಾಗಿತ್ತು. ಅದರಲ್ಲೂ ಶ್ರೀನಿವಾಸ್ ಬಹು ಒದ್ದಾಡಿದ,
ಪ್ರಮೀಳಾಳ ಬಳಿ ಕ್ಷಮೆ ಕೇಳಿದ., ಆದರೂ ತನ್ನ ನಡತೆಯ ಬಗ್ಗೆ ಅನುಮಾನಿಸಿದ ಅವನ ತಪ್ಪನ್ನು ಒಪ್ಪಿಕೊಳ್ಲುವುದು ಸಾಧ್ಯವಿತ್ತಾದರೂ ಒಂದು ರೀತಿಯ ಅಹಮ್ ,ಅಥವ ಸ್ವಾಭಿಮಾನವೋ ಪ್ರಮೀಳಾಳನ್ನು ಕಠಿಣ ಮನದವಳಾಗಿಯೇ ಇರಲು ಉತ್ತೇಜಿಸಿತ್ತು
ರೂಮಿನ ಬಾಗಿಲು ಬಡಿದ ಸದ್ದಾಯಿತು . ಬಾಗಿಲು ತೆರೆದಳು
ಹೊರಗೆ ಶ್ರೀನಿವಾಸ
"ಪ್ರಮೀಳಾ ನೀನು ಹೋಗಲೇಬೇಕಾ? ಇಪ್ಪತ್ತು ವರ್ಷದ ಹಿಂದಿನ ದ್ವೇಷ ಇನ್ನೂ ಆರಿಲ್ಲವೇ? "
ದೀನನಾಗಿ ಕೇಳಿದ
ಪ್ರಮೀಳಾ ಮುಖ ತಿರುಗಿಸಿದಳು
(ಮುಂದುವರೆಯುವುದು)

Wednesday, February 25, 2009

ವಿದಾಯ-೧

ಮದುವೆಯ ಸಡಗರ ತೆರೆ ಸರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿದ್ದ ಎಲ್ಲಾ ಜನರಿಗೂ ಅದೊಂದು ರೀತಿಯ ತಮಾಷೆಯ ಕಾರ್ಯಕ್ರಮ. ಎಲ್ಲರ ಮುಖದಲ್ಲೂ ನಗು . ಯಾರು ಅಕ್ಕಿ ಮೊದಲು ಹಾಕುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಪ್ರಮೀಳಾಳೂ ವಧುವಿನ ಅಲಂಕಾರದಲ್ಲಿದ್ದ ಮಗಳ ಕೈ ಎತ್ತಿ ಹಿಡಿದು ನಿಂತಿದ್ದಳು. ಎಲ್ಲರೂ ಪ್ರೀತಿ ಮೊದಲು ನೀನೆ ಹಾಕು ನಿನ್ನ ಗಂಡ ನಿನ್ನ ಮಾತನ್ನೇ ಕೇಳುತ್ತಾನೆ ಎಂದು ಪ್ರೀತಿಯನ್ನು ಹುರಿದುಂಬಿಸುತ್ತಿದ್ದರು . ಅತ್ತ ಗಂಡಿನ ಮನೆಯವರೂ ಹಾಗೆಯೇ ವರನನ್ನು ಉಬ್ಬಿಸುತ್ತಿದ್ದರು. ವಧು ವರರಿಗೆ ಮಾತ್ರ ಅಸ್ಪಷ್ಟವಾಗಿ ಕಾಣುತ್ತಿದ್ದ ತೆರೆಯ ಆಚೆ ಬದಿಯ ತಮ್ಮ ಸಂಗಾತಿಯನ್ನು ನೋಡುವ ಕಾತುರ .
ತೆರೆ ಸರಿಯುತ್ತಿದ್ದಂತೆ ಮಗಳೇ ಮೊದಲು ಬಣ್ಣದಅಕ್ಕಿ ಹಾಕಿದಳು. ವಧುವಿನ ಮನೆಯವರಿಗೆಲ್ಲಾ ಸಡಗರ, ಮಾಂಗಲ್ಯ ಧಾರಣೆ ಹಾರ ಬದಲಾವಣೆ ಎಲ್ಲಾ ನಡೆದವು.

ಶ್ರೀನಿವಾಸ ಮಗಳ ಮದುವೆ ನೋಡಿ ಸಂತೋಷ ಪಡುತ್ತಿದ್ದ ಧಾರೆ ಎರೆದ ನಂತರದ ವಿದಾಯದ ಘಳಿಗೆಗಾಗಿ ಇನ್ನೂ ಮನಸ್ಸು ಸಿದ್ದವಾಗಿರಲಿಲ್ಲ.
ಅತ್ತ ಪ್ರಮೀಳಾ ಬಂದವರಿಗೆಲ್ಲಾ ಉಡುಗೊರೆಗಳನ್ನು ಕೊಡಲು ಅಣಿ ಮಾಡುತ್ತಿದ್ದಳು. ಆದರೂ ಮನಸಲ್ಲಿ ಏನೋ ಕಸಿವಿಸಿ . ಈ ರೀತಿಯ ವಿದಾಯಕ್ಕಾಗಿಯೇ ಅಲ್ಲವೇ ಇಷ್ಟು ದಿನದಿಂದ ಕಾದಿದ್ದು. ಈ ಸ್ವಾತಂತ್ರ್ಯಕ್ಕಾಗಿ ಅಲ್ಲವೇ ಮನಸ್ಸು ಬೇಡಿದ್ದು. ಇಂದೇಕೆ ಮನಸ್ಸು ಹೀಗೆ ತೊಳಲಾಡುತ್ತಿದೆ ಅರಿವೇ ಆಗುತ್ತಿಲ್ಲ
"ಪ್ರಮೀಳಾ ಬೇಗ ಬೇಗ ಕೊಡಮ್ಮ . ಕೆಲವರು ತಿಂಡಿ ತಿಂದು ಮನೆಗೆ ಹೋಗ್ತಿದಾರೆ ಊಟಕ್ಕೆ ಕಾಯಲ್ಲ ಅಂತಿದಾರೆ. . ಅವರಿಗೆ ಏನು ಕೊಡಬೇಕು ಅದನ್ನು ಕೊಡು" ಪ್ರಮೀಳಾಳ ಚಿಕ್ಕಮ್ಮನ ಕೂಗು ಮಾತು
"ಆಯ್ತು ಚಿಕ್ಕಮ್ಮ . ಒಂದ್ನಿಮಿಷ ಕೊಟ್ಟೆ"ಹೇಳಿ ಅರಿಷಿನ ಕುಂಕುಮ ತಟ್ಟೆ ಕೊಟ್ಟಳು. ಮುಂದೆ ಸೀರೆ , ಹಾಗು ಉಡುಗೊರೆಗಳ ಪ್ಯಾಕ್
"ಚಿಕ್ಕಮ್ಮ ಇದು ನಮ್ಮ ಕಡೆಯವರಿಗೆ ಪ್ರತಿ ಸೀರೆ ಪಂಚೆ ಪ್ಯಾಕ್ ಮೇಲೆ ಹೆಸರು ಬರೆದಿದ್ದೇನೆ , ಹಾಗೆ ಈ ಚಿಕ್ಕ ಬೆಳ್ಲಿ ಬಾಕ್ಸ್ ಎಲ್ಲಾ ಅಕ್ಕ ಪಕ್ಕದ ಮನೆಯವರಿಗೆ ಕೊಟ್ಬಿಡು"
"ಪ್ರಮೀಳಾ ಬರ್ತೀಯಾ ಇಲ್ಲಿ ನಿನಗೆ ಉಡುಗೊರೆ ಕೊಡ್ಬೇಕು ಅಂತ ಕರಿತಿದಾರೆ, ಏ ಸೀನು ನೀನೂ ಬಾರೋ ಅಲ್ಲಿ ಕೂತ್ಕೊಂಡು ಏನ್ಮಾಡ್ತಿದ್ದೀಯಾ" ಶ್ರೀನಿವಾಸನ ಅಕ್ಕನ ದನಿ
ಪ್ರಮೀಳಾಗೆ ಈಗ ವಿಧಿಯೇ ಇಲ್ಲ ಶ್ರೀನಿವಾಸ್‌ ಜೊತೆ ಕೂರಲೇ ಬೇಕಿತ್ತು, ಬಹುಷ ಇದೇ ಕೊನೆಯ ಜೊತೆಯಾಗಿ ಕೂರುವುದಿರಬಹುದು. ಉಡುಗೊರೆ ಸ್ವೀಕರಿಸಲು ಇಬ್ಬರೂ ಕೂತರು. ಪ್ರಮೀಳಾ ಸಾಮಿಪ್ಯ ಹಿತವೆನಿಸಿತು ಶ್ರೀನಿವಾಸನಿಗೆ
ಸ್ನೇಹ ಹಾಗು ಅವಳ ಗಂಡ ಇಬ್ಬರಿಗೂ ಚಿನ್ನದ ಉಂಗುರಗಳನ್ನು ತಂದುಕೊಟ್ಟರು .
"ಆಂಟಿ ಇಲ್ಲೇ ಹಾಕಿಕೊಳ್ಳಿ ಹಾ ಇಬ್ಬರೂ ಬದಲಾಯಿಸಿಕೊಳ್ಬೇಕು"
ಏಕೋ ಅವನ ಕೈಗೆ ಉಂಗುರ ತೊಡಿಸುವುದು . ಅವನು ತನ್ನ ಕೈ ಮುಟ್ಟುವುದು ಹಿಡಿಸಲೇ ಇಲ್ಲ ಪ್ರಮೀಳಾಗೆ. ಆದರೂ ಹಾಗೆ ಮಾಡುವಂತಿಲ್ಲ. ಶ್ರೀನಿವಾಸ ಮಾತ್ರ ತೊಡಿಸಲು ಸಿದ್ದನಾಗಿದ್ದ . ಸಂತೋಷ ಅವನ ಮುಖದಲಿ ಕಾಣುತ್ತಿತ್ತು

ಶ್ರೀನಿವಾಸ್ ಮೊದಲು ಉಂಗುರ ತೊಡಿಸಲು ಮುಂದಾದ. ಎಡಗೈಯಲ್ಲಿ ಅವಳ ಕೈ ಎತ್ತಿ ಹಿಡಿದು ಬಲಗೈ ಇಂದ ನಿಧಾನವಾಗಿ ಉಂಗುರವನ್ನು ನಡುಬೆರಳಿಗೆ ನಿಧಾನವಾಗಿ ನೂಕಿದ . ನೂಕುವಾಗ ಅವಳ ಬೆರಳನ್ನು ಮೃದುವಾಗಿ ಒತ್ತಿದ ಅವಳಿಗಷ್ಟೆ ತಿಳಿಯುವಂತಿತ್ತು. ಇದನ್ನ ಇಪ್ಪತ್ತೆಂಟು ವರ್ಷಗಳ ಹಿಂದೆ ಅವರಿಬ್ಬರ ನಿಶ್ಚಿತಾರ್ಥದಲ್ಲಿ ಮಾಡಿದ್ದಾಗ ಅವಳ ಮುಖದಲ್ಲಿ ಕಂಡೂ ಕಾಣದ ನಾಚಿಕೆ. ಆದರೆ ಇಂದು ಅವಳ ಮೊಗದಲ್ಲಿ ಅಸಹ್ಯವೆನಿಸುವ ಭಾವನೆ. ಇಂತಹ ಸ್ಪರ್ಷ ಇಪ್ಪತ್ತು ವರ್ಷಗಳ ಹಿಂದೆ ಮಾಡಿದ್ದರೆ ಅವಳ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಆದರೆ ಈಗ ಎಲ್ಲಾ ಸುಮಧುರ ಭಾವನೆಗಳನ್ನು ಆಚೆ ನೂಕಿದ್ದಳು
ಯಾಂತ್ರಿಕವಾಗಿ ಅವನ ಬೆರಳಿಗೆ ಉಂಗುರ ತೊಡಿಸಿದಳು.
ಎಲ್ಲರೂ ಚಪ್ಪಾಳೆ ತಟ್ತಿದರು . ಆ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಯಿತು
ಕೊನೆಗೂ ಮದುವೆ ಎಂಬ ಸಮಾರಂಭ ಮುಗಿಯಿತು.
ಇಂದು ರಾತ್ರಿ ಮಗಳ ಮೊದಲ ರಾತ್ರಿ
ಆದರೆ

ಇಂದು ಈ ಮನೆಯಲ್ಲಿ ಅವಳ ತಂದೆ ಹಾಗು ತಾಯಿಯ ಕೊನೆಯ ರಾತ್ರಿಯಾಗಿತ್ತು
(ಮುಂದುವರೆಯುವುದು)